Brahmanandam:ಅಬ್ದುಲ್ ಕಲಾಂ ಅವತಾರವೆತ್ತಿದ ಬ್ರಹ್ಮಾನಂದಂ; ಧನುಷ್ ಸಿನಿಮಾದ ಕಥೆಯೇನು?
ತೆಲುಗಿನ ಲೆಜೆಂಡರಿ ಹಾಸ್ಯ ನಟ ಬ್ರಹ್ಮಾನಂದಂ ತಮ್ಮ ವೃತ್ತಿ ಬದುಕಿನಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮ್ಯಾನರಿಸಂಗೆ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸೂಪರ್ಸ್ಟಾರ್ಗಳಿಗೆ ಇರುವಷ್ಟೇ ಅಭಿಮಾನಿಗಳು ಇವರಿಗೆ ವಿಶ್ವದಾದ್ಯಂತ ಇದ್ದಾರೆ. ಇವರು ನಟಿಸಿದ ಒಂದೊಂದು ಸಿನಿಮಾದ ಪಾತ್ರಗಳು ಕೂಡ ಪ್ರೇಕ್ಷಕರನ್ನು ರಂಜಿಸಿದೆ.
ಇತ್ತೀಚೆಗೆ ಬ್ರಹ್ಮಾನಂದಂ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಅವರ ಜನಪ್ರಿಯತೆ ಮಾತ್ರ ಕಮ್ಮಿಯಾಗಿಲ್ಲ. ಬ್ರಹ್ಮಾನಂದಂ ಸಿನಿಮಾ ನಟಿಸುತ್ತಿದ್ದಾರೆ ಅಂದರೆ ಪ್ರೇಕ್ಷಕರು ಥಿಯೇಟರ್ಗೆ ನುಗ್ಗೋದು ಗ್ಯಾರಂಟಿ. ಈಗ ಬ್ರಹ್ಮಾನಂದಂ ಮಾಡಿದ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದ್ಯಾಕೆ ಅಂದರೆ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಅವತಾರವೆತ್ತಿರೋ ಬ್ರಹ್ಮಾನಂದಂ ಆ ಲುಕ್ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಬ್ದುಲ್ ಕಲಾಂ ಲುಕ್ನಲ್ಲಿ ಬ್ರಹ್ಮಾನಂದಂ ಕಾಣಿಸಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೊಂದು ಕಡೆ ಧನುಷ್ ಅಭಿಮಾನಿಗಳಿಗೆ ಟೆನ್ಷನ್ ಶುರುವಾಗಿದೆ. ಅಷ್ಟಕ್ಕೂ ಬ್ರಹ್ಮಾನಂದಂ ಕೂಡ ಅಬ್ದುಲ್ ಕಲಾಂ ಸಿನಿಮಾ ಮಾಡುತ್ತಿದ್ದಾರಾ? ಧನುಷ್ ಸಿನಿಮಾಗೆ ಕಾಂಪಿಟೇಷನ್ ಕೊಡುತ್ತಾರಾ? ಈ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.
ತಮಿಳು ನಟ ಧನುಷ್ ಈಗಾಗಲೇ ಎಪಿಜೆ ಅಬ್ದುಲ್ ಕಲಾಂ ಅವರ ಬಯೋಪಿಕ್ನಲ್ಲಿ ನಟಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ. ಅಬ್ದುಲ್ ಕಲಾಂ ಲುಕ್ನಲ್ಲಿರು ಧನುಷ್ ಪೋಸ್ಟರ್ಗಳು ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಈ ಸಿನಿಮಾವನ್ನು 'ಆದಿಪುರುಷ್' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಚರ್ಚೆಗಳು ಆಗುತ್ತಿರುವಾಗಲೇ ಬ್ರಹ್ಮಾನಂದಂ ಲುಕ್ ಹೊರ ಬಿದ್ದಿದೆ.
