ಅಗಲಿದ ಪತಿಯ ಫೋಟೊಗೆ ತಾಳಿ ತಗುಲಾಕಿದ ಪತ್ನಿ; ಸೊಸೆ ಎಂದು ಇಂದಿಗೂ ಒಪ್ಪಿಕೊಂಡಿಲ್ಲ ನಂದಮೂರಿ ಕುಟುಂಬ
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಲೆಗಸಿ ಇಂದಿಗೂ ಮುಂದುವರೆದಿದೆ. ಚಿತ್ರರಂಗದಲ್ಲಿ ಬಾಲಕೃಷ್ಣ ಹಾಗೂ ಜೂ.ಎನ್ಟಿಆರ್ ಹವಾ ಜೋರಾಗಿದೆ. ಈ ಕುಟುಂಬದ ಮೇಲೆ ತೆಲುಗು ಮಂದಿ ಅಪಾರ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೇ, ರಾಜಕೀಯದಲ್ಲೂ ಈ ಕುಟುಂಬ ಪ್ರಬಲವಾಗಿದೆ. ಹೀಗಾಗಿ ಈ ನಂದಮೂರಿ ಕುಟುಂಬದ ಆಗು-ಹೋಗುಗಳ ಬಗ್ಗೆ ಪ್ರತಿಯೊಬ್ಬ ಅಭಿಮಾನಿಯೂ ಗಮನಿಸುತ್ತಲೇ ಇರುತ್ತಾನೆ.
ಮೂರು ವರ್ಷಗಳ ಹಿಂದೆ ಈ ಕುಟುಂಬ ಮತ್ತೊಬ್ಬ ನಟ ನಂದಮೂರಿ ತಾರಕರತ್ನ ನಿಧನರಾಗಿದ್ದರು. ಕೇವಲ 39 ವರ್ಷದಲ್ಲೇ ಇವರ ಅಗಲಿಕೆಯನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಂಡಿಲ್ಲ. ಇತ್ತ ಪತ್ನಿ ಅಲೇಖ್ಯಾ ಹಾಗೂ ಮಕ್ಕಳು ಕೂಡ ಅವರ ನೆನಪಿನಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ನಂದಮೂರಿ ತಾರಕರತ್ನ ಅಗಲಿದ ಬಳಿಕವೂ ಅಲೇಖ್ಯಾ ಅವರನ್ನು ಸೊಸೆ ಎಂದು ಒಪ್ಪಿಕೊಂಡಿಲ್ಲ.

ನಂದಮೂರಿ ತಾರಕರತ್ನ ಹಾಗೂ ಅಲೇಖ್ಯಾ ಇಬ್ಬರೂ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಅದಾಗಲೇ ವಿಚ್ಚೇದನ ಪಡೆದಿದ್ದ ಅಲೇಖ್ಯಾರನ್ನು ಮದುವೆ ಆಗುವುದು ನಂದಮೂರಿ ಕುಟುಂಬಕ್ಕೆ ಇಷ್ಟವಿರಲಿಲ್ಲ. ಹೀಗಿದ್ದರೂ, ಅವರ ವಿರೋಧದ ನಡುವೆ ಮದುವೆ ಆಗಿ ಸಂತೋಷದ ಕುಟುಂಬ ನಡೆಸುತ್ತಿದ್ದರು. ಮೂವರು ಮುದ್ದಾದ ಮಕ್ಕಳು ಇದ್ದಾರೆ. ಕುಟುಂಬ ವಿರೋಧಿಸಿದರೂ, ಈ ದಂಪತಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, ಮೂರು ವರ್ಷದ ಹಿಂದೆ ನಡೆದ ಪತಿಯ ಅಗಲಿಕೆ ಅವರನ್ನು ವಿಚಲಿತರನ್ನಾಗಿ ಮಾಡಿದೆ.
