ಇನ್ಮೇಲೆ ಸಿನಿಮಾ ಟಿಕೆಟ್ ಬರೀ 80 ರೂಪಾಯಿ: ಸಿಎಂ ವಿರುದ್ಧ ಉರಿದುಬಿದ್ದ ಸೂಪರ್ಸ್ಟಾರ್
ಕಳೆದ ಕೆಲವು ದಿನಗಳಿಂದ ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ವಿಚಾರವಾಗಿ ಭಾರಿ ವಾದ -ವಿವಾದಗಳು ನಡೆಯುತ್ತಿವೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಿರ್ಧಾರದ ವಿರುದ್ಧ ತೆಲುಗು ಚಿತ್ರರಂಗ ತಿರುಗಿಬಿದ್ದಿದೆ. ಯಾರು ಏನೇ ಕೂಗಾಡಿದರೂ ಸಿಎಂ ಜಗನ್ ಸರ್ಕಾರ ನಿನ್ನೆ( ನವೆಂಬರ್ 24) ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆಯನ್ನು ಪಾಸ್ ಮಾಡಿದೆ. ಇದರಿಂದ ತೆಲುಗು ಚಿತ್ರರಂಗ ಶಾಕ್ಗೆ ಒಳಗಾಗಿದೆ.
ಆಂಧ್ರ ಸರ್ಕಾರದ ಕಣ್ಣೀಗ ಸಿನಿಮಾರಂಗದ ಮೇಲೆ ಬಿದ್ದಿದೆ. ಸೂಪರ್ಸ್ಟಾರ್ಗಳ ಸಿನಿಮಾಗಳಿಗೆ ಹಾಗೂ ಹಬ್ಬ, ರಜೆ ದಿನಗಳಲ್ಲಿ ಟಿಕೆಟ್ ಬೆಲೆ ಏಕಾಏಕಿ ಏರಿಕೆ ಮಾಡುತ್ತಿರುವುದರ ವಿರುದ್ಧ ನಿಂತಿದೆ. ಇಡೀ ರಾಜ್ಯದಲ್ಲಿ ಸಿನಿಮಾ ಟಿಕೆಟ್ ಅನ್ನು 80 ರೂಪಾಯಿಗೆ ಫಿಕ್ಸ್ ಮಾಡಿದೆ. ಇದು ಟಾಲಿವುಡ್ ಸೂಪರ್ಸ್ಟಾರ್ಗಳನ್ನು ಕೆರಳಿಸಿದೆ. ಆಂಧ್ರ ಜಗನ್ ಸರ್ಕಾರದ ಈ ನಡೆಯ ವಿರುದ್ಧ ಮೆಗಾ ಚಿರಂಜೀವಿ ಮೊದಲು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿನಿಮಾ ಟಿಕೆಟ್ 80 ರೂ. ಚಿರಂಜೀವಿ ಬೇಸರ
ಆಂಧ್ರ ಸರ್ಕಾರ ಒಂದು ಸಿನಿಮಾ ಟಿಕೆಟ್ಗೆ 80ರೂಪಾಯಿಯನ್ನು ಫಿಕ್ಸ್ ಮಾಡಿ ಆದೇಶ ಹೊರಡಿಸಿದೆ. ಹಬ್ಬ ಹಾಗೂ ಉಳಿದ ಸಮಯದಲ್ಲಿ ಸಿನಿಮಾ ಟಿಕೆಟ್ ಬೆಲೆ ಏರಿಕೆ ಮಾಡಲು ಹಕ್ಕು ಇಲ್ಲವೆಂದು ಆಂಧ್ರ ಸರ್ಕಾರ ಈ ಆದೇಶದಲ್ಲಿ ತಿಳಿಸಿದೆ. ಸರ್ಕಾರ ಇಂತಹ ಕಟು ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಿರುಗಿಬಿದ್ದಿದ್ದಾರೆ. ಸಿಎಂ ಜಗನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಜಗನ್ಗೆ ಟ್ವೀಟ್ ಮೂಲಕ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಆದೇಶ ಹೊರ ಬಿದ್ದ ಬಳಿಕ ಮೊದಲು ಮೆಗಾಸ್ಟಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ಮೆಗಾಸ್ಟಾರ್ ಬರೆದ ಪತ್ರದಲ್ಲಿ ಏನಿದೆ?
ಏಕರೂಪದ ಟಿಕೆಟ್ ಬೆಲೆ ನಿಗದಿ ಪಡಿಸಿದ ಬೆನ್ನಲ್ಲೇ ಸರ್ಕಾರದ ಆನ್ಲೈನ್ ವೇದಿಕೆಯಿಂದಲೇ ಟಿಕೆಟ್ ಖರೀದಿ ಮಾಡಬೇಕು ಎಂದಿರುವ ಬಗ್ಗೆನೂ ಮೆಗಾಸ್ಟಾರ್ ಅಸಮಧಾನ ಹೊರ ಹಾಕಿದ್ದಾರೆ. ಸಿಎಂ ಜಗನ್ಗೆ ಟ್ವೀಟ್ ಮಾಡುವ ಮೂಲಕ ಬೇಸರ ಹೊರ ಹಾಕಿದ್ದಾರೆ." ಸಿನಿಮಾ ಟಿಕೆಟ್ ಖರೀದಿ ವಿಚಾರದಲ್ಲಿ ಪಾರದರ್ಶಕತೆ ತರಲು ಆನ್ಲೈನ್ ಟಿಕೆಟ್ ವ್ಯವಸ್ಥೆಯ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಆದರೆ, ತೆಲುಗು ಸಿನಿಮಾರಂಗ ಹಿತದೃಷ್ಟಿಯಿಂದ ಬೇರೆ ರಾಜ್ಯಗಳಲ್ಲಿರುವಂತೆ ಟಿಕೆಟ್ ಬೆಲೆ ಏರಿಕೆ ಮಾಡಲು ಅನುಮಾಡಿಕೊಡಬೇಕು. ಸರ್ಕಾರ ರಾಷ್ಟ್ರದಾದ್ಯಂತ ಏಕರೂಪದ ಜಿಎಸ್ಟಿ ಸಂಗ್ರಹ ಮಾಡುತ್ತಿರುವುದರಿಂದ, ದೇಶದ ಬೇರೆ ಬೇರೆ ಕಡೆಗಳಲ್ಲಿ ಟಿಕೆಟ್ ಬೆಲೆ ಏರಿಕೆ ವಿಚಾರದಲ್ಲಿ ಹೇಗೆ ಸಡಿಲಕೆ ಇದೆಯೋ ಹಾಗೆ ನಮಗೂ ಕೊಡಬೇಕು. ತೆಲುಗು ಚಿತ್ರರಂಗ ಉಳಿಯಲು ತಾವು ಮರು ಚಿಂತನೆ ಮಾಡಲೇಬೇಕಾದ ಅನಿವಾರ್ಯತೆಯಿದೆ." ಎಂದು ಚಿರಂಜೀವಿ ಸಿಎಂ ಜಗನ್ ವಿರುದ್ಧ ಪರೋಕ್ಷವಾಗಿ ಸಮಧಾನ ಹೊರ ಹಾಕಿದ್ದಾರೆ.

