ಟಾಲಿವುಡ್, ಬಾಲಿವುಡ್ ಎಲ್ಲಾ ಕ್ಲೋಸ್: ಇಂಡಿಯನ್ ಸಿನಿಮಾ ಒಂದೇ ಅಂದಿದ್ದೇಕೆ ಕಮಲ್ ಹಾಸನ್-ಚಿರಂಜೀವಿ?
ಹೈದರಾಬಾದ್ನಲ್ಲಿ ನಡೆದ ತೆಲಂಗಾಣ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭ ಸಾಕಾಷ್ಟು ವಿಶೇಷತೆಗಳಿಂದ ಕೂಡಿತ್ತು. ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು.
ಕಮಲ್ ಹಾಸನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಹಬ್ಬದಂತಿತ್ತು.

ಸಿನಿಮಾ ರಂಗದಲ್ಲಿ ಪ್ರಾದೇಶಿಕ ಭಾಷೆಗಳ ಗಡಿ ಇರಬಾರದು ಎನ್ನುವ ಮೂಲಕ ಹೊಸ ಚರ್ಚೆಗೆ ಈ ಹಿರಿಯ ನಟರು ನಾಂದಿ ಹಾಡಿದ್ದಾರೆ.
ಭಾಷೆಯ ಗಡಿ ಕೆಡವಲು ಕಮಲ್ ಮನವಿ...
ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿಗಳ ವೇದಿಕೆಯಲ್ಲಿ ಮಾತನಾಡಿದ ಕಮಲ್ ಹಾಸನ್ ಅವರು ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಇನ್ಮುಂದೆ ಟಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಅಥವಾ ಮಾಲಿವುಡ್ ಎಂಬ ಪದಗಳೇ ಇರಬಾರದು ಎಂದು ಅವರು ಹೇಳಿದ್ದಾರೆ. ಎಲ್ಲವನ್ನೂ ಸೇರಿಸಿ ಒಂದೇ ಹೆಸರು ಇರಬೇಕು, ಅದುವೇ 'ಭಾರತೀಯ ಸಿನಿಮಾ'.
ನಾವೆಲ್ಲರೂ ಭಾರತೀಯರು ಎನ್ನುವಾಗ ನಮ್ಮ ಸಿನಿಮಾಗಳು ಯಾಕೆ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡಬೇಕು ಎಂದು ಅವರು ಪ್ರಶ್ನಿಸಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲೇ ಕಮಲ್ ಈ ಮನವಿ ಮಾಡಿದ್ದು ವಿಶೇಷವಾಗಿತ್ತು. ಸಿನಿಮಾ ರಂಗದ ಏಕೀಕರಣಕ್ಕೆ ಇದು ಸರಿಯಾದ ಸಮಯ ಎಂದು ಅವರು ಅಭಿಪ್ರಾಯಪಟ್ಟರು.
ಚಿರಂಜೀವಿ ಜೊತೆಗಿನ ಸ್ನೇಹ ಮತ್ತು ಹಾಸ್ಯ...
ಇದೇ ವೇಳೆ ಕಮಲ್ ಹಾಸನ್ ತಮ್ಮ ಆಪ್ತ ಗೆಳೆಯ ಚಿರಂಜೀವಿ ಬಗ್ಗೆಯೂ ಮಾತನಾಡಿದರು. "ನಾನು ಮತ್ತು ಚಿರಂಜೀವಿ ಸಹೋದರರಿದ್ದಂತೆ. ಅವರು ನಟನೆಗಿಂತ ರಾಜಕೀಯದಲ್ಲಿ ನನಗೆ ಸೀನಿಯರ್, ಆದರೆ ನಟನೆಯಲ್ಲಿ ನಾನು ಅವರಿಗಿಂತ ಸೀನಿಯರ್" ಎಂದು ತಮಾಷೆ ಮಾಡಿದರು.
ನಾವಿಬ್ಬರೂ 70ರ ದಶಕದಲ್ಲಿ ಸಿನಿಮಾ ಕೆರಿಯರ್ ಶುರು ಮಾಡಿದೆವು. ಈಗ ನಾವಿಬ್ಬರೂ 70ರ ಹರೆಯದಲ್ಲಿದ್ದೇವೆ ಎಂದು ಅವರು ನೆನಪಿಸಿಕೊಂಡರು. ದಶಕಗಳ ಕಾಲ ಚಿತ್ರರಂಗದಲ್ಲಿ ಉಳಿದು ಸಾಧನೆ ಮಾಡಿರುವ ಈ ಇಬ್ಬರು ನಟರು ಇಂದಿಗೂ ಯುವ ನಟರಿಗೆ ಸ್ಫೂರ್ತಿಯಾಗಿದ್ದಾರೆ.
ಮೆಗಾಸ್ಟಾರ್ ಕನಸು...
