"ನಾನು ಒಂಟಿಯಾಗಿದ್ದಿದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು.. ಹೊರಬರಲು ಕಾರಣ ನರೇಶ್": ಪವಿತ್ರಾ ಲೋಕೇಶ್
ಟಾಲಿವುಡ್ ನಟ ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧ ಬಗ್ಗೆ ಗೊತ್ತೇ ಇದೆ. ಇಬ್ಬರೂ ಜೊತೆಯಾಗಿ ತಮ್ಮ ಸಂಬಂಧದ ಬಗ್ಗನೇ ಸಿನಿಮಾ ಮಾಡಿದ್ದರೂ, ಅದಕ್ಕಿಂತ ಹೆಚ್ಚಾಗಿ ಇಬ್ಬರ ತಮ್ಮ ಸಂಬಂಧದ ಬಗ್ಗೆ ಆಡಿದ ಮಾತುಗಳೇ ಹೆಚ್ಚು ಸದ್ದು ಮಾಡುತ್ತಿದೆ.
ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ 'ಮಳ್ಳಿ ಪೆಳ್ಳಿ'(ಮತ್ತೆ ಮದುವೆ) ಇದೇ ಮೇ 26ರಂದು ಎರಡೂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು ಹಾಗೂ ಕನ್ನಡದಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ನಿನ್ನೆ (ಮೇ 23) ಪವಿತ್ರಾ ಲೋಕೇಶ್ ಕೆಲವು ತೆಲುಗು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ವಿವಾದದ ಬಳಿಕ ತನ್ನ ಬದುಕು ಹೇಗಿತ್ತು? ಒಂಟಿಯಾಗಿದ್ದಿದ್ದರೆ ಏನಾಗುತ್ತಿತ್ತು? ಅನ್ನೋದನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
"ಸಿನಿಮಾ ನೋಡಿದವರೆ ಅರ್ಥವಾಗುತ್ತೆ"
ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ 'ಮಳ್ಳಿ ಪೆಳ್ಳಿ' ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಸಿನಿಮಾದ ಮೊದಲ ತುಣುಕು ರಿಲೀಸ್ ಆದಲ್ಲಿಂದ ಇಲ್ಲಿವರೆಗೂ ಒಂದಲ್ಲ ಒಂದು ಕುತೂಹಲವನ್ನು ಹುಟ್ಟುಹಾಕುತ್ತಲೇ ಇದೆ. ತನ್ನ ಹಾಗೂ ನರೇಶ್ ನಡುವಿನ ಸಂಬಂಧ ಬಹಿರಂಗಗೊಂಡಾಗ ಎದುರಾಗಿದ್ದ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ.
"ಮತ್ತೆ ಮದುವೆ ಸಿನಿಮಾದಲ್ಲಿ ಹೇಳಿರುವ ಸಂಗತಿಗಳು ಸಮಾಜದಲ್ಲಿ ಇವೆ. ಇಂತಹ ಪರಿಸ್ಥಿತಿಗಳು, ಆಲೋಚನೆಗಳು ಇಂದಿಗೂ ನಮ್ಮ ಸಮಾಜದಲ್ಲಿವೆ. ಆದರೆ, ಕಾಲ್ಪನಿಕ ಕಥೆನಾ? ಇಲ್ಲಾ ನೈಜ ಘಟನೆಯಾ? ಅನ್ನೋದನ್ನು ನಾವು ಹೇಳಿದರೆ ಸರಿ ಹೋಗಲ್ಲ. ಸಿನಿಮಾ ನೋಡಿದರೆ ಮಾತ್ರ ಅರ್ಥ ಆಗುತ್ತೆ" ಎಂದು ಹೇಳಿದ್ದಾರೆ.

