47ನೇ ವಯಸ್ಸಿಗೆ ತಂದೆಯಾದ ಲೆಜೆಂಡರಿ ಗಾಯಕಿಯ ಮೊಮ್ಮಗ ಯಾರು ಗೊತ್ತೇ? ಸೀಮಂತದ ಫೋಟೊಗಳು ವೈರಲ್
ಸಿನಿಮಾ ಹಾಗೂ ಕಿರಿತೆರೆ ಲೋಕದ ತಾರೆಯರು ಒಂದರ ಹಿಂದೊಂದು ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ಪಡೆಯಬೇಕು ಅನ್ನೋದು ಅದೆಷ್ಟೋ ಮಂದಿಯ ಕನಸು. ಅವರಲ್ಲಿ ಸೆಲೆಬ್ರೆಟಿಗಳೂ ಹೊರತಾಗಿಲ್ಲ. ಈಗ ಈ ಸಾಲಿಗೆ 47 ವರ್ಷದ ನಟಯೊಬ್ಬರು ಸೇರಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸೀಮಂತ ಕಾರ್ಯಕ್ರಮದ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಬಹುತೇಕ ಎಲ್ಲಾ ಚಿತ್ರರಂಗದ ತಾರೆಯರು ಫ್ಯಾಮಿಲಿಯನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಕೆಲವರು ಬೇಗ ಮಗು ಪಡೆದುಕೊಂಡರೆ, ಮತ್ತೆ ಕೆಲವರು ತಡವಾಗಿ ಪೋಷಕರಾಗುತ್ತಿದ್ದಾರೆ. ಸಾಮಾನ್ಯವಾಗಿ 45 ದಾಟಿದ ಮೇಲೆ ಮಕ್ಕಳನ್ನು ಪಡೆದುಕೊಳ್ಳುವ ಮನಸ್ಥಿತಿ ಕಡಿಮೆ. ಇಂತಹ ಸಂದರ್ಭದಲ್ಲಿ ಈ ತೆಲುಗು ನಟ ಸಾಯಿ ಕಿರಣ್ ತನ್ನ 47ನೇ ವಯಸ್ಸಿನಲ್ಲಿ ತಂದೆ ಖುಷಿಯನ್ನು ಸಂಭ್ರಮಿಸಿದ್ದಾರೆ.

ಇತ್ತೀಚೆಗೆ ಟಾಲಿವುಡ್ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹಾಗೇ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಎರಡನೇ ಮಗುವಿಗೆ ಪೋಷಕರಾಗುತ್ತಿರುವ ಸುದ್ದಿ ಹೊರ ಬಿದ್ದಿದೆ. ಹಾಗೇ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಾಲಿವುಡ್ನ ಮತ್ತೊಬ್ಬ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಕೂಡ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಬರ ಮಾಡಿಕೊಂಡಿದ್ದಾರೆ.
