ಕೊನೆಗೂ ನಾಗಚೈತನ್ಯ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್: ಮೀನುಗಾರರನ್ನು ಹುಡುಕಿ ಹೊರಟ ಅಕ್ಕಿನೇನಿ ಕುಡಿ!
ಅಕ್ಕಿನೇನಿ ಕುಟುಂಬದ ಕುಡಿ ನಾಗ ಚೈತನ್ಯ ಟಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಯತ್ನಿಸುತ್ತಿದ್ದಾರೆ. ತೆಲುಗಿನಲ್ಲಿ ಸೋಲು ಹಾಗೂ ಗೆಲುವು ಎರಡನ್ನೂ ಕಂಡಿರೋ ನಟ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ರಯತ್ನ ಪಡುತ್ತಿದ್ದರು. ಆದರೆ, ಸರಿಯಾದ ಸ್ಕ್ರಿಪ್ಟ್ ಸಿಕ್ಕಿರಲಿಲ್ಲ. ಕೊನೆಗೂ ಪ್ಯಾನ್ ಇಂಡಿಯಾ ಕನಸು ನೆರವೇರಿದೆ.
ನಾಗಚೈತನ್ಯ ಅಭಿಮಾನಿಗಳು ನಿರೀಕ್ಷೆ ಮಾಡಿದಂತೆ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಆಗಿದೆ. ಈ ಹಿಂದೆ ನಿಖಿಲ್ ಸಿದ್ಧಾರ್ಥ್ಗೆ ಮರುಜೀವ ಕೊಟ್ಟಿದ್ದ ನಿರ್ದೇಶಕರೇ ನಾಗಚೈತನ್ಯರನ್ನು ಪ್ಯಾನ್ ಇಂಡಿಯಾ ಲೆವೆಲ್ಗೆ ಶೈನ್ ಮಾಡಿಸುವುದಕ್ಕೆ ಹೊರಟಿದ್ದಾರೆ.

ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕೌತುಕ ಹೆಚ್ಚಾಗಿದೆ. ಯಾಕಂದ್ರೆ, ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ. ಅಲ್ಲದೆ ಈ ಸಿನಿಮಾಗಾಗಿ ನಾಗ ಚೈತನ್ಯ ಆಂಧ್ರಪ್ರದೇಶದ ಶ್ರೀಕಾಕುಳಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಮೀನುಗಾರರ ಸಮುದಾಯವನ್ನು ಭೇಟಿ ಮಾಡಿ ಕೆಲ ಸಮಯ ಅವರೊಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನ ಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ.
'ಕಾರ್ತಿಕೇಯ 2' ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ನಾಗಚೈತನ್ಯ ಈ ಸಿನಿಮಾ ಬಗ್ಗೆ ತಯಾರಿ ನಡೆಸುತ್ತಿದ್ದಾರೆ. ಅಂದ್ಹಾಗೆ ಇದು ನಾಗಚೈತನ್ಯ ನಟಿಸುತ್ತಿರಯವ 23 ನೇ ಸಿನಿಮಾ. 'ಕಾರ್ತಿಕೇಯ-2' ದಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭ ಆಗಲಿದೆ.

'NC23'ಯನ್ನು ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. NC23 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಜೋರಾಗಿ ನಡೆಯುತ್ತಿದ್ದು, ಇದೇ ತಿಂಗಳಿಂದ ಚಿತ್ರೀಕರಣ ಆರಂಭ ಆಗಲಿದೆ. ನಾಗಚೈತನ್ಯ, ಚಂದೂ ಮೊಂಡೇಟಿ ಹಾಗೂ ಬನ್ನಿ ವಾಸ್ ನಿನ್ನೆ ವೈಜಾಗ್ನಲ್ಲಿ ಭೇಟಿಯಾಗಿ ಶ್ರೀಕಾಕುಳಂ ಗ್ರಾಮಕ್ಕೆ ತೆರಳಿ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಇದೇ ವೇಳೆ "ಚಂದು 6 ತಿಂಗಳ ಹಿಂದೆ ಕಥೆಯನ್ನು ಹೇಳಿದ್ದರು. ನಾನು ತುಂಬಾ ಉತ್ಸುಕನಾಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಈ ಕಥೆಯನ್ನು ರೆಡಿ ಮಾಡುತ್ತಿದ್ದಾರೆ. ವಾಸ್ ಮತ್ತು ಚಂದೂ ಎರಡು ವರ್ಷಗಳಿಂದ ಇದೇ ಕಥೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಥೆ ತುಂಬಾ ಅದ್ಭುತವಾಗಿದೆ. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯೋಕೆ ಇಲ್ಲಿಗೆ ಬಂದಿದ್ದೇವೆ" ಎಂದು ನಾಗ ಚೈತನ್ಯ ಹೇಳಿದ್ದಾರೆ.
"ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ ಬಗ್ಗೆ 2018ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆ ಸಿದ್ಧಪಡಿಸಲಾಗಿದೆ. ಆರಂಭದಲ್ಲಿ ಅರವಿಂದ್ ಮತ್ತು ಬನ್ನಿ ವಾಸ್ಗೆ ಈ ಕಥೆಯನ್ನು ಹೇಳಿದ್ದೆ. ನಾವು ಕಳೆದ 2 ವರ್ಷಗಳಿಂದ ಸ್ಕ್ರಿಪ್ಟ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೀಗ ಸ್ಕ್ರಿಪ್ಟ್ ರೆಡಿಯಾಗಿದೆ. ಚೈತನ್ಯ ಕಥೆಯಿಂದ ಸಂತಸಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಸಿನಿಮಾದ ಪ್ರೀ-ಪ್ರೊಡಕ್ಷನ್ ಆರಂಭ ಆಗಲಿದೆ" ಎಂದು ನಿರ್ದೇಶಕ ಚಂದೂ ಮೊಂಡೇಟಿ ಹೇಳಿದ್ದಾರೆ.


Click it and Unblock the Notifications











