ತೆಲುಗು ಪ್ರೇಕ್ಷಕರ ಮಧ್ಯೆ ಕೂತು 'ಕಲ್ಕಿ 2898 AD'ನೋಡ್ಬೇಕು" ; ನಾಗ ಅಶ್ವಿನ್ ಮುಂದೆ ಬೇಡಿಕೆ ಇಟ್ಟ ಬಿಗ್ ಬಿ
ಭಾರತದ ಮೋಸ್ಟ್ ಎಕ್ಸ್ಪೆನ್ಸೀವ್ ಸಿನಿಮಾ 'ಕಲ್ಕಿ 2898 AD'ರಿಲೀಸ್ ಆಗಿ ಎರಡು ವಾರಗಳನ್ನು ಯಶಸ್ವಿಯಾಗಿ ಮುಗಿಸಿದೆ. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದು, ಬಾಕ್ಸಾಫೀಸ್ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಾ ಮುನ್ನುಗುತ್ತಿದೆ. ನಾಗ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅಶ್ವತ್ಥಾಮ ಪಾತ್ರದಲ್ಲಿ ನಟಿಸಿರುವ ಅಮಿತಾಭ್ ಬಚ್ಚನ್ರನ್ನು ಕಣ್ತುಂಬಿ ಕೊಂಡು ಪ್ರೇಕ್ಷಕರು ಕಳೆದೇ ಹೋಗಿದ್ದಾರೆ.
'ಕಲ್ಕಿ 2898 AD'ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಭೈರವನಾಗಿ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದರೂ, ಅಮಿತಾಭ್ ಬಚ್ಚನ್ ಪಾತ್ರ ಪ್ರೇಕ್ಷಕರನ್ನು ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ರನ್ನು ಸ್ವತ: ನಿರ್ದೇಶಕ ನಾಗ ಅಶ್ವಿನ್ ಸಂದರ್ಶನ ಮಾಡಿದ್ದಾರೆ. ಇದರ ಫ್ರೋಮೊವನ್ನು ಈಗ ಚಿತ್ರತಂಡವೀಗ ರಿಲೀಸ್ ಆಗಿದೆ.

ಅಶ್ವತ್ಥಾಮದಂತಹ ಪ್ರಮುಖ ಪಾತ್ರಕ್ಕೆ ಅಮಿತಾಭ್ ಬಚ್ಚನ್ ಅಂತಹ ಮೇರು ನಟನನ್ನು ಆಯ್ಕೆ ಮಾಡಿಕೊಂಡಾಗಲೇ ನಾಗ್ ಅಶ್ವಿನ್ ಗೆದ್ದಾಗಿತ್ತು. ಅಮಿತಾಬ್ ಬಚ್ಚನ್ ಅವರನ್ನು ಆಯ್ಕೆ ಮಾಡಿಕೊಂಡ ನಿರ್ಧಾರ ಫಲಕೊಟ್ಟಿದೆ. ಅಷ್ಟೇ ಅಲ್ಲದೆ ಅಮಿತಾಭ್ ಬಚ್ಚನ್ ಪಾತ್ರ ಪ್ರೇಕ್ಷಕರನ್ನೂ ಚೆನ್ನಾಗಿಯೇ ತಲುಪಿದೆ. ಈಗ ಆ ಪಾತ್ರದ ಬಗ್ಗೆ, ಸಿನಿಮಾ ಬಗ್ಗೆ ಅಮಿತಾಭ್ ಬಚ್ಚನ್ ತಮ್ಮ ಕುತೂಹಲವನ್ನು ನಿರ್ದೇಶಕರ ಮುಂದೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತೆಲುಗು ಮಂದಿಯೊಂದಿಗೆ ಕೂತು ಸಿನಿಮಾ ನೋಡುತ್ತೇನೆ ಎಂದಿದ್ದಾರೆ.
