"ಚಿರಂಜೀವಿಯಿಂದ ನನ್ನ ಮಗನ ವೃತ್ತಿಜೀವನ ಹಾಳಾಯ್ತ"; ಹಿರಿಯ ನಟ ಗಿರಿ ಬಾಬು
ಸಿನಿಮಾದಲ್ಲಿ ನಟಿಸಬೇಕು, ಸ್ಟಾರ್ ಆಗಬೇಕು ಅನ್ನೋದು ಹಲವರ ಕನಸು. ಆದರೆ, ಸಿನಿಮಾ ಲೋಕದೊಳಗೆ ಪ್ರವೇಶ ಮಾಡುವುದು ಅಷ್ಟು ಸುಲಭದ ಮಾತಲ್ಲ. ನೂರೆಂಟು ಕಷ್ಟಗಳನ್ನು, ಅವಮಾನಗಳನ್ನು, ಪಾಲಿಟಿಕ್ಸ್ ಅನ್ನು ಮೆಟ್ಟಿನಿಂತ ಬಳಿಕವೇ ಸ್ಟಾರ್ ಆಗೋದು. ಕಷ್ಟ ಪಟ್ಟು ಚಿತ್ರರಂಗಕ್ಕೆ ಬಂದವರೆಲ್ಲರೂ ಇದೇ ಮಾತನ್ನು ಹೇಳುತ್ತಾರೆ. ಇದು ಅದೆಷ್ಟೋ ಮಂದಿಗೆ ಅನುಭವವೂ ಆಗಿದೆ.
ಕೆಲವೊಮ್ಮೆ ಹಿರಿಯ ನಟರೇ ತಮ್ಮ ಮಕ್ಕಳನ್ನು ಚಿತ್ರರಂಗದಲ್ಲಿ ನೆಲೆಯೂರುವಂತೆ ಮಾಡುವುದರಲ್ಲಿ ಸೋತಿದ್ದಾರೆ. ಕೆಲವೊಮ್ಮೆ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವ ವೇಳೆ ಸೂಪರ್ಸ್ಟಾರ್ ಸಿನಿಮಾ ರಿಲೀಸ್ ಆಗಿ, ಅವರ ವೃತ್ತಿ ಬದುಕೇ ಮುಗಿದು ಹೋದ ಉದಾಹರಣೆಗಳು ಸಾಕಷ್ಟಿವೆ. ಇಂತಹದ್ದೇ ಒಂದು ಘಟನೆಯ ಬಗ್ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಟಾಲಿವುಡ್ನ ಹಿರಿಯ ನಟ ಗಿರಿಬಾಬು ಹೇಳಿಕೊಂಡಿದ್ದರು.

ಇಲ್ಲಿ ಮೆಗಾಸ್ಟಾರ್ ಚಿರಜೀವಿ ಮೇಲೆ ಹಿರಿಯ ನಟ ಗಿರಿಬಾಬು ನೇರವಾಗಿ ಆರೋಪ ಮಾಡಿದ್ದಾರೆ. ತಮ್ಮ ಮಗನ ಜೀವನ ಹಾಳಾಗುವುದಕ್ಕೆ ಚಿರಂಜೀವಿಯೇ ಕಾರಣವೆಂದು ಸಂದರ್ಶನವೊಂದರಲ್ಲಿ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಗಿರಿಬಾಬು ಅಂತಹದ್ದೇನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಗಿರಿಬಾಬು ತೆಲುಗು ಚಿತ್ರರಂಗದ ಬಹುಮುಖ ಪ್ರತಿಭೆ. 81 ವರ್ಷದ ನಟ ಇದೂವರೆಗೂ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಂತ ಕೇವಲ ನಟನಾಗಿ ಅಷ್ಟೇ ಗುರುತಿಸಿಕೊಂಡಿಲ್ಲ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಗಮನ ಸೆಳೆದಿದ್ದಾರೆ. ಈ ಹಿರಿಯ ನಟ ಗಿರಿಬಾಬು ಅವರಿಗೆ ಇಬ್ಬರು ಗಂಡು ಮಕ್ಕಳು. ಅವರನ್ನು ಟಾಲಿವುಡ್ನಲ್ಲಿ ಬೆಳೆಸಬೇಕು ಅಂತ ಸಾಕಷ್ಟು ಪ್ರಯತ್ನ ಪಟ್ಟಿದ್ದರು.
ಸದ್ಯ ರಘು ಬಾಬು ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಎರಡನೇ ಪುತ್ರ ಬೋಸ್ ಬಾಬು ಹೆಚ್ಚು ಯಶಸ್ಸು ಕಾಣಲಿಲ್ಲ. ಗಿರಿಬಾಬುಗೆ ತಮ್ಮ ಎರಡನೇ ಮಗನನ್ನು ಚಿತ್ರರಂಗದಲ್ಲಿ ಸ್ಟಾರ್ ಮಾಡಬೇಕು ಅನ್ನೋ ಆಸೆಯಿತ್ತು. ಹೀಗಾಗಿ ಅವರೇ ಮಗನಿಗಾಗಿ 'ಇಂದ್ರಜಿತ್' ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ನಿರ್ದೇಶನ ಕೂಡ ಮಾಡಿದ್ದರು. ಆದರೆ, ಅದೇ ಸಮಯಕ್ಕೆ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಕೊಡಮ ಸಿಂಹಂ' ಸಿನಿಮಾ ಕೂಡ ರಿಲೀಸ್ ಆಗಿತ್ತು.

ಗಿರಿಬಾಬು ಮಗನನ್ನು ಪರಿಚಯಿಸಲು ಹೊರಟಿದ್ದ 'ಇಂದ್ರಜಿತ್' ಹಾಗೂ ಚಿರಂಜೀವಿ ನಟನೆಯ 'ಕೊಡಮ ಸಿಂಹಂ' ಎರಡೂ ಕೌಬಾಯ್ ಜಾನರ್ ಸಿನಿಮಾಗಳಾಗಿದ್ದವು. ಹೀಗಾಗಿ ಹೊಸ ಪ್ರತಿಭೆಯ ಸಿನಿಮಾಗಿಂತ ಚಿರಂಜೀವಿ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆಯಿತ್ತು. ಗಿರಿಬಾಬು ಆಕ್ಷನ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರಿಂದ 'ಇಂದ್ರಜಿತ್' ಮೇಲೆ ಚಿತ್ರರಂಗ ಒಂದು ಕಣ್ಣಿಟ್ಟಿತ್ತು. 'ಇಂದ್ರಜಿತ್' ಸಿನಿಮಾ ವೇಳೆ ತನಗೆ ಹೇಗೆ ಮೋಸ ಮಾಡಿದರು? ಅನ್ನೋದನ್ನು ಸಂದರ್ಶನದಲ್ಲಿ ಗಿರಿಬಾಬು ರಿವೀಲ್ ಮಾಡಿದ್ದಾರೆ.
'ಇಂದ್ರಜಿತ್' ಸಿನಿಮಾ ರೆಡಿಯಿತ್ತು. ಈ ವೇಳೆ ಚಿರಂಜೀವಿ ನಟಿಸಿದ 'ಕೊಡಮ ಸಿಂಹಂ' ಸಿನಿಮಾ ಕಡೆಯವರು ಮೊದಲೇ ಪುತ್ರ ರಘು ಬಾಬು ಅನ್ನು ಪುಸಲಾಯಿಸಿ ಸಿನಿಮಾ ನೋಡಿದ್ದರು. ಬಳಿಕ ಎಚ್ಚೆತ್ತುಕೊಂಡು 'ಕೊಡಮ ಸಿಂಹಂ' ಸಿನಿಮಾವನ್ನು ತರಾತುರಿಯಲ್ಲಿ ಮುಗಿಸಿ, ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದರು. 'ಇಂದ್ರಜಿತ್' ಬಿಡುಗಡೆಯಾಗುತ್ತಿದ್ದ ದಿನವೇ ಆ ಸಿನಿಮಾ ರಿಲೀಸ್ ಮಾಡುವುದಾಗಿ ಅನೌನ್ಸ್ ಆಗಿತ್ತು. ಇದರ ಜಾಹೀರಾತು ನೋಡಿ ತನಗೆ ಶಾಕ್ ಆಗಿತ್ತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಚಿರಂಜೀವಿ ಸಿನಿಮಾ ಆಗಿದ್ದರಿಂದ 'ಕೊಡಮ ಸಿಂಹಂ' ಖರೀದಿ ಮಾಡುವುದಕ್ಕೆ ಗಮನಕೊಟ್ಟಿದ್ದರು. ಹೀಗಾಗಿ ತನ್ನ ಸಿನಿಮಾವನ್ನು ಕಡಿಮೆ ಬೆಲೆಗೆ ಮಾರಬೇಕಾಗಿ ಬಂತು. 'ಕೊಡಮ ಸಿಂಹಂ' ಎದುರು 'ಇಂದ್ರಜಿತ್' ಉತ್ತಮವಾಗಿದ್ದರೂ, ಸಿನಿಮಾ ಪ್ಲಾಪ್ ಎಂದು ಅಪಪ್ರಚಾರ ಮಾಡಿದ್ದರು ಎಂದು ಹಿರಿಯ ನಟ ಗಿರಿಬಾಬು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications










