"ಇದು ಅಸಾಧಾರಣ ಸಿನಿಮಾ.. ಭಾವನೆ, ದೃಶ್ಯ ವೈಭವ, ಆಧ್ಯಾತ್ಮ ಎಲ್ಲವೂ ಅದ್ಭುತ"; 'ಕಣ್ಣಪ್ಪ' ವಿಮರ್ಶೆ ಮಾಡಿದ ರಜನಿ
ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ದಿಗ್ಗಜ ಮೋಹನ್ ಬಾಬು ಆತ್ಮೀಯ ಗೆಳೆಯರು. ಒಟ್ಟಿಗೆ ಸಿನಿಮಾಗಳನ್ನು ಮಾಡಿದ್ದಷ್ಟೇ ಅಲ್ಲ. ರಿಯಲ್ ಲೈಫ್ನಲ್ಲೂ ಇವರಿಬ್ಬರೂ ಉತ್ತಮ ಗೆಳೆಯರು. ರಜನಿಕಾಂತ್ ಹೈದರಾಬಾದ್ಗೆ ಹೋದಾಗ ಬಿಡುವಿನ ಸಮಯದಲ್ಲಿ ಮೋಹನ್ ಬಾಬು ಭೇಟಿ ಮಾಡಿಯೇ ಬರುತ್ತಾರೆ. ಈಗ ಮೋಹನ್ ಬಾಬು ಪುತ್ರ ಬಿಗ್ ಬಜೆಟ್ನಲ್ಲಿ ನಿರ್ಮಿಸಿರುವ 'ಕಣ್ಣಪ್ಪ' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.
ರಜನಿಕಾಂತ್ ಬಿಡುಗಡೆಗೂ ಮುನ್ನವೇ 'ಕಣ್ಣಪ್ಪ' ಸಿನಿಮಾವನ್ನು ವೀಕ್ಷಿಸಿದ್ದಾರೆ. ಇಂತಹದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ಮೋಹನ್ ಬಾಬು ಜೊತೆ ಸೂಪರ್ಸ್ಟಾರ್ ರಜನಿ ನಟಿಸಿದ್ದ 'ಪೆದರಾಯುಡು' ಸಿನಿಮಾ. ಈ ಸಿನಿಮಾ 30 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಮತ್ತೆ ರಜನಿ ಹಾಗೂ ಮೋಹನ್ ಬಾಬು ಇಬ್ಬರೂ ಒಟ್ಟಿಗೆ ಸೇರಿದ್ದರು. ಈ ವೇಳೆ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಣ್ಣಪ್ಪ' ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

ರವಿ ರಾಜ ಪಿನಿಸೆಟ್ಟಿ ಸೂಪರ್ ಹಿಟ್ 'ಪೆದರಾಯುಡು' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. 'ಪೆದರಾಯುಡು' ಸಿನಿಮಾ ಜೂನ್ 15, 1995ರಂದು ತೆರೆಕಂಡಿದ್ದು, ಇದೀಗ ಈ ಸಿನಿಮಾ 30 ವರ್ಷಗಳನ್ನು ಪೂರೈಸಿದೆ. ಅಂದಿನ ಕಾಲಕ್ಕೆ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಸಿನಿಮಾದಲ್ಲಿ ಕಥೆ, ಅಭಿನಯ ಹಾಗೂ ಆಕ್ಷನ್ ಸೀಕ್ವೆನ್ಸ್ ಗಮನ ಸೆಳೆದಿದ್ದವು. ಹೀಗಾಗಿ ತೆಲುಗು ಚಿತ್ರರಂಗದಲ್ಲಿ ಈ ಸಿನಿಮಾ ನೆನಪಿನಲ್ಲಿ ಉಳಿಯುವ ಸಿನಿಮಾಗಳ ಸಾಲಿಗೆ ಸೇರಿಕೊಂಡಿದೆ. ಈ ಚಿತ್ರ 30 ವರ್ಷ ಪೂರೈಸಿದ ಬೆನ್ನಲ್ಲೇ ಇಬ್ಬರೂ ಸ್ಟಾರ್ ನಟರು ಮತ್ತೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಾಗೆಯೇ ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಸಿನಿಮಾ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮೋಹನ್ ಬಾಬು ನಿರ್ಮಿಸಿ, ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಣ್ಣಪ್ಪ' ಸಿನಿಮಾ ಜೂನ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ 'ಕಣ್ಣಪ್ಪ' ರಿಲೀಸ್ಗೆ ಸಿದ್ಧತೆಗಳಾಗಿವೆ. ವಿಷ್ಣು ಮಂಚು ಶಿವನ ಭಕ್ತ ಕಣ್ಣಪ್ಪನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸೂಪರ್ಸ್ಟಾರ್ ರಜನಿಕಾಂತ್ ವೀಕ್ಷಿಸಿ ಕೊಂಚ ಭಾವುಕರಾಗಿದ್ದು ಎಂದು ಹೇಳಲಾಗಿದೆ.
ರಜನಿಕಾಂತ್ ವಿಶಿಷ್ಠ ಎನಿಸುವ ಸಿನಿಮಾಗಳನ್ನು ವೀಕ್ಷಣೆ ಮಾಡುತ್ತಾರೆ. ಬಳಿಕ ಆ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಈ 'ಕಣ್ಣಪ್ಪ' ಸಿನಿಮಾ ವೀಕ್ಷಿಸಿದ ಬಳಿಕ ರಜನಿ "ಇದು ಅಸಾಧಾರಣ ಸಿನಿಮಾ. ಭಾವನೆ, ದೃಶ್ಯ ವೈಭವ ಹಾಗೂ ಆಧ್ಯಾತ್ಮ ಎಲ್ಲವೂ ಅದ್ಭುತವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೋಹನ್ ಬಾಬು, ವಿಷ್ಣು ಮಂಚು ಹಾಗೂ 'ಕಣ್ಣಪ್ಪ' ತಂಡಕ್ಕೆ ಸೂಪರ್ಸ್ಟಾರ್ ಬೆಂಬಲ ಸಿಕ್ಕಂತೆ ಆಗಿದೆ.

ಇನ್ನು ರಜನಿಕಾಂತ್ ಬಗ್ಗೆಯೂ ಮೋಹನ್ ಬಾಬು ಅದ್ಭುತ ಮಾತುಗಳನ್ನು ಆಡಿದ್ದಾರೆ. "22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ನನಗೆ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ" ಎಂದು ಗೆಳೆಯ ರಜನಿ ಬಗ್ಗೆ ಮೋಹನ್ ಬಾಬು ಖುಷಿಯಿಂದ ಮಾತಾಡಿದ್ದಾರೆ.
'ಕಣ್ಣಪ್ಪ' ಸಿನಿಮಾವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಮೋಹನ್ ಬಾಬು ಈ ಸಿನಿಮಾದ ನಿರ್ಮಾಪಕ. ವಿಷ್ಣು ಮಂಚುಗೆ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ಗಳು ಸಾಥ್ ಕೊಟ್ಟಿದ್ದಾರೆ. ಮೋಹನ್ ಬಾಬು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್ ಸೇರಿದಂತೆ ಸಿನಿಮಾರಂಗದ ದಿಗ್ಗಜರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮಲ್ಟಿಸ್ಟಾರರ್ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಜೂನ್ 27 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ.


Click it and Unblock the Notifications











