'ಕಾಂತಾರ ಚಾಪ್ಟರ್ 1' ರಿಲೀಸ್ಗೂ ಮುನ್ನ ರಿಷಬ್ ಶೆಟ್ಟಿಗೆ ಭಾರೀ ಬೇಡಿಕೆ; ಮತ್ತೊಂದು ಸಿನಿಮಾ ಘೋಷಣೆ
'ಕಾಂತಾರ' ರಿಲೀಸ್ ಬಳಿಕ ರಿಷಬ್ ಶೆಟ್ಟಿ ಬೇರೊಂದು ಸಿನಿಮಾದಲ್ಲಿ ನಟಿಸುವುದಕ್ಕೆ ಹೋಗಲಿಲ್ಲ. 'ಕಾಂತಾರ' ಪ್ರೀಕ್ವೆಲ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಸುಮಾರು ಎರಡು ವರ್ಷಗಳಿಂದ ಈ ಸಿನಿಮಾದ ಮೇಕಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ನಲ್ಲಿ ಕೆಲವು ದೊಡ್ಡ ಬಜೆಟ್ ಸಿನಿಮಾಗಳು ಅನೌನ್ಸ್ ಆಗಿವೆ. ಆದರೆ, ಹೊಸ ಸಿನಿಮಾಗಳ ಬಗ್ಗೆ ರಿಷಬ್ ಶೆಟ್ಟಿ ಇಲ್ಲಿವರೆಗೂ ಒಂದೇ ಒಂದು ಮಾತು ಕೂಡ ಆಡಿಲ್ಲ. ಅಷ್ಟರಲ್ಲೇ ಇನ್ನೊಂದು ಸಿನಿಮಾ ಅನೌನ್ಸ್ ಆಗಿದೆ.
ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಸರಿಯಾಗಿ ಇನ್ನು ಮೂರು ತಿಂಗಳಲ್ಲಿ 'ಕಾಂತಾರ ಚಾಪ್ಟರ್ 1' ರಿಲೀಸ್ ಆಗುತ್ತೆ. ಅಕ್ಟೋಬರ್ 2ಕ್ಕೆ ವಿಶ್ವದಾದ್ಯಂತ 5ಕ್ಕೂ ಹೆಚ್ಚು ಭಾಷೆಯಲ್ಲಿ ಸಿನಿಮಾ ಬಿಡುಗಡೆಗೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎಲ್ಲರ ಕಣ್ಣು ಈ ಸಿನಿಮಾದ ಮೇಲಿದೆ.

'ಕಾಂತಾರ ಚಾಪ್ಟರ್ 1' ಬಿಡುಗಡೆಗೂ ಮುನ್ನವೇ ತೆಲುಗು ಸಿನಿಮಾವೊಂದು ಅನೌನ್ಸ್ ಆಗಿದೆ. ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್ಟೈನ್ಮೆಂಟ್ಸ್ ರಿಷಬ್ ಶೆಟ್ಟಿ ಜೊತೆ ಒಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿ ಅಧಿಕೃತ ಘೋಷಣೆಯನ್ನು ಮಾಡಿದೆ. ಹಾಗಿದ್ದರೆ, ಸಿತಾರಾ ಎಂಟರ್ಟೈನ್ಮೆಂಟ್ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಷನ್ ಸಿನಿಮಾದ ಹೈಲೈಟ್ಸ್ ಏನು? ಆರಂಭ ಯಾವಾಗ? ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ರಿಷಬ್ ಶೆಟ್ಟಿ ನಟಿಸಲಿರುವ ತೆಲುಗು ಸಿನಿಮಾದ ಕಥೆ 18ನೇ ಶತಮಾನದಲ್ಲಿ ನಡೆದ ಬಂಗಾಳದ ಘಟನೆಯನ್ನು ಆಧರಿಸಿದೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ರಿಲೀಸ್ ಮಾಡಿರುವ ಪೋಸ್ಟರ್ ಈಗಾಗಲೇ ಸದ್ದು ಮಾಡುತ್ತಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಈ ಸಿನಿಮಾ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಶೈಲಿಯ ಸಿನಿಮಾ ಆಗಿದೆ. ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿದ್ದು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಈ ಸಿನಿಮಾವನ್ನು ಆಶ್ವಿನ್ ಗಂಗರಾಜು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಆಕ್ಷನ್ ಡ್ರಾಮಾಗಿ ಮೂಡಿಬರಲಿದೆ. ಈ ಹಿಂದೆ ತೆಲುಗಿನಲ್ಲಿ ಸದ್ದು ಮಾಡಿದ್ದ 'ಆಕಾಶವಾಣಿ' ಸಿನಿಮಾದಲ್ಲಿ ಇವರು ಕೆಲಸ ಮಾಡಿದ್ದಾರೆ. ಈಗ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿಯ ಮಾರ್ಗದರ್ಶನದಲ್ಲಿ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಹೀಗಾಗಿ ಈ ಪ್ರಾಜೆಕ್ಟ್ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದೆ.
ಸಿತಾರಾ ಎಂಟರ್ಟೈನ್ಮೆಂಟ್ಸ್ ಈ ಸಿನಿಮಾಗೆ ಇನ್ನೂ ಟೈಟಲ್ ಅನ್ನು ಫಿಕ್ಸ್ ಮಾಡಿಲ್ಲ. ಆದರೆ ಅನೌನ್ಸ್ಮೆಂಟ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, "ಎಲ್ಲಾ ಬಂಡುಕೋರರು ಯುದ್ಧದಲ್ಲಿ ಸೃಷ್ಟಿಯಾಗುವುದಿಲ್ಲ. ಕೆಲವರನ್ನು ಭವಿಷ್ಯವೇ ಆಯ್ಕೆ ಮಾಡುತ್ತದೆ. ಇದು ಆ ಬಂಡುಕೋರನ ಕಥೆ." ಎಂದು ಬರೆದುಕೊಂಡಿದೆ. ಅಂದ್ಹಾಗೆ ರಿಷಬ್ ಶೆಟ್ಟಿ ನಟಿಸುತ್ತಿರುವ ಈ ಸಿನಿಮಾ ಸಿತಾರಾ ಎಂಟರ್ಟೈನ್ಮೆಂಟ್ಸ್ ನಿರ್ಮಾಣ ಮಾಡುತ್ತಿರುವ 36ನೇ ಸಿನಿಮಾ. ಆದರೆ, ರಿಷಬ್ ಶೆಟ್ಟಿ ಈ ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೆ ಅನ್ನೋದು ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.
18ನೇ ಶತಮಾನದಲ್ಲಿ ಬಂಗಾಳದ ರಾಜಕೀಯ ಕ್ರಾಂತಿಯನ್ನು ಇಲ್ಲಿ ತೋರಿಸಲಾಗುತ್ತಿದೆ. ಸದ್ಯ ಕೇವಲ ಸಿನಿಮಾದ ಅನೌನ್ಸ್ಮೆಂಟ್ ಪೋಸ್ಟರ್ ಅನ್ನು ಬಿಡಿಗಡೆ ಮಾಡಲಾಗಿದೆ. ಸಿನಿಮಾದ ಬಗ್ಗೆ ಹೆಚ್ಚಿನ ವಿವರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಜನಪ್ರಿಯ ನಟ-ನಟಿಯರು ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಅದ್ಭುತ ದೃಶ್ಯ ಕಾವ್ಯದೊಂದಿಗೆ ನಿರ್ಮಾಣ ಮಾಡುವುದಕ್ಕೆ ಸಂಸ್ಥೆ ಮುಂದಾಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.


Click it and Unblock the Notifications