"ಆ ಕ್ವಾಲಿಟಿ ತನ್ನಲ್ಲಿ ಇಲ್ಲ"
ಇನ್ನು ನರೇಶ್ ವಿಷಯಕ್ಕೆ ಬರೋದಾದರೆ, ಯಾವುದೇ ಸೀರಿಯಸ್ ವಿಷಯವನ್ನೂ ತುಂಬಾ ಲೈಟ್ ಆಗಿ ತೆಗೆದುಕೊಳ್ಳುತ್ತಾರೆಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ. ಸಮಯಕ್ಕೆ ತಕ್ಕಂತೆ ಹೇಗಿರಬೇಕು ಅನ್ನೋದು ಅವರಿಗೆ ಗೊತ್ತಿದೆ. ಆದರೆ, ಅವರಲ್ಲಿರೋ ಕ್ವಾಟಿಲಿ ತನ್ನಲ್ಲಿ ಇಲ್ಲ. ಚಿಕ್ಕ ಚಿಕ್ಕ ವಿಷಯವನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳುವುದಾಗಿ ಪವಿತ್ರಾ ಲೋಕೇಶ್ ಸಂದರ್ಶನದಲ್ಲಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ, "ಈ ದಿನದ ಬಗ್ಗೆ ನಾವು ಯೋಚಿಸಬೇಕು. ಇವತ್ತು ಏನಿದೆಯೋ ಅದೇ ಖುಷಿ ಅನ್ನೋದು ನರೇಶ್ ಭಾವನೆ. ನಾಳೆ ಬಂದಾಗ ನೋಡೋಣ. ಇಂತಹ ಗುಣಗಳನ್ನು ಅವರಿಂದ ಕಲಿತಿದ್ದೇನೆ. ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ." ಎಂದು ಪವಿತ್ರಾ ಲೋಕೇಶ್ ಮಾಧ್ಯಮಗಳೊಂದಿಗೆ ಮಾತಾಡುವಾಗ ವಿಷಯ ಹಂಚಿಕೊಂಡಿದ್ದಾರೆ.
"ಆತ್ಮಹತ್ಯೆ ಮಾಡಿಕೊಳ್ಳಬೇಕು ಇಲ್ಲಾ ಮನೆಯಲ್ಲಿರಬೇಕು"
ಇದೇ ವೇಳೆ ಕೆಲವು ಸನ್ನಿವೇಶಗಳಲ್ಲಿ ತಮ್ಮನ್ನು ತಪ್ಪಾಗಿ ಬಿಂಬಿಸಿದ್ದಾರೆಂದು ಪ್ರವಿತ್ರಾ ಹೇಳಿದ್ದಾರೆ. ಅಲ್ಲದೆ "ತಮ್ಮ ವ್ಯಕ್ತಿತ್ವವನ್ನು ನಾಶ ಮಾಡಿ, ವೃತ್ತಿ ಬದುಕಿಗೆ ಕುಪ್ಪು ಚುಕ್ಕಿ ಇಡಲು ಯತ್ನಿಸಿದ್ದರು. ಆ ವೇಳೆ ಒಂಟಿಯಾಗಿ ಇದ್ದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಇಲ್ಲವೇ ಮನೆಯೊಳಗೆ ಇರಬೇಕಾಗಿತ್ತು. ನಾನು ಹೊರ ಬಂದು ಧೈರ್ಯವಾಗಿ ಮಾತಾಡುವುದಕ್ಕೆ ನರೇಶ್ ಕಾರಣ" ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.
ಏನೇ ಇದ್ರೂ, 'ಮಳ್ಳಿ ಪೆಳ್ಳಿ' ಇವರಿಬ್ಬರ ಸಂಬಂಧಕ್ಕೊಂದು ಉತ್ತರ ಕೊಡಬಹುದು. ಎಂ ಎಸ್ ರಾಜು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದೇ ಮೇ 26ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಮತ್ತೆ ಇನ್ನೇನು ವಿವಾದಗಳನ್ನು ಸೃಷ್ಟಿಸುತ್ತೋ ಅನ್ನೋ ಕುತೂಹಲವಿದೆ.


Click it and Unblock the Notifications











