X
ಹೋಮ್ ಚಲನಚಿತ್ರಗಳ ಒಳನೋಟ

ದರ್ಶನ್ ನಟನೆಯ 'ಕಾಟೇರ' ಸಿನಿಮಾ ಕಥೆ, ಕಲಾವಿದರ ಅಭಿನಯ, ರೇಟಿಂಗ್ಸ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Author Sowmya Bairappa | Published: Friday, December 29, 2023, 11:06 AM [IST]

ಚಾಲೆಂಜಿಂಗ್ ಸ್ಟಾರ್‌ ದರ್ಶನ್ ತೂಗುದೀಪ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ ಬಿಡುಗಡೆಯಾಗಿದೆ. ಮಧ್ಯರಾತ್ರಿ 12 ಗಂಟೆಗೆ ಕೆಲ ಚಿತ್ರಮಂದಿರಗಳಲ್ಲಿ 'ಕಾಟೇರ'ನ ದರ್ಶನ ಆರಂಬವಾಗಿದ್ದು, ಚಾಲೆಂಜಿಂಗ್ ಸ್ಟಾರ್ ಆರ್ಭಟಕ್ಕೆ ಅಭಿಮಾನಿಗಳು ಶಿಳ್ಳೆ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಇಲ್ಲಿ ಕಾಟೇರ ಸಿನಿಮಾದ ಕಥೆ, ಕಲಾವಿದರ ಅಭಿನಯ ಹಾಗೂ ರೇಟಿಂಗ್ ಸೇರಿದಂತೆ ಇತರ ಮಾಹಿತಿಯನ್ನು ನೀಡಲಾಗಿದೆ.


cover image
ಸಿನಿಮಾ ಕಥೆ

1989ರ ಸಮಯದಲ್ಲಿ ಭೀಮನಹಳ್ಳಿ ಹಾಗೂ ಮಲ್ಲನಹಳ್ಳಿ ಜನರು ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ಜೊತೆಗೆ ತಮ್ಮ ಊರಿಗಾಗಿ ಹೋರಾಡಿ ಜೈಲು ಸೇರಿದ 'ಕಾಟೇರ'ನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರಬರುವ ಕಾಟೇರ, ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದೆಡೆ, ನಾಲೆ ಅಗೆಯುವ ವೇಳೆ ಒಂದೇ ಜಾಗದಲ್ಲಿ 107ರ ಜನರ ಅಸ್ಥಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನರು ಸತ್ತು ಮಣ್ಣಾಗಿದ್ದೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? 'ಕಾಟೇರ' ಜೈಲು ಸೇರಿದ್ಯಾಕೆ? ಎಂಬುದೇ ಸಿನಿಮಾದ ಒನ್‌ಲೈನ್ ಕಥೆ. 

 

ಎರಡು ಕಾಲಘಟ್ಟದಲ್ಲಿ ಸಾಗುವ ಸಿನಿಮಾ

ಕಾಟೇರ ಸಿನಿಮಾ ಕಥೆ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ನಿರ್ದೇಶಕ ತರುಣ್ ಸುಧೀರ್ ಫ್ಯಾಶ್‌ಬ್ಯಾಕ್ ತಂತ್ರ ಬಳಸಿ ಕಥೆ ಹೇಳುತ್ತಾ ಸಾಗುತ್ತಾರೆ. ದೇವರಾಯ ಮತ್ತು ಕಾಳೇಗೌಡ ಜೊತೆ ಸೇರಿ ಇನ್ನು ಕೆಲ ಜಮೀನ್ದಾರರು ಭೂಮಿಯನ್ನು ರೈತರಿಗೆ ಗೇಣಿಗೆ ನೀಡಿ, ಹೆಚ್ಚಿನ ಪಾಲನ್ನು ಪಡೆಯುತ್ತಿರುತ್ತಾರೆ. ಧಣಿಗಳು ಹೇಳಿದನ್ನು ಕೇಳಬೇಕು, ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲವೆಂದು ಇಡೀ ಊರಿನ ಜನ ಬದುಕುತ್ತಿರುತ್ತಾರೆ. 'ಕಾಟೇರ' ಕೂಡ ಈ ಗುಂಪಿನವನೇ. ಆದರೆ, ಆತ ತನ್ನವರಿಗೆ ನೋವಾದರೆ ಮಾತ್ರ ಸಹಿಸುವುದಿಲ್ಲ. 'ಕಾಟೇರ' ತನ್ನವರಿಗೆ ಹುಲಿ ಆಗೋಕು ಸಿದ್ಧ, ಬಲಿ ಆಗೋಕು ಸಿದ್ಧ ಎಂಬ ಜಾಯಮಾನದವನು. ಶಾನುಭೋಗರ ಮಗಳು ಪ್ರಭಾವತಿ (ಆರಾಧನಾ) ಕೂಡ ಆತನ ಬೆನ್ನಿಗೆ ನಿಲ್ಲುತ್ತಾಳೆ. ಚಿತ್ರದ ಟ್ರೈಲರ್‌ ಕೊನೆಯಲ್ಲಿ ದರ್ಶನ್ ವಯಸ್ಸಾದ ವ್ಯಕ್ತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಲುಕ್‌ನಲ್ಲಿ ತೆರೆಮೇಲೆ ಎಂಟ್ರಿ ಕೊಡುತ್ತಾರೆ. 

