"ಅಮ್ಮನ ರೂಪದಲ್ಲಿ ಪವಿತ್ರಾ ಲೋಕೇಶ್ ಸಿಕ್ಕಿದ್ದಾಳೆ" ಎಂದ ನರೇಶ್: ಇದೇ ವಾರ 'ಮತ್ತೆ ಮದುವೆ'
ಟಾಲಿವುಡ್ ನಟ ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಯಾಗಿ ನಟಿಸಿದ ಸಿನಿಮಾ ರಿಲೀಸ್ ಆಗುತ್ತಿದೆ. ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ', ಕನ್ನಡದಲ್ಲಿ 'ಮತ್ತೆ ಮದುವೆ' ಅಂತ ಟೈಟಲ್ ಇಟ್ಟು ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.
ಇದೇ ಸಿನಿಮಾಗಾಗಿಯೇ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಬಿಡದಂತೆ ಪ್ರಚಾರ ಮಾಡುತ್ತಿದ್ದಾರೆ. ಟಿವಿ, ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ತಮ್ಮಿಬ್ಬರ ಸಂಬಂಧದ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್ನಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಈ ವೇಳೆ ಮತ್ತೆ ಪವಿತ್ರಾ ಲೋಕೇಶ್ ಬಗ್ಗೆ ಮುಕ್ತವಾಗಿ ಮಾತಾಡಿದ್ದು, ನಟಿಯನ್ನು ನೆನೆದು ಭಾವುಕರಾಗಿದ್ದಾರೆ. ತಮ್ಮ ನಿಜ ಜೀವನದ ಬಗ್ಗೆ, ಸೋಲು-ಗೆಲುವಿನ ಬಗ್ಗೆ ಮಾತಾಡಿದ್ದಾರೆ.
ನನ್ನ ಜೀವನವು ಭಾವನೆಗಳಿಂದ ತುಂಬಿದೆ:
'ಮಳ್ಳಿ ಪೆಳ್ಳಿ' ಸಿನಿಮಾದ ವೇದಿಕೆ ಮೇಲೆ ನರೇಶ್ ತನ್ನ ಬದುಕನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ತಾಯಿ, ಸಹೋದರಿ, ಮೇಕಪ್ಮ್ಯಾನ್ ಎಲ್ಲರನ್ನೂ ನೆನೆದು ಭಾವುಕರಾಗಿದ್ದರು. ತನ್ನ ಬದುಕಿನ ಪಯಣದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. " ನನಗೆ ಒಂಬತ್ತು ವರ್ಷವಿದ್ದಾಗ 'ಪಂಡಂತಿ ಕಪುರಂ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದೇ ಸಮಯದಲ್ಲಿ ನನ್ನ ಸಹೋದರಿ ಜಯಸುಧಾ ಕೂಡ ಆ ಸಿನಿಮಾದಲ್ಲಿ ನಟಿಸಿದ್ದರು. ಹೀಗಾಗಿ ಸಿನಿಮಾದಲ್ಲಿ ನಮ್ಮಿಬ್ಬರದ್ದು 50 ವರ್ಷಗಳ ಜರ್ನಿ" ಎಂದಿದ್ದಾರೆ ನರೇಶ್.

"ನನಗೆ ಮೊದಲು ಮೇಕಪ್ ಮಾಡಿದ್ದು ಮಾಧವರಾವ್ ಹಾಗೂ ಅವರ ಟಚ್-ಅಪ್ ಅಸಿಸ್ಟೆಂಟ್ ರಾಮು. ನಾನು ಎಂದಿಗೂ ಅವರನ್ನು ಮರೆಯಲು ಸಾಧ್ಯವಿಲ್ಲ. ಎಸ್.ವಿ.ರಂಗರಾವ್, ಗುಮ್ಮಡಿ, ಕೃಷ್ಣ, ಜಮುನಾ, ವಿಜಯ ನಿರ್ಮಾಲಾ ಅವರ ಜೊತೆ ನನ್ನ ಜರ್ನಿ ಆರಂಭಿಸಿದ್ದಕ್ಕೆ ನನಗೆ ಹೆಮ್ಮೆಯಿದೆ" ಎಂದಿದ್ದಾರೆ ನರೇಶ್.
"ಇನ್ನೊಬ್ಬ ತಾಯಿಯ ಭೇಟಿಯಾದೆ"
ತನ್ನ ಜೀವನದಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎರಡೂ ಆಯಿತು. ಆದರೆ, ಕೆಟ್ಟದೇ ಹೆಚ್ಚು ನಡೆದಿದ್ದಾಗಿ ಹೇಳಿದ್ದಾರೆ. "ಕೊನೆಗೆ ಅಮ್ಮ ಹೇಳಿದರು. ನಿನಗೆ ಎಲ್ಲಾ ಕೊಟ್ಟೆ, ನಿನ್ನನ್ನು ರಾಜನನ್ನಾಗಿ ಮಾಡಿದೆ. ಆದರೆ, ಒಳ್ಳೆ ಜೀವನ ಕೊಡೋಕೆ ಆಗಲಿಲ್ಲ ಎಂದು ಬೇಸರಿಸಿಕೊಂಡರು. ಆದರೆ, ನಿನ್ನಂತಹ ಇನ್ನೊಬ್ಬ ತಾಯಿಯನ್ನು ಭೇಟಿಯಾದೆ" ಎಂದು ನರೇಶ್ ಹೇಳಿದ್ದಾರೆ.
" ನನ್ನ ರೀಲ್ ಲೈಫ್ ಚೆನ್ನಾಗಿದೆ. ಆದರೆ ನಿಜ ಜೀವನ ಕೆಟ್ಟದಾಗಿದೆ. ಈ ವಯಸ್ಸಿನಲ್ಲಿ ನನ್ನ ತಾಯಿಯ ಬಳಿಕ ನಾನು ಇನ್ನೊಬ್ಬ ತಾಯಿಯನ್ನು ಭೇಟಿಯಾದೆ. ಅದಕ್ಕಿಂತ ಹೆಚ್ಚಿಗೆ ನಾನು ಹೇಳಲಾರೆ. ನಾವು ನಂಬಿಕೆ, ಪ್ರೀತಿ ಮತ್ತು ಒಡನಾಟವನ್ನು ಬಯಸುತ್ತೇವೆ." ಎಂದು ನರೇಶ್ ಭಾವುಕರಾಗಿ ಹೇಳಿದ್ದಾರೆ.
ಇದೇ ವಾರ 'ಮತ್ತೆ ಮದುವೆ'
ನರೇಶ್ ಹಾಗೂ ಪವಿತ್ರಾ ಲೋಕೇಶ ಇಬ್ಬರ ಸಿನಿಮಾ 'ಮತ್ತೆ ಮದುವೆ' (ಮಳ್ಳಿ ಪೆಳ್ಳಿ) ಮೇ 26ರಂದು ರಿಲೀಸ್ ಆಗುತ್ತಿದೆ. ತಮ್ಮ ಬದುಕಿನ ಕಥೆಯನ್ನೇ ತೆರೆಮೇಲೆ ಹೇಳುವುದಕ್ಕೆ ನರೇಶ್ ಹೊರಟಿದ್ದಾರೆ.
ಈ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆ ದಿವಂಗತ ಶರತ್ ಬಾಬು, ವನಿತಾ ವಿಜಯ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಂ ಎಸ್ ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











