"ಜೊತೆಗಿದ್ದು ಎದುರಾಳಿಗಳಿಗೆ ಕೆಲಸ ಮಾಡೋನು ಬೇರೆಯವರು"; ಅಲ್ಲು ಅರ್ಜುನ್ಗೆ ಪರೋಕ್ಷ ಟಾಂಗ್!
ಆಂಧ್ರ ಪ್ರದೇಶ: ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ಬಾರಿ ಚುನಾವಣೆ ಮುಗಿದಿದೆ. ಆಂಧ್ರ ಪ್ರದೇಶದಲ್ಲಿ 175 ವಿಧಾನ ಸಭೆ ಸೀಟುಗಳಿಗೆ ಹಾಗೂ 25 ಲೋಕಸಭೆ ಸೀಟುಗಳಿಗೆ ಚುನಾವಣೆಗೆ ನಡೆದಿದೆ. ಹಾಗೇ ತೆಲಂಗಾಣದಲ್ಲಿ 17 ಲೋಕಸಭೆ ಸೀಟುಗಳಿಗೆ ಮತದಾನ ನಡೆದಿದೆ. ಆದರೆ, ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಆಂಧ್ರ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿದೆ. ಆಂಧ್ರ ಸಿಎಂ ಜಗನ್ ಪಾರ್ಟಿ ವೈಎಸ್ಆರ್ಸಿಪಿ ವಿರುದ್ಧ ಪವನ್ ಕಲ್ಯಾಣ್ ಜನಸೇನಾ ಪಾರ್ಟಿ, ಟಿಡಿಪಿ ಹಾಗೂ ಬಿಜೆಪಿ ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿದಿದೆ. ಅದರಲ್ಲೂ ಪವನ್ ಕಲ್ಯಾಣ್ ಹಾಗೂ ಸಿ ಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಮೊದಲಿನಿಂದಲೂ ವೈಷಮ್ಯವಿದೆ. ಹೀಗಾಗಿ ಇವರಿಬ್ಬರ ಫೈಟ್ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಇದರೊಂದಿಗೆ ಮೆಗಾ ಕುಟುಂಬದ ನಡೆ ಕೂಡ ಅಷ್ಟೇ ಕುತೂಹಲ ಕೆರಳಿಸಿತ್ತು. ಪವನ್ ಕಲ್ಯಾಣ್ ವೈಎಸ್ಆರ್ಸಿಪಿ ವಿರುದ್ಧ ಸಮರ ಸಾರಿದ್ದರೂ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ವೈಎಸ್ಆರ್ಸಿಪಿ ಅಭ್ಯರ್ಥಿಯ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಕಾರಣಕ್ಕೆ ಮೆಗಾ ಕುಟುಂಬದ ಕಣ್ಣು ಕೆಂಪಾದಂತೆ ಕಾಣುತ್ತಿದೆ. ಮೆಗಾ ಸಹೋದರ ನಾಗ ಬಾಬು ತನ್ನ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಅಷ್ಟಕ್ಕೂ ಆಗಿದ್ದು ಇಷ್ಟು. ಅಲ್ಲು ಅರ್ಜುನ್ ಮತದಾನಕ್ಕೂ ಮುನ್ನ ನಂಡ್ಯಾಲ್ ಕ್ಷೇತ್ರದ ವೈಎಸ್ಆರ್ಸಿಪಿ ಅಭ್ಯರ್ಥಿ ಶಿಲ್ಪ ರವಿಚಂದ್ರ ರೆಡ್ಡಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದು ಮೆಗಾ ಕುಟುಂಬದ ಕಣ್ಣನ್ನು ಕೆಂಪಾಗಿಸಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ಕುಟುಂಬದ ನಡುವೆ ಶೀತಲ ಸಮರ ನಡೆಯುತ್ತಿದೆ ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಅಲ್ಲು ಅರ್ಜುನ್ ವೈಎಸ್ಆರ್ಸಿಪಿ ಅಭ್ಯರ್ಥಿ ಶಿಲ್ಪ ರವಿಚಂದ್ರ ರೆಡ್ಡಿ ಪ್ರಚಾರ ಮಾಡಿ ಬಂದಿದ್ದರು. ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೇ ಬೆನ್ನಲ್ಲೇ ಮತದಾನ ಮುಗಿಯುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಗ್ಗೆ ಈಗ ಗಂಭೀರವಾಗಿ ಚರ್ಚೆ ಆಗುತ್ತಿದೆ. ಮೆಗಾ ಕುಟುಂಬ ಹಾಗೂ ಅಲ್ಲು ಅರ್ಜುನ್ ಫ್ಯಾಮಿಲಿ ನಡುವೆ ಬಿರುಕು ಬಿಟ್ಟಿದೆ ಅಂತಲೇ ಮಾತಾಡಿಕೊಳ್ಳುತ್ತಿದ್ದಾರೆ.
ಅಸಲಿಗೆ ನಾಗ ಬಾಬು ಮಾಡಿದ ಟ್ವೀಟ್ ಹೀಗಿದೆ, "ನಮ್ಮ ಜೊತೆಗಿದ್ದು, ಎದುರಾಳಿಗಳಿಗೆ ಕೆಲಸ ಮಾಡುವವನು ನಮ್ಮವನಾಗಿದ್ದರೂ ಬೇರೆಯವನೇ. ಅದೇ ರೀತಿ ನಮ್ಮ ಜೊತೆ ನಿಲ್ಲುವವನು ಬೇರೆಯವನಾಗಿದ್ದರೂ ನಮ್ಮವನೇ." ಎಂದು ಬರೆದು ಪೋಸ್ಟ್ ಮಾಡಿದ್ದರು. ಇದನ್ನು ಓದಿದವರು, ಮೊದಲ ಸಾಲು ಅಲ್ಲು ಅರ್ಜುನ್ಗೆ ಬರೆಯಲಾಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಮೆಗಾ ಸಹೋದರ ನಾಗ ಬಾಬು ತನ್ನ ಪೋಸ್ಟ್ನಲ್ಲಿ ಇಬ್ಬರು ವ್ಯಕ್ತಿಗಳ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ಅವರಲ್ಲಿ ಒಬ್ಬರ ಬಗ್ಗೆ ನೆಗೆಟಿವ್ ಆಗಿ ಕೇಳಿಕೆ ಕೊಟ್ಟಿದ್ದರೆ, ಮತ್ತೊಬ್ಬರ ಬಗ್ಗೆ ಪಾಸಿಟಿವ್ ಆಗಿ ಮಾತಾಡಿದ್ದಾರೆ. ಪವನ್ ಕಲ್ಯಾಣ್ ಸ್ಪರ್ಧಿಸಿರುವ ಪೀಠಾಪುರಂ ಕ್ಷೇತ್ರದ ಮಾಜಿ ಎಂಎಲ್ಎ ಎಸ್ವಿಎಸ್ಎನ್ ವರ್ಮಾ ಟಿಡಿಪಿ ಪಕ್ಷದವರಾಗಿದ್ದರೂ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದ್ದರು ಹೀಗಾಗಿ ನಾಗ ಬಾಬು "ನಮ್ಮ ಜೊತೆ ನಿಲ್ಲುವವನು ಬೇರೆಯವನಾಗಿದ್ದರೂ ನಮ್ಮವನೇ" ಎಂದು ಹೇಳಿದ್ದಾರೆಂದು ಚರ್ಚೆಯಾಗುತ್ತಿದೆ.


Click it and Unblock the Notifications











