ಬೈಕ್ ಅಪಘಾತದ ಬಳಿಕ ಬದಲಾಯ್ತು ಮೆಗಾ ಹೀರೋ ನಸೀಬು; 100 ಕೋಟಿ ಬಜೆಟ್ ಸಿನಿಮಾದ ಕಥೆಯೇನು?
ಮೆಗಾ ಫ್ಯಾಮಿಲಿಯ ಹೀರೋ ಸಾಯಿ ಧರಂ ತೇಜ್ ಟಾಲಿವುಡ್ನಲ್ಲಿ ನೆಲೆಯೂರುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದಷ್ಟೇ ಭೀಕರ ಬೈಕ್ ಅಪಘಾತದಲ್ಲಿ ಸಾಯಿ ಧರಂ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ಆ ಅಪಘಾತದ ಬಳಿಕ ಸಾಯಿ ಧರಂ ತೇಜ್ ಎರಡು ವರ್ಷ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. ಮೆಗಾ ನಸೀಬ್ ಯಾಕೋ ಚೆನ್ನಾಗಿಲ್ಲ ಅಂತ ಮೆಗಾ ಫ್ಯಾನ್ಸ್ ಬೇಸರಗೊಂಡಿದ್ದೂ ಇದೆ.
ಬೈಕ್ ಅಪಘಾತದಿಂದ ಆದ ಗಾಯಗಳಿಂದ ಚೇತರಿಸಿಕೊಂಡ ಸಾಯಿ ಧರಂ ತೇಜ್ ಗ್ರ್ಯಾಂಡ್ ಆಗಿ ಕಮ್ ಬ್ಯಾಕ್ ಮಾಡಿದ್ದರು. ಅವರು ನಟಿಸಿದ್ದ 'ವಿರುಪಾಕ್ಷ' ಸಿನಿಮಾ ಸೂಪರ್ ಹಿಟ್ ಆಯ್ತು. ಬೈಕ್ ಅಪಘಾತದ ಬಳಿಕ ಸಾಯಿ ಧರಂ ತೇಜ್ ಅಂಟಿದ್ದ ಕಂಟಕಗಳೆಲ್ಲ ದೂರ ಆಗಿ ಅದೃಷ್ಟ ಕುಲಾಯಿಸಿದೆ ಅಂತ ಅಭಿಮಾನಿಗಳೇ ಹರ್ಷ ವ್ಯಕ್ತಪಡಿಸಿದ್ದರು. ಇಲ್ಲಿಂದ ಸಿನಿಮಾ ಆಯ್ಕೆಯಲ್ಲೂ ಸಾಯಿ ಧರಂ ತೇಜ್ ಹುಷಾರಾಗಿದ್ದಾರೆ.

'ವಿರೂಪಾಕ್ಷ' ಸಿನಿಮಾ ಬಳಿಕ ಸಾಯಿ ಧರಂ ತೇಜ್ 'ಬ್ರೋ' ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆಯಿತ್ತು. ಆದರೆ, ಈ ಸಿನಿಮಾ ಪವನ್ ಕಲ್ಯಾಣ್ ರೇಂಜ್ಗೆ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಒಂದಿಷ್ಟು ದಿನ ಬ್ರೇಕ್ ತೆಗೆದುಕೊಂಡಿದ್ದರು. ಮುಂದಿನ ಸಿನಿಮಾಗೆ ತಯಾರಿ ನಡೆಸುತ್ತಿದ್ದರು.
ಸಾಯಿ ಧರಂ ತೇಜ್ ಈಗ ತನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಸಿನಿಮಾದ ಟೈಟಲ್ ಇನ್ನೂ ಅನೌನ್ಸ್ ಆಗಿಲ್ಲ. ಈ ಸಿನಿಮಾವನ್ನು ರೋಹಿತ್ ಕೆಪಿ ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಸಿನಿಮಾ ಫಸ್ಟ್ ಲುಕ್ ಮೆಗಾ ಫ್ಯಾನ್ಸ್ ಅನ್ನು ಸೆಳೆದಿತ್ತು. ಅಂದ್ಹಾಗೆ ಇದೊಂದು ಐತಿಹಾಸಿಕ ಕಥೆ ಎಂದು ಹೇಳಲಾಗುತ್ತಿದೆ. 1947 ರಿಂದ 1967ರವರೆಗೆ ನಡೆಯುವ ಕಥೆ ಇದಾಗಿದೆ.
ಈ ಸಿನಿಮಾ ರಾಯಲಸೀಮೆ ಹಿನ್ನೆಲೆಯುಳ್ಳ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಸಾಯಿ ಧರಂ ತೇಜ್ ಜೊತೆ ನಾಯಕಿಯಾಗಿ ಐಶ್ವರ್ಯಾ ಲಕ್ಷ್ಮಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಈಗಾಗಲೇ ಕೋಟಿ ಲೆಕ್ಕದಲ್ಲಿ ಅದ್ಧೂರಿ ಸೆಟ್ಗಳನ್ನು ಹಾಕಲಾಗಿದೆ. ಇದೇ ಸಿನಿಮಾಗಾಗಿ ಸಾಯಿ ಧಮಂ ತೇಜ್ ಜಿಮ್ನಲ್ಲಿ ಸಿಕ್ಕಾಪಟ್ಟೆ ಕಸರತ್ತು ನಡೆಸಿ ದೇಹವನ್ನು ಶೇಪ್ಗೆ ತಂದಿದ್ದಾರೆ.

ಸದ್ಯ ಟಾಲಿವುಡ್ನಲ್ಲಿ ಸಾಯಿ ಧರಂ ತೇಜ್ ನಟಿಸುತ್ತಿರುವ ಸಿನಿಮಾದ ಬಜೆಟ್ ಬಗ್ಗೆ ಸುದ್ದಿಯಾಗುತ್ತಿದೆ. ಕೆ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಿಸುತ್ತಿರುವ ಈ ಸಿನಿಮಾದ ಬಜೆಟ್ ಬರೋಬ್ಬರಿ 100 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಇಬ್ಬರು ನಿರ್ಮಾಪಕರು ಈ ಹಿಂದೆ ಬ್ಲಾಕ್ ಬಸ್ಟರ್ ಸಿನಿಮಾ 'ಹನುಮಾನ್' ಅನ್ನು ನಿರ್ಮಿಸಿದ್ದರು. ಇದು ಸಾಯಿ ಧರಂ ತೇಜ್ ಅವರ 18ನೇ ಸಿನಿಮಾವಾಗಿದ್ದು, ಇವರ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡಿದೆ.
ಆಂಧ್ರ ಪ್ರದೇಶದ ಚುನಾವಣೆ ಸಂದರ್ಭದಲ್ಲಿ ಪವನ್ ಕಲ್ಯಾಣ್ ಜೊತೆ ಸಾಯಿ ಧರಂ ತೇಜ್ ಸಕ್ರಿಯವಾಗಿ ಭಾಗವಹಿಸಿದ್ದರು. ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದು, ಮೆಗಾ ಹೀರೊಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಸದ್ಯಕ್ಕೀಗ ಸಾಯಿ ಧರಂ ತೇಜ್ ತನ್ನ ಪ್ಯಾನ್ ಇಂಡಿಯಾ ಸಿನಿಮಾದತ್ತ ಹೆಚ್ಚು ಗಮನ ಹರಿಸಿದ್ದಾರೆ.


Click it and Unblock the Notifications











