"ಅಧಿಕಾರ ಹಸ್ತಾಂತರದ ವೇಳೆ ರಕ್ತ ಚೆಲ್ಲಬಹುದು": ತೆಲುಗು ನಟ ನರೇಶ್ ಹೀಗಂದಿದ್ದೇಕೆ?
ವಿಕೆ ನರೇಶ್ ಕನ್ನಡಿಗರಿಗೆ ಗೊತ್ತಿಲ್ಲ ಅಂತೇನು ಇಲ್ಲ. ತೆಲುಗು ಚಿತ್ರರಂಗದ ಈ ಹಿರಿಯ ನಟ ಕೆಲವು ವರ್ಷಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ವಿಕೆ ನರೇಶ್ ಜೊತೆ ಪವಿತ್ರಾ ಲೋಕೇಶ್ ಹೆಸರು ಸೇರಿಕೊಂಡಾಗಲೇ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದ್ದು ಗೊತ್ತೇ ಇದೆ. ಈಗ ಇದ್ದಕ್ಕಿದ್ದ ಹಾಗೇ ಟ್ವೀಟ್ ಮಾಡಿ ನೆಟ್ಟಿಗರ ನಿದ್ದೆ ಕೆಡಿಸಿದ್ದಾರೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಬಗ್ಗೆ ಗೊತ್ತೇ ಇದೆ. ತಮ್ಮದೇ ಕಥೆಯನ್ನು ಇಟ್ಟುಕೊಂಡು ನರೇಶ್ 'ಮತ್ತೆ ಮದುವೆ' ಅನ್ನುವ ಸಿನಿಮಾ ತೆಗೆದಿದ್ದು ಕೂಡ ಗೊತ್ತಿದೆ. ಹೀಗಾಗಿ ಕನ್ನಡಿಗರಿಗೂ ವಿಕೆ ನರೇಶ್ ಬಗ್ಗೆ ಸ್ವಲ್ಪ ಜಾಸ್ತಿನೇ ಪರಿಚಯವಿದೆ. ಅಷ್ಟಕ್ಕೂ ನರೇಶ್ ಮಾಡಿದ ಟ್ವೀಟ್ನಲ್ಲಿ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ.

ಲೋಕಸಭೆ ಚುನಾವಣೆ ಬೆನ್ನಲ್ಲೇ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ಹೀಗಾಗಿ ಆಂಧ್ರದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪ ಮಾಡುತ್ತಲೇ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆಡಳಿತ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಪಣ ತೊಟ್ಟಿದೆ. ಅತ್ತ ವಿರೋಧ ಪಕ್ಷಗಳು ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿವೆ.
ಅಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಪವನ್ ಕಲ್ಯಾಣ್ ಹಾಗೂ ಬಿಜೆಪಿ ಪಕ್ಷಗಳು ಒಟ್ಟಾಗಿ ಎದುರಿಸುವುದಕ್ಕೆ ನಿರ್ಧರಿಸಿದೆ. ಆಂಧ್ರ ವಿಧಾನ ಸಭೆ ಚುನಾವಣೆಯಲ್ಲಿ ಈ ಬಾರಿ ಅದ್ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಸಿಕ್ಕಾಪಟ್ಟೆ ಫೈಟ್ ಅಂತೂ ಇರುತ್ತೆ ಅನ್ನೋದು ಗೊತ್ತಾಗಿ ಹೋಗಿದೆ.
ಹೀಗಾಗಿ ತೆಲುಗಿನ ಹಿರಿಯ ನಟ ವಿಕೆ ನರೇಶ್ ಸಂಚಲನ ಸೃಷ್ಟಿಸುವ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ " ಅಧಿಕಾರ ಹಸ್ತಾಂತರದ ವೇಳೆ ಆಂಧ್ರ ಪ್ರದೇಶದಲ್ಲಿ ರಕ್ತ ಹರಿಯುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ ಎಂದು ನನಗೆ ಅನಿಸುತ್ತದೆ" ಎಂದು ವಿಕೆ ನರೇಶ್ ಏಕಾಏಕಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ನೆಟ್ಟಿಗರು ಕಾಮೆಂಟ್ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ನರೇಶ್ ಟ್ವೀಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ನರೇಶ್ಗೆ ಟ್ವೀಟ್ಗೆ ಬ್ಯಾಕ್ ಟು ಬ್ಯಾಕ್ ಟ್ವೀಟ್ಗಳನ್ನು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. "ಅಧಿಕಾರ ಹಸ್ತಾಂತರದ ವೇಳೆ ರಕ್ತ ಚೆಲ್ಲುವ ಅಗತ್ಯವಿದೆಯೇ", "ಯಾರ ರಕ್ತ ಚೆಲ್ಲುತ್ತೆ?", "ಯಾರಿಗೆ ಏನಾಗುತ್ತೆ?" ಎಂದೆಲ್ಲ ನರೇಶ್ ಟ್ವೀಟ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅಂದ್ಹಾಗೆ ನರೇಶ್ಗೆ ಕೂಡ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆಸಕ್ತಿಯಿದೆ. ಹಲವು ವರ್ಷಗಳಿಂದ ಚುನಾವಣೆಗೆ ನಿಲ್ಲುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದಾರೆ. ಆದರೆ, ಅದು ಸಾಧ್ಯವಾಗಿತ್ತಿಲ್ಲ. ಒಟ್ನಲ್ಲಿ ಪವಿತ್ರಾ ಲೋಕೇಶ್ ಜೊತೆಗಿನ ನರೇಶ್ ಸಂಬಂಧ ಬಹಿರಂಗಗೊಂಡ ಬಳಿಕ ಕೆಲವು ದಿನಗಳು ಸೈಲೆಂಟ್ ಆಗಿ ಇದ್ದರು. ಆದ್ರೀಗ ಮತ್ತೆ ನರೇಶ್ ಆಂಧ್ರ ರಾಜಕೀಯದ ಬಗ್ಗೆ ಟ್ವೀಟ್ ಮಾಡಿ ಸದ್ದು ಮಾಡುತ್ತಿದ್ದಾರೆ.


Click it and Unblock the Notifications











