"ಏನೇ ಮಾತನಾಡಿದ್ರೂ ರಾಜಕೀಯ ಆಗಿಬಿಡುತ್ತೆ"; ಕಮಲ್ ವಿವಾದದ ಬಗ್ಗೆ ರಾಣಾ ಪ್ರತಿಕ್ರಿಯೆ
"ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು" ಎನ್ನುವ ನಟ ಕಮಲ್ ಹಾಸನ್ ಹೇಳಿಕೆ ವಿವಾದ ಸೃಷ್ಟಿಸಿರುವುದು ಗೊತ್ತೇಯಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ಕೊಟ್ಟಿರುವ ಕಮಲ್ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಆದರೆ ಅದಕ್ಕೆ ಕಮಲ್ ಕ್ಯಾರೇ ಎನ್ನುತ್ತಿಲ್ಲ.
ಈಗಾಗಲೇ ಕೆಲ ಸೆಲೆಬ್ರೆಟಿಗಳು ಕೂಡ ಕಮಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಮಾತನಾಡದೇ ಮೌನ ವಹಿಸಿದ್ದಾರೆ. ತೆಲುಗು ನಟ ರಾಣಾ ದಗ್ಗುಬಾಟಿಗೆ ಈ ಬಗ್ಗೆ ನೇರವಾಗಿ ಪ್ರಶ್ನೆ ಎದುರಾಗಿದೆ. ಆದರೆ ವಿವಾದದ ಬಗ್ಗೆ ಮಾತನಾಡದೇ ಹಾರಿಕೆ ಉತ್ತರ ಸುಮ್ಮನಾಗಿದ್ದಾರೆ.

ರಾಣಾ ನಟನೆಯ 'ರಾಣಾ ನಾಯ್ಡು' ವೆಬ್ ಸೀರಿಸ್ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಲೆ ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಾಣಾ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಕನ್ನಡ ಭಾಷೆ ಕುರಿತು ಕಮಲ್ ಹಾಸನ್ ಹೇಳಿಕೆ ವಿವಾದದ ಬಗ್ಗೆ ಪರೋಕ್ಷವಾಗಿ ಪ್ರಶ್ನೆ ಎದುರಾಗಿದೆ.
"ಸೋಶಿಯಲ್ ಮೀಡಿಯಾ ಈಗ ಅಭಿಪ್ರಾಯ ವ್ಯಕ್ತಪಡಿಸುವ ಸ್ಥಳವಾಗಿದೆ. ಮೊದಲು, ಅದು ಇರಲಿಲ್ಲ. ಈಗ ಯಾವುದೇ ವಿಷಯ ಬಹಳ ಬೇಗ ಭಾವನಾತ್ಮಕ ಮತ್ತು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿ ಮಾತು ವಿವಾದಸ ಸ್ವರೂಪ ಪಡೆಯುತ್ತಿದೆ" ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ. ಆದರೆ ಕಮಲ್ ವಿವಾದದ ಬಗ್ಗೆ ನೇರವಾಗಿ ಸ್ಪಂದಿಸಿಲ್ಲ.
ಕಲಾವಿದರು ಇಂತಹ ಸಮಸ್ಯೆಗಳನ್ನು ಹೇಗೆ ದಾಟಿ ಹೋಗಬೇಕು ಎನ್ನು ಪ್ರಶ್ನೆಗೂ ರಾಣಾ ಉತ್ತರಿಸಿದ್ದಾರೆ. ಮಾಧ್ಯಮ ಮತ್ತು ಸುದ್ದಿ ಬದಲಾದರೆ, ಜನರು ಬುದ್ಧಿವಂತರಾದರೆ (ಅಥವಾ ಅರ್ಥಮಾಡಿಕೊಂಡರೆ) ಎಲ್ಲವೂ ಬದಲಾಗುತ್ತದೆ" ಎಂದು ರಾಣಾ ಹೇಳಿದ್ದಾರೆ. ತೆಲುಗು ನಟ ರಾಣಾ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ಅಂದಹಾಗೆ ಅಣ್ಣಾವ್ರ ದೊಡ್ಡ ಅಭಿಮಾನಿ ರಾಣ ದಗ್ಗುಬಾಟಿ. ಈ ಹಿಂದೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ಹಿರಣ್ಯ ಕಶಪು ಪಾತ್ರ ಮಾಡಲು ಬಯಸಿದ್ದ ರಾಣಾ ಅದಕ್ಕೆ ಡಾ. ರಾಜ್ಕುಮಾರ್ ಅವರ 'ಭಕ್ತ ಪ್ರಹ್ಲಾದ' ಸಿನಿಮಾ ನನನೆ ಸ್ಫೂರ್ತಿ ಎಂದಿದ್ದರು. 'ಬಾಹುಬಲಿ' ಸರಣಿ ಚಿತ್ರದಲ್ಲಿ ಬಲ್ಲಾಳ ದೇವ ಆಗಿ ಪ್ರಭಾಸ್ ಎದುರು ಅಬ್ಬರಿಸಿದ್ದರು.
ಇನ್ನು ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದು ಮೊಂಡುತನ ತೋರಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ಕೂಡ ಕಮಲ್ ಕ್ಷಮೆ ಕೇಳಬೇಕು ಎಂದು ಹೇಳಿದೆ. ಕಮಲ್ ಕ್ಷಮೆ ಕೇಳದ ಹೊರತು 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ. ಆದರೂ ಕಮಲ್ ಮಾತ್ರ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಚಿತ್ರದ ನಿರ್ಮಾಪಕರು ಅವರು ಒಬ್ಬರು. ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಕರ್ನಾಟಕ ಹೊರತು ಪಡಿಸಿ ವಿಶ್ವದಾದ್ಯಂತ 'ಥಗ್ ಲೈಫ್' ಸಿನಿಮಾ ತೆರೆಗಪ್ಪಳಿಸಿದೆ. ಆದರೆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳು ಪ್ರೇಕ್ಷಕರೇ ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಿವ್ಯೂ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಿನಿಮಾ ಮಾಡಲು ಇಷ್ಟೆಲ್ಲಾ ಬಿಲ್ಡಪ್ ಬೇಕಿತ್ತಾ ಎನ್ನುತ್ತಿದ್ದಾರೆ. ಆಂಧ್ರ, ತೆಲಂಗಾಣ, ಕೇರಳದಲ್ಲಿ ಕೂಡ ಚಿತ್ರಕ್ಕೆ ಹಿನ್ನಡೆಯಾಗಿದೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇರುವುದೇ ಒಳ್ಳೆಯದಾಯಿತು ಎಂದು ತಮಿಳು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಗ್ಯಾಂಗ್ಸ್ಟರ್ ಚಿತ್ರದಲ್ಲಿ ಸಿಂಬು, ತ್ರಿಷಾ, ಅಭಿರಾಮಿ, ನಾಸರ್ ಸಹ ಬಣ್ಣ ಹಚ್ಚಿದ್ದಾರೆ.


Click it and Unblock the Notifications











