ತಪ್ಪು ಡೆಲಿವರಿ ತಂದ ಆಪತ್ತು; ಕೋಪದಲ್ಲಿ ನಟನ ಕಾರಿನ ಮೇಲೆ ಕಲ್ಲು ತೂರಿ ಜೈಲು ಸೇರಿದ ಡೆಲಿವರಿ ಬಾಯ್ಸ್
ದಿನ ಬೆಳಗಾದರೆ ಫುಡ್ ಡೆಲಿವರಿ ಬಾಯ್ಸ್ ಹಲ್ಲೆ ಮಾಡಿದರು ಅಂತ ಸುದ್ದಿ ನೋಡುವುದಕ್ಕೆ ಇಲ್ಲ. ಇಲ್ಲವೇ ಫುಡ್ ಡಿಲಿವರಿ ಬಾಯ್ಸ್ ಮೇಲೆ ಗ್ರಾಹಕರೇ ಹಲ್ಲೆ ಮಾಡಿದರು ಅಂತಾನೂ ಸುದ್ದಿ ಬರುತ್ತೆ. ಬೆಂಗಳೂರು ಅಷ್ಟೇ ಅಲ್ಲ, ದೇಶದ ನಾನಾ ಕಡೆಯಿಂದ ಇಂತಹ ಸುದ್ದಿಗಳನ್ನು ಪ್ರತಿದಿನ ಓದುವುದಕ್ಕೆ ಸಿಗುತ್ತಲೇ ಇರುತ್ತೆ. ಆದರೆ, ಒಬ್ಬರ ಸೆಲೆಬ್ರೆಟಿಯ ಹೆಸರು ಇಂತಹ ವಿವಾದದಲ್ಲಿ ಸಿಕ್ಕಿಕೊಂಡರೇ..
ಹೌದು, 'ರಾಜು ವೆಡ್ಸ್ ರಾಂಬೈ' ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿರುವ ಯುವ ನಟ ಅಖಿಲ್ ರಾಜ್ ಹಾಗೂ ಫುಡ್ ಡಿಲಿವರಿ ಬಾಯ್ ನಡುವಿನ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇವಲ ಒಂದು ಪಾರ್ಸೆಲ್ ಅನ್ನು ತಪ್ಪಾಗಿ ಡಿಲಿವರಿ ಮಾಡಿದ ಕಾರಣಕ್ಕೆ ಶುರುವಾದ ಸಣ್ಣ ಜಗಳವೀಗ ನಟನ ಕಾರಿನ ಮೇಲಿನ ಕಲ್ಲು ತೂರಾಟ ಮಾಡುವವರೆಗೆ ಬಂದು ನಿಂತಿದೆ.

ಅಖಿಲ್ ರಾಜ್ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ಆರೋಪದ ಮೇಲೆ ಪೊಲೀಸರು ಡಿಲಿವರಿ ಬಾಯ್ಸ್ ಅನ್ನು ಬಂಧಿಸಿದ್ದಾರೆ. ಹೈದರಾಬಾದ್ನ ಗಚಿಬೌಲಿ ಪೊಲೀಸರು ಸದ್ಯ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಡೆಲಿವರಿ ಬಾಯ್ ಹಾಗೂ ಆತನ ಗ್ಯಾಂಗ್ ಅನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಅಷ್ಟಕ್ಕೂ ಡಿಲಿವರಿ ಬಾಯ್ ಹಾಗೂ ನಟನ ನಡುವಿನ ವಿವಾದವೇನು? ತಿಳಿಯುವುದಕ್ಕೆ ಮುಂದೆ ಓದಿ.
ಈ ಕಿತ್ತಾಟ ಶುರುವಾಗಿದ್ದು ಹೇಗೆ?
ಹೈದರಾಬಾದ್ನ ಕೊಂಡಾಪುರದ ಶ್ರೀರಾಮನಗರ ಕಾಲೋನಿಯಲ್ಲಿ ಕಳೆದ ಜೂನ್ 28 ರಂದು ತೆಲುಗು ನಟ ಹಾಗೂ ಡಿಲಿವೆರಿ ಬಾಯ್ ಮಧ್ಯೆ ಕಿತ್ತಾಟ ನಡೆದಿದೆ. ಡಿಲಿವರಿ ಬಾಯ್ ರಮೇಶ್ ಎಂಬುವವರು ನಟನ ಎದುರಿಗೆ ಇರುವ ಅಪಾರ್ಟ್ಮೆಂಟ್ಗೆ ಕೊಡಬೇಕಿದ್ದ ನಾನ್ ವೆಜ್ ಬಿರಿಯಾನಿ ಪಾರ್ಸೆಲ್ ಅನ್ನು ಅಖಿಲ್ ರಾಜ್ ಅವರ ನಿವಾಸಕ್ಕೆ ಕೊಟ್ಟಿದ್ದ. ತಾನು ತಪ್ಪಾಗಿ ಡಿಲಿವರಿ ಮಾಡಿದ್ದನ್ನು ಅರಿತ ಆತ ಪಾರ್ಸೆಲ್ ಅನ್ನು ತೆಗೆದುಕೊಳ್ಳಲು ಹೋದಾಗ ಈ ಕಿತ್ತಾಟ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರೂ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ.
