ಪುನೀತ್ ರಾಜ್ಕುಮಾರ್ ಅಗಲಿಕೆಗೆ ಶ್ರದ್ಧಾಂಜಲಿಯೊಂದಿಗೆ 'ಪುಷ್ಪ' ಸಿನಿಮಾ ಆರಂಭ
'ಐಕಾನ್ ಸ್ಟಾರ್' ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ಒಂದಿಷ್ಟು ವಿವಾದಗಳ ನಡುವೆಯೂ ಡಿಸೆಂಬರ್ 17 ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಎಂದುಕೊಂಡು ಐದು ಭಾಷೆಗಳಲ್ಲಿ ರಿಲೀಸ್ ಆಗಬೇಕಿದ್ದ 'ಪುಷ್ಪ-ದಿ ರೈಸ್' ಕನ್ನಡ ಒಂದು ಥಿಯೇಟರ್, ಮಲಯಾಳಂ ಒಂದು ದಿನ ತಡವಾಗಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲಿಸ್ಟ್ಗೆ ಸೇರಿಸಬೇಕೋ, ಬೇಡವೋ ಅನ್ನುವ ಚರ್ಚೆ ಕೂಡ ನಡೆಯುತ್ತಿದೆ.
ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಸಿನಿಮಾ ಕಳೆದೆರಡು ದಿನಗಳಿಂದ ಕರ್ನಾಟಕದಲ್ಲಿ ವಿವಾದಗಳಲ್ಲಿ ಸಿಲುಕಿತ್ತು. ಸಮಂತಾ ಐಟಂ ಸಾಂಗಿಗೂ ತಕರಾರುಗಳು ಎದ್ದಿದ್ದವು. ಈ ಮಧ್ಯೆಯೂ 'ಪುಷ್ಪ' ಸಿನಿಮಾ ಬಿಡುಗಡೆಯಾಗಿತ್ತು. ಇದರಲ್ಲಿ ಸಮಾಧಾನಕರ ವಿಷಯ ಏನಪ್ಪಾ ಅಂದ್ರೆ, ಸಿನಿಮಾ ಆರಂಭಕ್ಕೂ ಮುನ್ನ ಚಿತ್ರತಂಡ ಪುನೀತ್ ರಾಜ್ಕುಮಾರ್ ನೆನಪಿಸಿಕೊಂಡಿದೆ. ಈ ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
'ಪುಷ್ಪ' ಚಿತ್ರದಲ್ಲಿ ಅಪ್ಪುಗೆ ಶ್ರದ್ಧಾಂಜಲಿ
'ಪುಷ್ಪ' ಸಿನಿಮಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಬಾರಿ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಬಾಯ್ಕಾಟ್ ಪುಷ್ಪ ಆರಂಭವಾಗುತ್ತಿದ್ದಂತೆ ಚಿತ್ರತಂಡಕ್ಕೆ ಹೊಸ ತಲೆನೋವು ಶುರುವಾಗಿತ್ತು. ಎಲ್ಲಿ ಚಿತ್ರಮಂದಿರಕ್ಕೆ ಕನ್ನಡಪರ ಸಂಘಟನೆಗಳು ಲಗ್ಗೆ ಇಡುತ್ತವೆಯೋ? ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಆಗುತ್ತೋ ಅನ್ನುವ ಆತಂಕವಂತೂ ಇತ್ತು. ಆದರೆ, ಸಮಧಾನಕರ ಸಂಗತಿ ಏನಪ್ಪಾ ಅಂದರೆ, 'ಪುಷ್ಪ' ಸಿನಿಮಾ ಆರಂಭಕ್ಕೂ ಮುನ್ನವೇ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದೆ. ಈ ವಿಚಾರಕ್ಕೆ ಸಿನಿಪ್ರಿಯರು ಕೊಂಚ ತಣ್ಣಗಾಗಿದ್ದಾರೆ.

