"ನಟನಿಗೂ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕಿದೆ": ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ಮಂಜೂರು
'ಪುಷ್ಪ 2' ಸಿನಿಮಾ ಪ್ರೀಮಿಯರ್ ವೇಳೆ ಕಾಲ್ತುಳಿತಕ್ಕೆ ಒಳಗಾಗಿದ್ದ ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ಅಲ್ಲು ಅರ್ಜುನ್, ಅವರ ಸಹಚರರು ಹಾಗೂ ಚಿತ್ರಮಂದಿರದ ಮ್ಯಾನೇಜ್ಮೆಂಟ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಬೆನ್ನಲ್ಲೇ ಇಂದು (ಡಿಸೆಂಬರ್ 13) ಅಲ್ಲು ಅರ್ಜುನ್ ಅವರನ್ನು ಅವರ ಮನೆಗೆ ತೆರಳಿ ಬಂಧಿಸಲಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು.
ಪೊಲೀಸರು ಅಲ್ಲು ಅರ್ಜುನ್ ಅವರ ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ ಕೋರ್ಟ್ಗೆ ಹಾಜರು ಪಡಿಸಿದ್ದರು. ಕೆಳ ನ್ಯಾಯಾಲಯದಲ್ಲಿ ಅಲ್ಲು ಅರ್ಜುನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧವನ್ನು ವಿಧಿಸಿತ್ತು. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲು ಅರ್ಜುನ್ ಜಾಮೀನು ಅರ್ಜಿ ವಿಚಾರಣೆ ಮಾಡಿದ ತೆಲಂಗಾಣದ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇಂದು (ಡಿಸೆಂಬರ್ 13) ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಮನೆಯಲ್ಲಿ ಬಂಧಿಸಿದ್ದರು. ಈಗ ಮಧ್ಯಂತರ ಜಾಮೀನು ಸಿಕ್ಕಿರುವುದು ಅಲ್ಲು ಅರ್ಜುನ್ ರಿಲೀಫ್ ಸಿಕ್ಕಂತೆ ಆಗಿದೆ.
'ಪುಷ್ಪ 2' ಮೆಗಾ ಹಿಟ್ ಆದ ಬೆನ್ನಲ್ಲೇ ಅಲ್ಲು ಅರ್ಜುನ್ಗೆ ಪೊಲೀಸರು ಶಾಕ್ ಕೊಟ್ಟಿದ್ದರು. ಹೈಕೋರ್ಟ್ ನ್ಯಾಯಾಧೀಶರು ಮಧ್ಯಂತರ ಜಾಮೀನು ನೀಡುವುದ ವೇಳೆ "ಅಲ್ಲು ಅರ್ಜುನ್ ಒಬ್ಬ ನಟನಾಗಿದ್ದರೂ, ಅವರೊಬ್ಬರ ನಾಗರೀಕನಾಗಿ ಜೀವಿಸುವ ಹಾಗೂ ಸ್ವಾತಂತ್ರ್ಯ ಹಕ್ಕು ಇದೆ" ಎಂದು ಹೇಳಿದ್ದಾರೆ. ಅಂದರೆ, ನಟನಾದ ಮಾತ್ರ ಥಿಯೇಟರ್ಗೆ ಬಂದು ಸಿನಿಮಾ ನೋಡಬಾರದು ಎಂದೇನು ಇಲ್ಲ. ಒಬ್ಬ ನಾಗರೀಕನಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಹಕ್ಕಿದೆ ಎಂದು ಹೇಳಲಾಗಿದೆ.
ಸದ್ಯ ಅಲ್ಲು ಅರ್ಜುನ್ಗೆ ನಾಲ್ಕು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. ಹಾಗೇ ರೆಗ್ಯೂಲರ್ ಜಾಮೀನಿಗಾಗಿ ನಾಮ್ಪಲ್ಲಿ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸುವುದಕ್ಕೆ ನ್ಯಾಯಾಲಯ ಸೂಚನೆಯನ್ನು ನೀಡಿದೆ. ಈ ಘಟನೆಯಲ್ಲಿ ಅಲ್ಲು ಅರ್ಜುನ್ ಅನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ. ಅವರು ತಮ್ಮ ಸಿನಿಮಾದ ಪ್ರೀಮಿಯರ್ ಶೋ ನೋಡುವುದಕ್ಕೆ ಥಿಯೇಟರ್ಗೆ ಹೋಗಿದ್ದರು ಎಂದು ತೆಲಂಗಾಣದ ನ್ಯಾಯಮೂರ್ತಿ ಜುವ್ವಡಿ ಶ್ರೀದೇವಿ ಅಭಿಪ್ರಾಯ ಪಟ್ಟಿದ್ದಾರೆ.
ಬೆಳಗ್ಗೆ ಅಲ್ಲು ಅರ್ಜುನ್ ಅನ್ನು ಬಂಧಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ಎರಡು ರೀತಿಯ ಚರ್ಚೆ ಆರಂಭ ಆಗಿತ್ತು. ಇದು 'ಪುಷ್ಪ 2' ತಂಡ ಮಾಡುತ್ತಿರುವ ಪಬ್ಲಿಸಿಟಿ ಸ್ಟಂಟ್. ಒಂದು ವಾರ ಕಳೆಯುತ್ತಿದ್ದಂತೆ ಕಲೆಕ್ಷನ್ ಡ್ರಾಪ್ ಆಗಿದೆ. ಹೀಗಾಗಿ ಅಲ್ಲು ಅರ್ಜುನ್ ಟೀಮ್ ಬಂಧನದ ನಾಟಕವಾಡುತ್ತಿದೆ. ಇದು ಬರೀ ಪಬ್ಲಿಸಿಟಿ ಸ್ಟಂಟ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು.
ಇನ್ನೊಂದು ಕಡೆ ಅಲ್ಲು ಅರ್ಜುನ್ ಬಂಧಿಸಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ 2' ಪ್ರೀಮಿಯರ್ ವೇಳೆ ನಡೆದ ದುರ್ಘಟನೆಯಲ್ಲಿ ಅಲ್ಲು ಅರ್ಜುನ್ ತಪ್ಪೇನಿದೆ ಎಂದು ಕೆಲವರು ವಾದಿಸಿದ್ದಾರೆ. ಸಿನಿಮಾ ನೋಡುವುದಕ್ಕೆ ಹೋದ ಮಾತ್ರಕ್ಕೆ ಬಂಧಿಸಿದ್ದು ತಪ್ಪು. ಪೊಲೀಸರು ತಮ್ಮ ತಪ್ಪನ್ನು ಮುಚ್ಚಿ ಹಾಕಲು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು.


Click it and Unblock the Notifications











