ಪವನ್ ಕಲ್ಯಾಣ್ ಟೈಟಲ್, Jr.NTRಗೆ ಸಿಕ್ಕಿದ್ದೇಗೆ..? 'ದೇವರ' ಶೀರ್ಷಿಕೆ ವಿರುದ್ಧ ಬಂಡ್ಲ ಗಣೇಶ್ ಆಕ್ರೋಶಗೊಂಡಿದ್ದೇಕೆ?
RRR ಅಂತಹ ಮೆಗಾ ಬ್ಲಾಕ್ ಬಸ್ಟರ್ ಬಳಿಕ ಜೂ.ಎನ್ಟಿಆರ್ ಹೊಸ ಸಿನಿಮಾ ಅದ್ಧೂರಿಯಾಗಿ ಆರಂಭ ಆಗಿದೆ. ಆದರೆ, ತಮ್ಮ 30ನೇ ಸಿನಿಮಾದ ಟೈಟಲ್ ಅನ್ನು ಮಾತ್ರ ರಿವೀಲ್ ಮಾಡಿರಲಿಲ್ಲ. ಕೊನೆಗೂ ಕೊರಟಾಲ ಶಿವ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ.
ಜೂ.ಎನ್ಟಿಆರ್ 30ನೇ ಸಿನಿಮಾ ಟೈಟಲ್ 'ದೇವರ'. ಇಲ್ಲಿವರೆಗೂ ಇದೇ ಟೈಟಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದ್ರೀಗ ಅಧಿಕೃತವಾಗಿ ಶೀರ್ಷಿಕೆಯನ್ನು ರಿಲೀಸ್ ಮಾಡಲಾಗಿದೆ. ಜೂ.ಎನ್ಟಿಆರ್ ಹುಟ್ಟುಹಬ್ಬದ ಈ ಸಂದರ್ಭದಲ್ಲಿ 30ನೇ ಸಿನಿಮಾದ ಟೈಟಲ್ ಅನೌನ್ಸ್ ಮಾಡಲಾಗಿದೆ.

ಜೂ.ಎನ್ಟಿಆರ್ ಹೊಸ ಸಿನಿಮಾ ಟೈಟಲ್ ಅನೌನ್ಸ್ ಏನೋ ಮಾಡಿದ್ದಾಗಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಇದು ವಿವಾದಕ್ಕೆ ಸಿಕ್ಕಿಕೊಂಡಿದೆ. ತೆಲುಗಿನ ಮತ್ತೊಬ್ಬ ನಿರ್ಮಾಪಕ ಬಂಡ್ಲ ಗಣೇಶ್ ಈ ಶೀರ್ಷಿಕೆ ವಿರುದ್ಧ ತಗಾದೆ ತೆಗೆದಿದ್ದಾರೆ. ಅಷ್ಟಕ್ಕೂ 'ದೇವರ' ಟೈಟಲ್ ವಿವಾದವೇನು? ಪವನ್ ಕಲ್ಯಾಣ್ಗೂ ಈ ಟೈಟಲ್ಗೂ ಏನು ಸಂಬಂಧ? ಬಂಡ್ಲ ಗಣೇಶ್ ಈ ಟೈಟಲ್ ಬಗ್ಗೆ ತಗಾದೆ ತೆಗೆಯುತ್ತಿರೋದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಜೂ.ಎನ್ಟಿಆರ್ ಈಗ 'ದೇವರ'
ಮೇ 20ರಂದು ಯಂಗ್ ಟೈಗರ್ ಜೂ.ಎನ್ಟಿಆರ್ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮಕ್ಕೆ ಒಂದು ದಿನ ಮುನ್ನವೇ (ಮೇ 19) ಅವರ 30ನೇ ಸಿನಿಮಾದ ಟೈಟಲ್ ಅನ್ನು ಅನಾವರಣ ಮಾಡಲಾಗಿದೆ. ಜೊತೆಗೆ ಜೂ.ಎನ್ಟಿಆರ್ ಲುಕ್ ಕೂಡ ರಿವೀಲ್ ಆಗಿದೆ.
ಡಾರ್ಕ್ ಬ್ಯಾಕ್ಗ್ರೌಂಡ್ನಲ್ಲಿ ಜೂ.ಎನ್ಟಿಆರ್ ಭರ್ಜಿ ಹಿಡಿದು ಕಡಲ ತೀರದಲ್ಲಿರೋ ಬಂಡೆಯ ಮೇಲೆ ನಿಂತಿದ್ದಾರೆ. ಇದನ್ನು ನೋಡಿದ ಯಂಗ್ ಟೈಗರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಈ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಿದೆ. ಆದರೆ, ಟೈಟಲ್ ರಿವೀಲ್ ಆಗುತ್ತಿದ್ದಂತೆ ತೆಲುಗು ನಿರ್ಮಾಪಕ ಬಂಡ್ಲ ಗಣೇಶ್ ಕಿಡಿಕಾರಿದ್ದಾರೆ.
