ಉತ್ತರದಿಂದ ದಕ್ಷಿಣಕ್ಕಿಳಿದ ನ್ಯಾಷನಲ್ ಕ್ರಶ್: ರಶ್ಮಿಕಾ–ನಿತಿನ್ ಸಿನಿಮಾಗೆ ಮೆಗಾಸ್ಟಾರ್ ಕ್ಲಾಪ್
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನಲ್ಲಿ ಕಂಡಿದ್ದೇ ಹೆಚ್ಚು. ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವುದನ್ನು ನೋಡಿ, ಇನ್ನು ಟಾಲಿವುಡ್ಗೆ ಬರೋದು ಡೌಟು ಅಂತಲೇ ಭಾವಿಸಿದ್ದವರು ಹೆಚ್ಚು. ಆದ್ರೀಗ ಹೊಸ ಸಿನಿಮಾಗಾಗಿ ಉತ್ತರದಿಂದ ದಕ್ಷಿಣಕ್ಕೆ ಇಳಿದಿದ್ದಾರೆ.
ರಶ್ಮಿಕಾ ಮಂದಣ್ಣ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಣ್ಬೀರ್ ಕಪೂರ್ ನಟಿಸುತ್ತಿರುವ 'ಎನಿಮಲ್' ಒಂದಾದ್ರೆ, ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'. ಇದು ಬಿಟ್ಟರೆ, ರಶ್ಮಿಕಾ ತೆಲುಗಿನಲ್ಲಿ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ.

ಟಾಲಿವುಡ್ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಕೊನೆಗೂ ದಕ್ಷಿಣದ ಕಡೆ ಮುಖ ಮಾಡಿದ್ದಾರೆ. ಈ ಹಿಂದೆ ನಿತಿನ್ ಹಾಗೂ ರಶ್ಮಿಕಾ ಕಾಂಬಿನೇಷನ್ನಲ್ಲಿ ಬಂದಿದ್ದ 'ಭೀಷ್ಮ' ಬಾಕ್ಸಾಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಅದೇ ಜೋಡಿ ಮತ್ತೊಂದು ಸಿನಿಮಾಗೆ ಕೈ ಜೋಡಿಸಿದೆ. ವಿಶೇಷ ಅಂದ್ರೆ, ಈ ಬಾರಿ ಮೆಗಾಸ್ಟಾರ್ ಸಾಥ್ ಕೊಟ್ಟಿದ್ದಾರೆ.
ಮತ್ತೆ ಒಂದಾದ 'ಭೀಷ್ಮ' ಜೋಡಿ
ರಶ್ಮಿಕಾ ಮಂದಣ್ಣ ಹಾಗೂ ನಿತಿನ್ ತೆಲುಗಿನಲ್ಲಿ ಸೂಪರ್ ಹಿಟ್ ಜೋಡಿ. 'ಭೀಷ್ಮ' ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಹಾಗೇ ಬಾಕ್ಸಾಫೀಸ್ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು. ಹೀಗಾಗಿ ಮತ್ತೆ ಈ ಜೋಡಿಯನ್ನು ನೋಡಬೇಕು ಅಂತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭೀಷ್ಮ ನಿರ್ದೇಶಕ ವೆಂಕಿ ಕುದುಮುಲ, ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ಮೂವರ ಹೊಸ ಸಿನಿಮಾ ಸೆಟ್ಟೇರಿದೆ.

ಈ ಮೂವರ ಹೊಸ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ,'VNR Trio' ಹೆಸರಿನಲ್ಲಿ ಸಿನಿಮಾವನ್ನು ಆರಂಭಿಸಲಾಗಿದೆ. ಇತ್ತೀಚೆಗೆ ಮುಹೂರ್ತ ಕಂಡ ಈ ಸಿನಿಮಾಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ವಿಶೇಷ ಅತಿಥಿಯಾಗಿ ಆಗಮಿಸಿ, ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಬಲ ಬಂದಂತಾಗಿದೆ.
ಟಾಲಿವುಡ್ ನಿರ್ದೇಶಕರೇ ಗೆಸ್ಟ್
ಈ ಸಿನಿಮಾ ಮುಹೂರ್ತಕ್ಕೆ ಟಾಲಿವುಡ್ ನಿರ್ದೇಶಕರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಹನು ರಾಘವಪುಡಿ, ಗೋಪಿಚಂದ್ ಮಲಿನೇನಿ, ಬಾಬಿ ಕೊಲ್ಲಿ ಮತ್ತು ಬುಚಿ ಬಾಬು ಸನಾ ಈ ಮುಹೂರ್ತ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು.
ಚಿರಂಜೀವಿ ಸಿನಿಮಾಗೆ ಕ್ಲಾಪ್ ಮಾಡಿದ್ರೆ, 'ವೀರ ಸಿಂಹ ರೆಡ್ಡಿ' ಖ್ಯಾತಿಯ ಗೋಪಿಚಂದ್ ಮೊದಲ ಶೂಟ್ ನಿರ್ದೇಶನ ಮಾಡಿದ್ರು. ಬುಚ್ಚಿ ಬಾಬು ಸನಾ ಹಾಗೂ ಹನು ಸ್ಕ್ರಿಪ್ಟ್ ಅನ್ನು ನಿರ್ಮಾಪಕರಿಗೆ ಹಸ್ತಾಂತರ ಮಾಡಿದ್ರು. ಈಗ ಈ ಮೂವರ ಕಾಂಬಿನೇಷನ್ ಮತ್ತೊಮ್ಮೆ ಜಾದು ಮಾಡುತ್ತಾ? ಅನ್ನೋ ಕುತೂಹಲವೀಗ ಅಭಿಮಾನಿಗಳಲ್ಲಿ ಇದೆ.
ಬಾಲಿವುಡ್ನಲ್ಲಿ ಶೈನ್ ಆಗಿಲ್ಲ ರಶ್ಮಿಕಾ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರಲ್ಲಿ ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ನಿರೀಕ್ಷೆ ಮೂಡಿಸಿದಷ್ಟು ಯಶಸ್ಸು ಮಾತ್ರ ಸಿಕ್ಕಿಲ್ಲ. ಬಿಗ್ ಬಿ ಜೊತೆ ನಟಿಸಿದ 'ಗುಡ್ ಬೈ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತು ಸುಣ್ಣವಾಗಿತ್ತು. ಹಾಗೇ 'ಮಿಷನ್ ಮಜ್ನು' ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು.
ಇನ್ನು ದಳಪತಿ ವಿಜಯ್ ಜೊತೆ ನಟಿಸಿದ 'ವಾರಿಸು' ಸಿನಿಮಾ ಕೂಡ ಬಾಕ್ಸಾಫೀಸ್ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿಲ್ಲ. ಇನ್ನು 'ಪುಷ್ಪ 2' ಹಾಗೂ 'ಎನಿಮಲ್' ಸಿನಿಮಾ ಮೇಲೆ ನಿರೀಕ್ಷೆಯಿದೆ. ಹಾಗೇ ಇತ್ತೀಚೆಗಷ್ಟೇ ಸೆಟ್ಟೇರಿರುವ ಸಿನಿಮಾ ಟಾಲಿವುಡ್ನಲ್ಲಿ ಮೋಡಿ ಮಾಡಬೇಕಿದೆ.


Click it and Unblock the Notifications