ಜಿಎಸ್ಟಿ ಕಟ್ಟುವ ವಿಚಾರದಲ್ಲಿ ಪಾರದರ್ಶಕತೆ ಇಲ್ಲ
ತೆಲುಗು ಚಿತ್ರರಂಗ ಸಿನಿಮಾ ಬಿಡುಗಡೆ ಬಳಿಕ ಸರ್ಕಾರಕ್ಕೆ ಪಾವತಿಸಬೇಕಿರುವ ತೆರಿಗೆಯನ್ನು ಪಾವತಿಸುತ್ತಿಲ್ಲ. ನಿರ್ಮಾಪಕರು ಹಾಗೂ ವಿತರಕರು ಜಿಎಸ್ಟಿಯನ್ನು ಸರಿಯಾಗಿ ಕಟ್ಟದೆ, ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆಂಬುದು ಸರ್ಕಾರದ ಆರೋಪ. ಇದೇ ಕಾರಣಕ್ಕೆ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರದ ಆನ್ಲೈನ್ ವೇದಿಕೆಯಿಂದಲೇ ಟಿಕೆಟ್ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ.

ಜಗನ್ ವಿರುದ್ಧ ತಿರುಗಿ ಬಿದ್ದಿದ್ದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ಬಿಡುಗಡೆ ಮಾಡಿದಾಗ ಇದೇ ಕಾರಣಕ್ಕೆ ವಿವಾದ ಸೃಷ್ಟಿಯಾಗಿತ್ತು. ದಿನಕ್ಕೆ ನಾಲ್ಕು ಶೋಗಳಿಗಿಂತ ಹೆಚ್ಚು ಪ್ರದರ್ಶನ ಮಾಡುವಂತಿಲ್ಲವೆಂದು ಆಂಧ್ರ ಸರ್ಕಾರ ಹೇಳಿತ್ತು. ಹೀಗಾಗಿ ಪವನ್ ಕಲ್ಯಾಣ್ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ತಿರುಗಿಬಿದ್ದರು. ಸಾಯಿ ಧರಂ ತೇಜಾ ನಟಿಸಿದ ರಿಪಬ್ಲಿಕ್ ಸಿನಿಮಾ ಬಿಡುಗಡೆ ವೇಳೆನೂ ಪವನ್ ಕಲ್ಯಾಣ್ ಕಿಡಿಕಾರಿದ್ದರು.


Click it and Unblock the Notifications











