ತೆಲುಗು ಚಿತ್ರರಂಗಕ್ಕೆ ಎನ್ಟಿಆರ್ ಪರಿಚಯಿಸಿದ ನಟಿ, ನಿರ್ಮಾಪಕಿ ಸಿ ಕೃಷ್ಣವೇಣಿ ನಿಧನ
ತೆಲುಗು ಚಿತ್ರರಂಗದ ಮೇರು ನಟ ನಂದಮೂರಿ ತಾರಕ ರಾಮಾರಾವ್. ಟಾಲಿವುಡ್ ಇಂದು ಈ ಮಟ್ಟಿಗೆ ಬೆಳೆದು ನಿಲ್ಲುವುದಕ್ಕೆ ಎನ್ಟಿಆರ್ ಕೊಡುಗೆ ಎಷ್ಟಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂದಿಗೂ ತೆಲುಗು ಮಂದಿ ಎನ್ಟಿಆರ್ ಅವರನ್ನು ಸಿನಿಮಾ ಅಷ್ಟೇ ಅಲ್ಲ ರಾಜಕೀಯ ಕಾರಣಗಳಿಗೂ ನೆನಪಿಸಿಕೊಳ್ಳುತ್ತಾರೆ. ಒಂದು ವೇಳೆ ಎನ್ಟಿಆರ್ ಚಿತ್ರರಂಗಕ್ಕೆ ಬಾರದೇ ಹೋಗಿದ್ದರೆ, ತೆಲುಗು ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗುತ್ತಲೇ ಇರಲಿಲ್ಲ.
ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದ ಎನ್ಟಿಆರ್ ಅನ್ನು ಪರಿಚಯಿಸಿದ್ದು ಸಿ. ಕೃಷ್ಣವೇಣಿ. ತೆಲುಗು ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಸಿ, ಕೃಷ್ಣವೇಣಿ ಸೇವೆ ಸಲ್ಲಿಸಿದ್ದರು. ಎನ್ಟಿಆರ್ ಪರಿಚಯಿಸಿದ್ದಷ್ಟೇ ಅಲ್ಲ ತನ್ನ ತೆಲುಗು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ನಟಿ, ನಿರ್ಮಾಪಕಿ ಇಂದು (ಫೆಬ್ರವರಿ 16) ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.

ಲೆಜೆಂಡರಿ ನಟಿ ನಿರ್ಮಾಪಕಿ ಸಿ. ಕೃಷ್ಣವೇಣಿ ಅಗಲಿಕೆಯಿಂದ ತೆಲುಗು ಚಿತ್ರರಂಗದಲ್ಲಿ ಶೋಕ ಆವರಿಸಿದೆ. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಕ್ಷೇತ್ರದ ಮುಖಂಡರು ಸಂತಾಪವನ್ನು ಸೂಚಿಸಿದ್ದಾರೆ. ಆಂಧ್ರ ಪ್ರದೇಶದ ಸಿ.ಎಂ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಸೇರಿದಂತೆ ಹಲವರು ಸಂತಪವನ್ನು ಸೂಚಿಸಿದ್ದಾರೆ.
ಸಿ. ಕೃಷ್ಣವೇಣಿ ನಿರ್ಮಾಪಕಿಯಾಗಿ ಹಲವು ಪ್ರತಿಭೆಗಳನ್ನು ಪರಿಚಯಿಸಿದ್ಧಾರೆ. ಎನ್ಟಿಆರ್ ಜೊತೆ ದಕ್ಷಿಣ ಭಾರತದ ಗಾಯನ ಲೋಕದ ದಂತಕತೆ ಘಂಟಸಾಲ ಅವರನ್ನು ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತೆ. 1938ರಲ್ಲಿ ಬಣ್ಣ ಹಚ್ಚಿದ ಸಿ. ಕೃಷ್ಣವೇಣಿ 'ಕಚ ದೇವಯಾನಿ' ಸಿನಿಮಾದಲ್ಲಿ ನಟಿಸಿದ್ದರು. ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ಇವರು 'ಮನ ದೇಸಂ' ಅನ್ನುವ ಸಿನಿಮಾವನ್ನು ನಿರ್ಮಿಸಿದ್ದರು. ಇದು ಎನ್ಟಿಆರ್ ನಟಿಸಿದ ಮೊದಲ ಸಿನಿಮಾ.
ತೆಲುಗು ಚಿತ್ರರಂಗ ಸಿ. ಕೃಷ್ಣವೇಣಿಯವರ ಕೊಡುಗೆಯನ್ನು ಮರೆಯುವ ಹಾಗೇ ಇಲ್ಲ. ತೆಲುಗು ಚಿತ್ರರಂಗಕ್ಕೆ ಹೆಸರು ತಂದು ಕೊಟ್ಟ ದಿಗ್ಗಜರನ್ನು ಪರಿಚಯಿಸಿದ ಹೆಗ್ಗಳಿಕೆ ಇವರದ್ದು. ಎನ್ಟಿಆರ್, ಘಂಟಸಾಲ ಜೊತೆ ಲಿವಿಂಗ್ ಲೆಜೆಂಡ್ ನಿರ್ದೇಶಕ ರಾಘವೇಂದ್ರ ರಾವ್ ಅವರಿಗೆ ಅವಕಾಶ ಕೊಟ್ಟಿದ್ದು ಕೂಡ ಇವರೇ. ಹೀಗಾಗಿ ತೆಲುಗು ಮಂದಿ ಹಿರಿಯ ನಟಿಯನ್ನು ಕಳೆದುಕೊಂಡು ಭಾವುಕರಾಗಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿ ಸಂತಾಪವನ್ನು ಸೂಚಿಸಿದ್ದಾರೆ. "ಹಿರಿಯ ನಟಿ ಹಾಗೂ ನಿರ್ಮಾಪಕಿ ಕೃಷ್ಣವೇಣಿ ಅವರ ಅಗಲಿಕೆ ನನಗೆ ಅತೀವ ದುಃಖವನ್ನು ನೀಡಿದೆ. 102 ವರ್ಷಗಳ ಪರಿಪೂರ್ಣ ಜೀವನ ನಡೆಸಿದ ಕೃಷ್ಣವೇಣಿಯವರ ಆತ್ಮಕ್ಕೆ ಆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. 'ಮನ ದೇಶಂ' ಸಿನಿಮಾದ ಮೂಲಕ ಎನ್ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅವರ ಕುಟುಂಬಕ್ಕೆ ನಾನು ಸಂತಾಪವನ್ನು ಸೂಚಿಸುತ್ತೇನೆ" ಎಂದಿದ್ಧಾರೆ.
ಹಾಗೇ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಟ್ವೀಟ್ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.


Click it and Unblock the Notifications











