"ರಾಣಿಯರ ಸೇವೆ ಮಾಡಲು ಬಂದಿದ್ದರು" ತೆಲುಗು ಜನರ ವಿರುದ್ಧ ವಿವಾದಾತ್ಮಕ ಹೇಳಿಕೆ; ನಟಿ ಕಸ್ತೂರಿ ಬಂಧನ
ಕ್ರೇಜಿಸ್ಟಾರ್ ರವಿಚಂದ್ರನ್ 'ಜಾಣ', ರಮೇಶ್ ಅರವಿಂದ್ ಸಿನಿಮಾ 'ತುತ್ತಾಮುತ್ತ'ದಂತಹ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಕಸ್ತೂರಿ ಶಂಕರ್ ಅನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ತೆಲುಗು ಜನರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಈ ಬಹುಭಾಷಾ ನಟಿಯನ್ನು ಹೈದರಾಬಾದ್ನ ಗಚಿಬೌಲಿಯಲ್ಲಿ ಸೈಬರಾವಾದ್ ಪೊಲೀಸರ ನೆರವಿನಿಂದ ಬಂಧಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ, ಕಸ್ತೂರಿ ಶಂಕರ್ ಅವರನ್ನು ಹೈದರಾಬಾದ್ನಲ್ಲಿ ಬಂಧಿಸಿ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಯಲ್ಲಿ ನಟಿಸಿರುವ ಕಸ್ತೂರಿ ಶಂಕರ್ ತನ್ನ ವಿವಾದಾತ್ಮಕ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲವು ದಿನಗಳ ಹಿಂದೆ ಕಸ್ತೂರಿ ಶಂಕರ್ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ತೆಲುಗು ಮಂದಿಯ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ವಿವಾದಕ್ಕೆ ತಿರುಗಿ ತೆಲುಗು ಮಂದಿಯ ಕೋಪಕ್ಕೆ ಕಾರಣವಾಗಿತ್ತು. ಅಸಲಿಗೆ ಕಸ್ತೂರಿ ಶಂಕರ್ ಬಂಧಿಸುವಂತಹ ಹೇಳಿಕೆ ಏನು ಕೊಟ್ಟಿದ್ದರು? ಇಷ್ಟೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಇತ್ತೀಚೆಗೆ ಚೆನ್ನೈನಲ್ಲಿ ಹಿಂದೂ ಮಕ್ಕಳ್ ಕಚ್ಚಿ ನೇತೃತ್ವದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ನಟಿ ಕಸ್ತೂರಿ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ "ತಮಿಳುನಾಡಿಗೆ ರಾಜರ ಕಾಲದಲ್ಲಿ ಅರಮನೆಯ ರಾಣಿಯರ ಸೇವೆಗೆಂದು ಬಂದು ನೆಲೆಸಿದವರು ತೆಲುಗು ಜನರು. ಗುರುತು ಗೊತ್ತಿಲ್ಲದೆ ಬಂದವರು ಈಗ ನಮ್ಮದು ತಮಿಳು ಜನಾಂಗ ಎಂದು ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದಾರೆ" ಎಂದು ಕಸ್ತೂರಿ ಶಂಕರ್ ಮಾತನಾಡಿದ್ದರು. ಆ ಹೇಳಿಕೆ ಇಂದು ಬಂಧನದವರೆಗೂ ಕರೆದುಕೊಂಡು ಬಂದು ನಿಲ್ಲಿಸಿದೆ.
ಕಸ್ತೂರಿ ಶಂಕರ್ ಹೇಳಿಕೆಯನ್ನು ಖಂಡಿಸಿ ತೆಲುಗು ಸಂಘಟನೆಗಳು ದೂರನ್ನು ದಾಖಲಿಸಿದ್ದರು. ಹಾಗೇ ರಾಜಕೀಯ ಮುಖಂಡರು, ಸೆಲೆಬ್ರೆಟಿಗಳು ಕೂಡ ಕಿಡಿಕಾರಿದ್ದರು. ಈ ನಟಿಯ ಹೇಳಿಕೆಯನ್ನು ಖಂಡಿಸಿ ತೆಲುಗು ಜನರು ತಮಿಳುನಾಡಿನಲ್ಲಿ ಪ್ರತಿಭಟನೆಯನ್ನು ನಡೆಸಿದರು. ಹೀಗಾಗಿ ತಮಿಳುನಾಡು ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಕಸ್ತೂರಿ ಶಂಕರ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಮಾಡುವುದಕ್ಕೆ ಮುಂದಾಗಿದ್ದರು.

ಆದರೆ, ಕಸ್ತೂರಿ ಶಂಕರ್ ಚೆನ್ನೈನ ಅವರ ಮನೆಯಲ್ಲಿ ಇರಲಿಲ್ಲ. ಅಲ್ಲದೆ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಸ್ತೂರಿ ಶಂಕರ್ ಅವರ ಬಂಧನಕ್ಕೆ ಚೆನ್ನೈ ಪೊಲೀಸರು ಹುಡುಕಾಟ ನಡೆಸಿದ್ದರು. ವಿಶೇಷ ತಂಡ ರಚನೆ ಮಾಡಿ ಕಸ್ತೂರಿ ಶಂಕರ್ ಅವರನ್ನು ಹೈದರಾಬಾದ್ನ ಪೊಲೀಸರ ನೆರವಿನಿಂದ ಕಸ್ತೂರಿ ಶಂಕರ್ ಅವರನ್ನು ಬಂಧಿಸಲಾಗಿದೆ.
ಕಸ್ತೂರಿ ಶಂಕರ್ ತಮ್ಮ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ತನ್ನ ಎಕ್ಸ್ ಖಾತೆಯ ಮೂಲಕ ಕ್ಷಮೆಯನ್ನು ಕೇಳಿದ್ದರು. ಆದರೂ ವಿವಾದ ತಣ್ಣಗಾಗಲಿಲ್ಲ. ಇತ್ತ ನ್ಯಾಯಾಲಯ ಕೂಡ ಜಾಮೀನು ಅರ್ಜಿಯನ್ನು ವಜಗೊಳಿಸಿದೆ. ಸದ್ಯ ಬಂಧನಕ್ಕೆ ಒಳಗಾಗಿರುವ ಬಹುಭಾಷಾ ನಟಿ ಸುಖಾ ಸುಮ್ಮನೆ ಹೇಳಿಕೆಗಳನ್ನು ಕೊಟ್ಟು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರು.


Click it and Unblock the Notifications











