X
ಹೋಮ್ ಚಲನಚಿತ್ರಗಳ ಒಳನೋಟ

ಅಣ್ಣಾವ್ರ ಸಿನಿಜೀವನದ ಈ ಅಪರೂಪದ ಸಂಗತಿಗಳನ್ನು ಅಭಿಮಾನಿಗಳು ತಿಳಿದುಕೊಳ್ಳಲೇಬೇಕು!

Author Sowmya Bairappa | Updated: Friday, April 25, 2025, 05:39 AM [IST]

ವರನಟ ಡಾ.ರಾಜ್‌ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಭದ್ರ ಬುನಾದಿ ಹಾಕಿದ ಆದ್ಯರಲ್ಲಿ ಪ್ರಮುಖರು. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲದೇ, ತಮ್ಮ ಸರಳ ಜೀವನದ ಮುಖಾಂತರ ಜನಜೀವನಕ್ಕೆ ಮಾರ್ಗದರ್ಶನವಾಗಿದ್ದರು. ಅಣ್ಣಾವ್ರು ತಮ್ಮ ಜನಪ್ರಿಯತೆಯನ್ನು ಯಾವುದೇ ರಾಜಕೀಯಕ್ಕೆ ಬಳಸಿಕೊಳ್ಳದೇ ಆದರ್ಶವಾಗಿ ಬದುಕಿದ್ದರು. ಇಲ್ಲಿ ಅಭಿಮಾನಿಗಳು ತಿಳಿದುಕೊಳ್ಳಲೇಬೇಕಾದ ರಾಜ್‌ಕುಮಾರ್ ಕುರಿತ ಅಪರೂಪದ ಸಂಗತಿಗಳನ್ನು ನೀಡಲಾಗಿದೆ.


cover image
ಗೋಕಾಕ್ ಚಳುವಳಿ
1

ಕರ್ನಾಟಕದಲ್ಲಿ ಕನ್ನಡ ಕನಿಷ್ಠ ಒಂದು ಭಾಷೆಯಾಗಿಯಾದರೂ ಪ್ರಾಥಮಿಕ ಶಿಕ್ಷಣದಲ್ಲಿ ಇರಬೇಕೆಂಬ ವರದಿಯನ್ನು ವಿ.ಕೃ.ಗೋಕಾಕ್ ನೀಡಿದ್ದರು. ಹಲವಾರು ಸಾಹಿತಿಗಳು ಮತ್ತು ಕನ್ನಡ ಚಳುವಳಿಗಾರರು ಈ ವರದಿ ಅನುಷ್ಠಾನಕ್ಕಾಗಿ ಸರ್ಕಾರವನ್ನು ಒತ್ತಾಯಿಸತೊಡಗಿದರು. ಆದರೆ, ಈ ಹೋರಾಟಕ್ಕೆ ಆನೆ ಬಲ ಬಂದಿದ್ದು ಅಣ್ಣಾವ್ರರಿಂದ. ಡಾ.ರಾಜ್ ನೇತೃತ್ವದಲ್ಲಿ ಇಡೀ ಕನ್ನಡ ಚಿತ್ರರಂಗ ಈ ಹೋರಾಟಕ್ಕೆ ಧುಮುಕಿದ್ದರಿಂದ ಸರ್ಕಾರ ಮಣಿಯಿತು. ಈ ಹೋರಾಟದ ನಿಮಿತ್ಯ ರಾಜ್‌ಕುಮಾರ್ ಕರ್ನಾಟಕದ ಉದ್ದಗಲಗಳನ್ನು ಸಂಚರಿಸಿದ್ದರು.

ಬಾಂಡ್ ಶೈಲಿಯ ಚಿತ್ರಗಳು
2

ಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಶೈಲಿಯ ಚಿತ್ರಗಳಿಗೆ ಮುನ್ನಡಿ ಬರೆದಿದ್ದು ಡಾ.ರಾಜ್‌ಕುಮಾರ್. ಅಣ್ಣಾವ್ರು ನಟಿಸಿದ ಮೊದಲ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾ 1968ರಲ್ಲಿ ತೆರೆಕಂಡ ಜೇಡರ ಬಲೆ. ಆನಂತರ ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕಪಾಟ್‌ನಲ್ಲಿ ಸಿಐಡಿ 999 ಮತ್ತು ಆಪರೇಷನ್ ಡೈಮಂಡ್‌ ರಾಕೆಟ್ ಚಿತ್ರಗಳು ಮೂಡಿಬಂದವು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೊದಲ ಬಾರಿಗೆ  ಮಿನಿಯೇಚರ್ ಫೇಕಿಂಗ್ ತಂತ್ರಜ್ಞಾನ ಬಳಸಿದ್ದು ಜೇಡರ ಬಲೆ ಚಿತ್ರದಲ್ಲಿ.