ಅಪ್ಪು ಮನೆಗೆ ಭೇಟಿ ಕೊಡಲ್ಲ ಎಂದ ಅಲ್ಲು
ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಆ ವೇಳೆ ಈಗ 'ಪುಷ್ಪ' ಸಿನಿಮಾದ ಪ್ರಚಾರಕ್ಕೆ ಬಂದಿದ್ದೇನೆ. ಈ ವೇಳೆ ಅಪ್ಪು ಮನೆಗೆ ಭೇಟಿ ನೀಡುವುದಿಲ್ಲ. ಅದಕ್ಕಾಗಿಯೇ ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿದ್ದರು. ಇದು ಅಪ್ಪು ಅಭಿಮಾನಿಗಳಿಗೆ ಕೊಂಚ ಬೇಸರವನ್ನೂ ತರಿಸಿತ್ತು. ಯಾಕೆಂದರೆ, ಅಪ್ಪು ಅಗಲಿ ಹತ್ತಿರ ಎರಡು ತಿಂಗಳಾಗುತ್ತಾ ಬಂದಿದ್ದರೂ, ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದು ಪುನೀತ್ ಕುಟುಂಬವನ್ನು ಭೇಟಿಯಾಗಿರಲಿಲ್ಲ. ಆದ್ರೀಗ 'ಪುಷ್ಪ' ಸಿನಿಮಾದಲ್ಲಿ ಅಪ್ಪು ನೆನೆಪಿಸಿಕೊಂಡಿದ್ದು ಕೊಂಚ ಸಮಾಧಾನ ತಂದಿದೆ.

ಅಪ್ಪು ಫೈಟ್ ಕಂಡು ಬೆಚ್ಚಿದ್ದ ಸ್ಟೈಲಿಶ್ ಸ್ಟಾರ್
ಪುನೀತ್ ರಾಜ್ಕುಮಾರ್ ಹಾಗೂ ಅಲ್ಲು ಅರ್ಜುನ್ ಇಬ್ಬರದ್ದೂ ಹಳೆ ಸ್ನೇಹ. ಬಿಡುವಾದಾಗ ಎರಡೂ ಕುಟುಂಬಗಳೂ ಭೇಟಿಯಾಗುತ್ತಿದ್ದಿದ್ದೂ ಇದೆ. ಅಲ್ಲು ಅರ್ಜುನ್, ಪುನೀತ್ ರಾಜ್ಕುಮಾರ್ ಡೂಪ್ ಇಲ್ಲದೆ ಫೈಟ್ ಮಾಡುತ್ತಿದ್ದಿದ್ದು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ಸಾಹಸ ನಿರ್ದೇಶಕ ರವಿ ವರ್ಮಾ ಬಳಿ ಅಪ್ಪು ಮಾಡುವಂತಹ ಆಕ್ಷನ್ ಸೀಕ್ವೆನ್ಸ್ ಅನ್ನು ಕಂಪೋಸ್ ಮಾಡಬೇಡಿ ಅಂತ ಹೇಳಿದ್ದರಂತೆ. ಪುನೀತ್ ರಂತಯೇ ಫೈಟ್ ಮಾಡುವುದಕ್ಕೆ ಅಲ್ಲು ಅರ್ಜುನ್ ಬೆದರುತ್ತಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದರು.

ಅಲ್ಲು 'ಪುಷ್ಪ'ಗಳಿಕೆ ಲೆಕ್ಕಾಚಾರ
'ರಂಗಸ್ಥಲಂ' ಅಂತಹ ಹಿಟ್ ಸಿನಿಮಾ ನೀಡಿದ್ದ ಸುಕುಮಾರ್ ಒಂದ್ಕಡೆ, 'ಅಲಾ ವೈಕುಂಠಪುರಮುಲೋ' ಸೂಪರ್ ಹಿಟ್ ನೀಡಿದ ಸ್ಟಾರ್ ನಟ ಅಲ್ಲು ಅರ್ಜುನ್ ಇನ್ನೊಂದು ಕಡೆ. ಇಬ್ಬರೂ ಒಟ್ಟಿಗೆ ಸೇರಿ 'ಪುಷ್ಪ' ಸಿನಿಮಾ ಮಾಡಿದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ಹೀಗಾಗಿ 'ಪುಷ್ಪ' ಸಿನಿಮಾದ ಗಳಿಕೆ ಮೇಲೆ ಎಲ್ಲರ ಕಣ್ಣು ನಿಂತಿದೆ.


Click it and Unblock the Notifications











