ಬಿಡುಗಡೆಗೂ ಮುನ್ನವೇ ಮೆಗಾ ಸಿನಿಮಾ 'RRR'ಗೆ ನೂರೆಂಟು ವಿಘ್ನ: ಸಂಕಷ್ಟಕ್ಕೆ ಸಿಲುಕಿದ ರಾಜಮೌಳಿ
ದಕ್ಷಿಣ ಭಾರತದ ಮೆಗಾ ಸಿನಿಮಾ 'RRR' ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗುತ್ತಿದೆ. ರಾಜಮೌಳಿ, ಜೂ.ಎನ್ಟಿಆರ್, ರಾಮ್ಚರಣ್ ಮೂವರೂ ಒಂದು ಕ್ಷಣವೂ ವ್ಯರ್ಥ ಮಾಡದೆ ಪ್ರಚಾರ ಆರಂಭಿಸಿದ್ದಾರೆ. ದುಬಾರಿ ವೆಚ್ಚದ ಈ ಮೆಗಾ ಪ್ಯಾನ್ ಇಂಡಿಯಾ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರು ಕೂಡ ಕಾದುಕೂತಿದ್ದಾರೆ. ಇನ್ನೇನು ಸಿನಿಮಾ ಬಿಡುಗಡೆಗೆ ಒಂದು ವಾರವಿದೆ ಅನ್ನುವಾಗಲೇ ರಾಜಮೌಳಿಗೆ ನೂರೆಂಟು ತಲೆ ನೋವು ಎದುರಾಗಿದೆ.
2022 ಹೊಸ ವರ್ಷದ ಮೊದಲ ವಾರ ಮುಗಿಯುತ್ತಿದ್ದಂತೆ ರಾಜಮೌಳಿ ಸಿನಿಮಾ ಥಿಯೇಟರ್ಗೆ ದೊಡ್ಡ ಮಟ್ಟದಲ್ಲಿ ಲಗ್ಗೆ ಇಡಲಿದೆ. ಜನವರಿ7ರಂದು ಜೂ.ಎನ್ಟಿಆರ್ ಹಾಗೂ ರಾಮ್ಚರಣ್ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಹಬ್ಬ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ರಾಜಮೌಳಿಗೆ ಮಾತ್ರ ಸಿನಿಮಾ ಬಿಡುಗಡೆ ವೇಳೆನೇ ನೂರೆಂಟು ಸಮಸ್ಯೆಗಳು ಎದುರಾಗಿವೆ. ರಾಜಮೌಳಿ ಪ್ಲ್ಯಾನ್ ಮಾಡಿದಂತೆ ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲವೆಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

'RRR'ಗೆ ಆಂಧ್ರ ಸರ್ಕಾರದಿಂದಲೇ ವಿಘ್ನ
ಕಳೆದ ಕೆಲವು ತಿಂಗಳಿಂದ ಆಂಧ್ರ ಸರ್ಕಾರದ ವಿರುದ್ಧ ಟಾಲಿವುಡ್ ತಿರುಗಿಬಿದ್ದಿದೆ. ಸಿನಿಮಾ ಟಿಕೆಟ್ಗಳ ದರವನ್ನು ಇಳಿಕೆ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ಸಿನಿಮಾ ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಟಿಕೆಟ್ ಬೆಲೆ ಇಳಿಕೆ ಮಾಡಿರುವುದು ಸಿನಿಮಾ ಗಳಿಕೆ ವಿಚಾರದಲ್ಲಿ ದೊಡ್ಡ ಪೆಟ್ಟು ಕೊಡುತ್ತೆ ಅನ್ನುವುದು ನಿರ್ಮಾಪಕರ ಅಳಲು. ಈಗ 'RRR' ಸಿನಿಮಾದಂತಹ 500 ಕೋಟಿ ಬಜೆಟ್ ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿದೆ. ಜನವರಿ 7ಕ್ಕೆ ಸಿನಿಮಾ ಬಿಡುಗಡೆ ಆಗುತ್ತೆ. ಆದರೆ, ಈಗಾಗಲೇ ರಾಜಮೌಳಿ ಹಾಕಿದ ಲೆಕ್ಕಾಚಾರಕ್ಕಿಂತ ಶೇ.50ರಷ್ಟು ಗಳಿಕೆಯಲ್ಲಿ ಕುಸಿತ ಕಾಣಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ವಿತರಕರೊಂದಿಗಿನ ಒಪ್ಪಂದ ಮರುಪರಿಶೀಲನೆ
ಟಾಲಿವುಡ್ ಮೂಲಗಳ ಪ್ರಕಾರ, ಆಂಧ್ರಪ್ರದೇಶದ ವಿತರಕರೊಂದಿಗೆ ರಾಜಮೌಳಿ ಹಾಗೂ ನಿರ್ಮಾಪಕ ದಾನಯ್ಯ ದೊಡ್ಡ ಮೊತ್ತಕ್ಕೆ ಡೀಲ್ ಕುದುರಿಸಿದ್ದರು. ಒಂದು ಅಂದಾಜಿನ ಪ್ರಕಾರ, ಸುಮಾರು 140 ಕೋಟಿ ರೂಪಾಯಿಗೆ ಆಂಧ್ರ ಥಿಯೇಟರ್ ಹಕ್ಕುಗಳನ್ನು ಮಾರಾಟ ಮಾಡಲಾಗಿತ್ತು. ಆದ್ರೀಗ ಟಿಕೆಟ್ ದರ ಕಡಿಮೆ ಮಾಡಿರುವುದರಿಂದ ವಿತರಕರೊಂದಿಗೆ ಈಗಾಗಲೇ ಮಾಡಿಕೊಂಡ ಒಡಂಬಡಿಕೆಯನ್ನು ಮರು ಪರೀಶಿಲನೆ ಮಾಡಬೇಕಾಗಿದೆ. ಈಗಾಗಲೇ ಪಡೆದಿದ್ದ 140 ಕೋಟಿ ಹಣದಲ್ಲಿ ಶೇ. 30 ರಿಂದ 40ರಷ್ಟು ಹಣವನ್ನು ಹಿಂತಿರುಗಿಸಬೇಕಾಗಿದೆ.

