'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾದ ಧಾರಾವಾಹಿಗಳಲ್ಲಿ 'ಜೊತೆಜೊತೆಯಲಿ' ಕೂಡ ಒಂದು. ಜೀ ಕನ್ನಡದಲ್ಲಿ ಹಲವು ದಿನಗಳಿಂದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರು ಕೂಡ ಈ ಧಾರಾವಾಹಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಆದ್ರೀಗ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅನಿರುದ್ಧ್ ವಿರುದ್ಧ 'ಜೊತೆ ಜೊತೆಯಲಿ' ತಂಡ ತಿರುಗಿಬಿದ್ದಿದೆ ಎಂಬ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ನಡುವೆ ಅಂತಹದ್ದೇನಾಯ್ತು? ಈ ವೈಮನಸ್ಸು ಯಾಕೆ? ಕಿರುತೆರೆ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅನಿರುದ್ಧ್ ಧಾರಾವಾಹಿಯಿಂದ ಔಟ್
'ಜೊತೆಜೊತೆಯಲಿ' ತಂಡ ನಟ ಅನಿರುದ್ಧ್ ವಿರುದ್ಧ ತಿರುಗಿಬಿದ್ದಿದೆ. ಕಳೆದ ಕೆಲವು ದಿನಗಳಿಂದ ಅನಿರುದ್ಧ್ ವರ್ತನೆಯಿಂದ ಧಾರಾವಾಹಿ ತಂಡ ಬೇಸತ್ತು ಹೋಗಿತ್ತು. ಹೀಗಾಗಿ ಇಂದು ಧಾರಾವಾಹಿಯಿಂದಲೇ ಹೊರಹಾಕಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಇಂದು ( ಆಗಸ್ಟ್ 18) ಅನಿರುದ್ಧ್ ಅವರನ್ನು 'ಜೊತೆ ಜೊತೆಯಲಿ' ಧಾರಾವಾಹಿಯಿಂದ ತಂಡ ಕೈ ಬಿಟ್ಟಿದೆ. ತಂಡದ ಈ ನಿರ್ಧಾರವನ್ನು ಜೀ ಕನ್ನಡ ವಾಹಿನಿ ಕೂಡ ಸಮ್ಮತಿಸಿಕೊಂಡಿದೆ ಎನ್ನುವ ಸುದ್ಧಿ ಫಿಲ್ಮಿಬೀಟ್ಗೆ ಲಭ್ಯವಾಗಿದೆ.

ಅಷ್ಟಕ್ಕೂ ಆಗಿದ್ದೇನು?
'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಆರ್ಯವರ್ಧನ್ ಅಂತಲೇ ಜನಪ್ರಿಯವಾಗಿರುವ ಅನಿರುದ್ಧ್ ಹಾಗೂ ತಂಡದ ನಡುವೆ ಮೊದಲಿನಿಂದಲೂ ವೈಮಸ್ಸು ಇತ್ತು ಎನ್ನಲಾಗಿದೆ. ಇಂದು (ಆಗಸ್ಟ್ 18) ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ತಂಡ ಒಪ್ಪದೇ ಇದ್ದಾಗ, ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರನಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅನಿರುದ್ಧ್ ಅವರ ಈ ವರ್ತನೆಯಿಂದ ಬೇಸತ್ತಿರೋ ತಂಡ ಈ ಬಾರಿ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಕಿರುತೆರೆಯಿಂದ ಬಹಿಷ್ಕಾರ?
ಅನಿರುದ್ದ್ 'ಜೊತೆಜೊತೆಯಲಿ' ಧಾರಾವಾಹಿ ಶೂಟಿಂಗ್ನಿಂದ ಹೊರ ಬೀಳುತ್ತಿದ್ದಂತೆ ಇತ್ತ ನಿರ್ಮಾಪಕ ಆರೂರು ಜಗದೀಶ್ ಹಾಗೂ ನಿರ್ದೇಶಕ ಮಧು ಉತ್ತಮ್ ಇಬ್ಬರೂ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಸಿ, ಇನ್ನು ಮುಂದೆ ಯಾವುದೇ ನಿರ್ಮಾಪಕರು ಧಾರಾವಾಹಿಯಲ್ಲಿ ಅನಿರುದ್ದ್ಗ ಅವಕಾಶ ನೀಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಸುದ್ದಿ ಕೂಡ ಕಿರುತೆರೆವಲಯದಲ್ಲಿ ಕೇಳಿ ಬರುತ್ತಿದೆ.

ಇದು ಮೊದಲೇನಲ್ಲ
ಅನಿರುದ್ಧ್ ಅವರ ಈ ವರ್ತನೆ ಇದೇ ಮೊದಲೇನಲ್ಲ ಅಂತ ಕಿರುತೆರೆ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅನಿರುದ್ಧ್ ಈ ಹಿಂದೆ ಕೂಡ ಎರಡು ಮೂರು ಬಾರಿ ಶೂಟಿಂಗ್ ಮಾಡುವುದಿಲ್ಲವೆಂದು ಹೊರಹೋಗಿದ್ದರು. ಬಳಿಕ ಚಿತ್ರತಂಡ ಹಾಗೂ ಜೀ ಕನ್ನಡ ವಾಹಿನಿ ಅವರನ್ನು ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ, ಈ ಬಾರಿಗೆ ಮುನಿಸಿಕೊಂಡು ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೊರಟಿದ್ದರಿಂದ 'ಜೊತೆ ಜೊತೆಯಲಿ' ತಂಡ ಅನಿರುದ್ಧ್ ವಿರುದ್ಧ ಕಿಡಿಕಾರಿದೆ ಎನ್ನಲಾಗಿದೆ.


Click it and Unblock the Notifications