2023ರಲ್ಲಿ ಆಂಧ್ರ ಪ್ರದೇಶದ ಚುನಾವಣೆ ವೇಳೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಕುಪ್ಪಂನಲ್ಲಿ 'ಯುವಗಳಂ' ಪಾದಯಾತ್ರೆ ಆರಂಭಿಸಿದ್ದರು. ಅದರಲ್ಲಿ ನಂದಮೂರಿ ತಾರಕರತ್ನ ಕೂಡ ಭಾಗವಹಿಸಿದ್ದರು. ಈ ವೇಳೆ ತಾರಕರತ್ನ ಹೃದಯಾಘಾತದಿಂದ ಕುಸಿದುಬಿದಿದ್ದರು. ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆಯನ್ನು ನೀಡಲಾಯಿತು. ವಿದೇಶದಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ. ಪತಿ ತಾರಕರತ್ನ ನೆನಪಿಸಿಕೊಂಡು ಪತ್ನಿ ಅಲೇಖ್ಯಾ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಹಾಗೇ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಪತಿ ನಂದಮೂರಿ ತಾರಕರತ್ನಗೆ ಮುತ್ತಿಡುತ್ತಿರುವ ಫೋಟೋಗೆ ತನ್ನ ಮಾಂಗಲ್ಯವನ್ನು ನೇತು ಹಾಕಿದ್ದಾರೆ. ಹಾಗೇ ಭಾವುಕರಾಗಿ "ನೀವು ಇದ್ದಾಗ, ಇದನ್ನು ಧರಿಸುವ ಅಗತ್ಯವೇ ನನಗೆ ಎದುರಾಗಲಿಲ್ಲ.. ಈಗ ಅದು ನನ್ನ ಕೈಯಲ್ಲಿದೆ. ಏಕೆಂದರೆ ನೀವು ಇಲ್ಲಿಯೇ ಇದ್ದೀರಿ," ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಲೇಖ್ಯಾ ಅವರ ಈ ಭಾವುಕ ಪೋಸ್ಟ್ ನಂದಮೂರಿ ಕುಟುಂಬದ ಅಭಿಮಾನಿಗಳನ್ನೂ ಭಾವುಕರನ್ನಾಗಿ ಮಾಡಿದೆ.

ಇತ್ತೀಚೆಗೆ ಅಲೇಖ್ಯಾ ನೀಡಿದ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನದ ಬಳಿಕ ಮತ್ತೆ ಮದುವೆ ಆಗುವುದಕ್ಕೆ ಬಯಸಿರಲಿಲ್ಲ. ಆದರೆ, ತಾರಕರತ್ನ ಅವರ ಪ್ರೀತಿಗಾಗಿ ಆ ನಿರ್ಧಾರವನ್ನು ಬದಲಿಸಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ತಾರಕರತ್ನ ಅವರ ಪರಿಚಯ ನಮ್ಮ ತಂದೆಗೆ ಮೊದಲೇ ಇತ್ತು. ಆರಂಭದಲ್ಲಿ ಮದುವೆ ನನ್ನ ಪೋಷಕರು ಒಪ್ಪಿಲ್ಲವಾದರೂ, ಬಳಿಕ ಸಮ್ಮತಿ ನೀಡಿದರು. ಆದರೆ, ತಾರಕರತ್ನ ಕುಟುಂಬಕ್ಕೆ ತಮ್ಮ ಈ ವಿವಾಹ ಇಂದಿಗೂ ಇಷ್ಟವಿಲ್ಲ. ನಾನು ಯಾವಾಗಲೂ ತಾರಕರತ್ನ ಅವರ ಹೆತ್ತವರನ್ನು ಅತ್ತೆ, ಮಾವ ಎಂದು ಗೌರವಿಸಿದ್ದೇನೆ. ಆದರೆ, ಅವರು ಇಂದಿಗೂ ನನ್ನನ್ನು ಒಪ್ಪಿಕೊಂಡಿಲ್ಲ. ಕನಿಷ್ಠ ಮಕ್ಕಳನ್ನಾದರೂ ಹತ್ತಿರ ಕರೆದುಕೊಳ್ಳುತ್ತಾರೆಂದು ಆಶಿಸುತ್ತಿದ್ದೇನೆ" ಎಂದು ಅಲೇಖ್ಯಾ ಹೇಳಿಕೊಂಡಿದ್ದಾರೆ.
ಇದಷ್ಟೇ ಅಲ್ಲದೆ ಪತಿ ಅಗಲಿದ ನಂತರ ಕಾರ್ಯಕ್ರಮಗಳಲ್ಲಿ ಹೇಗೆಲ್ಲ ಅವಮಾನಿಸುತ್ತಾರೆಂದು ಹೇಳಿಕೊಂಡಿದ್ದಾರೆ. "ನೀನು ಕುಂಕುಮ ಇಟ್ಟುಕೊಳ್ಳಬೇಡ.. ಆರತಿ ನೀಡಬೇಡ ಎಂದು ಹೇಳಿದಾಗ ಹೃದಯ ಒಡೆದುಹೋಗುತ್ತದೆ. ನಮ್ಮ ಮನೆಯಲ್ಲಂತೂ ಯಾರೂ ಇಂತಹ ಭೇದಭಾವ ತೋರಿಸುವುದಿಲ್ಲ. ಹೀಗಾಗಿ ನಾನು ಯಾರ ಮನೆ ಪೂಜೆಗಳಿಗೂ ಹೋಗುವುದಿಲ್ಲ," ಎಂದು ಅಲೇಖ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications















