'ನಾಗಬಂಧಂ' ಟೀಸರ್ ಬಿಡುಗಡೆ ಮಾಡಿದ ಸೂಪರ್ಸ್ಟಾರ್ ಮಹೇಶ್ ಬಾಬು; ಪೌರಾಣಿಕ ಸಾಹಸಗಾಥೆಯ ದೃಶ್ಯ ವೈಭವ
ಶಿವರಾತ್ರಿಯ ಶುಭ ಸಂದರ್ಭದಲ್ಲಿ ಕೆಲವು ಚಿತ್ರರಂಗದಲ್ಲಿ ತಮ್ಮ ಸಿನಿಮಾದ ಪೋಸ್ಟರ್, ಟೀಸರ್ಗಳನ್ನು ರಿಲೀಸ್ ಮಾಡಿದ್ದಾರೆ. ಅದರಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ತೆಲುಗಿನ 'ನಾಗಬಂಧಂ' ಸಿನಿಮಾ ಕೂಡ ಒಂದು. ಮಹಾ ಶಿವರಾತ್ರಿಯ ಪವಿತ್ರ ದಿನದಂದು ರಿಲೀಸ್ ಆಗಿರುವ ಈ ಟೀಸರ್, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮೂಲಕ ಪ್ರೇಕ್ಷಕರನ್ನು ಒಂದು ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿದೆ.
ಈಗಾಗಲೇ ದೃಶ್ಯ ವೈಭವಗಳಿಂದ ಗಮನ ಸೆಳೆದಿರುವ 'ನಾಗಬಂಧಂ' ಸಿನಿಮಾದ ಟೀಸರ್ ಟ್ರೆಂಡಿಂಗ್ನಲ್ಲಿದೆ. ದೃಶ್ಯ ವೈಭವಗಳೇ ಇರುವ ಈ ಭವ್ಯ ಟೀಸರ್ ಅನ್ನು ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅನಾವರಣಗೊಳಿಸಿದ್ದಾರೆ. ಭಕ್ತಿ ಭಾವದಲ್ಲಿದ್ದ ಸಿನಿಪ್ರಿಯರಿಗೆ 'ನಾಗಬಂಧಂ' ಟೀಸರ್ ಉತ್ತಮ ಅನುಭವವನ್ನು ನೀಡಿದೆ. ಅದರಲ್ಲೂ ಸೂಪರ್ಸ್ಟಾರ್ ಮಹೇಶ್ ಬಾಬು ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟಿದೆ.

'ನಾಗಬಂಧಂ' ಸಿನಿಮಾವನ್ನು ನಿರ್ದೇಶಕ ಅಭಿಷೇಕ್ ನಾಮಾ ನಿರ್ದೇಶನ ಮಾಡಿದ್ದಾರೆ. ಇದು ಅವರ ಮಹತ್ವಾಕಾಂಕ್ಷೆಯ ಸಿನಿಮಾ. ಈ ಬಿಗ್ ಬಜೆಟ್ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾವನ್ನು ನಿರ್ಮಾಪಕರುಗಳಾದ ಕಿಶೋರ್ ಅನ್ನಪುರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ಭಾರೀ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಶ್ವದರ್ಜೆಯ ತಾಂತ್ರಿಕ ತಜ್ಞರಿಂದ ಹಾಗೂ ಅದ್ಧೂರಿ ನಿರ್ಮಾಣದಿಂದ 'ನಾಗಬಂಧಂ' ಸಿನಿಮಾ ಮೂಡಿಬಂದಿದೆ. ಆಧ್ಯಾತ್ಮಿಕ ಹಿನ್ನೆಲೆ ಮತ್ತು ದೃಶ್ಯ ವೈಭವದಿಂದಾಗಿ ಪ್ರತಿ ಫ್ರೇಮ್ ಪ್ರೇಕ್ಷಕರನ್ನು ಸೆಳೆಯುತ್ತಿದೆ.
'ನಾಗಬಂಧಂ ದೇವಾಲಯ'
ಈ ಸಿನಿಮಾದ ಕೇಂದ್ರ ಬಿಂದುವೇ 'ನಾಗಬಂಧಂ ದೇವಾಲಯ'. ಹಿಮಾಲಯದ ಹಿಮದ ತಪ್ಪಲಿನ ಹಿನ್ನೆಲೆಯಲ್ಲಿ ಸಿನಿಮಾದ ಟೀಸರ್ ಆರಂಭವಾಗುತ್ತದೆ. ಇಲ್ಲಿ ಗುಪ್ತವಾಗಿರುವ ರಹಸ್ಯವೊಂದರ ಕಾವಲುಗಾರನ ಕಥೆಯೊಂದು ತೆರೆದುಗೊಳ್ಳುತ್ತದೆ. ಅಬ್ದಾಲಿ ನೇತೃತ್ವದಲ್ಲಿ ನಡೆದ ಐತಿಹಾಸಿಕ ಅಫ್ಘಾನ್ ಆಕ್ರಮಣದಿಂದ ಈ ಕಥೆಯು ಪ್ರೇರಣೆ ಹೊಂದಿದೆ. ಪುರಾಣ, ಇತಿಹಾಸ ಮತ್ತು ಆಧ್ಯಾತ್ಮಿಕ ಯುದ್ಧವನ್ನು ಸಮರ್ಥವಾಗಿ ತೋರಿಸಲಾಗಿದೆ.

ದೈವಿಕ ಶಕ್ತಿಗಳಿಂದ ರಕ್ಷಿಸಲ್ಪಟ್ಟಿರುವ ಈ ಗುಪ್ತ 'ನಾಗಬಂಧಂ ದೇವಾಲಯ' ಬ್ರಹ್ಮಾಂಡದ ಪ್ರಚಂಡ ಶಕ್ತಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಈ ಶಕ್ತಿಯು ದುಷ್ಟರ ಕೈ ಸೇರಿದರೆ ವಿನಾಶ ಸಂಭವಿಸುತ್ತದೆ. ಅದನ್ನು ತಡೆಯಲು ವಿಧಿಯು ಒಬ್ಬ ಯೋಧನ ಆಯ್ಕೆಯನ್ನು ಹೇಗೆ ಮಾಡುತ್ತದೆ ಎಂಬುವುದೇ ಸಿನಿಮಾದ ತಿರುಳು.
ಬ್ರಹ್ಮನ ಸೃಷ್ಟಿ, ವಿಷ್ಣುವಿನ ಧರ್ಮ, ಮಹಾದೇವನ ಕ್ರೋಧ
'ನಾಗಬಂಧಂ' ಟೀಸರ್ನಲ್ಲಿ ಬರುವ ಈ ಸಾಲುಗಳು ಸಭಕ್ತಿ ಮತ್ತು ಯುದ್ಧ, ಧರ್ಮ ಮತ್ತು ವಿನಾಶದ ನಡುವಿನ ಹೋರಾಟವನ್ನು ಪ್ರತಿಬಿಂಬಿಸುತ್ತೆ. ನಿರ್ದೇಶಕ ಅಭಿಷೇಕ್ ನಾಮಾ ಅವರು ಕೇವಲ ದೃಶ್ಯಗಳ ಮೂಲಕವೇ ಕಥೆಯನ್ನು ಹೇಳಿದ್ದಾರೆ. ಈ ಸಿನಿಮಾದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲದಿದ್ದರೂ, ಟೀಸರ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇನ್ನು ಸಿನಿಮಾದ ನಾಯಕ ವಿರಾಟ್ ಕರ್ಣ ಈ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಕಸರತ್ತು ಮಾಡಿದ್ದಾರೆ. ವಿಶೇಷವಾಗಿ ಮೊಸಳೆಯ ಜೊತೆಗಿನ ಹೋರಾಟ ಮತ್ತು ಭಗವಾನ್ ಶಿವನ ಅವತಾರ ಈ ಸಿನಿಮಾದ ಟೀಸರ್ನ ಹೈಲೈಟ್. ಶಿವನ ತೀವ್ರತೆ ಮತ್ತು ಭಾವನಾತ್ಮಕ ಅಂಶವನ್ನು ತೆರೆಮೇಲೆ ತಂದಿದ್ದಾರೆ. ಇದು ಶಿವನ ಭಕ್ತರಿಗೆ ಹಬ್ಬ ಅಂತಲೇ ಹೇಳಬಹುದು.
ಸ್ಟಾರ್ಕಾಸ್ಟ್ ಹೇಗಿದೆ?
'ನಾಗಬಂಧಂ' ಸಿನಿಮಾದಲ್ಲಿ ನಾಯಕ ವಿರಾಟ್ ಕರ್ಣ ಜೊತೆಗೆ ನಭಾ ನಟೇಶ್ ಮತ್ತು ಐಶ್ವರ್ಯ ಮೆನನ್ ನಾಯಕಿಯರಾಗಿ ಮಿಂಚಿದ್ದಾರೆ. ಇನ್ನು ಪೋಷಕ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್, ಜಗಪತಿ ಬಾಬು, ರಿಷಬ್ ಸಾಹ್ನಿ, ಗರುಡ ರಾಮ್, ಮುರಳಿ ಶರ್ಮ ಮತ್ತು ಅನಸೂಯ ಭಾರದ್ವಾಜ್ ನಟಿಸಿದ್ದಾರೆ. ಇನ್ನು ತಾಂತ್ರಿಕ ವರ್ಗದಲ್ಲಿ ಸೌಂದರ್ ರಾಜನ್ ಅವರ ಸಿನಿಮಾಟೋಗ್ರಫಿ, ಜುನೈದ್ ಕುಮಾರ್ ಅವರ ಹಿನ್ನೆಲೆ ಸಂಗೀತ ಇಷ್ಟ ಆಗುತ್ತೆ ಎನ್ನಲಾಗಿದೆ. ಅಶೋಕ್ ಕುಮಾರ್ ಆರ್ಟ್ ಹಾಗೂ ಅತ್ಯುನ್ನತ ಮಟ್ಟದ ವಿಎಫ್ಎಕ್ಸ್ ಈ ಸಿನಿಮಾದ ಹೈಲೈಟ್. ಈ ವರ್ಷ ಮಾರ್ಚ್ -ಏಪ್ರಿಲ್ ವೇಳೆಗೆ 'ನಾಗಬಂಧಂ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











