ಔಟರ್ ರಿಂಗ್ ರೋಡ್ನಲ್ಲಿ ಭೀಕರ ಅಪಾಘತ ; 31 ವರ್ಷದ ಉದಯನ್ಮೋಖ ನಟ ನಿಧನ
ಹುಟ್ಟು ಉಚಿತ.. ಸಾವು ಖಚಿತ.. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಭರತ್ ಕಾಂತ್ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.
ಹೌದು, ಭರತ್ ಕಾಂತ್.. ತೆಲುಗಿನ ಉದಯೋನ್ಮುಖ ಕಲಾವಿದ. ಚಿತ್ರರಂಗದಲ್ಲಿ ಈಗಷ್ಟೇ ಒಂದೊಂದೇ ಮೆಟ್ಟಿಲನ್ನೇರುತ್ತಿದ್ದ ಭರತ್ ನಾಯಕ್ '' ಟೆಂಟ್'' ಮತ್ತು ''ಗ್ರಾಮಂ'' ಸೇರಿದಂತೆ ಕೆಲ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು. ''ಮ್ಯಾರೇಜ್ ಬ್ಯಾಚುಲರ್''.. ''ಮಚ್ಚಿನಿಚ್ಚಿ ಬಂದ ನೇರಂ''.. ''ಆಟೋ ಲವ್'' ಮುಂತಾದ ಕಿರುಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

31 ವರ್ಷದ ಭರತ್ ಕಾಂತ್, ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಕನಸು ಕಂಡಿದ್ದರು. ಆದರೆ ವಿಧಿ ಆಟ ಬೇರೆಯೇ ಆಗಿತ್ತು. ಹೈದರಾಬಾದ್ನ ಆದಿ ಬಟ್ಲಾ ಔಟರ್ ರಿಂಗ್ ರೋಡ್ ನಲ್ಲಿ ತಮ್ಮ ಸ್ನೇಹಿತ ಮತ್ತು ಛಾಯಾಗ್ರಾಹಕ ಸಾಯಿ ತ್ರಿಲೋಕ್ ಜೊತೆ ಕಾರ್ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ನಡೆದ ಭೀಕರ ಅಪಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಎಕ್ಸಿಟ್ ನಂಬರ್ 12ರ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿದ್ದ ಡಿವೈಡರ್ಗೆ ಅಪ್ಪಳಿಸಿ, ನಂತರ ಎದುರಿನಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಭರತ್ ಕಾಂತ್ ಸಾವನ್ನಪ್ಪಿದ್ದಾರೆ.
ಈ ಭೀಕರ ಅಪಘಾತದಲ್ಲಿ ಭರತ್ ಕಾಂತ್ ಜೊತೆಗಿದ್ದ ಛಾಯಾಗ್ರಾಹಕ ಸಾಯಿ ತ್ರಿಲೋಕ್ ಕೂಡ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಬದುಕಿ ಬಾಳಬೇಕಿದ್ದ ಚಿತ್ರರಂಗದಲ್ಲಿ ಹೆಸರು ಮಾಡಬೇಕಿದ್ದ ಈ ಇಬ್ಬರು ಪ್ರತಿಭಾವಂತರ ಅಗಲಿಕೆಯ ಸುದ್ದಿ ಸದ್ಯ ತೆಲುಗು ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡೆದಿದೆ.
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರಾಥಮಿಕ ವರದಿಗಳಂತೆ, ಅತಿ ವೇಗದ ಚಾಲನೆಯೇ ಈ ದುರ್ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ನೆಲ್ಲೂರು ಮೂಲದ ಭರತ್ ಕಾಂತ್, ಕೇವಲ ನಟ ಮಾತ್ರ ಆಗಿರಲಿಲ್ಲ. ಅತ್ಯುತ್ತಮ ಡ್ಯಾನ್ಸರ್ ಕೂಡ ಆಗಿದ್ದರು. ಕಂಟೆಂಟ್ ಕ್ರಿಯೇಟರ್ ಆಗಿಯೂ ಕೂಡ ಗುರುತಿಸಿಕೊಂಡಿದ್ದ ಭರತ್ ಕಾಂತ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 40,000 ಜನ ಹಿಂಬಾಲಿಸುತ್ತಿದ್ದರು. ಯೂಟ್ಯೂಬ್ನಲ್ಲಿ 30,000 ಸಬ್ ಸ್ರೈಬರ್ಸ್ ಇದ್ದರು.
ಭರತ್ ಕಾಂತ್ ಅವರ ನಿಧನದ ಸುದ್ದಿಯಿಂದ ಇವರ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಆಘಾತಕ್ಕೀಡಾಗಿದ್ದು, ''ಬಿಗ್ ಬಾಸ್'' ಖ್ಯಾತಿಯ ಅಶು ರೆಡ್ಡಿ ಸೇರಿದಂತೆ ತೆಲುಗು ಚಿತ್ರರಂಗ ಮತ್ತು ಕಿರುತೆರೆಯ ಹಲವರು ಭರತ್ ಅವರ ನಿಧನಕ್ಕೆ ತೀವೃ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.
ಭರತ್ ಕಾಂತ್ ಕೊನೆಯದಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ, ಬ್ಯಾಂಕಾಕ್ನಲ್ಲಿನ ತಮ್ಮ ಫೋಟೊ ಹಂಚಿಕೊಂಡಿದ್ದರು. ನಾನು ಈ ಮಾತು ಹೇಳಲೇಬೇಕು.. ನೀನು ತುಂಬಾ ಸುಂದರ ಎಂದು ಬರೆದಿದ್ದರು. ಈ ಪೋಸ್ಟ್ ನೋಡಿ ಈಗ ಹಲವರು ಭಾವುಕರಾಗಿದ್ದಾರೆ.
ಅಂದ್ಹಾಗೇ ಹೈದರಾಬಾದ್ನ ಈ ಔಟರ್ ರಿಂಗ್ ರೋಡ್ ನಲ್ಲಿ ಮೇಲಿಂದ ಮೇಲೆ ಇಂತಹ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಆದರೂ ಕೂಡ ರಸ್ತೆ ಸುರಕ್ಷತಾ ಕ್ರಮವನ್ನು ಅಳವಡಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ.


Click it and Unblock the Notifications