ಇನ್ನು ಮೆಗಾಸ್ಟಾರ್ ಚಿರಂಜೀವಿ ಕೂಡ ಕಮಲ್ ಹಾಸನ್ ಅವರ ಮಾತಿಗೆ ದನಿಗೂಡಿಸಿದರು. ಹೈದರಾಬಾದ್ ನಗರವು ಕೇವಲ ತೆಲುಗು ಸಿನಿಮಾಗಳಿಗೆ ಸೀಮಿತವಾಗಬಾರದು. ಇದು ವಿಶ್ವದ ಎಲ್ಲಾ ಸಿನಿಮಾಗಳ ಚಿತ್ರೀಕರಣಕ್ಕೆ ಪ್ರಮುಖ ಕೇಂದ್ರವಾಗಬೇಕು ಎಂದು ಅವರು ಆಶಿಸಿದರು.
ದಕ್ಷಿಣ ಕೊರಿಯಾದ ಆರ್ಥಿಕತೆಯನ್ನು ಕೆ-ಪಾಪ್ ಮತ್ತು ಕೆ-ಡ್ರಾಮಾಗಳು ಹೇಗೆ ಬದಲಿಸಿದವೋ, ಹಾಗೆಯೇ ಭಾರತೀಯ ಸಿನಿಮಾ ಕೂಡ ದೇಶದ ಜಿಡಿಪಿಗೆ ಕೊಡುಗೆ ನೀಡಬೇಕು ಎಂದರು. ಜಪಾನ್ನ ಅನಿಮೆ ಚಿತ್ರಗಳು ಆ ದೇಶಕ್ಕೆ ದೊಡ್ಡ ಹೆಸರು ತಂದುಕೊಟ್ಟಿವೆ. ಅದೇ ರೀತಿ ನಮ್ಮ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬೇಕು ಎಂಬುದು ಅವರ ಆಶಯವಾಗಿತ್ತು.
ಆಂಧ್ರಪ್ರದೇಶಕ್ಕೆ ಕಿವಿಮಾತು...
ಕಲೆ ಮತ್ತು ಕಲಾವಿದರನ್ನು ಗೌರವಿಸುವ ವಿಷಯದಲ್ಲಿ ತೆಲಂಗಾಣ ಸರ್ಕಾರವನ್ನು ಚಿರಂಜೀವಿ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ಸರ್ಕಾರಕ್ಕೂ ಒಂದು ಸಲಹೆ ನೀಡಿದರು. ತೆಲಂಗಾಣ ಸರ್ಕಾರ ನೀಡುತ್ತಿರುವ ಈ ಪ್ರಶಸ್ತಿಗಳನ್ನು ನೋಡಿ ಆಂಧ್ರಪ್ರದೇಶ ಕೂಡ ಸ್ಫೂರ್ತಿ ಪಡೆಯಲಿ ಎಂದರು.
ಅಲ್ಲಿಯೂ ಕೂಡ ಕಲಾವಿದರನ್ನು ಗುರುತಿಸಿ ರಾಜ್ಯ ಪ್ರಶಸ್ತಿಗಳನ್ನು ನೀಡುವಂತಾಗಲಿ ಎಂದು ಅವರು ಆಶಿಸಿದರು. ಸಿನಿಮಾವನ್ನು ಕೇವಲ ಮನರಂಜನೆಯ ಮಾಧ್ಯಮವಾಗಿ ನೋಡದೆ, ಆರ್ಥಿಕತೆಯನ್ನು ಸುಧಾರಿಸುವ ಶಕ್ತಿಯಾಗಿ ನೋಡಬೇಕು ಎಂದು ಅವರು ಸರ್ಕಾರಗಳಿಗೆ ಕರೆ ನೀಡಿದರು.
ಚೈತು, ರಶ್ಮಿಕಾಗೆ ಪ್ರಶಸ್ತಿ ಸಂಭ್ರಮ...
ಈ ಅದ್ಧೂರಿ ಸಮಾರಂಭದಲ್ಲಿ ಸ್ಟಾರ್ ನಟ-ನಟಿಯರಿಗೆ ಪ್ರಶಸ್ತಿಗಳ ಸುರಿಮಳೆಯಾಯಿತು. 'ಥಂಡೇಲ್' ಸಿನಿಮಾದ ಅದ್ಭುತ ನಟನೆಗಾಗಿ ನಾಗ ಚೈತನ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ಹಾಗೆಯೇ 'ದಿ ಗಲ್ಫ್ರೆಂಡ್' ಸಿನಿಮಾದ ನಟನೆಗಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಹಿರಿಯ ನಟಿ ಜಯಸುಧಾ ಮತ್ತು ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರಿಗೂ ವಿಶೇಷ ಗೌರವ ಸಲ್ಲಿಸಲಾಯಿತು. ಒಟ್ಟಿನಲ್ಲಿ ಈ ಕಾರ್ಯಕ್ರಮವು ಕೇವಲ ಪ್ರಶಸ್ತಿ ಪ್ರದಾನಕ್ಕೆ ಸೀಮಿತವಾಗದೆ, ಭಾರತೀಯ ಚಿತ್ರರಂಗದ ಭವಿಷ್ಯದ ಬಗ್ಗೆ ಒಂದು ದೊಡ್ಡ ಸಂದೇಶವನ್ನು ರವಾನಿಸಿದೆ.


Click it and Unblock the Notifications











