ನೇಮು-ಫೇಮು ನನಗೆ ಇವತ್ತು ಬಂದಿದ್ದಲ್ಲ: ನಿರ್ಮಾಪಕರಿಗೆ ಮತ್ತೆ ನಟ ಅನಿರುದ್ಧ್ ತಿರುಗೇಟು!
'ಜೊತೆ ಜೊತೆಯಲಿ' ಧಾರಾವಾಹಿ ವಿವಾದ ದಿನದಿಂದ ದಿನಕ್ಕೆ ಮತ್ತಷ್ಟು ಕಗ್ಗಂಟಾಗುತ್ತಲೇ ಹೋಗುತ್ತಿದೆ. ನಿನ್ನೆ (ಆಗಸ್ಟ್ 20) ಅನಿರುದ್ಧ್ ಪ್ರೆಸ್ ಮೀಟ್ ಮಾಡಿ ವಿವಾದದ ಬಗ್ಗೆ ಸಮಜಾಯಿಷಿ ನೀಡುತ್ತಿದ್ದಂತೆ, ನಿರ್ಮಾಪಕರು ಕೂಡ ಪ್ರತಿಕಾಗೋಷ್ಠಿ ಮಾಡಿದ್ದರು. ಆರೂರು ಜಗದೀಶ್ , ಕಿರುತೆರೆ ನಿರ್ಮಾಪಕರು ಹಾಗೂ ಜೀ ಕನ್ನಡ ಪ್ರತಿನಿಧಿಯಾಗಿ ಬಂದಿದ್ದ ಸುಧೀಂದ್ರ ಭಾರದ್ವಾಜ್ ನಟ ಅನಿರುದ್ಧ್ ವಿರುದ್ಧವೇ ಆರೋಪ ಮಾಡಿದ್ದರು.
ಇಂದು (ಆಗಸ್ಟ್ 21) ಮತ್ತೆ ಅನಿರುದ್ಧ್ ಮಾಧ್ಯಮಗಳ ಮುಂದೆ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತ್ಯಾರೋಪ ಮಾಡಿದ್ದಾರೆ. ಆರೂರು ಜಗದೀಶ್, ಜೀ ಕನ್ನಡ ಸಂಸ್ಥೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ನಟ ಅನಿರುದ್ಧ್ ಅವರನ್ನು ದುರಹಂಕಾರದಿಂದ ನಡೆದುಕೊಂಡಿದ್ದಾರೆ. ಕ್ಯಾರಾವ್ಯಾನ್ ಡಿಮ್ಯಾಂಡ್ ಮಾಡುತ್ತಿದ್ದರು ಎಂದೆಲ್ಲಾ ಆರೋಪಿಸಿದ್ದರು. ಅದಕ್ಕೆ ಅನಿರುದ್ಧ್ ತಿರುಗೇಟು ನೀಡಿದ್ದಾರೆ. ಇದೇ ವೇಳೆ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಾರಾ? ಇಲ್ವಾ ಅನ್ನೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಿರುದ್ಧ್ ಹೇಳಿಕೆಯ ಸಾರಾಂಶಗಳು ಇಲ್ಲಿವೆ.