ದೆಹಲಿ, ಮುಂಬೈನಲ್ಲಿ ಥಿಯೇಟರ್ ಸಂಕಷ್ಟ
'RRR'ಗೆ ಒಮೈಕ್ರಾನ್ ಆತಂಕ ಎದುರಾಗಿದೆ. ಉತ್ತರ ಭಾರತದಲ್ಲಿ ಸೋಂಕಿನ ಸಂಖ್ಯೆ ದಿಢೀರನೇ ಹೆಚ್ಚಾಗಿದೆ. ಹೀಗಾಗಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲು ಥಿಯೇಟರ್ ಬಂದ್ ಮಾಡಲು ಚಿಂತನೆ ನಡೆಸಿವೆ. ಈಗಾಗಲೇ ದೆಹಲಿಯಲ್ಲಿ ಚಿತ್ರಮಂದಿರಗಳನ್ನು ಮುಚ್ಚುವಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ. ಇನ್ನೊಂದು ಕಡೆ ಬಾಲಿವುಡ್ ಸಿನಿಮಾಗಳಿಗೆ ಅತೀ ಹೆಚ್ಚು ಗಳಿಕೆ ತಂದುಕೊಡುವ ರಾಜ್ಯ ಮಹಾರಾಷ್ಟ್ರ. ಅದರಲ್ಲೂ ಮುಂಬೈನಲ್ಲಿ ಈಗಾಗಲೇ ಚಿತ್ರಮಂದಿರದಲ್ಲಿ ಶೇ. 50ರಷ್ಟು ಸೀಟು ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಇದೂ ಕೂಡ 'RRR' ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದಲ್ಲಿ ಥಿಯೇಟರ್ ಬಂದ್ ಭೀತಿ
ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಓಮೈಕ್ರಾನ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾದರೆ, ಸರ್ಕಾರ ಚಿತ್ರಮಂದಿರಗಳನ್ನು ಬಂದ್ ಮಾಡುವ ಸಾಧ್ಯತೆಯಿದೆ. ಇಲ್ಲವೇ ಶೇ. 50ರಷ್ಟು ಆಸನದ ವ್ಯವಸ್ಥೆಯನ್ನು ತಗ್ಗಿಸುವ ಸಾಧ್ಯತೆಯಿದೆ. ಹೀಗಾಗಿ 'RRR' ರಿಲೀಸ್ ವಿಚಾರದಲ್ಲಿ ರಾಜಮೌಳಿಗೆ ಇದೇ ಮೊದಲ ಬಾರಿಗೆ ಟೆನ್ಷನ್ ಶುರುವಾಗಿದೆ. ಆದರೆ, ರಾಜಮೌಳಿ ಈಗಾಗಲೇ ಪ್ರಚಾರದ ವಿಚಾರದಲ್ಲಿ ಸಾಕಷ್ಟು ಹಣವನ್ನು ಸರಿದಿದ್ದಾರೆ. ಹೀಗಾಗಿ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.


Click it and Unblock the Notifications