ಆರೋಪ-ಪ್ರತ್ಯಾರೋಪಗಳು ಏನು?
ಈ ಘಟನೆಗೆ ಸಂಬಂಧಿಸಿದಂತೆ ಡಿಲೆವರಿ ಬಾಯ್ ಮಾಡಿದ ಆರೋಪಕ್ಕೆ ನಟ ಅಖಿಲ್ ರಾಜ್ ಪ್ರತ್ಯಾರೋಪ ಮಾಡಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಕ್ಲುಲ್ಲಕ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ಅಖಿಲ್ ರಾಜ್ ಈಗ ಪೊಲೀಸ್ ಸ್ಟೇಷನ್ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಡೆಲಿವರಿ ಬಾಯ್ ಆರೋಪವೇನು? ತಪ್ಪಾಗಿ ಡಿಲೆವರಿ ಮಾಡಿದ ಬಳಿಕ ತಾನು ಕ್ಷಮೆ ಕೇಳಿದರೂ ನಟ ಅಖಿಲ್ ರಾಜ್ ತನ್ನ ಮೇಲೆ ಹಲ್ಲೆ ಮಾಡಲು ಬಂದರು. ನಟನ ತಾಯಿ ತನ್ನ ಮುಖಕ್ಕೆ ಉಗುಳಿ ಅವಮಾನಿಸಿದ್ದಾರೆಂದು ಡಿಲೆವರಿ ಬಾಯ್ ರಮೇಶ್ ಆರೋಪ ಮಾಡಿದ್ದನು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದನು.
ನಟ ಅಖಿಲ್ ರಾಜ್ ಹೇಳೋದೇನು? ಡಿಲಿವೆರಿ ಬಾಯ್ ರಮೇಶ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ. ಡೆಲಿವರಿ ಬಾಯ್ ಮಧ್ಯ ಸೇವನೆ ಮಾಡಿದ್ದ. ನನ್ನ ತಾಯಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಅವನು ವೈರಲ್ ಮಾಡಿರುವ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು, ಅದರಲ್ಲಿ ಸತ್ಯವಿಲ್ಲ ಎಂದು ನಟ ಅಖಿಲ್ ರಾಜ್ ಕೂಡ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಬಳಿಕ ಹೈದರಾಬಾದ್ನ ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಮಾನಹಾನಿ ದೂರನ್ನು ದಾಖಲಿಸಿದ್ದಾರೆ.
ದೇವಸ್ಥಾನಕ್ಕೆ ತೆರಳುವಾಗ ಕಾರಿನ ಮೇಲೆ ಅಟ್ಯಾಕ್
ನಟ ಅಖಿಲ್ ರಾಜ್ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಡಿಲಿವರಿ ಬಾಯ್ ರಮೇಶ್ ಕೆಂಡಾಮಂಡಲ ಆಗಿದ್ದಾನೆ. ನಿನ್ನೆ (ಜೂನ್ 30) ನಟ ಅಖಿಲ್ ರಾಜ್ ತಮ್ಮ ಪೋಷಕರೊಂದಿಗೆ ಕಾರಿನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ರಮೇಶ್ ಮತ್ತು ಆತನ ಸ್ನೇಹಿತರು ಕಾರನ್ನು ರಸ್ತೆಯಲ್ಲೇ ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನ ಮೇಲೆ ಕಲ್ಲುಗಳಿಂದ ಭೀಕರ ದಾಳಿ ಮಾಡುವುದಕ್ಕೆ ಮುಂದಾಗಿದ್ದರು.
ಪೊಲೀಸರಿಂದ 6 ಜನರ ಬಂಧನ
ನಟ ಅಖಿಲ್ ರಾಜ್ ಕಾರಿನ ಮೇಲೆ ಕಲ್ಲು ತೂರಾಟ ಯತ್ನ ನಡೆಯುತ್ತಿದ್ದಂತೆಯೇ ಗಚಿಬೌಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಟ ಅಖಿಲ್ ರಾಜ್ ಹಾಗೂ ಅವರ ಪೋಷಕರ ಮೇಲೆ ಹಲ್ಲೆಗೆ ಯತ್ನಿಸಿದ ಡೆಲಿವರಿ ಬಾಯ್ ರಮೇಶ್ ಹಾಗೂ ಅವನ ಸ್ನೇಹಿತರು ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೀಗ ಎರಡೂ ಕಡೆಯವರ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಒಂದು ಫುಡ್ ಪಾರ್ಸೆಲ್ ಇಷ್ಟೆಲ್ಲ ರಾದ್ಧಾಂತ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇಬ್ಬರ ಪರನೂ ಬ್ಯಾಟ್ ಬೀಸಿದ್ದಾರೆ.


Click it and Unblock the Notifications