ರಾಜಕೀಯ ನಿರ್ಲಿಪ್ತತೆ
3

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ನಂತರ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಇಂದಿರಾ ಗಾಂಧಿಗೆ, 1978ರ ಚುಣಾವಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರುನಲ್ಲಿ ಸ್ಪರ್ಧಿಸಿ ಗೆಲುವು ನೀಡಲು ದೇವರಾಜ್ ಅರಸು ನಿರ್ಧರಿಸಿದ್ದರು. ಜನತಾ ಪಕ್ಷ ಇಂದಿರಾ ಗಾಂಧಿ ವಿರುದ್ಧ ಡಾ.ರಾಜ್‌ಕುಮಾರ್ ಅವರನ್ನು ನಿಲ್ಲಿಸಲು ತೀರ್ಮಾನಿಸಿ, ಅಣ್ಣಾವ್ರ ಬಳಿ ಮುಖ್ಯಮಂತ್ರಿ ಸ್ಥಾನದ ಪ್ರಸ್ಥಾವನೆ ಸಲ್ಲಿಸಿ ವಿನಂತಿ ಮಾಡಿದರು. ಆದರೆ, ಡಾ.ರಾಜ್ ಇದನ್ನು ನಯವಾಗಿ ತಿರಸ್ಕರಿಸಿದರು. ಆದರೂ ಅಣ್ಣಾವ್ರು ಚುನಾವಣೆಯಲ್ಲಿ ನಿಲ್ಲುತ್ತಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇದರಿಂದ ಕಾಂಗ್ರೆಸ್ ಪಕ್ಷ ಕೂಡ ಹೆದರಿತ್ತು. ಆದರೆ, ರಾಜ್‌ಕುಮಾರ್ ಚುನಾವಣೆ ನಾಮನಿರ್ದೇಶನದ ಒಂದು ವಾರ ಯಾರ ಸಂಪರ್ಕಕ್ಕೆ ಸಿಗದೇ ಮನೆಯಿಂದ ದೂರವಿದ್ದರು. ಜೀವನದ ಕೊನೆವರೆಗೂ ಇದನ್ನೇ ಪಾಲಿಸಿದರು. ಜೊತೆಗೆ ರಾಜಕೀಯದಲ್ಲಿದ್ದ ತಮ್ಮ ಸಂಬಂಧಿಗಳು ಮತ್ತು ಅನುಯಾಯಿಗಳಿಗೂ ಯಾವುದೇ ತರಹದ ರಾಜಕೀಯ ಬೆಂಬಲ ನೀಡಲಿಲ್ಲ. ಇದೇ ಸಮಯದಲ್ಲಿ ಪಕ್ಕದ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್, ಆಂಧ್ರದಲ್ಲಿ ಎನ್.ಟಿ.ರಾಮರಾವ್, ಕೇರಳದಲ್ಲಿ ಪ್ರೇಮ ನಾಜಿರ್ ಮುಂತಾದ ಚಿತ್ರನಟರು ತಮ್ಮ ಸಿನಿ ಜನಪ್ರಿಯತೆಯಿಂದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು.

ಶ್ರೇಷ್ಠ ಗಾಯಕ
4

ಡಾ.ರಾಜ್ ಒಳ್ಳೇ ನಟರಷ್ಟೇ ಅಲ್ಲ, ಅವರ ಕಂಠ ಕೂಡ ಅದ್ಭುತವಾಗಿತ್ತು. ಇವರು ಹಾಡಿದ ಜೀವನ ಚೈತ್ರ ಚಿತ್ರದ `ನಾದಮಯ' ಗೀತೆಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟನೆಯ `ಮುದ್ದಿನ ಮಾವ' ಚಿತ್ರದ ಗೀತೆಗೂ ಎಸ್‌ಪಿಬಿ ಜೊತೆಗೆ ಅಣ್ಣಾವ್ರು ಜೊತೆಯಾಗಿದ್ದರು. ಹೀಗೆ ಖ್ಯಾತ ನಟರೊಬ್ಬರು ಖ್ಯಾತ ಗಾಯಕನ ಜೊತೆ ಹಾಡಿದ್ದು ವಿಶೇಷ. ಇದಷ್ಟೇ ಅಲ್ಲದೇ, ರಾಜ್‌ಕುಮಾರ್ ನೂರಾರು ಭಕ್ತಿ ಗೀತೆಗಳ ಆಲ್ಬಂಗಳಲ್ಲಿ ಹಾಡಿದ್ದಾರೆ. ಅವುಗಳಲ್ಲಿ ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ಗೀತೆಗಳೂ ತುಂಬಾ ಪ್ರಸಿದ್ಧಿಯಾಗಿವೆ. ಜೊತೆಗೆ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ನೆರವಾಗಲು ಹಲವಾರು ಸ್ಥಳಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಮಾಡಿ, ಅದರಿಂದ ಬಂದ ಹಣದಿಂದ ನೆರವು ಒದಗಿಸುತ್ತಿದ್ದರು.

