'ಮದರಾಸಿ' ಪೋಸ್ಟರ್ನಲ್ಲಿ ಇಡೀ ದಕ್ಷಿಣ ಭಾರತದ ರಾಜ್ಯಗಳ ನಕ್ಷೆ; ಕಮಲ್ ಬಳಿಕ ಹೊತ್ತಿಕೊಂಡ ವಿವಾದದ ಕಿಡಿ
ಕೆಲವೇ ದಿನಗಳ ಹಿಂದೆ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ವೇದಿಕೆ ಮೇಲೆ ಹೇಳಿಕೆ ಕೊಟ್ಟು ಕಮಲ್ ಹಾಸನ್ ವಿವಾದಕ್ಕೆ ಸಿಲುಕಿದ್ದರು. ಕನ್ನಡಿಗರು ಕಮಲ್ ಹಾಸನ್ ನಟಿಸಿದ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೇ ಬಿಟ್ಟಿರಲಿಲ್ಲ. ರಾಜ್ಯಾದ್ಯಂತ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದ್ದವು. ಆ ವಿವಾದ ಇನ್ನೂ ಹಸಿಯಾಗಿಯೇ ಉಳಿದಿದೆ. ಅಷ್ಟರಲ್ಲೇ ಮತ್ತೊಂದು ತಮಿಳು ಸಿನಿಮಾ ಇನ್ನೊಂದು ವಿವಾದವನ್ನು ಸೃಷ್ಟಿಸಿದೆ.
ಹೌದು, ತಮಿಳು ನಟ ಶಿವಕಾರ್ತಿಕೇಯನ್ ಹಾಗೂ 'ಗಜನಿ' ನಿರ್ದೇಶಕ ಎ.ಆರ್. ಮುರುಗದಾಸ್ ಕಾಂಬಿನೇಷನ್ನಲ್ಲಿ ಬರ್ತಿರೋ 'ಮದರಾಸಿ' ವಿವಾದ ಸೃಷ್ಟಿಸಿರುವ ಸಿನಿಮಾ. ಈ ಸಿನಿಮಾ ಇದೇ ಸೆಪ್ಟೆಂಬರ್ 05ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಮದರಾಸಿ' ಸಿನಿಮಾದ ತುಣುಕುಗಳು ಕೂಡ ಇಷ್ಟ ಆಗಿದೆ. ಆದರೆ, 'ಮದರಾಸಿ' ಹಾಗೂ ಸಿನಿಮಾ ಪೋಸ್ಟರ್ ದಕ್ಷಿಣ ಭಾರತದ ಜನರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

'ಮದರಾಸಿ' ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ನಲ್ಲಿ ಅಂತಹದ್ದೇನಿದೆ? ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಯಾಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ? ದಕ್ಷಿಣ ಭಾರತದ ಜನರು ಕೆರಳುವಂತಹದ್ದು ಈ ಸಿನಿಮಾದ ಪೋಸ್ಟರ್ನಲ್ಲಿ ಏನಿದೆ? 'ಮದಾರಸಿ' ವಿರುದ್ಧ ಆಕ್ರೋಶಕ್ಕೆ ಕಾರಣಗಳೇನು? ಇವೆಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.
ಹಿಂದೊಂದು ಕಾಲವಿತ್ತು. ಉತ್ತರ ಭಾರತದ ಮಂದಿಗೆ ದಕ್ಷಿಣ ಭಾರತದಲ್ಲಿ ನಾಲ್ಕು ರಾಜ್ಯಗಳಿವೆ (ಈಗ ಐದು ಆಗಿವೆ) ಅನ್ನೋ ಅರಿವು ಇರಲಿಲ್ಲ. ತಮಿಳರನ್ನೂ ಸೇರಿಸಿಕೊಂಡು ಕನ್ನಡಿಗರನ್ನೂ, ತೆಲುಗು ಮಂದಿಯನ್ನೂ, ಮಲಯಾಳಿಗಳನ್ನೂ ಮದರಾಸಿಗಳೆಂದೇ ಭಾವಿಸಿದ್ದರು. ದಕ್ಷಿಣ ಭಾರತದವರನ್ನು ಅವರು ಮದರಾಸಿಗಳು ಎಂದು ಕರೆಯುತ್ತಿದ್ದರು. ಆದರೆ, ಆಯಾ ರಾಜ್ಯದ ಭಾಷಾ ಹೋರಾಟಗಾರರು, ಸಿನಿಮಾ ತಾರೆಯರು ಸೇರಿದಂತೆ ಹಲವರು ತಮ್ಮ ಭಾಷೆಯ ಜನರಲ್ಲಿ ಅರಿವು ಮೂಡಿಸಿ, ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಇದರ ಪರಿಣಾಮ ಈಗ ದಕ್ಷಿಣ ಭಾರತದಲ್ಲಿ ಆಯಾ ಭಾಷೆ ಮಾತಾಡುವ ಜನರನ್ನು ಗುರುತಿಸುವುದು ಉಂಟು. ಅಷ್ಟೇ ಅಲ್ಲದೆ ರಾಜ್ಯದ ನಕ್ಷೆಗಳು ಕೂಡ ಬದಲಾಗಿವೆ.
ಆದರೆ, ಎ.ಆರ್. ಮುರುಗದಾಸ್ ತಮ್ಮ ಸಿನಿಮಾಗೆ 'ಮದರಾಸಿ' ಅಂತ ಟೈಟಲ್ ಇಟ್ಟು ಕೆಂಗಣ್ಣಿಗೆ ಗುರಿಯಾಗಿದ್ದರು. ಮತ್ತೆ ದಕ್ಷಿಣ ಭಾರತದ ಅಂದರೆ, 'ಮದರಾಸಿ' ಅನ್ನೋ ಬ್ರ್ಯಾಂಡ್ ಅನ್ನು ಹುಟ್ಟಾಕುವುದಕ್ಕೆ ಹೊರಟಿಸಿದ್ದಾರೆ ಅಂತ ಕೆಲವರು ಕಣ್ಣು ಕೆಂಪಗೆ ಮಾಡಿಕೊಂಡಿದ್ದರು. ಮುರುಗದಾಸ್ ಹಾಗೂ ಸಿನಿಮಾದ ಶೀರ್ಷಿಕೆಯ ಬಗ್ಗೆ ದಕ್ಷಿಣ ಭಾರತದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರ ಸಿನಿಮಾ ಪೋಸ್ಟರ್ ಹಲವರನ್ನು ಕೆರಳಿಸಿದೆ.

