ನಟ ಕತ್ತಿ ಮಹೇಶ್ಗೆ ಅಪಘಾತ: ತೀವ್ರ ಗಂಭೀರ ಸ್ಥಿತಿ
ತೆಲುಗಿನ ಸಿನಿಮಾ ವಿಮರ್ಶಕ, ನಟ, ಮಾಜಿ ಬಿಗ್ಬಾಸ್ ಸ್ಪರ್ಧಿ ಆಗಿರುವ ಕತ್ತಿ ಮಹೇಶ್ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಿಗ್ಗೆ ನೆಲ್ಲೂರು ಬಳಿ ಕಾರಿನಲ್ಲಿ ಬರಬೇಕಾದರೆ ಅಪಘಾತ ಸಂಭವಿಸಿದ್ದು ತೀವ್ರವಾಗಿ ಗಾಯಗೊಂಡಿದ್ದ ಮಹೇಶ್ ಅನ್ನು ನೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದ ಮಹೇಶ್ ಮುಂದಿನ ಭಾರಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಮಹೇಶ್ ತಲೆಗೆ, ಮೂಗಿಗೆ ತೀವ್ರ ಪೆಟ್ಟಾಗಿದ್ದು ಎಡಗಣ್ಣು ದೃಷ್ಟಿ ಕಳೆದುಕೊಂಡಿದೆ. ಮಹೇಶ್ ಪ್ರಸ್ತುತ ಕೋಮಾ ಸ್ಥಿತಿಯಲ್ಲಿದ್ದು ಮೂರು ದಿನಗಳವರೆಗೆ ಅವರು ಹಾಗೆಯೇ ಇರಲಿದ್ದಾರೆ ಎಂದಿದ್ದಾರೆ ವೈದ್ಯರು.

ಮಹೇಶ್ ಕಣ್ಣು, ಮೂಗು ಹಾಗೂ ಮುಖದ ಇತರ ಭಾಗಗಳಿಗೆ ದೊಡ್ಡ ಪೆಟ್ಟು ತಗುಲಿದೆ. ಜೊತೆಗೆ ತಲೆಗೆ ಸಹ ಭಾರಿ ಪೆಟ್ಟು ತಗುಲಿದೆ. ಪ್ರಸ್ತುತ ಮಹೇಶ್ ಅವರು ವೆಂಟಿಲೇಟರ್ ಸಹಾಯದಲ್ಲಿ ಉಸಿರಾಡುತ್ತಿದ್ದಾರೆ.
ಮಹೇಶ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಜೊತೆಗೆ ಮೆದುಳು ಶಸ್ತ್ರಚಿಕಿತ್ಸೆ ಸಹ ಅವಶ್ಯಕವಿದೆ ಎಂದಿರುವ ವೈದ್ಯರು. ಮಹೇಶ್ ಕನಿಷ್ಟ ಮೂರು ದಿನಗಳ ಕಾಲ ಕೋಮಾನಲ್ಲಿ ಇರಲಿದ್ದಾರೆ. ಮಹೇಶ್ ಕೋಮಾದಿಂದ ಹೊರಬಂದಮೇಲಷ್ಟೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡಬಲ್ಲೆವು ಎಂದಿದ್ದಾರೆ.
ಮೂಗು ಜಜ್ಜಿಯಾಗಿರುವ, ಬಾಯಿಯ ಮೂಲಕ ನಳಿಕೆಗಳನ್ನು ದೇಹದ ಒಳಗೆ ಬಿಡಲಾಗಿರುವ ಮಹೇಶ್ ಚಿತ್ರಗಳು ಹಾಗೂ ಮಹೇಶ್ರ ಅಪಘಾತವಾಗಿರುವ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿವೆ.
ಸಿನಿಮಾ ವಿಮರ್ಶಕರಾಗಿದ್ದ ಮಹೇಶ್ ಕತ್ತಿ, 2011 ರಲ್ಲಿ ಎಡಾರಿ ವರ್ಷಂ ಸಿನಿಮಾ ಮೂಲಕ ಅಭಿನಯ ಆರಂಭಿಸಿದರು. ನಂತರ 2014 'ಮಿನುಗುರುಲು' ಸಿನಿಮಾಕ್ಕೆ ಚಿತ್ರಕತೆ ಬರೆದರು. ಆ ನಂತರ ಹಲವು ಸಿನಿಮಾಗಳಲ್ಲಿ ಮಹೇಶ್ ಕತ್ತಿ ನಟಿಸಿದ್ದಾರೆ. ತೆಲುಗು ಬಿಗ್ಬಾಸ್ ಮೊದಲ ಸೀಸನ್ನಲ್ಲಿ ಸ್ಪರ್ಧಿಯೂ ಆಗಿದ್ದರು ಮಹೇಶ್. ಆ ಸೀಸನ್ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು.
Recommended Video
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ 'ಮಾರ್ನಿಂಗ್ ರಾಗಾ' ಹೆಸರಿನಲ್ಲಿ ಮನೊರಂಜನೆ ಮಾಡುತ್ತಿದ್ದ ಮಹೇಶ್. ಟಿವಿ ಚರ್ಚೆಗಳಲ್ಲಿ ಪಾಲ್ಗೊಂಡು ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಗಳೀಗೂ ಈಡಾಗಿದ್ದರು. ಅವರ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಸಹ 'ವಿವಾದಮುಖಿ'ಯಾಗಿಯೇ ಇರುತ್ತಿದ್ದವು.


Click it and Unblock the Notifications











