'ಗಿಣಿರಾಮ' ನಟಿ ನಯನಾಗೆ ಒಂದು ದಿನಕ್ಕೆ ಸಿಗುತ್ತಿದ್ದ ಸಂಭಾವನೆ ಎಷ್ಟು? ಅದರಲ್ಲಿ ಎಷ್ಟು ಖರ್ಚಾಗುತ್ತಿತ್ತು?
ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿವಾದಗಳನ್ನು ಆಗುತ್ತಲೇ ಇರುತ್ತವೆ. ಆದರೆ, ಕಿರುತೆರೆಯಲ್ಲಿ ವಿವಾದಗಳು ತೀರಾ ಅಪರೂಪ ಎನ್ನುವಂತಿತ್ತು. ಆದ್ರೀಗ ಅಲ್ಲೂ ಹೆಚ್ಚಾಗಿ ಕೇಳುವುದಕ್ಕೆ ಸಿಗುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ವಿವಾದ. ಆ ಬಳಿಕ ಗಿಣಿರಾಮ ಧಾರಾವಾಹಿಯ ನಾಯಕ ನಟಿ ನಯನಾ ವಿವಾದಗಳು ಹೆಚ್ಚು ಸದ್ದು ಮಾಡಿದ್ದವು.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕಿಯಾಗಿ ನಯನಾ ನಟಿಸುತ್ತಿದ್ದರು. ಸುಮಾರು ಒಂದೂವರೆ ವರ್ಷಗಳಿಗೂ ಅಧಿಕ ಸಂಚಿಕೆಗಳಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕ್ಯಾಮರಾಮ್ಯಾನ್ ಜೊತೆ ಕಿರಿಕ್ ಆಗಿತ್ತು. ಅದು ಹಾಗೇ ಮುಂದುವರೆದು ಕೊನೆಗೆ ಸೀರಿಯಲ್ ಬ್ಯಾನ್ ಮಾಡುವವರೆಗೂ ಹೋಗಿತ್ತು. ಇತ್ತೀಚೆಗೆ ಈ ವಿಷಯವನ್ನು ಹಲವು ಯೂಟ್ಯೂಬ್ ಚಾನೆಲ್ಗಳಲ್ಲಿಯೂ ಹೇಳಿಕೊಂಡಿದ್ದರು.

ಈಗ 'ಗಿಣಿರಾಮ' ಧಾರಾವಾಹಿ ಶೂಟಿಂಗ್ ವೇಳೆ ಕ್ಯಾಮರಾಮ್ಯಾನ್ನಿಂದ ಆದ ಕಿರಿಕಿರಿಯನ್ನು ವಿವರಿಸಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ವಿವಾದ ಹೇಗೆ ಶುರುವಾಯ್ತು ಅನ್ನೋದನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದಾರೆ. ಹಾಗೇ ತಮಗೆ ಒಂದು ಎಪಿಸೋಡ್ಗೆ ಎಷ್ಟು ಸಂಭಾವನೆ ಸಿಗುತ್ತಿತ್ತು ಅನ್ನೋದನ್ನು ಇದೇ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಯುಗಾದಿ ಹಬ್ಬದ ಸಮಯದಲ್ಲಿ ಗಿಣಿರಾಮ ತಂಡದಿಂದ ಒಂದು ಪ್ರೋಮೋ ಶೂಟ್ ಮಾಡುತ್ತಿದ್ದರು. ಈ ವೇಳೆ ನಟಿ ನಯನಾ ಉಟ್ಟಿದ್ದ ಒಂದು ಸೀರೆಯಿಂದ ಶುರುವಾಗಿದ್ದ ಮನಸ್ತಾಪ ಹಾಗೇ ಮುಂದುವರೆದು ವಿವಾದವನ್ನು ಸೃಷ್ಟಿಸಿತ್ತು. "ಏನು ನಯನಾ ಇರೋದೇ ಇದೊಂದು ಸೀರೆ ಅಂದ್ಯಂತೆ ಅಂದರು. ಹೌದು ನನ್ನ ಹತ್ತಿರ ಇದ್ದಿದ್ದೇ ಇದೊಂದು ಸೀರೆ. ಅವರು ಅಷ್ಟು ಅರ್ಜೆಂಟ್ನಲ್ಲಿ ಹೇಳಿದ್ದರು. ಹಾಗಾಗಿ ಸಡನ್ ಆಗಿ ತೆಗೆದುಕೊಂಡು ಬಂದೆ. ಅದನ್ನೇ ಹಾಕಿಕೊಂಡಿದ್ದೀನಿ ಅಷ್ಟೇ ಅಂದೆ. ಓ ಇರೋದು ಇದೊಂದೇ ಸೀರೆನಾ? ಪಾಪ ಇವಳ ಹತ್ತಿರ ಸೀರೆನೇ ಇಲ್ವಾ? ಅಂದರು. ನನಗೆ ಅವರು ಹಾಗಂದಿತ್ತು ಟ್ರಿಗರ್ ಆಯ್ತು. ಇವರು ಯಾಕೆ ಹೀಗೆ ಮಾತಾಡಿಸುತ್ತಿದ್ದಾರೆ. ಇವಳೇನು ಬಡವಳಾ ಅನ್ನೋತರ ಮಾತಾಡಿದರು. ಅವರು ಹಾಗೆ ಅಂದಕೂಡಲೇ ಮುಖ ತಿರುಗಿಸಿಕೊಂಡೆ. ಏನು ಮುಖ ಹಾಗೆ ಮಾಡುತ್ತಿದ್ದೀಯ? ನೀನು ಆತರ ದುರಹಂಕಾರದಲ್ಲೆಲ್ಲ ಮುಖ ಮಾಡಬೇಡ ಅಂತ ಹೇಳಿದರು." ಅಂದು ನಡೆದ ಘಟನೆಯನ್ನು ಹೇಳಿಕೊಂಡಿದ್ದಾರೆ.