'ದುರಹಂಕಾರದಿಂದ ನಡೆದುಕೊಂಡಿಲ್ಲ'
ಅನಿರುದ್ಧ್ ಜಯನಗರದ ನಿವಾಸದಲ್ಲಿ 'ಜೊತೆಜೊತೆಯಲಿ' ತಂಡ ಮಾಡಿದ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. "ಇದುವರೆಗೂ ನಾನು ದುರಹಂಕಾರದಿಂದ ನಡೆದುಕೊಂಡಿಲ್ಲ. ನನ್ನ ಸಹೋದ್ಯೋಗಿಗಳನ್ನು ನೀವು ಕೇಳಿ. ನಾನು ಕೋಪಿಸಿಕೊಂಡಿದ್ದೇನೆ. ಮುಂದೆನೂ ಕೋಪ ಮಾಡಿಕೊಳ್ಳುತ್ತೇನೆ. ಆದರೆ ನಾನು ದುರಹಂಕಾರದಿಂದ ನಡೆದುಕೊಂಡಿಲ್ಲ. ನನ್ನಲ್ಲಿ ದುರಹಂಕಾರ, ಸ್ಟಾರ್ ಆ್ಯಟಿಡ್ಯೂಡ್ ಇದ್ದಿದ್ರೆ, ನಾನು ಕಸದ ಪಕ್ಕ ಕುಳಿತು ವಿಡಿಯೋ ಮಾಡುತ್ತಿರಲಿಲ್ಲ. ಕೆಲವರು ಹೇಳಿದ್ರು ಯಶಸ್ಸು ಬಂದ್ಮೇಲೆ ದುರಹಂಕಾರ ಬಂದಿದೆ ಅಂತ. ನಾನು ಹಲವು ಸಿನಿಮಾಗಳನ್ನು ಮಾಡಿದ್ದೇನೆ. 'ಜೊತೆ ಜೊತೆಯಲಿ' ಧಾರಾವಾಹಿ ಮಾಡುವ ಮುಂಚೆನೇ ಯಶಸ್ಸು ನನಗೆ ಸಿಕ್ಕಿತ್ತು. ನನಗೆ ಯಾವುದೇ ಇನ್ ಸೆಕ್ಯೂರಿಟಿ ಇಲ್ಲ. ನನಗೆ ಕೆಲಸ ಸಿಕ್ಕೇ ಸಿಗುತ್ತೆ." ಎಂದು ಅನಿರುದ್ಧ್ ನುಡಿದಿದ್ದಾರೆ.

ಸುಮ್ಸುಮ್ನೆ ಕ್ಯಾರಾವ್ಯಾನ್ ಕೇಳಿಲ್ಲ
"ನಾನು ಸುಮ್ಮ ಸುಮ್ಮನೆ ಕ್ಯಾರವ್ಯಾನ್ ಕೇಳಲ್ಲ. ನಾವು ಶೂಟ್ ಮಾಡೋ ಸ್ಥಳದಲ್ಲಿ ಕ್ಯಾರವ್ಯಾನ್ ಅವಶ್ಯಕತೆ ಇತ್ತು. ಎಲ್ಲೆಲ್ಲೋ ಶೂಟ್ ಮಾಡುವಾಗ ಅಲ್ಲಿ ಬಟ್ಟೆ ಬದಲಾಯಿಸಿಕೊಳ್ಳೋಕೆ ಏನೂ ಇರಲ್ಲ. ಹೆಣ್ಣು ಮಕ್ಕಳು ಬೇರೆ ಎಲ್ಲೋ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಂದಿದ್ದಾರೆ. ನಾನೇ ಎರಡು ಮೂರು ಬಾರಿ ಹೊರಗೆ ಬಾತ್ ರೂಮ್ಗೆ ಹೋಗಿದ್ದೇನೆ. ಪ್ರತಿ ಬಾರಿ ಹೊರಗೆ ಹೋಗಲಿಕ್ಕೆ ಅಗಲ್ಲ. ನಾವು ಶೂಟ್ ಮಾಡೋ ಸ್ಥಳದಲ್ಲಿ ಕ್ಯಾರವ್ಯಾನ್ ಅವಶ್ಯಕತೆ ಇತ್ತು. ಅದಕ್ಕೆ ಕೇಳದೆ. ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.

