ಇಂದುಮತಿಯಾಗಿ ಕಿರುತೆರೆಗೆ ಮರಳಿದ ತೇಜಸ್ವಿನಿಗೆ ನಟನೆಯೆಂದರೆ ಪ್ರೀತಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಿರುವ ಹೊಚ್ಚ ಹೊಸ ಭಕ್ತಿಪ್ರಧಾನ ಧಾರಾವಾಹಿ 'ಶ್ರೀ ಉಧೋ ಉಧೋ ರೇಣುಕ ಯಲ್ಲವ್ವ' ದಲ್ಲಿ ರೇಣು ಮಹಾರಾಜನ ಮೂರನೇ ಪತ್ನಿ ಇಂದುಮತಿಯಾಗಿ ಅಭಿನಯಿಸುತ್ತಿರುವ ತೇಜಸ್ವಿನಿ ಶೇಖರ್ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಚೆಲುವೆ. ಶ್ರುತಿ ನಾಯ್ಡು ನಿರ್ದೇಶನದಡಿಯಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ನಾಯಕಿ ಜಿಲ್ಲಾಧಿಕಾರಿ ಇಂದಿರಾ ಸತ್ಯಮೂರ್ತಿ ಆಗಿ ನಟಿಸಿದ್ದರು.
ತೇಜಸ್ವಿನಿ ಶೇಖರ್ ಇದೀಗ ಭಕ್ತಿಪ್ರಧಾನ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
Katheyondu Shuruvagide: ಕೃತಿಯನ್ನು ಮದುವೆಯಾದರೂ ವರ್ಣಿಕಾಳ ಹುಡುಕಾಟ ನಡೆಸುತ್ತಿರುವುದ್ಯಾಕೆ ಯುವರಾಜ..?
ಪತಿ ರೇಣು ಮಹಾರಾಜನಂತೆ ಶಿವನ ಭಕ್ತೆಯಾಗಿರುವ ಇಂದುಮತೊ ಸದಾ ಹಸನ್ಮುಖಿ. ಮಹಾರಾಜನ ಮೂರನೇ ಪತ್ನಿಯಾಗಿರುವ ಈಕೆ ತಾಯಿಯ ಮನಸ್ಸಿರುವ ಹುಡುಗಿ. ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟು ನಾಯಕಿಯಾಗಿ ಮಿಂಚಿದ ತೇಜಸ್ವಿನಿ ಇದೀಗ ಇದೇ ಮೊದಲ ಬಾರಿಗೆ ಭಕ್ತಿಪ್ರಧಾನ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಅಚಾನಕ್ ಆಗಿ ದೊರೆತ ಅವಕಾಶದಿಂದ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ತೇಜಸ್ವಿನಿ ಶೇಖರ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ತೇಜಸ್ವಿನಿ ಹಾಕಿರುವಂತಹ ಫೋಟೋ ನೋಡಿದ ನಿರ್ದೇಶಕರೊಬ್ಬರು ನಟಿಸುವ ಅವಕಾಶ ನೀಡಿದರು.

'ಸೌಭಾಗ್ಯವತಿ' ಮೊದಲ ಧಾರಾವಾಹಿ
ಧಾರಾವಾಹಿಯಲ್ಲಿ ಅವಕಾಶ ದೊರೆತಾಗ ಬೇಡ ಎನ್ನಲಾಗದೇ ಆಡಿಶನ್ ಗೆ ಹೋದ ತೇಜಸ್ವಿನಿ ಶೇಖರ್ ಸೆಲೆಕ್ಟ್ ಆದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೌಭಾಗ್ಯವತಿ' ಧಾರಾವಾಹಿಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ತೇಜಸ್ವಿನಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ
'ಸೌಭಾಗ್ಯವತಿ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯ 'ಮಧುಬಾಲಾ' ಧಾರಾವಾಹಿಯಲ್ಲಿ ಈಕೆ ಬಣ್ಣ ಹಚ್ಚಿದರು. ಮುಂದೆ ಜೀ ಕನ್ನಡ ವಾಹಿನಿಯ 'ಮಹಾನದಿ' ಧಾರಾವಾಹಿಯಲ್ಲಿ ನಾಯಕಿ ಅಕ್ಕ ಮೇಘನಾ ಆಗಿ ಮೋಡಿ ಮಾಡಿದ ತೇಜಸ್ವಿನಿಗೆ ಆ ಪಾತ್ರ ನೀಡಿದ ಜನಪ್ರಿಯತೆ ಅಷ್ಟಿಷ್ಟಲ್ಲ. ಸ್ಟಾರ್ ಸುವರ್ಣ ವಾಹಿನಿಯ 'ನೀಲಿ' ಧಾರಾವಾಹಿಯಲ್ಲಿ ರೇಖಾ ಪಾತ್ರಕ್ಕೆ ಜೀವ ತುಂಬಿದ್ದ ಈಕೆ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡಿದರು.

'ಲಾಂಗ್ ಡ್ರೈವ್' ಸಿನಿಮಾದಲ್ಲಿ ನಟನೆ
ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದ ತೇಜಸ್ವಿನಿ ಹಿರಿತೆರೆಗೂ ಕಾಲಿಟ್ಟಾಗಿದೆ. 'ಲಾಂಗ್ ಡ್ರೈವ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೂ ಈಕೆ ಪಾದಾರ್ಪಣೆ ಮಾಡಿಯಾಗಿದೆ. ಕಿರುತೆರೆಯಲ್ಲಿ ಗಮನ ಸೆಳೆದವರಿಗೆ ಸಹಜವಾಗಿಯೇ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ. ಅದನ್ನು ಎಷ್ಟರಮಟ್ಟಿಗೆ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ.

ನಟನೆಯನ್ನು ತುಂಬಾ ಪ್ರೀತಿಸುತ್ತೇನೆ
"ನಾನು ನಟಿಯಾಗಬೇಕು ಎಂಬ ಕನಸನ್ನು ಕೂಡಾ ಕಂಡವಳಲ್ಲ. ಬದಲಿಗೆ ಅದೊಂದು ಆಕಸ್ಮಿಕವಾಗಿ ದೊರೆತಂತಹ ಅವಕಾಶ. ಬಂದ ಅವಕಾಶವನ್ನು ಪ್ರಯತ್ನಿಸದೇ ಬೇಡ ಎನ್ನಲು ಮನಸ್ಸಾಗಲಿಲ್ಲ. ಕಿರುತೆರೆ ಮೂಲಕ ಬೆಳ್ಳಿತೆರೆಯಲ್ಲಿ ನಟಿಸುತ್ತಿರುವ ನಾನು ಇದೀಗ ನಟನೆಯಲ್ಲಿ ಬ್ಯುಸಿ. ಈಗಂತೂ ನನಗೆ ನಟನೆಯೆಂದರೆ ತುಂಬಾ ಪ್ರೀತಿ" ಎಂದು ಸಂತಸದಿಂದ ಹೇಳುತ್ತಾರೆ ತೇಜಸ್ವಿನಿ ಶೇಖರ್.


Click it and Unblock the Notifications