ನಂದಿನಿ ಹಾಲಿನ ಜಾಹೀರಾತು
5

ಜೀವನದಲ್ಲಿ ಎಂದೂ ಯಾವುದೇ ಜಾಹೀರಾತುಗಳಲ್ಲಿ ಭಾಗವಹಿಸಿದ ರಾಜ್, ಕರ್ನಾಟಕ ಹಾಲು ಮಂಡಳಿಯ ನಂದಿನಿ ಹಾಲಿನ ಜಾಹೀರಾತಿನಲ್ಲಿ ಉಚಿತವಾಗಿ ಅಭಿನಯಿಸಿದ್ದರು. ಅಣ್ಣಾವ್ರ ನಂತರದಲ್ಲಿ ಪುನೀತ್ ರಾಜ್‌ಕುಮಾರ್ ಈ ಜಾಹೀರಾತಿನಲ್ಲಿ ಸಮಯ ಸಮಯಕ್ಕೆ ಉಚಿತವಾಗಿ ಅಭಿನಯಿಸಿದ್ದಾರೆ. ಜೊತೆಗೆ ಪುನೀತ್ ನಂದಿನಿಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರು.

ನೇತ್ರದಾನ
6

ನಾವು ತೀರಿ ಹೋದಾಗ ನಮ್ಮ ಕಣ್ಣುಗಳನ್ನು ದಾನ ಮಾಡಿದರೆ, ಮುಂದಿನ ಜನ್ಮದಲ್ಲಿ ನಾವು ಕುರಡರಾಗಿ ಜನಿಸುತ್ತೇವೆ ಎಂಬ ಬಲವಾದ ನಂಬಿಕೆಯಿತ್ತು. ಒಬ್ಬ ವೈದ್ಯರು ಡಾ.ರಾಜ್ ಅವರಿಗೆ ನಿಮ್ಮ ಕಣ್ಣುಗಳನ್ನು ದಾನ ಮಾಡಿ ಅಗ್ರಪಂಕ್ತಿ ಹಾಕಿದರೆ, ನಿಮ್ಮ ಹಿಂದೆ ಸಾವಿರಾರು ಜನ ಅನುಸರಿಸುತ್ತಾರೆ ಎಂದು ಹೇಳಿದರು. ಆಗ ಅಣ್ಣಾವ್ರು ನೇತ್ರದಾನ ಮಾಡುವುದು ದೇಹ ತೊರೆದ ಮೇಲೆ ಎಂಬ ವಿಷಯ ಗೊತ್ತಿರದೆ, `ಹೇಗಿದ್ದರೂ ನನಗೆ ವಯಸ್ಸಾಯ್ತು, ಎಲ್ಲವನ್ನೂ ನೋಡಿದ್ದೇನೆ, ನನ್ನ ಕಣ್ಣುಗಳನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು' ಎಂದರು. ನಂತರ ಅದರ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಸರಿಯಾದ ಮಾಹಿತಿ ನೀಡಿದರು. ಇದು ರಾಜ್ ಮುಗ್ಧತೆ ಮತ್ತು ಜೀವಂತವಿರುವಾಗಲೇ ನೇತ್ರದಾನ ಮಾಡಲು ಒಪ್ಪಿದ ಅವರ ಪರಿಶುದ್ಧ ಮನಸ್ಥಿತಿಯನ್ನು ಹೇಳುತ್ತದೆ. ನಂತರ ರಾಜ್ ಮೂವರು ಪುತ್ರರು ನೇತ್ರದಾನ ಮಾತ್ರವಲ್ಲದೇ, ದೇಹದಾನ ಕೂಡ ಮಾಡುವುದಾಗಿ ಘೋಷಿಸಿದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+