"ಒಂದು ಮಾತು ಹೇಳಿದ್ರೆ ಪವನ್ ಕಲ್ಯಾಣ್ ಜೈಲಿಗೆ ಹೋಗುತ್ತಿದ್ರು": ಮಾಜಿ ಪತ್ನಿ ಶೇರ್ ಮಾಡಿದ ವಿಡಿಯೋ ವೈರಲ್!
ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ತೆಲುಗು ಪ್ರೇಕ್ಷಕರಿಗೆ ಹೊಸಬರೇನಲ್ಲ. ಪವನ್ ಕಲ್ಯಾಣ್ ಮಾಜಿ ಪತ್ನಿ ಅನ್ನೋದರ ಜೊತೆಗೆ ನಟಿಯಾಗಿಯೂ ಚಿರಪರಿಚಿತರು. ಇತ್ತೀಚೆಗೆ ರೇಣು ದೇಸಾಯಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಪವನ್ ಕಲ್ಯಾಣ್ರಿಂದ ದೂರವಾದ ಬಳಿಕ ರೇಣು ದೇಸಾಯಿ ಮಕ್ಕಳ ಪಾಲನೆ ಮಾಡಿದ್ದಾರೆ. ಅವರಿಗೆ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಈ ಮಧ್ಯೆ ತಮ್ಮ ಅಭಿಮಾನಿಗಳ ಜೊತೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗುತ್ತಿದ್ದರು. ಕೆಲವು ವರ್ಷಗಳಿಂದ ರೇಣು ದೇಸಾಯಿ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.

ಇತ್ತೀಚೆಗೆ ರೇಣು ದೇಸಾಯಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದರಲ್ಲಿ ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರ್ ಅವರ ವಿಡಿಯೋ ಇದೆ. " ಒಂದು ಮಾತು ಆಡಿದ್ದರೆ, ಪವನ್ ಕಲ್ಯಾಣ್ ಜೈಲಿಗೆ ಹೋಗುತ್ತಿದ್ದರು" ಎಂದಿರೋ ಕೃಷ್ಣ ಕುಮಾರ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಲಿವ್ ಇನ್ನಲ್ಲಿ ಇದ್ದರು ರೇಣು-ಪವನ್ ಕಲ್ಯಾಣ್
ರೇಣು ದೇಸಾಯಿ ಟಾಲಿವುಡ್ ಸಿನಿಮಾ 'ಬದ್ರಿ' ಮೂಲಕ ತೆಲುಗು ಮಂದಿಗೆ ಪರಿಚಯ. ಈ ಸಿನಿಮಾದಲ್ಲೇ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಕೂಡ ಇಷ್ಟ ಪಟ್ಟಿದ್ದರು. ಇದೇ ವೇಳೆ ಇಬ್ಬರು ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಆಗಲೇ ರೇಣು ದೇಸಾಯಿ ಅಕಿರಾ ನಂದನ್ಗೆ ಜನ್ಮ ನೀಡಿದ್ದರು. ಮದುವೆ ಬಳಿಕ ಆದ್ಯಗೆ ಇಬ್ಬರು ಪೋಷಕರಾದರು.
ಆದರೆ, ಇವರಿಬ್ಬರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಪವನ್ ಕಲ್ಯಾಣ್-ರೇಣು ದೇಸಾಯಿ 2012ರಲ್ಲಿ ಬೇರೆಯಾದರು. ವಿಚ್ಛೇದನದ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಇವರೇ ನೋಡಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ರೇಣು ದೇಸಾಯಿ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳು ತಿರುಗಿಬಿಳುತ್ತಿದ್ದಾರೆ. 11 ವರ್ಷಗಳಿಂದ ತನ್ನನ್ನು ಆರೋಪಿಯಂತೆ ನೋಡುತ್ತಿದ್ದಾರೆಂದು ರೇಣು ದೇಸಾಯಿ ಅಲವತ್ತುಕೊಂಡಿದ್ದಾರೆ.