ಟಾಲಿವುಡ್ನ ಹಾಸ್ಯ ದಿಗ್ಗಜ ಬ್ರಹ್ಮಾನಂದಂ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಬ್ದುಲ್ ಕಲಾಂ ಲುಕ್ನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಹೊರ ಬೀಳುತ್ತಿದ್ದಂತೆ ಸಿನಿಪ್ರಿಯರು ಗೊಂದಲಕ್ಕೆ ಬಿದ್ದಿದ್ದಾರೆ. ಇತ್ತ ಧನುಷ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಬ್ರಹ್ಮಾನಂದಂ ತೆಲುಗಿನಲ್ಲಿ ಅಬ್ದುಲ್ ಕಲಾಂ ಬಯೋಪಿಕ್ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಆದರೆ, ಬ್ರಹ್ಮಾನಂದಂ ಮಾತ್ರ ಫೋಟೋ ಶೇರ್ ಮಾಡಿ "Dream, dream, dream. Dreams transform into thoughts and thoughts result in action" ಎಂದು ಬರೆದುಕೊಂಡಿದ್ದಾರೆ.
ಬ್ರಹ್ಮಾನಂದಂ ಕಳೆದ ವರ್ಷ ಡಿಸೆಂಬರ್ನಲ್ಲಿ ತಮ್ಮ ಆತ್ಮಚರಿತ್ರೆಯನ್ನು ಪ್ರಕಟಿಸಿದ್ದರು. ಅದರಲ್ಲಿ ತಮ್ಮ ಬದುಕಿಗೆ ಸ್ಪೂರ್ತಿ ನೀಡಿದವರಲ್ಲಿ ಇಬ್ಬರು ಮಹಾನೀಯರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಅವರಲ್ಲಿ ಒಬ್ಬರು ಸಂವಿಧಾನ ಶಿಲ್ಪಿ ಅಂಬೇಡ್ಕರ್. ಇನ್ನೊಬ್ಬರು ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಅಬ್ದುಲ್ ಕಲಾಂ. ಇವರು ತಮ್ಮ ಬದುಕಿನ ಸ್ಪೂರ್ತಿ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಬ್ರಹ್ಮಾನಂದಂ ಈ ಲುಕ್ ಹೊಸ ಸಿನಿಮಾದ ಲುಕ್ ಆಗಿರಬಹುದೆಂದು ಗೆಸ್ ಮಾಡಲಾಗುತ್ತಿದೆ.
ಒಂದು ವೇಳೆ ಬ್ರಹ್ಮಾನಂದಂ ಕೂಡ ಅಬ್ದುಲ್ ಕಲಾಂ ಸಿನಿಮಾ ಮಾಡಿದರೆ, ಧನುಷ್ ಅವರ ಅಬ್ದುಲ್ ಕಲಾಂ ಬಯೋಪಿಕ್ ಕಥೆ ಏನಾಗಬಹುದು? ಮತ್ತೆ ಎರಡು ಬಯೋಪಿಕ್ಗಳನ್ನು ನೋಡಬೇಕಾಗುತ್ತಾ? ಅನ್ನೋ ಪ್ರಶ್ನೆಗಳು ಎದ್ದಿವೆ. ಇನ್ನು ಬ್ರಹ್ಮಾನಂದಂ ತಮ್ಮ ಅಬ್ದುಲ್ ಕಲಾಂ ಲುಕ್ ಬಗ್ಗೆ ಹೆಚ್ಚಿನ ವಿವರವನ್ನು ನೀಡಿಲ್ಲ. ಈ ಫೋಟೋ ವೈರಲ್ ಆದ ಬಳಿಕ ಧನುಷ್ಗಿಂತ ಬ್ರಹ್ಮಾನಂದಂ ಅವರಿಗೇ ಅಬ್ದುಲ್ ಕಲಾಂ ಪಾತ್ರವು ಸೂಕ್ತವೆಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











