'ಬಾಹುಬಲಿ' ವಿರುದ್ಧ ಬಲ್ಲಾಳ ದೇವ ಎಷ್ಟೇ ಪಿತೂರಿ ಮಾಡಿದ್ರೂ ಏನಾಯ್ತು?" ನಾಯ್ಡು,ಪವನ್ಗೆ ರೋಜಾ ಎಚ್ಚರಿಕೆ
ಆಂಧ್ರ ಪ್ರದೇಶ ರಾಜಕೀಯ ತೀವ್ರವಾಗಿ ಚರ್ಚೆಯಾಗುತ್ತಿದೆ. ವೈ.ಎಸ್. ಜಗನ್ ನೇತೃತ್ವದ ಸರ್ಕಾರ ಉರುಳಿ, ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಪಕ್ಷಗಳು ಜಂಟಿಯಾಗಿ ಸರ್ಕಾರ ರಚನೆ ಆದ್ಮೇಲೆ ಎರಡು ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಒಬ್ಬರ ಮೇಲೊಬ್ಬರು ಪರಸ್ಪರ್ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ.
ಸದ್ಯ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದಲ್ಲಿ ಸಿಎಂ ಅಧಿಕಾರ ವಹಿಸಿಕೊಂಡ ಬಳಿಕ ಮಾಜಿ ಸಿಎಂ ವೈ.ಎಸ್. ಜಗನ್ ವಿರುದ್ಧ ಸಮರ ಸಾರುತ್ತಿದ್ದಾರೆ. ಅದರಲ್ಲೂ ತಿರುಮಲ ಲಡ್ಡು ವಿವಾದ ತೀವ್ರ ರಾಜಕೀಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಮೈತ್ರಿಕೂಟ ಹಾಗೂ ವಿರೋಧ ಪಕ್ಷ ವೈಎಸ್ಆರ್ಸಿಪಿ ನಡುವೆ ತೀವ್ರ ವಾಕ್ಸಮರ ಆಗುತ್ತಿದ್ದು, ಪರಿಸ್ಥಿತಿ ತಾರಕಕ್ಕೇರಿದೆ.

ಇತ್ತೀಚೆಗೆ ವೈಎಸ್ಆರ್ಸಿಪಿ ಪಕ್ಷದ ಮಾಜಿ ಸಚಿವರಾದ ಜೋಗಿ ರಮೇಶ್ ಹಾಗೂ ಅಂಬಾಟಿ ರಾಂಬಾಬು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದರು. ಈ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರು ಕೆರಳಿದ್ದರು. ಈ ಬೆನ್ನಲ್ಲೇ ಅಂಬಾಟಿ ರಾಂಬಾಬು ಮತ್ತು ಜೋಗಿ ರಮೇಶ್ ಮನೆಗಳ ಮೇಲೆ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ದಾಳಿ ಮಾಡಿ ವಿಧ್ವಂಸಕ ಕೃತ್ಯ ಎಸಗಿದ್ದರು. ಸಿಎಂ ಮೇಲೆ ನಿಂದನೆ ಮಾಡಿದ ಆರೋಪದ ಮೇಲೆ ಅಂಬಾಟಿ ರಾಂಬಾಬು ಮತ್ತು ಜೋಗಿ ರಮೇಶ್ ಅವರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದು ಬೆಳವಣಿಗೆಗಳು ನಟಿ ಹಾಗೂ ವೈಎಸ್ಆರ್ಸಿಪಿ ಪಕ್ಷದ ನಾಯಕಿ ರೋಜಾರನ್ನು ಕೆರಳಿಸಿದ್ದು, ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಸಿಡಿದೆದ್ದಿದ್ದಾರೆ.
ಟಿಡಿಪಿ ಹಾಗೂ ವೈಎಸ್ಆರ್ಸಿಪಿ ಮುಖಂಡರ ನಡುವಿನ ಕಿತ್ತಾಟಕ್ಕೆ ರೋಜಾ ಎಂಟ್ರಿ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜಗನ್ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರು ಎಷ್ಟೇ ಪಿತೂರಿ ಮಾಡಿದರೂ, ಜಗನ್ ಅಣ್ಣನಿಗೆ ಏನು ಮಾಡುವುದಕ್ಕೂ ಆಗುವುದಿಲ್ಲವೆಂದು ಕೆಂಡಕಾಡಿದ್ದಾರೆ. ಹಾಗೇ ಜಗನ್ರನ್ನು 'ಬಾಹುಬಲಿ'ಗೆ ಹೋಲಿಕೆ ಮಾಡಿ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ಗೆ ಎಚ್ಚರಿಕೆ ನೀಡಿದ್ದಾರೆ.
