ಮಹಿಳೆಯಿಂದ ತೆಲಂಗಾಣ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿಕೆ: ಏನಿದು ವಿವಾದ?
ರಾಜಮೌಳಿಗೆ RRR ಸಿನಿಮಾ ರಿಲೀಸ್ ಮಾಡುವುದಕ್ಕೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಇನ್ನೇನು RRR ರಿಲೀಸ್ ಆಗೇ ಬಿಡುತ್ತೆ. ಥಿಯೇಟರ್ಗೆ ಹೋಗಿ ಸಿನಿಮಾ ನೋಡೇ ಬಿಡುತ್ತೇವೆ ಅಂತಿದ್ದವರಿಗೆ ಮತ್ತೆ ನಿರಾಸೆಯಾಗಿದೆ. ಅಂದ್ಕೊಂಡಂತೆ ಸಿನಿಮಾ ಬಿಡುಗಡೆ ಮಾಡಲಾರದೆ ರಾಜಮೌಳಿ ಮತ್ತೆ ಸೋತಿದ್ದಾರೆ. ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ಮಧ್ಯೆ RRR ಚಿತ್ರದ ವಿರುದ್ದ ಮತ್ತೊಂದು ಕೇಸ್ ದಾಖಲಾಗಿದೆ.
ರಾಜಮೌಳಿಯ RRR ಜನವರಿ 7ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಬೇಕಿತ್ತು. ಆದರೆ, ಕೊರೊನಾಗೆ ಹೆದರಿದ ರಾಜಮೌಳಿ ಕೊನೆಯ ಕ್ಷಣದಲ್ಲಿ ಸಿನಿಮಾ ಪೋಸ್ಟ್ಪೋನ್ ಮಾಡಿದ್ದರು. ಇಷ್ಟು ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ಮಾಡಿದ್ದ ರಾಜಮೌಳಿ, ಸಿನಿಮಾ ರಿಲೀಸ್ ಮಾಡಲಾಗದೆ ಬೇಸರದಲ್ಲಿದ್ದಾರೆ. ಇದರ ಜೊತೆ ತೆಲಂಗಾಣ ಹೈ ಕೋರ್ಟ್ನಲ್ಲಿ ಸಿನಿಮಾ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ತೆಲಂಗಾಣ ಹೈ ಕೋರ್ಟ್ನಲ್ಲಿ ದೂರು
ರಾಜಮೌಳಿ ನಿರ್ದೇಶನದ RRR ಸಿನಿಮಾದ ವಿರುದ್ಧ ತೆಲಂಗಾಣ ಕೈ ಕೋರ್ಟ್ನಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಲ್ಲುರಿ ಸೌಮ್ಯ ಎಂಬುವ ಮಹಿಳೆ RRR ಚಿತ್ರದ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. ಹೀಗಾಗಿ ಮೊದಲೇ ಸಿನಿಮಾ ಬಿಡುಗಡೆ ಮಾಡಲಾರದೆ ಸಂಕಷ್ಟದಲ್ಲಿದ್ದ ರಾಜಮೌಳಿಗೆ ಮತ್ತೊಂದು ಕಷ್ಟ ಎದುರಿಸುವಂತಾಗಿದೆ.

RRR ವಿರುದ್ಧ ದೂರು ದಾಖಲಾಗಿದ್ದು ಏಕೆ?
ಅಲ್ಲುರಿ ಸೌಮ್ಯ ಸಲ್ಲಿಸಿದ ದೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿರುಚಲಾಗಿದೆ ಎನ್ನಲಾಗಿದೆ. ಅಲ್ಲುರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಇಬ್ಬರೂ ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರು. ಇವರ ಬೆಂಬಲಿಗರಿಗೆ RRR ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ. ಹೀಗಾಗಿ ರಾಜಮೌಳಿ ನಿರ್ದೇಶಿಸಿದ ಪ್ಯಾನ್ ಇಂಡಿಯಾ ಸಿನಿಮಾ RRR ಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಬಾರದು ಎಂದು ಮಹಿಳೆ ಆಗ್ರಹಿಸಿದ್ದಾರೆ.

ದೂರಿನ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?
ಅಲ್ಲುರಿ ಸೌಮ್ಯ ಸಲ್ಲಿಸಿದ ದೂರನ್ನು ನ್ಯಾಯಾಧೀಶರಾದ ಉಜ್ಜಲ್ ಭುಯನ್ ಹಾಗೂ ವೆಂಕಟೇಶ್ವರ ರೆಡ್ಡಿ ಗಮನಕ್ಕೆ ಬಂದಿದೆ. ಇದು ಸಾರ್ವಜನಿಕ ಹಿತಾಸಕ್ತಿಯಾಗಿರುವುದರಿಂದ ಕೇಸ್ ಆಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ RRR ಬಿಡುಗಡೆಗೂ ಮುನ್ನವೇ ರಾಜಮೌಳಿ ಕೋರ್ಟ್ ಮೆಟ್ಟಿಲೇರುವ ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ. ಒಂದು ಕಡೆ ಬಿಡುಗಡೆಗೆ ಮುಹೂರ್ತ ಕೂಡಿ ಬರುತ್ತಿಲ್ಲ. ಮತ್ತೊಂದು ಕಡೆ ದೂರು ದಾಖಲಿದೆ. ಹೀಗಾಗಿ ರಾಜಮೌಳಿ ಸಂಕಷ್ಟದಲ್ಲಿ ಸಿಲುಕಿರುವುದಂತೂ ಸತ್ಯ.

RRR ಕಾಲ್ಪನಿಕ ಕಥೆ
RRR ಸಿನಿಮಾದ ಶೂಟಿಂಗ್ ಆರಂಭಕ್ಕೂ ಮುನ್ನವೇ ಎಸ್ಎಸ್ ರಾಜಮೌಳಿ ಇದೊಂದು ಕಾಲ್ಪನಿಕ ಕಥೆ ಎಂದು ಹೇಳಿದ್ದರು. ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮರೆಯಾಗಿರುವ ಅಲ್ಲು ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಇಬ್ಬರೂ ಹೋರಾಟಗಾರರು ಒಂದೇ ಕಾಲಘಟ್ಟದಲ್ಲಿ ಇದ್ದಿದ್ದರೆ ಏನಾಗುತ್ತಿತ್ತು? ಎಂಬುವುದನ್ನು ತೆರೆಯ ಮೇಲೆ ತರುವುದಾಗಿ ಹೇಳಿದ್ದರು. ಆದ್ರೀಗ ಅದು ಆಕ್ಷೇಪಣೆ ಮಾಡದವರು ಬಿಡುಗಡೆ ಹೊಸ್ತಿಲಲ್ಲಿರುವಾಗ ದೂರು ದಾಖಲಿಸಿದ್ದಾರೆ.


Click it and Unblock the Notifications