ರೇಣು ದೇಸಾಯಿ ವಿಡಿಯೋದಲ್ಲಿ ಏನಿದೆ?
ಇತ್ತೀಚೆಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ನಲ್ಲಿ ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದ ತುಣುಕು ಇದೆ. ಇದರಲ್ಲಿ ರೇಣು ದೇಸಾಯಿ ಅವರ ವಿಚ್ಚೇದನ ಹಾಗೂ ಪವನ್ ಕಲ್ಯಾಣ್ ಬಗ್ಗೆ ಮಾತಾಡಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
"ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಛೇದನದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಪವನ್ ಕಲ್ಯಾಣ್ ಬಿಟ್ಟುಕೊಡಬಾರದಿತ್ತು. ರೇಣು ದೇಸಾಯಿ ತೆಲುಗು ನಟ ಪವನ್ ಕಲ್ಯಾಣ್ಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡಿದ್ದಾರೆ." ಎಂದು ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರ್ ಹೇಳಿದ್ದಾರೆ.
ಹಾಗೆಯೇ "ಪವನ್ ಕಲ್ಯಾಣ್ ನನ್ನನ್ನು ಯಾವುದೋ ಸಣ್ಣ ದೇವಸ್ಥಾನದಲ್ಲಿ ಮದುವೆಯಾದರು ಅಂತ ಹೇಳಿದ್ದರೂ ಜೈಲು ಸೇರುತ್ತಿದ್ದರು." ಎಂದು ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರಿ ಆ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದರೂ, ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
"ನನ್ನ ಬಗ್ಗೆ ಯಾರೋ ಮೊದಲ ಬಾರಿ ಮಾತಾಡಿದ್ದಾರೆ"
ರೇಣು ದೇಸಾಯಿ ಈ ವಿಡಿಯೋದಲ್ಲಿ ಇರುವವರು ಯಾರು ಎಂದು ಗೊತ್ತಿಲ್ಲ. ಅವರು ನನ್ನ ಬಗ್ಗೆ ಏಕೆ ಮಾತಾಡಿದ್ದಾರೆ ಎಂಬುವುದೂ ಗೊತ್ತಿಲ್ಲ. ಆದರೆ ಇದೇ ಮೊದಲ ಬಾರಿಗೆ ಯಾರೋ ಒಬ್ಬರು ನನ್ನ ಪರ ಸಾರ್ವಜನಿಕವಾಗಿ ಮಾತಾಡಿದ್ದಾರೆ. ಅದನ್ನು ಕೇಳಿದಾಗ ನನಗೆ ತುಂಬಾನೇ ಅಳು ಬಂತು" ಎಂದು ರೇಣು ದೇಸಾಯಿ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪವನ್ ಕಲ್ಯಾಣ್ ಅಭಿಮಾನಿಗಳ ಬಗ್ಗೆ ರೇಣು ದೇಸಾಯಿ ಬೇಸರ ವ್ಯಕ್ತಪಡಿಸಿದ್ದಾರೆ. "ಏನೇ ಮಾತಾಡಿದರೂ ಅವರು ಏನೋ ಹೇಳುತ್ತಾರೆ. ಈಗ ಚುನಾವಣೆ ಹತ್ತಿರ ಬರುತ್ತಿದೆ. ಅದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ಯಾವುದೋ ರಾಜಕೀಯ ಪಕ್ಷದ ಜೊತೆ ಸೇರಿಕೊಂಡಿದ್ದಾರೆ ಎನ್ನುತ್ತಾರೆ. ಈ ವಿಡಿಯೋ ಬಳಿಕ ನನ್ನ ನೋವನ್ನು ಅರ್ಥಮಾಡಿಕೊಳ್ಳುವ ಜನರೂ ಇದ್ದಾರೆ ಎಂದು ನನಗೆ ಗೊತ್ತಾಗಿದೆ" ಎಂದು ರೇಣು ದೇಸಾಯಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