'ದೇವರ' ಟೈಟಲ್ ನನ್ನದು ಎಂದ ಬಂಡ್ಲ ಗಣೇಶ್
'ದೇವರ' ಟೈಟಲ್ ಅನ್ನು ಬಂಡ್ಲ ಗಣೇಶ್ ಕೆಲ ವರ್ಷಗಳ ಹಿಂದೆ ರಿಜಿಸ್ಟರ್ ಮಾಡಿಸಿದ್ದರು. ಆದರೆ, ಇತ್ತೀಚೆಗೆ ಈ ಟೈಟಲ್ ಮರು ನೋಂದಣಿ ಮಾಡುವುದನ್ನು ಮರೆತಿದ್ದಾರೆ. ಅಷ್ಟರೊಳಗೆ ಕೊರಟಾಲ ಶಿವ ಟೀಮ್ ಆ ಟೈಟಲ್ ರಿಜಿಸ್ಟರ್ ಮಾಡಿಸಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೇ ಸುದ್ದಿ ಹರಿದಾಡುತ್ತಿತ್ತು.
ಈ ಟೈಟಲ್ ಬಗ್ಗೆ ಬಂಡ್ಲ ಗಣೇಶ್ ಟ್ವಿಟರ್ನಲ್ಲಿ ಅಸಮಧಾನ ಹೊರಹಾಕಿದ್ದಾರೆ. "ದೇವರ ಟೈಟಲ್ ಅನ್ನು ನಾನು ರಿಜಿಸ್ಟರ್ ಮಾಡಿಸಿದ್ದೆ. ಆದರೆ, ಈ ಟೈಟಲ್ ಅನ್ನು ಮರು ನೋಂದಣಿ ಮಾಡುವುದನ್ನು ಮರೆತಿದ್ದರಿಂದ ಈ ಟೈಟಲ್ ಅನ್ನು ಬೇರೆಯವರಿಗೆ ನೀಡಿಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಟೈಟಲ್ನಲ್ಲಿ ಪವನ್ ಕಲ್ಯಾಣ್ ನಟಿಸಬೇಕಿತ್ತು
ಹಲವು ವರ್ಷಗಳಿಂದ ಪವರ್ಸ್ಟಾರ್ ಪವನ್ ಕಲ್ಯಾಣ್ ಜೊತೆ 'ದೇವರ' ಟೈಟಲ್ ಇಟ್ಟು ಸಿನಿಮಾ ಮಾಡಬೇಕು ಅನ್ನೋದು ಬಂಡ್ಲ ಗಣೇಶ್ ಕನಸಾಗಿತ್ತು. ಆದರೆ, ಅದ್ಯಾಕೋ ಸಾಧ್ಯವಾಗಿರಲಿಲ್ಲ. ಇಷ್ಟೇ ಅಲ್ಲದೆ ನಿರ್ಮಾಪಕ ಬಂಡ್ಲ ಗಣೇಶ್ ಪ್ರೀತಿಯಿಂದ ಪವನ್ ಕಲ್ಯಾಣ್ರನ್ನು 'ದೇವರ' ಎಂದೇ ಕರೆಯುತ್ತಾರೆ. ಹೀಗಾಗಿ ಈ ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ.
ಇನ್ನೊಂದು ಕಡೆ ಜೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಟೀಮ್ 'ದೇವರ' ಟೈಟಲ್ ಅನ್ನು ಫೈನಲ್ ಮಾಡಿದೆ. ಹೀಗಾಗಿ ಇಬ್ಬರ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ? ಇದೇನಾದರೂ ಯುದ್ಧಕ್ಕೆ ಕಾರಣ ಆಗುತ್ತೋ ಅನ್ನೋ ಆತಂಕ ಹೆಚ್ಚಾಗಿದೆ. ಇವೆಲ್ಲವನ್ನೂ ಬಿಟ್ಟು 'ದೇವರ' ಜೊತೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಕೊರಟಾಲ ಶಿವ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೂಲಕ ಮತ್ತೆ ಗೆಲ್ಲುವ ತವಕದಲ್ಲಿದ್ದಾರೆ.


Click it and Unblock the Notifications











