Exclusive: ಶಿವಣ್ಣ, ರಜನಿ, ಕಮಲ್, ಬಾಲಯ್ಯ, ಮೋಹನ್ ಲಾಲ್ ಕ್ರೇಜಿ ಮಲ್ಟಿಸ್ಟಾರರ್? ನಿರ್ದೇಶಕ ಯಾರು?
ದಕ್ಷಿಣಭಾರತ ಚಿತ್ರರಂಗದಲ್ಲಿ ಕಂಡು ಕೇಳರಿಯದ ಮಲ್ಟಿಸ್ಟಾರರ್ ಸಿನಿಮಾವೊಂದರ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಶನಿವಾರ ಶಿವಣ್ಣ ಎನ್ಟಿಆರ್ ಶತ ಜಯಂತೋತ್ಸವದಲ್ಲಿ ಬಾಲಯ್ಯ ಜೊತೆ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ಆ ಸಿನಿಮಾ ಬಗ್ಗೆ ಈಗ ಟಾಲಿವುಡ್ನಲ್ಲಿ ಬಿಸಿಬಿಸಿ ಚರ್ಚೆ ಆಗ್ತಿದೆ. ಚಿತ್ರದಲ್ಲಿ ರಜನಿಕಾಂತ್, ಕಮಲ್, ಮೋಹನ್ ಲಾಲ್ ಕೂಡ ನಟಿಸ್ತಾರೆ ಎನ್ನಲಾಗ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಒಂದು ಭಾಷೆಯಲ್ಲಿ ನಿರ್ಮಾಣವಾಗುವ ಸಿನಿಮಾ ಎಲ್ಲಾ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗ್ತಿದೆ. ಹಾಗಾಗಿ ಕಲಾವಿದರು, ತಂತ್ರಜ್ಞರು ಭಾಷೆಯ ಗಡಿಮೀರಿ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಕನ್ನಡದಲ್ಲೂ ಈಗ ಡಬ್ಬಿಂಗ್ಗೆ ಅವಕಾಶ ಇದೆ. ಹಾಗಾಗಿ ಕನ್ನಡ ಕಲಾವಿದರು ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿ, ಕನ್ನಡಕ್ಕೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

ಕಳೆದೆರಡು ದಿನಗಳಿಂದ ಟಾಲಿವುಡ್ನಲ್ಲಿ ಒಂದು ಮೆಗಾ ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ಗುಸುಗುಸು ಶುರುವಾಗಿದೆ. ಈ ಚಿತ್ರಕ್ಕೆ ಕನ್ನಡ ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಒಂದಲ್ಲ ಎರಡಲ್ಲ ಮೂರು ಭಾಗಗಳಾಗಿ ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಸುದ್ದಿಯಲ್ಲಿ ತೇಲಿ ಬಿಡಲಾಗಿದೆ. ಇದು ಎಷ್ಟು ನಿಜ? ಎಷ್ಟು ಸುಳ್ಳು? ಎನ್ನುವುದು ಮಾತ್ರ ಗೊತ್ತಿಲ್ಲ. ಶಿವಣ್ಣ ತಮ್ಮದೇ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದು ಕೂಡ ಹೇಳುತ್ತಿದ್ದಾರೆ.
ಮೊದಲಿಗೆ ಎರಡು ಭಾಗಗಳಾಗಿ ಸಿನಿಮಾ ಬರುತ್ತದೆ. ಶಿವಣ್ಣ ಬಾಲಯ್ಯ ಒಂದು ಚಿತ್ರದಲ್ಲಿ ನಟಿಸಿದ್ರೆ, ಅದರ ಮುಂದುವರೆದ ಭಾಗದಲ್ಲಿ ರಜನಿಕಾಂತ್ ಬಾಲಯ್ಯ ಅಬ್ಬರಿಸ್ತಾರೆ ಎನ್ನಲಾಗಿತ್ತು. ಇದೀಗ 3 ಭಾಗಗಳಾಗಿ ಸಿನಿಮಾ ಬರುತ್ತೆ, ಕಮಲ್ ಹಾಸನ್, ಮೋಹನ್ ಲಾಲ್ ಕೂಡ ನಟಿಸ್ತಾರೆ ಎಂದು ಗುಲ್ಲಾಗಿದೆ. ಆದರೆ ನಿಜಕ್ಕೂ ಇಂತಾದೊಂದು ಕಾಂಬಿನೇಷನ್ ಸೆಟ್ ಆಗುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಒಂದು ವೇಳೆ ಸಾಧ್ಯವಾದರೂ ಆ ಸಿನಿಮಾ ಯಾವ ಕಾಲಕ್ಕೆ ತೆರೆಗೆ ಬರುತ್ತೆ ಎನ್ನುತ್ತಿದ್ದಾರೆ.