'ನೇಮು-ಫೇಮು ಈಗ ಬಂದಿದ್ದಲ್ಲ'
" ಜೊತೆ ಜೊತೆಯಲಿ ಧಾರಾವಾಹಿಯಿಂದ ನೇಮು-ಫೇಮು ಬಂದ್ಮೇಲೆ ಹೀಗೆ ಆಡುತ್ತಿದ್ದಾರೆ ಎಂದಿದ್ದಾರೆ. ನೇಮ್ ಫೇಮ್ ನನಗೆ ಈಗ ಬಂದಿದ್ದಲ್ಲ. ನಾನು ತುಂಬಾ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಮಾಡಿದ ಹಲವು ಪಾತ್ರಗಳನ್ನು ಜನರು ಮೆಚ್ಚಿದ್ದಾರೆ. ನನ್ನ ಹೆಸರಿನ ಹಿಂದೆ ಡಾ. ವಿಷ್ಣುವರ್ಧನ್ ಹೆಸರು ಇದೆ. ಇದಕ್ಕಿಂತ ಫೇಮ್ ನನಗೆ ಬೇಕಾ?" ಎಂದು ಅನಿರುದ್ಧ್ ತಿರುಗೇಟು ನೀಡಿದ್ದಾರೆ.

ನನ್ನ ಕೇಳದೆ ಸಂಭಾವನೆ ಕಟ್ ಮಾಡಿದ್ರು
"ನಾನು ನಿರ್ಮಾಪಕರಿಗೆ ಮೊದಲೇ ಹೇಳಿದ್ದೆ. ಒಂದು ವರ್ಷ ಅದ್ಮೇಲೆ ನನ್ನ ಸಂಭಾವನೆಯನ್ನು ಹೆಚ್ಚು ಮಾಡಬೇಕು ಅಂದಿದ್ದೆ. ಒಂದೂವರೇ ವರ್ಷ ಆದ್ಮೇಲೂ ನಾನು ಸಂಭಾವನೆ ಹೆಚ್ಚು ಮಾಡುವಂತೆ ಕೇಳಲಿಲ್ಲ. ಅವರೂ ಕೂಡ ಸಂಭಾವನೆಯನ್ನು ಹೆಚ್ಚು ಕೂಡುತ್ತೇವೆ ಅಂತಾ ಒಪ್ಪಿಕೊಂಡಿದ್ದರು. ಅದರೆ ನನ್ನ ಸಂಭಾವನೆಯನ್ನು ಕೋವಿಡ್ ಬಳಿಕ ನನ್ನ ಕೇಳದೆನೇ ಕಟ್ ಮಾಡಿ ಕಳುಹಿಸಿದ್ದಾರೆ. ಇಲ್ಲಿ ನನ್ನ ಮಾತು ಕೇಳಲಿಲ್ಲ." ಎಂದು ಆರೋಪ ಮಾಡಿದ್ದಾರೆ.

'ಬ್ಯಾನ್ ಅಂದ್ಕೂಡ್ಲೇ ಬ್ಯಾನ್ ಆಗಲ್ಲ'
"ನನ್ನ ವಿರುದ್ಧ ನಿರ್ಮಾಪರು ಸೇರಿದಂತೆ ಹಲವರು ತುಂಬಾನೇ ಮಾತನಾಡಿದ್ದಾರೆ. ಆದರೆ ಅವರು ಮತ್ತೆ ಬನ್ನಿ ಅಂತಾ ಕೇಳಿದರೆ ಮತ್ತೆ ಹೋಗಿ ಧಾರಾವಾಹಿ ಮಾಡುತ್ತೇನೆ. ಆದರೆ ಸ್ಕ್ರಿಪ್ಟ್ ತಪ್ಪಾಗಿದ್ದರೆ ನಾನು ಪ್ರಶ್ನೆ ಮಾಡುತ್ತೇನೆ. ಇವರು ಬ್ಯಾನ್ ಅಂತ ಹೇಳಿದ ತಕ್ಷಣ ಬ್ಯಾನ್ ಆಗಲ್ಲ. ನನಗೆ ಈ ಕೆಲಸ ಸಿಗಬೇಕು ಅಂತಾ ಇದ್ದರೇ ಸಿಕ್ಕೇ ಸಿಗುತ್ತೆ. ನಮಗೆ ಅನ್ನದ ಋಣ ಇದ್ದರೆ, ಅದು ಸಿಕ್ಕೇ ಸಿಗುತ್ತೆ." ಎಂದು ಅನಿರುದ್ಧ್ ತಿರುಗೇಟು ನೀಡಿದ್ದಾರೆ.


Click it and Unblock the Notifications