ತೆಲುಗು ದೇಶಂ ಹಾಗೂ ಜನಸೇನಾ ಪಕ್ಷದವರು ಅತ್ಯಂತ ಕೀಳಾಗಿ ಮಾತನಾಡುತ್ತಿದ್ದಾರೆ. ಜಗನ್ ಮನೆಯಲ್ಲಿದ್ದರೆ, 'ಹೊರಬನ್ನಿ' ಎನ್ನುತ್ತಾರೆ. ಅದೇ ಜಗನ್ ಹೊರಗೆ ಬಂದರೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಮೈತ್ರಿ ಸರ್ಕಾರಕ್ಕೆ ನ್ಯಾಯಾಲಯಗಳ ಬಗ್ಗೆ ಗೌರವವಿಲ್ಲ, ವ್ಯವಸ್ಥೆಗಳ ಬಗ್ಗೆ ಗೌರವವಿಲ್ಲ. ಸಿಬಿಐ ನೀಡಿದ ವರದಿಯಲ್ಲಿ ತಿರುಮಲ ಲಡ್ಡುವಿನಲ್ಲಿ ಬಳಸಿದ ತುಪ್ಪದಲ್ಲಿ ಯಾವುದೇ ಪ್ರಾಣಿ ಕೊಬ್ಬು ಬೆರೆತಿಲ್ಲ ಎಂದು ಸ್ಪಷ್ಟವಾಗಿ ವರದಿ ನೀಡಲಾಗಿದೆ. ಹಾಗಿದ್ದರೂ ಬೇಕೆಂತಲೇ ಫ್ಲೆಕ್ಸ್ಗಳಲ್ಲಿ ತಪ್ಪು ಸಂದೇಶವನ್ನು ಹೇಳುತ್ತಿದ್ದಾರೆಂದು ನಟಿ ರೋಜಾ ಆರೋಪಿಸಿದ್ದಾರೆ.

"ಅಂಗೈಯಿಂದ ಸೂರ್ಯನನ್ನು ಮುಚ್ಚಲು ಸಾಧ್ಯವೇ? ಜಗನ್ ಮೋಹನ್ ರೆಡ್ಡಿ ಬರುತ್ತಿದ್ದರೆ, ಪೊಲೀಸರನ್ನು ಕರೆಸಿ ಬ್ಯಾರಿಕೇಡ್ಗಳನ್ನು ಹಾಕಿಸುತ್ತಿದ್ದಾರೆ. ಪೊಲೀಸರು ಜನರನ್ನು ಎದುರಿಸಿದರೂ ಜನರು ರಸ್ತೆಗೆ ಇಳಿಯುವುದನ್ನು ತಡೆಯಲು ಸಾಧ್ಯವೇ. ಜಗನಣ್ಣನನ್ನು ನೋಡಲು, ಅವರಿಗೆ ಬೆಂಬಲ ವ್ಯಕ್ತಪಡಿಸಲು ಜನರು ಬರುತ್ತಿದ್ದಾರೆ. 'ಬಾಹುಬಲಿ' ಸಿನಿಮಾ ನೋಡಿದ್ದೀರಲ್ವಾ? ಬಲ್ಲಾಳದೇವ ಎಷ್ಟು ಪಿತೂರಿ ಮಾಡಿ ಸಿಂಹಾಸನ ಏರಿದರೂ, ಜನರು ಬಾಹುಬಲಿ ಜೊತೆಗೆ ಇದ್ದರು. ಆದ್ದರಿಂದ, ಇವಿಎಂ ಮೂಲಕ ಗೆದ್ದಿರುವ ಸಂಸದರು, ಶಾಸಕರು, ಮಂತ್ರಿಗಳು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹೆದರಿಸಿದರೆ ಏನಂತೆ? ಆಂಧ್ರಪ್ರದೇಶದಲ್ಲಿ ಹೆದರೋ ಜನ ಯಾರೂ ಇಲ್ಲ" ಎಂದು ರೋಜಾ ಹೇಳಿದ್ದಾರೆ.
"ಜಗನ್ ಅಣ್ಣನಿಗಾಗಿ ಪ್ರಾಣ ತ್ಯಾಗ ಮಾಡಲೂ ಅನೇಕರು ಸಿದ್ಧರಿದ್ದಾರೆ. ನಾವು ಮೈತ್ರಿ ಸರ್ಕಾರದ ಮೇಲೆ ದಾಳಿ ಮಾಡುವುದಕ್ಕೆ ಹೋಗಿಲ್ಲ. ನಮಗೂ ಕೆಲವು ಮೌಲ್ಯಗಳಿವೆ ಎಂದು ಅವರು ತಿಳಿದುಕೊಳ್ಳಬೇಕು ಎಂದು ರೋಜಾ ಖಾರವಾಗಿ ಹೇಳಿದರು. ಸದ್ಯ ವೈಎಸ್ಆರ್ಸಿಪಿ ನಾಯಕಿ ರೋಜಾ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