ಆಕ್ಷನ್ ಕಟ್ ಹೇಳೋದ್ಯಾರು?
ಕನ್ನಡ ನಿರ್ದೇಶಕರು ಈ ಮಲ್ಟಿಸ್ಟಾರರ್ ಚಿತ್ರದ ಸಾರಥ್ಯ ವಹಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಹರಿದಾಡ್ತಿದೆ. ಆ ನಿರ್ದೇಶಕ ಶಿವಣ್ಣನಿಗೆ ಬಹಳ ಆಪ್ತರು ಎಂದು ಹೇಳುತ್ತಿದ್ದಾರೆ. ಇದೀಗ ಎ. ಹರ್ಷ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎಂದು ಕೂಡ ಸುದ್ದಿಯಾಗಿದೆ. ಈ ಬಗ್ಗೆ ಫಿಲ್ಮಿಬೀಟ್ಗೆ ಸ್ವತಃ ಎ. ಹರ್ಷ ಮಾಹಿತಿ ನೀಡಿದ್ದಾರೆ. "200% ಆ ಸಿನಿಮಾಗೂ ನನಗೂ ಸಂಬಂಧ ಇಲ್ಲ. ನಾನು ಅಂತೂ ನಿರ್ದೇಶನ ಮಾಡ್ತಿಲ್ಲ. ಸದ್ಯ ನಾನು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಈಗಷ್ಟೆ ಆ ಸಿನಿಮಾ ಶುರುವಾಗಿದೆ." ಎಂದಿದ್ದಾರೆ.
ನರ್ತಕ್ ಕೂಡ ಪ್ರತಿಕ್ರಿಯೆ
ಮತ್ತೆ ಕೆಲವರು 'ಮಫ್ತಿ' ನಿರ್ದೇಶಕ ನರ್ತನ್ ಈ ಕ್ರೇಜಿ ಪ್ರಾಜೆಕ್ಟ್ಗೆ ಆಕ್ಷನ್ ಕಟ್ ಹೇಳಬಹುದಾ? ಎನ್ನುವ ಅನುಮಾನದಲ್ಲಿದ್ದಾರೆ. ಶಿವಣ್ಣನ ಜೊತೆ ಈ ಹಿಂದೆ 'ಮಫ್ತಿ' ಚಿತ್ರದಲ್ಲಿ ನರ್ತನ್ ಕೆಲಸ ಮಾಡಿದ್ದರು. ಈ ಸಿನಿಮಾ ತೆಲುಗು ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಆದರೆ ನರ್ತನ್ ಕೂಡ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದು "ಈಗ ಹೇಳುತ್ತಿರುವ ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ನನಗೂ ಮಾಹಿತಿ ಇಲ್ಲ. ಯಾರು ನಿರ್ದೇಶನ ಮಾಡ್ತಾರೆ ಗೊತ್ತಿಲ್ಲ" ಎಂದಿದ್ದಾರೆ. ಸದ್ಯ ಜೂನ್ 16ರಿಂದ 'ಬೈರತಿ ರಣಗಲ್' ಸಿನಿಮಾ ಚಿತ್ರೀಕರಣ ಆರಂಭಿಸಲು ಅವರು ಸಿದ್ಧತೆ ನಡೆಸಿದ್ದಾರೆ.

'ಜೈಲರ್' ಚಿತ್ರದಲ್ಲಿ ರಜನಿ, ಶಿವಣ್ಣ, ಲಾಲ್
ಸದ್ಯ ಹೇಳುತ್ತಿರುವ 5 ಜನ ಸೂಪರ್ ಸ್ಟಾರ್ಗಳ ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ. ನಿಜಕ್ಕೂ ಇಂತಾದೊಂದು ಪ್ರಯತ್ನ ನಡೆಯುತ್ತಿದ್ಯಾ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಶಿವಣ್ಣ, ಬಾಲಯ್ಯ ಸೇರಿ ಸಿನಿಮಾ ಮಾಡಲು ಮುಂದಾಗಿರುವುದು ನಿಜ. ಆದರೆ ರಜನಿ, ಕಮಲ್, ಮೋಹನ್ ಲಾಲ್ ಆ ಸಿನಿಮಾದಲ್ಲಿ ಇರ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ. ಅಂದಹಾಗೆ 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಜೊತೆ ಶಿವಣ್ಣ, ಮೋಹನ್ ಲಾಲ್ ನಟಿಸಿದ್ದಾರೆ.


Click it and Unblock the Notifications











