ರಾಮ್ ಗೋಪಾಲ್ ವರ್ಮಾ, ನಟ್ಟಿ ಕುಮಾರ್ 'ಡೇಂಜರಸ್' ಜಗಳ
ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ ಸಲಿಂಗಕಾಮಿಗಳ ಕತೆ ಹೊಂದಿದ್ದ ಹಸಿ-ಬಿಸಿ ದೃಶ್ಯಗಳ ಸಿನಿಮಾ 'ಡೇಂಜರಸ್' ಕೆಲ ದಿನಗಳ ಹಿಂದೆ ಬಿಡುಗಡೆ ಆಗಬೇಕಿತ್ತು. ಆದರೆ ಅಚಾನಕ್ಕಾಗಿ ಬಿಡುಗಡೆ ತಡೆಹಿಡಿಯಲಾಗಯಿತು. ''ನಮ್ಮದು ಲೆಸ್ಬಿಯನ್ಸ್ ಕುರಿತಾದ ಸಿನಿಮಾ ಆದ್ದರಿಂದ ಚಿತ್ರಮಂದಿರಗಳ ಮಾಲೀಕರು ಚಿತ್ರಮಂದಿರ ನೀಡುತ್ತಿಲ್ಲ ಹಾಗಾಗಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ'' ಎಂದು ವರ್ಮಾ ಹೇಳಿದ್ದರು. ಆದರೆ ವಿತರಕ, ನಿರ್ಮಾಪಕ ನಟ್ಟಿ ಕುಮಾರ್ ಬೇರೆಯದೇ ಕತೆ ಹೇಳುತ್ತಿದ್ದಾರೆ.
Recommended Video

ಸುದ್ದಿಗೋಷ್ಠಿ ನಡೆಸಿ ರಾಮ್ ಗೋಪಾಲ್ ವರ್ಮಾ ಅನ್ನು ಹೀನಾ-ಮಾನ ಬೈದಿರುವ ನಿರ್ಮಾಪಕ ನಟ್ಟಿ ಕುಮಾರ್, ''ರಾಮ್ ಗೋಪಾಲ್ ವರ್ಮಾ ನನಗೆ 5.20 ಕೋಟಿ ರುಪಾಯಿ ಹಣ ನೀಡಬೇಕು. ಅದು ನೀಡುವವರೆಗೆ ಅವರ ನಿರ್ದೇಶನದ ಯಾವುದೇ ಸಿನಿಮಾ ಬಿಡುಗಡೆ ಆಗಲು ಬಿಡುವುದಿಲ್ಲ. ಈಗ 'ಡೇಂಜರಸ್' ಸಿನಿಮಾ ಬಿಡುಗಡೆ ಆಗದಂತೆ ತಡೆ ತಂದಿರುವುದು ಸಹ ನಾನೇ'' ಎಂದಿದ್ದಾರೆ.
'ಡೇಂಜರಸ್' ಮಾತ್ರವೇ ಅಲ್ಲ ಈ ಹಿಂದಿನ ವರ್ಮಾ ಸಿನಿಮಾ 'ಲಡಕಿ', 'ಡಿ ಕಂಪೆನಿ' ಸಿನಿಮಾಗಳು ಸಹ ಬಿಡುಗಡೆ ಆಗದಂತೆ ನಾನು ಸ್ಟೇ ತಂದಿದ್ದೆ. ವರ್ಮಾ ನನಗೆ ನನ್ನ ಬಾಕಿ ಹಣ ವಾಪಸ್ಸು ಕೊಡುವವರೆಗೆ ಆತನ ಸಿನಿಮಾಗಳು ಬಿಡುಗಡೆ ಆಗಲು ಬಿಡುವುದಿಲ್ಲ'' ಎಂದಿದ್ದಾರೆ ನಟ್ಟಿ ಕುಮಾರ್. ತಾನು ಹಲವರಿಂದ ವರ್ಮಾಗೆ ಹಣ ಕೊಡಿಸಿದ್ದಾಗಿಯೂ, ತನಗೆ ಮಾತ್ರವಲ್ಲ ಸುಮಾರು ಜನರಿಗೆ ವರ್ಮಾ ಮೋಸ ಮಾಡಿರುವುದಾಗಿಯೂ ನಟ್ಟಿ ಕುಮಾರ್ ಹೇಳಿದ್ದಾರೆ. ಮುಂಬೈನಲ್ಲಿ ಒಬ್ಬರಿಗೆ 12 ಕೋಟಿ ಸಾಲ ಕೊಡಬೇಕೆಂದು ಸಹ ನಟ್ಟಿ ಕುಮಾರ್ ಹೇಳಿದ್ದಾರೆ.

