ನಟ ಸಾಯಿ ಧರಮ್ ತೇಜ್ ಅಪಘಾತ: ಹೊರಗೆ ಬರುತ್ತಿರುವ ಹಲವು ವಿಷಯಗಳು
ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ, ನಟ ಸಾಯಿ ಧರಮ್ ತೇಜ್ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸಿಸಿಟಿವಿ ಫುಟೇಜ್ ದೊರೆತಿದ್ದು, ಅಪಘಾತದ ಬಗ್ಗೆ ಕೆಲವು ಮುಖ್ಯವಾದ ಅಂಶಗಳು ಹೊರಗೆ ಬಂದಿವೆ.
ಶುಕ್ರವಾರ ರಾತ್ರಿ, ಹೈದರಾಬಾದ್ನ ಮಾದಾಪುರ್ ಬಳಿ ಸಾಯಿ ಧರಮ್ ತೇಜ್ ಚಲಾಯಿಸುತ್ತಿದ್ದ ಬೈಕ್ ಅಪಘಾತಕ್ಕೆ ಈಡಾಗಿದ್ದು, ಸಾಯಿ ಧರಮ್ ತೇಜ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಯಿ ಧರಮ್ ತೇಜ್ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.
ಸಾಯಿ ಧರಮ್ ತೇಜ್ ಅಪಘಾತದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಅಪಘಾತದ ಬಗ್ಗೆ ಹಲವು ಮಾಹಿತಿಗಳು ಹೊರಗೆ ಬಂದಿವೆ. ಈ ಮಾಹಿತಿಗಳ ಪ್ರಕಾರ ಬೈಕ್ ಚಲಾಯಿಸುತ್ತಿದ್ದ ಸಾಯಿ ಧರಮ್ ತೇಜ್ ಅವರ ನಿರ್ಲಕ್ಷ್ಯದಿಂದಲೇ ಅಪಘಾತ ನಡೆದಿದೆ ಎಂಬ ನಿರ್ಣಯಕ್ಕೆ ಬರಲಾಗುತ್ತಿದೆ.
ಸಾಯಿ ಧರಮ್ ತೇಜ್ ಅಪಘಾತವಾಗಿದ್ದು ಹೈದರಾಬಾದ್ನ ಮಾದಾಪುರದ ಬ್ರಿಡ್ಜ್ ಮೇಲೆ. ಬ್ರಿಡ್ಜ್ ಮೇಲೆ ಗರಿಷ್ಠ ವೇಗ ಕೇವಲ 40 ಕಿ.ಮೀ. ಆದರೆ ಸಾಯಿ ಧರಮ್ ತೇಜ್ ತಮ್ಮ ಬೈಕ್ ಅನ್ನು 100 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದರು. ಅಪಘಾತವಾದ ಸಂದರ್ಭದಲ್ಲಿ ಬೈಕ್ನ ವೇಗ 75 ಕಿ.ಮೀ ಇತ್ತು ಎಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಅಪಘಾತವಾದಾಗ ಟ್ರಿಯಂಫ್ ಸಂಸ್ಥೆಯ ರೇಸಿಂಗ್ ಬೈಕ್ ಅನ್ನು ಚಲಾಯಿಸುತ್ತಿದ್ದರು. ಈ ಬೈಕ್ ಹೊಸ ಬೈಕ್ ಅಲ್ಲ. ಬೈಕ್ ಅನ್ನು ಗೆಳೆಯ ಬುರಾ ಅನಿಲ್ ಕುಮಾರ್ ಎಂಬುವರಿಂದ ಖರೀದಿಸಿದ್ದಾರೆ. ಬೈಕ್ ಅನ್ನು ಸಾಯಿ ಧರಮ್ ತೇಜ್ ತಮ್ಮ ಹೆಸರಿಗೆ ನೊಂದಾವಣಿ ಮಾಡಿಸಿಕೊಳ್ಳದೆ ಹಳೆಯ ನೊಂದಾವಣಿಯಲ್ಲಿ ಚಲಾಯಿಸುತ್ತಿದ್ದಾರೆ.