ಸಾಯಿ ಕಿರಣ್ ತೆಲುಗು ಕಿರುತೆರೆಯ ಜನಪ್ರಿಯ ನಟ. ಸಿನಿಮಾ ಹಾಗೂ ಕಿರುತೆರೆ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜನಪ್ರಿಯ ನಟ ಸಾಯಿ ಕಿರಣ್ ತಮ್ಮ ವೈಯಕ್ತಿಕ ಜೀವನದ ಕಡೆ ಗಮನ ಹರಿಸುತ್ತಿದ್ದಾರೆ. ಸತತ ಸೀರಿಯಲ್ಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿರೋ ನಟ ತನ್ನ 47 ವರ್ಷದ ವಯಸ್ಸಿನ ಸಾಯಿ ಕಿರಣ್ ತಂದೆಯಾಗಲು ಸಿದ್ಧರಾಗಿದ್ದಾರೆ. ಸಾಯಿ ಕಿರಣ್ ಅವರ ಪತ್ನಿ ಸ್ರವಂತಿ ಕೂಡ ನಟಿನೇ. ಇತ್ತೀಚೆಗೆ ಇವರ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇವರ ಈ ಸಂಭ್ರಮದ ಕ್ಷಣಗಳ ಫೋಟೋ ಹಾಗೂ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ತೆಲುಗು ಕಿರುತೆರೆಯ ಈ ಜನಪ್ರಿಯ ನಟ ಸಾಯಿ ಕಿರಣ್ ಪ್ರಸಿದ್ಧ ಗಾಯಕ ರಾಮಕೃಷ್ಣ ಅವರ ಪುತ್ರ. ಅವರ ತಾಯಿ ಜ್ಯೋತಿ ಕೂಡ ಗಾಯಕಿ. ಇನ್ನು ದಕ್ಷಿಣ ಭಾರತದ ಜನಪ್ರಿಯ ಗಾಯಕಿ ಪಿ.ಸುಶೀಲಾ ಅವರ ಮೊಮ್ಮಗ. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸಾಯಿ ಕಿರಣ್ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ರಾಮೋಜಿ ರಾವ್ ನಿರ್ಮಿಸಿದ 'ನುವ್ವೇ ಕಾವಲಿ' ಸಿನಿಮಾದಲ್ಲಿ ಸೆಕೆಂಡ್ ಹೀರೋ ಆಗಿದ್ದರು. ಆ ಬಳಿಕ 'ಪ್ರೇಮಿಂಚು', 'ಮನಸುಂಟೆ ಚಾಲು', 'ಗೋಪಿ ಗೋಡಮೀದ ಪಿಲ್ಲೀ', 'ಜಗಪತಿ', 'ಶಿರಡಿ ಸಾಯಿ', 'ಬಿಂಬಿಸಾರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಾಯಿ ಕಿರಣ್ ಅವರ ಸಿನಿ ಪಯಣ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು. 'ಶಿವಲೀಲಲು' ಧಾರಾವಾಹಿಯಲ್ಲಿ ವಿಷ್ಣುವಿನ ಪಾತ್ರದ ಮೂಲಕ ಅವರ ಕಿರುತೆರೆ ಪಯಣ ಶುರು ಮಾಡಿದ್ದರು. ಕಿರುತೆರೆ ಇವರ ಕೈ ಹಿಡಿದಿತ್ತು. ಆ ನಂತರ ತೆಲುಗಿನ 'ಅಭಿಲಾಷಾ', 'ಇಂಟಿಗುಟ್ಟು', 'ಗುಪ್ಪೆಡಂತ ಮನಸು', 'ಮೌನರಾಗಂ', 'ಪಡಮಟಿ ಸಂಧ್ಯಾರಾಗಂ', 'ಕೋಯಿಲಮ್ಮ' ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.
ಸಾಯಿ ಕಿರಣ್ ಅವರ ಮೊದಲ ಪತ್ನಿ ವೈಷ್ಣವಿ ಭಿನ್ನಾಭಿಪ್ರಾಯಗಳಿಂದ ಬೇರೆಯಾಗಿದ್ದರು. ಮೊದಲ ಪತ್ನಿಯೊಂದಿಗೆ ಒಬ್ಬ ಮಗಳೂ ಇದ್ದಾಳೆ. ಮೊದಲ ಪತ್ನಿಯಿಂದ ಬೇರೆಯಾದ ಬಳಿಕ ಸ್ರವಂತಿಯನ್ನು ಪ್ರೀತಿಸಿ ಸಾಯಿ ಕಿರಣ್ ಎರಡನೇ ಮದುವೆಯಾದರು. ಈಗ ಈ ದಂಪತಿ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ರೆಡಿಯಾಗಿದೆ. ಸ್ರವಂತಿ ಈಗ ಗರ್ಭಿಣಿಯಾಗಿದ್ದು, ಸಾಯಿ ಕಿರಣ್ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ.


Click it and Unblock the Notifications











