'ಶಾಕುಂತಲಂ' ಬಾಕ್ಸಾಫೀಸ್ ನಷ್ಟ: ದಿಲ್ರಾಜುಗೆ ಜೇಬಿಗೆ ಕತ್ತರಿ.. ಕಳ್ಕೊಂಡಿದ್ದು ಒಂದೆರಡು ಕೋಟಿ ಅಲ್ಲ!
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಸಿನಿಮಾ 'ಶಾಕುಂತಲಂ' ಹಿಂದೆಂದೂ ಕಂಡಿರದ ನಷ್ಟ ಕಂಡಿದೆ. ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಕಲೆಕ್ಷನ್ ಸಿನಿಮಾ ಬಜೆಟ್ನ ಅರ್ಧದಷ್ಟೂ ಆಗಿಲ್ಲ. ಇದು ಹೀನಾಯವಾಗಿ ಸೋಲುಂಡ ಈ ವರ್ಷದ ಮೊದಲ ಸಿನಿಮಾ ಎನಿಸಿಕೊಂಡರೂ ಅಚ್ಚರಿಯಿಲ್ಲ.
'ಶಾಕುಂತಲಂ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನಟಿ ಸಮಂತಾ ಲಂಡನ್ಗೆ ಹಾರಿದ್ದಾರೆ. 'ಸಿಟಡಾಲ್' ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಇತ್ತ ದಿಲ್ರಾಜು ಹಾಗೂ ಗುಣಶೇಖರ್ ಇಬ್ಬರಿಗೂ ಸಿಕ್ಕಾಪಟ್ಟೆ ನಷ್ಟ ಆಗಿದೆ.

'ಶಾಕುಂತಲಂ' ಸಿನಿಮಾಗೆ ಸಿಕ್ಕಾಪಟ್ಟೆ ಪ್ರಚಾರ ಮಾಡಲಾಗಿತ್ತು. ಆದರೂ, ಬಾಕ್ಸ್ ಆಫೀಸ್ನಲ್ಲಿ ಇನ್ನಿಲ್ಲದಂತೆ ಸೋಲು ಕಂಡಿತ್ತು. ಇತ್ತ ಪ್ರತಿ ಸಿನಿಮಾಗೂ ನೂರೆಂಟು ಲೆಕ್ಕಾಚಾರ ಮಾಡುವ ದಿಲ್ ರಾಜು ಸಹ-ನಿರ್ಮಾಪಕನಾಗಿ ಸೇರಿಕೊಂಡಿದ್ದರು. ಇದೇ ಮೊದಲ ಬಾರಿಗೆ ನಿರ್ಮಾಪಕ ಲೆಕ್ಕಾಚಾರ ತಪ್ಪಿದ್ದಾರೆ ಅಂತ ಟಾಲಿವುಡ್ನಲ್ಲಿ ಚರ್ಚೆಯಾಗುತ್ತಿದೆ.
ದಿಲ್ ರಾಜು ಲೆಕ್ಕ ತಪ್ಪಿದ್ದು ಎಲ್ಲಿ?
ದಿಲ್ ರಾಜು ಸ್ಮಾಲ್ ಬಜೆಟ್ ಸಿನಿಮಾಗಳಿಂದಲೂ ಕೋಟಿ ಕೋಟಿ ಹಣ ಗಳಿಸುವ ನಿರ್ಮಾಪಕ. ಅಷ್ಟು ಸುಲಭಕ್ಕೆ ಸಿನಿಮಾ ಖರೀದಿ ಮಾಡುವ ಗೋಜಿಗೆ ಹೋಗಲ್ಲ. ಆದರೂ, ಶಾಕುಂತಲಂ ಸಿನಿಮಾವನ್ನು ಒಪ್ಪಿಕೊಂಡಿದ್ದೇಕೆ? ಅನ್ನೋಕೆ ಟಾಲಿವುಡ್ ಉತ್ತರ ಕಂಡುಕೊಂಡಿದೆ. ತೆಲುಗಿನ ಪೌರಾಣಿಕ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿದೆ. ಹೀಗಾಗಿ ಈ 'ಶಾಕುಂತಲಂ' ಉತ್ತಮ ಲಾಭ ತಂದುಕೊಡುತ್ತೆ ಅಂತಲೇ ದಿಲ್ ರಾಜು ನಂಬಿದ್ದರು.
ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಟ್ರೆಂಡ್ ಹಾಗೂ ಸಮಂತಾ ಇಮೇಜ್ ಎರಡೂ ವರ್ಕ್ಔಟ್ ಆಗುತ್ತೆ ಅಂತಲೇ ನಂಬಿದ್ದರು. ಈ ಕಾರಣಕ್ಕಾಗಿಯೇ 'ಶಾಕುಂತಲಂ' ಸಿನಿಮಾಗೆ ಸಹ ನಿರ್ಮಾಪಕರಾದರು. ಆದರೆ, ಮೊದಲ ದಿನವೇ ದಿಲ್ ರಾಜು ಲೆಕ್ಕಾಚಾರವೆಲ್ಲ ತಲೆಕೆಳಗಾಗಿದ್ದು, 10 ಕೋಟಿ ರೂ. ಕಲೆ ಹಾಕುವುದಕ್ಕೂ ಸಿನಿಮಾ ಪರದಾಡುತ್ತಿದೆ.