ದಂಡ ಕಟ್ಟಿರುವ ಅನಾಮಿಕ ವ್ಯಕ್ತಿ
ಅತಿ ವೇಗವಾಗಿ ಚಲಾಯಿಸಿದ ದೂರುಗಳು ಈ ಬೈಕ್ ಚಲಾಯಿಸಿದವರ ಮೇಲಿವೆ. ಕೆಲವು ತಿಂಗಳ ಹಿಂದೆ ಇದೇ ಬೈಕ್ನ ಮಾಲೀಕರ ಮೇಲೆ ಅತಿ ವೇಗದ ಚಾಲನೆಗೆ ಚಲನ್ ತೆಗೆಯಲಾಗಿದೆ. ಈ ದಂಡವನ್ನು ಸಾಯಿ ಧರಮ್ ತೇಜ್ ಅಪಘಾತವಾದ ಬಳಿಕ ಯಾರೊ ಅನಾಮಿಕ ವ್ಯಕ್ತಿ ಕಟ್ಟಿದ್ದಾನೆ. ಪೊಲೀಸರು ಆ ಅನಾಮಿಕ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ. ಸಾಯಿ ಧರಮ್ ತೇಜ್ಗೆ ಅತಿ ವೇಗದ ಚಾಲನೆ ಅಭ್ಯಾಸವಾಗಿತ್ತು ಎಂದು ಹೇಳಲಾಗುತ್ತಿದೆ.

ಹೆಲ್ಮೆಟ್ ಧರಿಸಿರಲಿಲ್ಲ ಸಾಯಿ ಧರಮ್ ತೇಜ್
ಅಪಘಾತದ ಸಂದರ್ಭದಲ್ಲಿ ನಟ ಸಾಯಿ ಧರಮ್ ತೇಜ್ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಿಡಿಯೋ ಸಾಕ್ಷ್ಯದಲ್ಲಿ ಸ್ಪಷ್ಟವಾಗುತ್ತಿಲ್ಲ. ಕೆಲವು ಸ್ಥಳೀಯರು ಹೇಳಿರುವ ಪ್ರಕಾರ ಸಾಯಿ ಧರಮ್ ತೇಜ್ ಹೆಲ್ಮೆಟ್ ಹಾಕಿರಲಿಲ್ಲ ಎನ್ನಲಾಗುತ್ತಿದೆ. ಹಾಗಾಗಿಯೇ ಸಾಯಿ ಧರಮ್ಗೆ ದೊಡ್ಡ ಪ್ರಮಾಣದ ಗಾಯವಾಗಿದೆ. ಮೆಗಾಸ್ಟಾರ್ ಕುಟುಂಬದ ಹಲವು ಪ್ರಮುಖರು ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.

ಅತಿವೇಗದ, ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ
ಈವರೆಗೆ ಕಲೆ ಹಾಕಿರುವ ಮಾಹಿತಿ ಪ್ರಕಾರ ಸಾಯಿ ಧರಮ್ ತೇಜ್ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಲೇ ಅಪಘಾತವಾಗಿದೆ ಎಂಬ ನಿರ್ಣಯಕ್ಕೆ ಪೊಲೀಸ್ ಇಲಾಖೆ ಬಂದಿದೆ ಎನ್ನಲಾಗುತ್ತಿದೆ. ಪೂರ್ಣ ತನಿಖೆಯ ಬಳಿಕವಷ್ಟೆ ಸತ್ಯಾಂಶ ಏನೆಂದು ತಿಳಿದು ಬರಲಿದೆ. ಪ್ರಸ್ತುತ ಸಾಯಿ ಧರಮ್ ತೇಜ್ ಜೀವಕ್ಕೆ ಯಾವುದೇ ಹಾನಿಯಿಲ್ಲ, ಅವರು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೆಗಾಸ್ಟಾರ್ ಕುಟುಂಬದ ಹಿರಿಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

2014ರಲ್ಲಿ ಚಿತ್ರರಂಗ ಪ್ರವೇಶಿಸಿದ ಧರಮ್ ತೇಜ್
2014ರಲ್ಲಿ ಚಿತ್ರರಂಗ ಪ್ರವೇಶಿಸಿದ ಸಾಯಿ ಧರಮ್ ತೇಜ 'ಪಿಲ್ಲಾ ನುವ್ವು ಲೇನಿ ಜೀವಿತಂ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಆ ನಂತರ ರೇ, ಸುಬ್ರಮಣ್ಯಂ ಫಾರ್ ಸೇಲ್, ಸುಪ್ರೀಂ, ತಿಕ್ಕ, ವಿನ್ನರ್, ಜವಾನ್, ಇಂಟಿಲಿಜೆಂಟ್, ತೇಜ್ ಐ ಲವ್ ಯೂ, ಚಿತ್ರಲಹರಿ, ಪ್ರತಿ ರೋಜು ಪಂಡಗೆ, ಸೋಲೋ ಬ್ರಾಥುಕೆ ಸೋ ಬೆಟರ್ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 'ರಿಪಬ್ಲಿಕ್' ಎನ್ನುವ ಚಿತ್ರದಲ್ಲಿ ಸಾಯಿ ಧರಮ್ ತೇಜ ನಟಿಸಿದ್ದು ಈ ಸಿನಿಮಾ ಬಿಡುಗಡೆಗೆ ತಯಾರಾಗಿದೆ.


Click it and Unblock the Notifications











