'ರಾಮಾಯಣ' ಧಾರಾವಾಹಿಯ 'ಸುಗ್ರೀವ' ಶ್ಯಾಮ ಸುಂದರ್ ಇನ್ನಿಲ್ಲ
ಒಂದು ಕಾಲದಲ್ಲಿ ಮನೆ ಮಾತಾಗಿದ್ದ ದೂರದರ್ಶನದ ಅತ್ಯಂತ ಜನಪ್ರಿಯ ಧಾರಾವಾಹಿ 'ರಾಮಾಯಣ' ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಮನರಂಜನೆ ನೀಡಲು ಮತ್ತೆ ಪ್ರಸಾರವಾಗುತ್ತಿದೆ. ಆದರೆ 'ರಾಮಾಯಣ'ದ ತಂಡದಲ್ಲಿ ಶೋಕದ ಛಾಯೆ ಮೂಡಿದೆ. ಇದಕ್ಕೆ ಕಾರಣ 'ಸುಗ್ರೀವ'ನ ಅಗಲುವಿಕೆ.
ಹೌದು. 'ರಾಮಾಯಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದಾದ 'ಸುಗ್ರೀವ'ನಾಗಿ ಕಾಣಿಸಿಕೊಂಡಿದ್ದ ಟೆಲಿವಿಷನ್ ನಟ ಶ್ಯಾಮ್ ಸುಂದರ್ ನಿಧನರಾಗಿದ್ದಾರೆ. 1987ರಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ನಿರ್ದೇಶನದ 'ರಾಮಾಯಣ'ದ ಮೂಲಕ ಶ್ಯಾಮ್ ಸುಂದರ್ ಕಲಾನಿ ಜನಪ್ರಿಯರಾಗಿದ್ದರು. ಏಪ್ರಿಲ್ 8ರಂದು ಅವರು ಹರಿಯಾಣದ ಕಲ್ಕಾ ಎಂಬಲ್ಲಿ ನಿಧನರಾಗಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಮುಂದೆ ಓದಿ...

ಸುಗ್ರೀವ, ವಾಲಿ ಪಾತ್ರ
'ರಾಮಾಯಣ' ಧಾರಾವಾಹಿಯಲ್ಲಿ ಶ್ಯಾಮ್ ಸುಂದರ್ ಅವರು ಸುಗ್ರೀವ ಹಾಗೂ ಆತನ ಸಹೋದರ ವಾಲಿ ಎರಡೂ ಪಾತ್ರಗಳನ್ನು ನಿಭಾಯಿಸಿದ್ದರು. 'ರಾಮಾಯಣ'ದ ಮೂಲಕವೇ ಅವರ ನಟನಾ ವೃತ್ತಿ ಆರಂಭವಾಗಿತ್ತು. ಆದರೆ ಈ ಧಾರಾವಾಹಿಯ ಬಳಿಕ ಅವರಿಗೆ ಅಷ್ಟೇನೂ ಮಹತ್ವದ ಪಾತ್ರಗಳು ಸಿಗಲಿಲ್ಲ.

ಮಹಾಭಾರತದ ಭೀಮ
'ಮಹಾಭಾರತ' ಧಾರಾವಾಹಿಯಲ್ಲಿ 'ಭೀಮ'ನ ಪಾತ್ರದಲ್ಲಿ ಕೂಡ ಅವರು ನಟಿಸಿದ್ದರು. 'ಹೀರ್ ರಾಂಜಾ', 'ತ್ರಿಮೂರ್ತಿ', 'ಚೈಲಾ ಬಾಬು' ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಅವರ ಸೋದರಳಿಯ ಕಮಲ್ ಮದ್ನಾನಿ ಮಾಹಿತಿ ನೀಡಿದ್ದಾರೆ.
ಬಹಳ ಒಳ್ಳೆಯ ವ್ಯಕ್ತಿ
ಶ್ಯಾಮ್ ಸುಂದರ್ ನಿಧನಕ್ಕೆ 'ರಾಮಾಯಣ' ತಂಡ ಶೋಕ ವ್ಯಕ್ತಪಡಿಸಿದೆ. ರಮಾನಂದ ಸಾಗರ ಅವರ 'ರಾಮಾಯಣ'ದಲ್ಲಿ ಸುಗ್ರೀವನ ಪಾತ್ರದಲ್ಲಿ ನಟಿಸಿದ್ದ ಶ್ಯಾಮ್ ಸುಂದರ್ ಅವರ ನಿಧನದ ಸುದ್ದಿ ದುಃಖ ತಂದಿದೆ. ಬಹಳ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು 'ರಾಮ'ನ ಪಾತ್ರಧಾರಿ ಅರುಣ್ ಗೋವಿಲ್ ಟ್ವೀಟ್ ಮಾಡಿದ್ದಾರೆ.
ಕುಟುಂಬಕ್ಕೆ ಶಾಂತಿ ಸಿಗಲಿ
'ರಾಮಾಯಣದಲ್ಲಿ ಸುಗ್ರೀವ ಮತ್ತು ವಾಲಿಯ ಪಾತ್ರಗಳಲ್ಲಿ ನಟಿಸಿದ್ದ ನಮ್ಮ ಸಹೋದ್ಯೋಗಿ ಶ್ಯಾಮ್ ಕಲಾನಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ಬಹಳ ಬೇಸರವಾಗಿದೆ. ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ' ಎಂದು 'ಲಕ್ಷ್ಮಣ' ಸುನಿಲ್ ಲಾಹ್ರಿ ಹೇಳಿದ್ದಾರೆ.


Click it and Unblock the Notifications