ದಿಲ್ರಾಜುಗಾದ ನಷ್ಟ ಎಷ್ಟು?
'ಶಾಕುಂತಲಂ' ಸಿನಿಮಾ ಬರೋಬ್ಬರಿ 50 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿತ್ತು. ಪ್ರಚಾರ ಹಾಗೂ ಇತರೆ ಖರ್ಚು ಸೇರಿ ಬಜೆಟ್ 60 ಕೋಟಿ ರೂ. ಏರಿಕೆಯಾಗಿತ್ತು. ಆದರೆ, ಥಿಯೇಟರ್ನಲ್ಲಿ ಇದರ ಅರ್ಧದಷ್ಟೂ ಹಣ ವಾಪಾಸ್ ಬಂದಿಲ್ಲ. ಬಾಕ್ಸಾಫೀಸ್ನಿಂದ ಇದೂವರೆಗೂ 10 ಕೋಟಿ ರೂ. ಬಂದಿಲ್ಲ ಅನ್ನೋ ಮಾತಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ದಿಲ್ ರಾಜು 35 ಕೋಟಿ ರೂ.ಗೆ ಓಟಿಟಿಗೆ ಸೇಲ್ ಮಾಡಲಾಗಿತ್ತು. ಇನ್ನೊಂದು ಕಡೆ ಸ್ಯಾಟಲೈಟ್ ಹಕ್ಕನ್ನು 15 ಕೋಟಿ ರೂಪಾಯಿಗೆ ಮಾರಲು ಹೊರಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇವೆಲ್ಲವನ್ನೂ ಸೇರಿಸಿ, ಕಮ್ಮಿ ಅಂದರೂ, ದಿಲ್ ರಾಜುಗೆ 20 ಕೋಟಿ ರೂ. ನಷ್ಟ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಸಮಂತಾ ವಿರುದ್ಧ ಕಿಡಿಕಾರಿದ್ದ ನಿರ್ಮಾಪಕ
'ಶಾಕುಂತಲಂ' ಸಿನಿಮಾ ನೋಡಿದ ಬಳಿಕ ತೆಲುಗು ನಿರ್ಮಾಪಕ ಚಿಟ್ಟಿಬಾಬು ಕಿಡಿಕಾರಿದ್ದರು. ಇಲ್ಲಿಗೆ ಸಮಂತಾ ಅಧ್ಯಾಯ ಮುಗೀತು ಎಂದು ಕಮೆಂಟ್ ಮಾಡಿದ್ದರು. ಅದಕ್ಕೆ ಸಮಂತಾ ಕೂಡ ಪರೋಕ್ಷವಾಗಿ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದರು.
ಸಮಂತಾ ಭಗವದ್ಗೀತೆಯ ಶ್ಲೋಕವನ್ನು ಪೋಸ್ಟ್ ಮಾಡಿ ನಿರ್ಮಾಪಕ ಚಿಟ್ಟಿಬಾಬುಗೆ ಟಾಂಗ್ ಕೊಟ್ಟಿದ್ದರು. ನಾವು ಕೆಲಸ ಮಾಡುತ್ತಿರಬೇಕು. ಅದರ ಪ್ರತಿಫಲವನ್ನು ನಿರೀಕ್ಷೆ ಮಾಡಬಾರದು ಎಂದು ಹೇಳಿದ್ದರು. ಈಗ ದಿಲ್ ರಾಜುಗೆ ಆದ ನಷ್ಟ ಮತ್ತೆ ಸಮಂತಾ ಇಮೇಜಿಗೆ ಏಟು ಬೀಳುವಂತಿದೆ.


Click it and Unblock the Notifications











