ಮೆಗಾಸ್ಟಾರ್ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ 'ಪುಷ್ಪ' ನಿರ್ದೇಶಕ ಸುಕುಮಾರ್: ಏನಿದು ಟ್ವಿಸ್ಟ್?
'ಪುಷ್ಪ', 'ರಂಗಸ್ಥಳಂ' ಅಂತ ರಗಡ್ ಸಿನಿಮಾಗಳನ್ನು ನಿರ್ದೇಶನ ಮಾಡುವ ಸುಕುಮಾರ್ ಟಾಲಿವುಡ್ನ ಬೇಡಿಕೆ ನಿರ್ದೇಶಕ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬ್ಲಾಕ್ಬಸ್ಟರ್ ಹಿಟ್ ಆದ ಬಳಿಕ ನಿರ್ದೇಶಕನಿಗೆ ಬೇಡಿಕೆ ಹೆಚ್ಚಾಗಿದೆ. ಸೂಪರ್ಸ್ಟಾರ್ಗಳು ತಮಗೆ ಸಿನಿಮಾ ಮಾಡುವಂತೆ ಸುಕುಮಾರ್ಗೆ ಗಂಟು ಬಿದ್ದಿದ್ದಾರಂತೆ. ಈ ಮಧ್ಯೆ ನಿನ್ನೆ ( ಫೆ 22) ಸುಕುಮಾರ್ ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿ ಮಾಡಿದ್ದರು. 'ಪುಷ್ಪ' ಚಿತ್ರದ ನಿರ್ದೇಶಕ ಮೆಗಾಸ್ಟಾರ್ ಚಿರಂಜೀವಿಗೆ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.
ಮೆಗಾಸ್ಟಾರ್ ಚಿರಂಜೀವಿಗೆ ನಿರ್ದೇಶನ ಮಾಡುವ ಅದೃಷ್ಟ ಎಲ್ಲಾ ನಿರ್ದೇಶಕರಿಗೂ ಸಿಗುವುದಿಲ್ಲ. ಅದರಲ್ಲಿ ಸುಕುಮಾರ್ಗೆ ಈ ಅವಕಾಶ ಸಿಕ್ಕಿರುವುದಕ್ಕೆ ಚಿರು ಫ್ಯಾನ್ಸ್ ಫಿದಾ ಆಗಿದ್ದರು. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತೆ ಎಂದು ಲೆಕ್ಕಾಚಾರ ಹಾಕಿದ್ದರು. ಒಂದೇ ದಿನದಲ್ಲಿ ಈ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಸುಕುಮಾರ್ ಹಾಗೂ ಚಿರಂಜೀವಿ ಸಿನಿಮಾಗೆ ಬಿಗ್ ಟ್ಚಿಸ್ಟ್ ಸಿಕ್ಕಿದೆ.

ಚಿರು-ಸುಕುಮಾರ್ ಕಥೆಯೇನು?
ಮೆಗಾಸ್ಟಾರ್ ಚಿರಂಜೀವಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು ಅಂತ ನಿರ್ಧರಿಸಿದ್ದಾರೆ. ಸದ್ಯ ಮೆಗಾಸ್ಟಾರ್ ಕೈಯಲ್ಲಿ ಬಿಗ್ ಪ್ರಾಜೆಕ್ಟ್ಗಳಿವೆ. ಈ ಮಧ್ಯೆ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಮೆಗಾಸ್ಟಾರ್ ಅನ್ನು ಭೇಟಿ ಮಾಡಿದ್ದಿ, ಟಾಲಿವುಡ್ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಸುಕುಮಾರ್ ಚಿರಂಜೀವಿಯನ್ನು ಭೇಟಿ ಮಾಡಿದ ಫೋಟೊವನ್ನು ಹಂಚಿಕೊಂಡಿದ್ದರು. ಅಲ್ಲಿಗೆ ಮೆಗಾಸ್ಟಾರ್ ಜೊತೆ ಸುಕುಮಾರ್ ಸಿನಿಮಾ ಪಕ್ಕ ಅಂತಲೇ ಸುದ್ದಿಗೂ ಹಬ್ಬಿತ್ತು. ಆದರೆ, ಒಂದೇ ದಿನದಲ್ಲಿ ಈ ಕಹಾನಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಚಿರು ಸಿನಿಮಾ ನಿರ್ದೇಶನ ಮಾಡುತ್ತಿಲ್ಲ ಸುಕುಮಾರ್
ಚಿರಂಜೀವಿಯನ್ನು ಭೇಟಿ ಮಾಡುತ್ತಿದ್ದಂತೆ ಸುಕುಮಾರ್ ಖುಷಿಯಲ್ಲಿ ಫೋಟೊ ಹಂಚಿಕೊಂಡಿದ್ದರು. ಜೊತೆಗೆ " ಕನಸು ನನಸಾಯಿತು. ಮೆಗಾಸ್ಟಾರ್ಗಾಗಿ ಮೆಗಾಫೋನ್ ಹಿಡಿಯಲಿದ್ದೇನೆ. ಶೀಘ್ರದಲ್ಲಿಯೇ ಸುದ್ದಿಯನ್ನು ಹಂಚಿಕೊಳ್ಳುತ್ತೇನೆ." ಎಂದಿದ್ದರು. ಈ ಫೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮೆಗಾಸ್ಟಾರ್ ಹಾಗೂ ಸುಕುಮಾರ್ ಕಾಂಬಿನೇಷನ್ ಸಿನಿಮಾ ಬಗ್ಗೆ ಟಾಕ್ ಶುರುವಾಗಿತ್ತು. ಆದ್ರೀಗ ಸುಕುಮಾರ್ ಮೆಗಾಸ್ಟಾರ್ಗಾಗಿ ಸಿನಿಮಾ ಮಾಡುತ್ತಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ.

