ಕನ್ನಡದಲ್ಲಿಯೂ ಬರಲಿದೆ ಆರ್ಆರ್ಆರ್: ಯುಗಾದಿಗೆ ಸಿಹಿ ಸುದ್ದಿ ನೀಡಿದ ರಾಜಮೌಳಿ
'ಬಾಹುಬಲಿ' ಸರಣಿಯ ಬಳಿಕ ಎಸ್.ಎಸ್. ರಾಜಮೌಳಿ ನಿರ್ದೇಶಿಸಿರುವ 'ಆರ್ಆರ್ಆರ್' ಭಾರಿ ಕುತೂಹಲ ಕೆರಳಿಸಿದೆ. ಜೂನಿಯರ್ ಎನ್ಟಿಆರ್, ರಾಮ್ ಚರಣ್, ಸಮುದ್ರಖಣಿ, ಅಜಯ್ ದೇವಗನ್ ಮುಂತಾದವರು ನಟಿಸಿರುವ ಸಿನಿಮಾ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ವೇಳೆಗೆ ಚಿತ್ರಮಂದಿರಕ್ಕೆ ಬರಲಿದೆ ಎನ್ನಲಾಗಿದೆ.
ಈ ನಡುವೆ ರಾಜಮೌಳಿ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆರ್ಆರ್ಆರ್ ಸಿನಿಮಾ ಕನ್ನಡ ಅವತರಣಿಕೆಯಲ್ಲಿಯೂ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಡಬ್ಬಿಂಗ್ ವಿರೋಧಿ ವಾತಾವರಣವಿದ್ದಿದ್ದರಿಂದ ಬಾಹುಬಲಿ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿರಲಿಲ್ಲ. ಹೀಗಾಗಿ ಭಾಷೆ ಅರ್ಥವಾಗದವರೂ ತೆಲುಗು ಮೂಲ ಅವತರಣಿಕೆಯನ್ನೇ ವೀಕ್ಷಿಸಿದ್ದರು. ಆರ್ಆರ್ಆರ್ ಸಿನಿಮಾ ಈ ಕಷ್ಟವನ್ನು ನೀಡುವುದಿಲ್ಲ.

ಹತ್ತು ಭಾಷೆಗಳಲ್ಲಿ ಸಿನಿಮಾ
2021ರ ಜನವರಿ 8ರಂದು 'ಆರ್ಆರ್ಆರ್'ಅನ್ನು ಬಿಡುಗಡೆ ಮಾಡುವುದಾಗಿ ದಿನಾಂಕ ನಿಗದಿಗೊಳಿಸಲಾಗಿದೆ. ಅಂದು ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಅಲ್ಲದೆ ಕನ್ನಡದಲ್ಲಿಯೂ ತೆರೆಕಾಣಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಒಟ್ಟು ಹತ್ತು ಭಾಷೆಗಳಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ರಾಮ್ ಚರಣ್ ಜನ್ಮದಿನದ ಗಿಫ್ಟ್
ಮಾರ್ಚ್ 27 ನಟ ರಾಮ್ ಚರಣ್ ಅವರ ಜನ್ಮದಿನ. ಅವರ ಜನ್ಮದಿನದ ಉಡುಗೊರೆಯಾಗಿ ಅಭಿಮಾನಿಗಳಿಗಾಗಿ ಆರ್ಆರ್ಆರ್ ಚಿತ್ರತಂಡ ಬುಧವಾರ ಸಿನಿಮಾದ ಮೊದಲ ಪೋಸ್ಟರ್ ಮತ್ತು ಲೋಗೋವನ್ನು ಬಿಡುಗಡೆ ಮಾಡುತ್ತಿದೆ. ಇದು ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ.

ಐತಿಹಾಸಿಕ ಕಥೆ
ಬಹುಕೋಟಿ ವೆಚ್ಚದಲ್ಲಿ ಅದ್ಧೂರಿ ಸಿನಿಮಾಗಳನ್ನು ನಿರ್ದೇಶಿಸುವುದಕ್ಕೆ ಹೆಸರಾಗಿರುವ ರಾಜಮೌಳಿ, 'ಆರ್ಆರ್ಆರ್'ನಲ್ಲಿ ಸ್ವಾತಂತ್ರ್ಯಪೂರ್ವದ ಕಥೆಯನ್ನು ಹೇಳುತ್ತಿದ್ದಾರೆ. 2018ರ ನವೆಂಬರ್ನಲ್ಲಿಯೇ ಚಿತ್ರೀಕರಣ ಆರಂಭವಾಗಿದ್ದರೂ, ಸಂಕೀರ್ಣ ಕಥಾವಸ್ತು ಇರುವುದರಿಂದ ಚಿತ್ರೀಕರಣ ನಿಧಾನವಾಗಿ ಸಾಗಿತ್ತು.

ಚಿತ್ರದಿಂದ ಅಲಿಯಾ ಭಟ್ ಔಟ್?
ಕೊರೊನಾ ವೈರಸ್ ಭೀತಿಯ ಕಾರಣದಿಂದ ಚಿತ್ರೀಕರಣ ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಮುಂದಿನ ಸಂಕ್ರಾಂತಿಯಂದು ಚಿತ್ರ ಬಿಡುಗಡೆಯಾಗುವುದು ಅನುಮಾನ. ಅಲ್ಲದೆ, ಸಮಯ ಹೊಂದಾಣಿಕೆಯಾಗದ ಕಾರಣ ಅಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆದರೆ ಅಲಿಯಾ ಮೇ ತಿಂಗಳಲ್ಲಿ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.


Click it and Unblock the Notifications