ಹಲವರಿಗೆ ಕೋಟ್ಯಂತರ ಹಣ ಮೋಸ ಮಾಡಿದ್ದಾನೆ: ವರ್ಮಾ
ವರ್ಮಾ ಅನ್ನು ಹೀನಾ-ಮಾನ ಬೈದ ನಟ್ಟಿ ಕುಮಾರ್, ಆತನಿಗೆ ತಲೆ ಸರಿ ಇಲ್ಲ. ಸದಾ ತನ್ನ ಬಗ್ಗೆ ಅಷ್ಟೆ ಚಿಂತೆ, ಒಬ್ಬರಾದ ಬಳಿಕ ಒಬ್ಬರಿಗೆ ಮೋಸ ಮಾಡುತ್ತಲೇ ಇರುತ್ತಾನೆ. ಅವನ ಈ ಮೋಸದ ಕಾರಣದಿಂದಲೇ ಬಾಂಬೆಯಿಂದ ಅವನನ್ನು ಓಡಿಸಿದ್ದು, 12 ಕೋಟಿ ಸಾಲ ಮಾಡಿಕೊಂಡು ಅಲ್ಲಿಂದ ಓಡಿ ಬಂದ, ನಾನು ಅವನಿಗೆ ಆಫೀಸ್ ಮಾಡಿಕೊಟ್ಟೆ, ಅಲ್ಲಿಂದಲೂ ಓಡಿ ಹೋದ, ಗೋವಾದಲ್ಲಿ ಆಫೀಸ್ ತೆರೆದ ಅಲ್ಲಿಂದಲೂ ಓಡಿ ಹೋದ. ಒಂದು ಕಡೆ ಸಹ ಗೌರವದಿಂದ ಆಫೀಸ್ ಬಿಟ್ಟಿಲ್ಲ ಅವನು. ಎಲ್ಲೆಡೆಯಿಂದಲೂ ಓಡಿ ಬಂದಿದ್ದಾನೆ'' ಎಂದಿದ್ದಾರೆ ನಟ್ಟಿ ಕುಮಾರ್.

ಸಿನಿಮಾಕ್ಕೆ ಸಿಬಿಎಫ್ಸಿ ಸರ್ಟಿಫಿಕೇಟ್ ದೊರೆತಿಲ್ಲ: ನಟ್ಟಿ
''ಡೇಂಜರಸ್' ಸಿನಿಮಾಕ್ಕೆ ಇನ್ನೂ ಸಿಬಿಎಫ್ಸಿ ಸರ್ಟಿಫಿಕೇಟ್ ಸಹ ದೊರೆತಿಲ್ಲ ಆದರೂ ಸಿನಿಮಾ ಬಿಡುಗಡೆ ಮಾಡಲು ರೆಡಿಯಾಗಿದ್ದ. ಸಿನಿಮಾದ ಹಿಂದಿ ಅವತರಣಿಕೆ 'ಖತ್ರಾ'ಗೆ ಮಾತ್ರವೇ ಸರ್ಟಿಫಿಕೇಟ್ ಸಿಕ್ಕಿದೆ. ಅದೇ ವೇಳೆಗೆ ನಾನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದೆ. ಅವರು ನಮ್ಮ ಮನವಿ ಗೌರವಿಸಿ ಸಿನಿಮಾ ಬಿಡುಗಡೆಗೆ ಸ್ಟೇ ನೀಡಿದರು. ಅದನ್ನು ಸೆನ್ಸಾರ್ ಮಂಡಳಿಗೆ ನೀಡಿದೆ. ಸಿನಿಮಾಕ್ಕೆ ಸೆನ್ಸಾರ್ ನೀಡಲಿಲ್ಲ. ಆದರೆ ವರ್ಮಾ, ತನ್ನ ಮರ್ಯಾದೆ ಉಳಿಸಿಕೊಳ್ಳಲು ಚಿತ್ರಮಂದಿರಗಳು ಸಮಸ್ಯೆ ನೀಡುತ್ತಿವೆ ಎಂದೇನೋ ಕತೆ ಹೇಳಿದ. ಆತ ನನ್ನ ಎದುರು ಬಂದು ಮಾತನಾಡಲಿ, ಆತ ಮಾಡಿರುವ ಅನಾಚಾರವನ್ನೆಲ್ಲ ಬಾಯಿ ಬಿಡಿಸುತ್ತೇನೆ'' ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ನಟ್ಟಿ ಕುಮಾರ್ ಒಬ್ಬ ಪುಢಾರಿ: ವರ್ಮಾ