 

ಸಾಮಾಜಿಕ ಪಿಡುಗುಗಳ ಬಗ್ಗೆ

ಕಾಟೇರ ಸಿನಿಮಾದಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಭೇದ ಭಾವ ಆ ಕಾಲದಲ್ಲಿ ಎಷ್ಟರಮಟ್ಟಿಗಿತ್ತು ಎನ್ನುವುದನ್ನು ತೋರಿಸಲಾಗಿದೆ. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ದೇಶದಲ್ಲಿ ಎಂತಹ ಬದಲಾವಣೆಗಳನ್ನು ತಂದಿತ್ತು. ತಮ್ಮ ಕಾಲಡಿ ಇರುವವರು ಈ ಕಾಯ್ದೆಯಿಂದ ಎದ್ದು ನಿಲ್ತಾರೆ ಎಂದಾಗ, ಅದನ್ನೆಲ್ಲಾ ಸಹಿಸದವರು ಏನೆಲ್ಲಾ ಮಾಡಿರಬಹುದು? ಎನ್ನುವುದನ್ನು ಕಾಟೇರ ಸಿನಿಮಾದಲ್ಲಿ ಹೇಳಲಾಗಿದೆ. ಜೊತೆಗೆ ಮನುಷ್ಯ ಸಂಬಂಧಗಳ ಬಗ್ಗೆಯೂ ಚಿತ್ರ ಮಾತಾಡುತ್ತದೆ. 

 

ಕಲಾವಿದರ ಅಭಿನಯ

ಈ ಸಿನಿಮಾದಲ್ಲಿ ದರ್ಶನ್ 'ಕಾಟೇರ'ನಾಗಿ ಎರಡು ಶೇಡ್‌ಗಳಲ್ಲಿ ಅಬ್ಬರಿಸಿದ್ದಾರೆ. ಒನ್‌ಮ್ಯಾನ್ ಶೋನಂತೆ ದರ್ಶನ್ ಮಿಂಚಿದ್ದಾರೆ. ಆಕ್ಷನ್ ಜೊತೆಗೂ ಭಾವನಾತ್ಮಕ ಸನ್ನಿವೇಶಗಳಲ್ಲೂ ಸಖತ್ ಇಷ್ಟಾಗುತ್ತಾರೆ. ನಾಯಕಿ ಪ್ರಭಾವತಿಯಾಗಿ ಆರಾಧಾ ರಾಮ್ ಕೂಡ ತಮ್ಮ ಚಿಕ್ಕ ಅವಕಾಶವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ದುಷ್ಟ ದೇವರಾಯನಾಗಿ ಜಗಪತಿ ಬಾಬು, ಕಟುಕ ಕಾಳೇಗೌಡನಾಗಿ ವಿನೋದ್ ಆಳ್ವ, ಕಾಟೇರನ ಅಕ್ಕನಾಗಿ ಶೃತಿ ಹಾಗೂ ಭಾವನಾಗಿ ಕುಮಾರ್ ಗೋವಿಂದ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ಪೊಲೀಸ್ ದಪೇದಾರ್ ಆಗಿ ಅಚ್ಯುತ್ ಕುಮಾರ್, ಶಾನುಭೋಗರಾಗಿ ಅವಿನಾಶ್ ಗಮನ ಸೆಳೆದಿದ್ದಾರೆ. 

ಹಳ್ಳಿ ಸೊಗಡಿನ ಚಿತ್ರ

ಕಾಟೇರ ಸಿನಿಮಾ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ನಟ ದರ್ಶನ್ ತಮ್ಮ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದು, ಕಥೆಯ ಗೇಜ್ ಅರಿತು ಹಾಗೂ ತಮ್ಮ ಇಮೇಜ್ ಪಕ್ಕಕ್ಕಿಟ್ಟು ಈ ಪಾತ್ರ ಮಾಡಿದ್ದಾರೆ. ಇದೊಂದು ಮನುಷ್ಯಕ್ಕಿಂತ ದೊಡ್ಡದು ಏನು ಇಲ್ಲ ಎಂಬ ಸಂದೇಶ ಹೊತ್ತು ಬಂದಿರುವ ಸಿನಿಮಾ. ಕಾಟೇರ ದರ್ಶನ್ ಅಭಿಮಾನಿಗಳ ಜೊತೆಗೆ ಫ್ಯಾಮಿಲಿ ಆಡಿಯೆನ್ಸ್ ಗಮನ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+