'ಕಲ್ಕಿ 2898 ಎ.ಡಿ.' ಬಿಡುಗಡೆಗೂ ಮುನ್ನವೇ ಸಿನಿಮಾದಲ್ಲಿ ನಟಿಸಿರುವ ಪ್ರಮುಖ ಪಾತ್ರಗಳ ಸಂದರ್ಶನವನ್ನು ಏರ್ಪಡಿಸಲಾಗಿತ್ತು. ಆ ವೇಳೆನೂ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಅಮಿತಾಭ್ ಬಚ್ಚನ್ ಹಂಚಿಕೊಂಡಿದ್ದರು. ಈಗ 'ಕಲ್ಕಿ'ಯನ್ನು ಪ್ರೇಕ್ಷಕರನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ. ಅದರಲ್ಲೂ ಅಮಿತಾಭ್ ಬಚ್ಚನ್ ಪ್ರೇಕ್ಷಕರ ಮನಗೆದ್ದಿದ್ದರಿಂದ ನಿರ್ದೇಶಕ ನಾಗ್ ಅಶ್ವಿನ್ ಅವರು ಅಮಿತಾಭ್ ಬಚ್ಚನ್ ಅವರನ್ನು ಪಾಡ್ಕಾಸ್ಟ್ನಲ್ಲಿ ವಿಶೇಷ ಸಂದರ್ಶನ ಮಾಡುವುದಕ್ಕೆ ಮುಂದಾಗಿದ್ದರು. ಇತ್ತೀಚೆಗೆ ಆ ಪಾಡ್ಕಾಸ್ಟ್ನ ಪ್ರೋಮೋ ರಿಲೀಸ್ ಆಗಿದ್ದು ಅಮಿತಾಭ್ ಬಚ್ಚನ್ ಅವರ ಮಾತುಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
'ಕಲ್ಕಿ 2898 ಎ.ಡಿ.' ಸಿನಿಮಾ ಬಗೆಗಿನ ಈ ಪಾಡ್ಕಾಸ್ಟ್ ಪ್ರೋಮೊದಲ್ಲಿ ಅಮಿತಾಭ್ ಬಚ್ಚನ್ ಕೆಲವು ಅಚ್ಚರಿಗಳನ್ನು ಹೊರ ಹಾಕಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಬಗ್ಗೆ ತಮಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹಾಗೇ ಆಗ ನಾಗ ಅಶ್ವಿನ್ ಇದು ಮಹಾಭಾರತದ ಕೊನೆಯ ಸಂಚಿಕೆ ಎಂದು ಹೇಳಿ ಟೈಟಲ್ ಬಗ್ಗೆ ಸಮಜಾಯಿಷಿ ಕೊಟ್ಟಿದ್ದಾರೆ.
ಇದೇ ವೇಳೆ ಅಮಿತಾಭ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಿಕಾ ನಟಿಸಿದ ಸುಮತಿ ಪಾತ್ರ ಒಂದು ದೃಶ್ಯದಲ್ಲಿ ಬೆಂಕಿಯೊಂದಿಗೆ ನಡೆದುಕೊಂಡು ಬರುತ್ತೆ. ಅದನ್ನು ಹೇಗೆ ಕಲ್ಪಿಸಿಕೊಂಡಿರಿ ಎಂದು ನಿರ್ದೇಶಕ ನಾಗ ಅಶ್ವಿನ್ ಅವರನ್ನೇ ಪ್ರಶ್ನೆ ಮಾಡಿದ್ದಾರೆ. "ಮುಂದಿನ ಅವತಾರವನ್ನು ತನ್ನಲ್ಲಿಯೇ ಇಟ್ಟುಕೊಂಡಿರುವ ವ್ಯಕ್ತಿ ಅಗ್ನಿಪರೀಕ್ಷೆಗೆ ಒಳಗಾಗುತ್ತಾನೆ. ಅದರಲ್ಲಿ ಸುಮತಿ ಬೆಂಕಿಯ ಮೂಲಕ ನಡೆಯುವುದನ್ನು ತೋರಿಸಿದ್ದೀರ." ಎಂದು ಪ್ರಶಂಸೆ ಮಾಡಿದ್ದಾರೆ. ಇದೇ ವೇಳೆ ಹೈದರಾಬಾದ್ನಲ್ಲಿ ತೆಲುಗು ಪ್ರೇಕ್ಷಕರ ನಡುವೆ ಕುಳಿತು ಸಿನಿಮಾ ನೋಡ ಬೇಕು ಎನ್ನುವ ಆಸೆ ಇದೆ. ಯಾಕೆಂದರೆ, ಸಿನಿಮಾ ನೋಡಿ ಅವರು ಹುಚ್ಚೆದ್ದು ಕುಣಿಯುತ್ತಾರೆಂದು ಅಮಿತಾಭ್ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.


Click it and Unblock the Notifications











