ಖಳನಾಯಕನ ಪಟ್ಟಕ್ಕೆ ಹೊಸ ವ್ಯಾಖ್ಯಾನ ಕೊಡ್ತಾರೆ ದುನಿಯಾ ವಿಜಯ್: ಬಾಲಕೃಷ್ಣ ಸಿನಿಮಾ ನಿರ್ದೇಶಕ ಗುಣಗಾನ
'ಸಲಗ' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ದುನಿಯಾ ವಿಜಯ್ ವೃತ್ತಿ ಬದುಕು ದಾರಿ ಬೇರೊಂದು ಪಥ ಹಿಡಿದಿದೆ. ಸ್ಯಾಂಡಲ್ವುಡ್ ಬ್ಲ್ಯಾಕ್ ಕೋಬ್ರಾ ಒಳ್ಳೊಳ್ಳೆ ಆಫರ್ಗಳು ಹುಡುಕಿಕೊಂಡು ಬರುತ್ತಿದೆ. ಇತ್ತೀಚೆಗೆ ದುನಿಯಾ ವಿಜಯ್ ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಸುದ್ದಿ ಕೇಳುತ್ತಿದ್ದಂತೆ ವಿಜಯ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರು.
ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿರುವ ಸುದ್ದಿ ಬೇಜಾನ್ ಸದ್ದು ಮಾಡಿದ್ದರೂ, ಕರಿಚಿರತೆ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ವಿಜಯ್ ಲುಕ್, ಗೆಟಪ್ ಎಲ್ಲವೂ ಬದಲಾಗಿತ್ತು. ವಿಜಯ್ ಲೈಫ್ನಲ್ಲಿ ಏನೋ ಹೊಸತು ನಡೀತಿದೆ ಅನ್ನುವುದು ಮಾತ್ರ ದುನಿಯಾ ಅಭಿಮಾನಿಗಳಿಗೆ ಮನವರಿಕೆ ಆಗುತ್ತಿತ್ತು. ಅದರಂತೆ ಈಗ ನಂದಮೂರಿ ಬಾಲಕೃಷ್ಣ ನಟಿಸುತ್ತಿರುವ ಸಿನಿಮಾ ತಂಡವೇ ದುನಿಯಾ ವಿಜಯ್ ಅಭಿಮಾನಿಗಳು ಸಂತಸ ಪಡುವ ಸುದ್ದಿಯೊಂದನ್ನು ರಿವೀಲ್ ಮಾಡಿದೆ.

ಬಾಲಕೃಷ್ಣ 107ನೇ ಸಿನಿಮಾದಲ್ಲಿ ವಿಜಯ್
ನಂದಮೂರಿ ಬಾಲಕೃಷ್ಣ 107ನೇ ಸಿನಿಮಾ ಸೆಟ್ಟೇರಲು ವೇದಿಕೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಲೆಜೆಂಡ್ ಬಾಲಕೃಷ್ಣ ಎದುರು ಸ್ಯಾಂಡಲ್ವುಡ್ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ತೊಡೆತಟ್ಟಲಿದ್ದಾರೆ. ಈ ವಿಷಯವನ್ನು ಬಾಲಕೃಷ್ಣ ಸಿನಿಮಾದ ನಿರ್ದೇಶಕ ಗೋಪಿಚಂದ್ ಮಲಿನೇನಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಕಾಲಿಡುವುದು ಕನ್ಫರ್ಮ್ ಆಗಿದೆ.
'ಖಳನಾಯಕನಿಗೆ ಹೊಸ ವ್ಯಾಖ್ಯಾನ'
ನಂದಮೂರಿ ಬಾಲಕೃಷ್ಣ 107ನೇ ಸಿನಿಮಾದ ನಿರ್ದೇಶಕ ಗೋವಿಚಂದ್ ಮಲಿನೇನಿ ಸ್ಯಾಂಡಲ್ವುಡ್ ಸ್ಟಾರ್ ನಟ ದುನಿಯಾ ವಿಜಯ್ಗೆ ಸ್ವಾಗತ ಕೋರಿದ್ದಾರೆ. " ಸ್ಯಾಂಡಲ್ವುಡ್ ಸೆನ್ಸೇಷನ್ ದುನಿಯಾ ವಿಜಯ್ರನ್ನು ಎನ್ಬಿಕೆ 107ನೇ ಸಿನಿಮಾಗೆ ಸ್ವಾಗತಿಸಲು ಖುಷಿಯಾಗುತ್ತಿದೆ. ದುನಿಯಾ ವಿಜಯ್ ಖಳನಾಯಕ ಪಟ್ಟಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆಯಲಿದ್ದಾರೆ." ಎಂದು ನಿರ್ದೇಶಕ ಗೋಪಿಚಂದ್ ಮಲಿನೇನಿ ಬರೆದುಕೊಂಡಿದ್ದಾರೆ.

ಮತ್ತೊಂದು ಕನ್ನಡ ಸಿನಿಮಾ ನಿರ್ದೇಶನ
'ಸಲಗ' ಸಿನಿಮಾ ಬಾಕ್ಸಾಫೀಸ್ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಲಾಕ್ಡೌನ್ ಬಳಿಕ ರಿಲೀಸ್ ಆಗಿದ್ದ ಕನ್ನಡ ಸಿನಿಮ ಇದ್ದಾಗಿದ್ದು, ಬಾಕ್ಸಾಫೀಸ್ನಲ್ಲಿ ಗೆದ್ದು ಬೀಗಿತ್ತು. ಸಲಗ ಸಿನಿಮಾದಿಂದ ವಿಜಯ್ ಅದೃಷ್ಟ ಮತ್ತೆ ಕುಲಾಯಿಸಿದ್ದು, ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಈ ಮಧ್ಯೆ ಕನ್ನಡದಲ್ಲಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಕನ್ನಡ ಚಿತ್ರಕ್ಕೂ ಮುನ್ನ ಬಾಲಕೃಷ್ಣ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಆ ಬಳಿಕವಷ್ಟೇ ಕನ್ನಡ ಸಿನಿಮಾ ಕೈಗೆತ್ತಿಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕದಲ್ಲಿ 'ಅಖಂಡ' ಅಬ್ಬರ
ಬಾಲಕೃಷ್ಣ ನಟಿಸಿದ ಸಿನಿಮಾ 'ಅಖಂಡ' ಕರ್ನಾಟಕದ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ವಿಶ್ವದಾದ್ಯಂತ 125 ಕೋಟಿ ಲೂಟಿ ಮಾಡಿರುವ 'ಅಖಂಡ' ಕಮ್ಮಿ ಅಂದರೂ ಕರ್ನಾಟಕದಲ್ಲಿ 12 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದೆ ಎನ್ನುತ್ತಿದ್ದಾರೆ. ದುನಿಯಾ ವಿಜಯ್ ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಳ್ಳುವ ಮೂಲಕ ಕರ್ನಾಟಕದಲ್ಲಿ ತನ್ನ ಫ್ಯಾನ್ಸ್ ಬೇಸ್ ಅನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಆಲೋಚನೆ ಇಟ್ಟುಕೊಂಡಿದ್ದಾರೆ. ಅಲ್ಲದೆ, 'ಅಖಂಡ' ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಇನ್ನೂ ಹೆಸರಿಡದ 107ನೇ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications











