ಸಾಯಿ ಧರಮ್ ತೇಜಗೆ ಏನಾಗಿದೆ? ಆರೋಗ್ಯದ ಬಗ್ಗೆ ಮೆಗಾಪುತ್ರ ಸ್ಪಷ್ಟನೆ
ಮೆಗಾ ಕುಟುಂಬದ ನಟ ಸಾಯಿ ಧರಮ್ ತೇಜ ಹತ್ತು ದಿನದ ಹಿಂದೆ ಬೈಕ್ ಅಪಘಾತಕ್ಕೆ ಒಳಗಾಗಿದ್ದರು. ತಲೆ ಹಾಗೂ ಎದೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವ ಕಾರಣ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಹೇಳಲಾಯಿತು.
ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಜೀವಕ್ಕೆ ಯಾವುದೇ ಅಪಾಯವಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದರು. ಹತ್ತು ದಿನ ಕಳೆದರೂ ಸಾಯಿ ಧರಮ್ ತೇಜ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲ್ಲ. ಇದು ಸಹಜವಾಗಿ ಆತಂಕ ಮೂಡಿಸಿದೆ. ಇಷ್ಟು ದಿನಗಳ ಕಾಲ ಮೆಗಾ ನಟನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂದ್ರೆ ಅವರಿಗೆ ಉಂಟಾಗಿರುವ ಗಾಯದ ಗಂಭೀರತೆ ಹಾಗೂ ತೀವ್ರತೆ ಎಷ್ಟಿರಬಹುದು ಎಂದು ಚರ್ಚೆಗಳು ನಡೆಯುತ್ತಿದೆ.
ವೈದ್ಯರು ಮತ್ತು ಮೆಗಾ ಕುಟುಂಬದ ಸದಸ್ಯರು ಸಾಯಿ ಧರಮ್ ಆರೋಗ್ಯದ ಬಗ್ಗೆ ಸ್ಪಷ್ಟಪಡಿಸಿದರೂ, ಅವರಿಗೆ ನಿಜಕ್ಕೂ ಏನಾಗಿದೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರತೆ ತೋರುತ್ತಿದ್ದಾರೆ. ಇದೀಗ, ನಟ ರಾಮ್ ಚರಣ್ ತೇಜ ಬಿಗ್ ಬಾಸ್ ವೇದಿಕೆಯಲ್ಲಿ ಸಾಯಿ ಧರಮ್ ಆರೋಗ್ಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿ...

ದೇವರ ಕೃಪೆಯಿಂದ ಬೇಗ ಗುಣಮುಖರಾಗುತ್ತಾರೆ
ಕಳೆದ ಭಾನುವಾರ ತೆಲುಗು ಬಿಗ್ ಬಾಸ್ ವೇದಿಕೆಗೆ ಬಂದಿದ್ದ ರಾಮ್ ಚರಣ್ ತೇಜ, ನಟ ಸಾಯಿ ಧರಮ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದರು. ನಿರೂಪಕ ನಾಗಾರ್ಜುನ ಅವರು ಚರಣ್ ಬಳಿಕ ಸಾಯಿ ಧರಮ್ ಆರೋಗ್ಯ ಹೇಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನಟ ''ದೇವರ ಕೃಪೆಯಿಂದ ಸಾಯಿ ಧರಮ್ ತೇಜ ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ. ಚಿಂತೆ ಮಾಡುವ ಅಗತ್ಯವೂ ಇಲ್ಲ'' ಎಂದಿದ್ದಾರೆ.

ವೆಂಟಿಲೇಟರ್ ಸಹಾಯ ಪಡೆದಿಲ್ಲ
ಅಪೋಲೋ ಆಸ್ಪತ್ರೆಯ ಲೇಟೆಸ್ಟ್ ಅಪ್ಡೇಟ್ ಪ್ರಕಾರ, 'ಸಾಯಿ ಧರಮ್ ತೇಜ ಅವರಿಗೆ ವೆಂಟಿಲೇಟರ್ ತೆಗೆದು ಹಾಕಲಾಗಿದೆ. ಅವರು ಸ್ವತಂತ್ರವಾಗಿ ಉಸಿರಾಟ ಮಾಡುತ್ತಿದ್ದಾರೆ. ಅವರಿಗೆ ಕೃತಕ ಉಸಿರಾಟದ ಅಗತ್ಯತೆ ಇಲ್ಲ. ಇನ್ನು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ವೈದ್ಯರು ಅವರ ಆರೋಗ್ಯದ ಮೇಲೆ ನಿರಂತರವಾಗಿ ನಿಗಾ ವಹಿಸಿದ್ದಾರೆ' ಎಂದು ತಿಳಿಸಿದೆ.

ಗಣೇಶ ಹಬ್ಬದಂದು ರಾತ್ರಿ ಅಪಘಾತ
ಪೊಲೀಸರು ಮಾಹಿತಿ ನೀಡಿದ್ದ ಪ್ರಕಾರ ಸೆಪ್ಟೆಂಬರ್ 10 ರಂದು ಶುಕ್ರವಾರ ರಾತ್ರಿ ಸುಮಾರು 8.30ರ ಸಮಯಕ್ಕೆ ಈ ಅಪಘಾತ ಸಂಭವಿಸಿದೆ. ಜುಬಿಲಿ ಹಿಲ್ಸ್ ನಿಂದ ಗಚಿಬೌಲಿ ಕಡೆಗೆ ಹೋಗುತ್ತಿದ್ದಾಗ ಐಟಿ ಕಾರಿಡಾರ್ನಲ್ಲಿ ನಾಲೆಡ್ಜ್ ಸಿಟಿ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿದೆ. ಈ ಅಪಘಾತದಲ್ಲಿ ಸಾಯಿ ಧರಮ್ ತೇಜ ಅವರ ತಲೆಗೆ, ಎದೆ ಭಾಗಕ್ಕೆ ಹಾಗೂ ದೇಹದ ಇತರೆ ಅಂಗಗಳಿಗೂ ಪೆಟ್ಟು ಬಿದ್ದಿದೆ ಎಂದು ವರದಿಯಾಗಿತ್ತು.

'ರಿಪಬ್ಲಿಕ್' ಸಿನಿಮಾ ರಿಲೀಸ್ ಆಗಬೇಕಿದೆ
ಅಂದ್ಹಾಗೆ, ಮೆಗಾಸ್ಟಾರ್ ಚಿರಂಜೀವಿ ಸಹೋದರಿ ವಿಜಯ ದುರ್ಗ ಅವರ ಮಗ ಸಾಯಿ ಧರಮ್ ತೇಜ. ಇತ್ತೀಚಿಗಷ್ಟೆ ಉಪ್ಪೇನಾ ಎಂಬ ಸಿನಿಮಾ ಬಂದು ದೊಡ್ಡ ಹಿಟ್ ಆಯಿತು. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ವೈಷ್ಣವ್ ತೇಜ್, ಸಾಯಿ ಧರಮ್ ತೇಜ ಸಹೋದರರು. 2014ರಲ್ಲಿ ಚಿತ್ರರಂಗ ಪ್ರವೇಶಿಸಿದ ಸಾಯಿ ಧರಮ್ ತೇಜ 'ಪಿಲ್ಲಾ ನುವ್ವು ಲೇನಿ ಜೀವಿತಂ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಆ ನಂತರ ರೇ, ಸುಬ್ರಮಣ್ಯಂ ಫಾರ್ ಸೇಲ್, ಸುಪ್ರೀಂ, ತಿಕ್ಕ, ವಿನ್ನರ್, ಜವಾನ್, ಇಂಟಿಲಿಜೆಂಟ್, ತೇಜ್ ಐ ಲವ್ ಯೂ, ಚಿತ್ರಲಹರಿ, ಪ್ರತಿ ರೋಜು ಪಂಡಗೆ, ಸೋಲೋ ಬ್ರಾಥುಕೆ ಸೋ ಬೆಟರ್ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 'ರಿಪಬ್ಲಿಕ್' ಎನ್ನುವ ಚಿತ್ರದಲ್ಲಿ ಸಾಯಿ ಧರಮ್ ತೇಜ ನಟಿಸುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 1 ರಂದು ತೆರೆಗೆ ಬರ್ತಿದೆ.


Click it and Unblock the Notifications