ನಟ್ಟಿ ಕುಮಾರ್ ಆರೋಪದ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ನಟ್ಟಿ ಕುಮಾರ್ ಹೇಳುತ್ತಿರುವುದು ಸುಳ್ಳು, ಆತನೊಬ್ಬ ಪುಡಾರಿ ಎಂದಿದ್ದಾರೆ. ''ನಟ್ಟಿ ಕುಮಾರ್ ಮಕ್ಕಳಿಗಾಗಿ ನಾನು ಸಿನಿಮಾ ಮಾಡಲಿಲ್ಲ ಎಂಬ ಸಿಟ್ಟು ಆತನಿಗೆ. ಆತನೊಬ್ಬ ಪುಡಾರಿ ಅಷ್ಟೆ. ಕಮಿಷನ್ ಪಡೆಯುವುದು ಅವನ ದಂಧೆ. ನಾವು ಕಮೀಷನ್ ಕೊಡದ ಕಾರಣಕ್ಕೆ ಈಗ ಆರೋಪ ಮಾಡುತ್ತಿದ್ದಾನೆ. ಅವನಿಗೆ ಪ್ರೆಸ್ ಮೀಟ್ ಕರೆದು ಯಾರನ್ನಾದರೂ ಒಬ್ಬರನ್ನು ಬೈಯ್ಯುವುದು ಬಿಟ್ಟರೆ ಬೇರೆ ಕೆಲಸ ಇಲ್ಲ. ಒಮ್ಮೆ ಚಿರಂಜೀವಿ ಅವರನ್ನು ಇನ್ನೊಮ್ಮೆ ಇನ್ನೊಬ್ಬರನ್ನು ಸುದ್ದಿಗೋಷ್ಠಿಯಲ್ಲಿ ಬೈಯ್ಯುತ್ತಿರುತ್ತಾನೆ. 'ಡೇಂಜರಸ್' ಸಿನಿಮಾ ಅವನಿಂದ ಅಲ್ಲ, ಚಿತ್ರಮಂದಿರಗಳ ಸಮಸ್ಯೆಯಿಂದ ನಿಂತಿದೆ. ಇನ್ನು ನಟ್ಟಿ ಕುಮಾರ್ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇನೆ'' ಎಂದಿದ್ದಾರೆ ವರ್ಮಾ.
ಟಾಲಿವುಡ್ ಅನ್ನು ಹೊಗಳಿದ ಮೋದಿ, ಸ್ಯಾಂಡಲ್ವುಡ್ ಎಳೆದು ತಂದ ವರ್ಮಾ!
ಸಲಿಂಗಕಾಮಿಗಳ ಪ್ರೇಮಕತೆ 'ಡೇಂಜರಸ್'
'ಡೇಂಜರಸ್' ಸಿನಿಮಾವು ಇಬ್ಬರು ಸಲಿಂಗಕಾಮಿಗಳ ಕತೆಯನ್ನು ಹೊಂದಿದೆ. ಸಾಮಾನ್ಯ ಕಮರ್ಶಿಯಲ್ ಪ್ರೇಮ ಕತೆಯಂತೆಯೇ ಈ ಸಿನಿಮಾ ಸಹ ಇದೆಯಾದರೂ ನಾಯಕ-ನಾಯಕಿ ಸುತ್ತಲೂ ಸುತ್ತುವ ಕತೆಯ ಬದಲಿಗೆ, ನಾಯಕಿ-ನಾಯಕಿ ಸುತ್ತ ನಡೆಯುವ ಕತೆಯನ್ನು ವರ್ಮಾ ಮಾಡಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಾಗಿ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹಲವು ಹಸಿ-ಬಿಸಿ ದೃಶ್ಯಗಳಿವೆ.


Click it and Unblock the Notifications