ಸಿನಿಮಾ ಅಲ್ಲ ಜಾಹೀರಾತು ನಿರ್ದೇಶನ
ಹೌದು. ಟಾಲಿವುಡ್ನ ಸಕ್ಸಸ್ಫುಲ್ ಡೈರೆಕ್ಟರ್ ಸುಕುಮಾರ್ ಮೆಗಾಸ್ಟಾರ್ ಚಿರಂಜೀವಿಗೆ ಸಿನಿಮಾ ಮಾಡುತ್ತಿಲ್ಲ. ಬದಲಾಗಿ ಜಾಹೀರಾತನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ನಿನ್ನೆ (ಫೆ 22) ಮೆಗಾಸ್ಟಾರ್ ಅನ್ನು ಭೇಟಿ ಮಾಡಿದ್ದಾರೆ. ಇದನ್ನೇ ಮೆಗಾಸ್ಟಾರ್ ಹಾಗೂ ಸುಕುಮಾರ್ ಫ್ಯಾನ್ಸ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇನೆ ಎಂದು ಸ್ವತ: ಸುಕುಮಾರ್ ಹೇಳಿರುವುದರಿಂದ ಸಿನಿಮಾನಾ? ಜಾಹೀರಾತಾ? ಅನ್ನುವುದನ್ನು ತಿಳಿಯಲು ಸ್ವಲ್ಪ ಸಮಯ ಕಾಯಬೇಕಿದೆ.

ಚಿರು-ಸುಕುಮಾರ್ ಇಬ್ಬರೂ ಬ್ಯುಸಿ
ಚಿರಂಜೀವಿ ಅಭಿನಯದ 'ಆಚಾರ್ಯ' ಸಿನಿಮಾ ಬಿಡುಗಡೆ ಸಜ್ಜಾಗಿ ನಿಂತಿದೆ. ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇದರೊಂದಿಗೆ ಬಿಗ್ ಪ್ರಾಜೆಕ್ಟ್ಗಳಿಗೆ ಸಹಿ ಹಾಕಿದ್ದಾರೆ. ಇನ್ನೊಂದು ಸುಕುಮಾರ್ 'ಪುಷ್ಪ ಪಾರ್ಟ್ 2'ಗೆ ತಯಾರಿ ನಡೆಸುತ್ತಿದ್ದಾರೆ. ಏಪ್ರಿಲ್ ತಿಂಗಳಿಂದ ಸಿನಿಮಾ ಶೂಟಿಂಗ್ ಹೋಗುವ ಸಾಧ್ಯತೆಯಿದೆ. ಹೀಗಾಗಿ ಇಬ್ಬರೂ ಸಿನಿಮಾ ಮಾಡುವುದು ಸತ್ಯಕ್ಕೆ ದೂರವಾದ ಮಾತು ಎನ್ನುತ್ತಿದೆ ಟಾಲಿವುಡ್. ಆದರೆ, ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ.


Click it and Unblock the Notifications