'ಮದರಾಸಿ' ಪೋಸ್ಟರ್ ನೋಡಿ ದಕ್ಷಿಣ ಭಾರತದ ಜನರು ಆಕ್ರೋಶಕ್ಕೆ ಒಳಗಾಗಿದ್ದು ಯಾಕೆಂದರೆ, 'ಮದರಾಸಿ' ಚಿತ್ರದ ಪೋಸ್ಟರ್ನಲ್ಲಿರುವ ನಕ್ಷೆ. ಈ ಪೋಸ್ಟರ್ನಲ್ಲಿ ಇಡೀ ದಕ್ಷಿಣ ಭಾರತದ ರಾಜ್ಯಗಳನ್ನು ಒಟ್ಟುಗೂಡಿಸಿದ ನಕ್ಷೆಯನ್ನು ಇಟ್ಟಿದ್ದಾರೆ. ಇದನ್ನು ನೋಡಿದ ಮೇಲೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸಿತ್ತಿದ್ದಾರೆ. ದಕ್ಷಿಣ ಭಾರತದ ಜನರು 'ಮದರಾಸಿ' ಎಂಬ ಹೆಸರಿನಿಂದ ಗುರುತಿಸುವುದನ್ನು ಒಪ್ಪುವುದಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.
ಅಷ್ಟಕ್ಕೂ ಎ.ಆರ್. ಮುರುಗದಾಸ್ ಈ ನಕ್ಷೆಯ ಮೂಲಕ ಏನು ಹೇಳುವುದಕ್ಕೆ ಹೊರಟಿದ್ದಾರೆ? ಕಮಲ್ ಹಾಸನ್ರಂತೆ ತಮಿಳು ಭಾಷೆಯೇ ದೊಡ್ಡದು ಎಂದು ಸಾಬೀತು ಮಾಡುವುದಕ್ಕೆ ಹೊರಟಿದ್ದಾರೆಯೇ? 'ಮದರಾಸಿ' ಅಂತ ಟೈಟಲ್ ಇಟ್ಟಿದ್ದೇಕೆ? ಆ ಟೈಟಲ್ಗಾಗಿ ನಕ್ಷೆಯನ್ನು ಬಳಸಿದರೇ? ಇದರ ಹಿಂದೆ ಏನಾದರೂ ಅಜೆಂಡಾ ಇದೆಯಾ? ಇಲ್ಲಾ ಯಾರದ್ದಾದರೂ ಕೈವಾಡವಿದೆಯೇ? ಈ ಪ್ರಶ್ನೆಗಳಿಗೆ ದಕ್ಷಿಣ ಭಾರತದ ಜನರು ಉತ್ತರ ಹುಡುಕುತ್ತಿದ್ದಾರೆ.


Click it and Unblock the Notifications