ಈ ಘಟನೆಯ ಬಳಿಕ ಕ್ಯಾಮರಾಮ್ಯಾನ್ ಹಾಗೂ ನಟಿ ನಯನಾ ಅವರ ಸಂಬಂಧ ಮತ್ತಷ್ಟು ಹಳಸುತ್ತಾ ಹೋಗಿದ್ದನ್ನು ವಿವರಿಸಿದ್ದಾರೆ. "ಸೀನ್ ಅನ್ನು ಶೂಟ್ ಮಾಡುವಾಗಲೂ ಕಿರಿಕಿರಿ ಮಾಡಿದ್ದರು. ಬಾ ಇಲ್ಲಿ ನಿಂತ್ಕೋ. ಆ ಕಡೆ ನಿಂತ್ಕೋ ಅಂತ ಬೇಕಂತ ಹೇಳುತ್ತಿದ್ದಾರೆ. ಹೀರೋಗೆ ಬನ್ನಿ ಸರ್. ಇಲ್ಲಿ ನಿಂತ್ಕೊಳ್ಳಿ. ಹೀಗೆ ನಿಂತ್ಕೊಳ್ಳಿ ಅಂತಿದ್ದಾರೆ. ಹೀರೋ ಮರ್ಯಾದೆ ಕೊಡ್ತಿದ್ದಾರೆ. ಇವನು ಯಾರು ಗುರು ಹೀಗೆ ಮಾತಾಡೋಕೆ. ನನ್ನ ಅಪ್ಪ ಅಮ್ಮನೇ ನನ್ನ ಹತ್ತಿರ ಹೀಗೆ ಮಾತಾಡೋದಿಲ್ಲ. ಇವರು ಯಾಕೆ ಹೀಗೆ ಮಾತಾಡುತ್ತಿದ್ದಾರೆ ಅಂತ ಕೋಪ ಬಂತು." ಎನ್ನುತ್ತಾರೆ.

ಇಷ್ಟೇ ಅಲ್ಲ. ಸೀರೆ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಯ್ತು. ಪ್ರತಿಯೊಂದು ಸೀನ್ಗೂ ಏನಾದರೂ ಒಂದು ಕಿರಿಕಿರಿ ಮಾಡುವುದಕ್ಕೆ ಶುರು ಮಾಡಿದ್ದರು. ಸೆಟ್ನಲ್ಲಿ ಜೀವನವನ್ನು ನರಕ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. "ಈ ಘಟನೆ ನಡೆದ ಬಳಿಕ ಗಿಣಿ ರಾಮ ಸೆಟ್ನಲ್ಲಿ ನರಕ ಮಾಡಿ ಬಿಟ್ಟರು. ಇನ್ನೇನು ಆಕ್ಷನ್ ಅನ್ನಬೇಕು. ಆಗ ಕಾಮೆಂಟ್ ಪಾಸ್ ಮಾಡುತ್ತಿದ್ದರು. ನನ್ನ ಬಳಿ ಒಂದು ಗ್ರೇ ಕಲರ್ ಸೀರೆ ಇತ್ತು. ಅಲ್ಲಿವರೆಗೂ ಸುಮ್ಮನಿರೋರು. ಬೇಕಂತ ಪ್ರೀತಂ ಸರ್ ಹತ್ತಿರ ಹೋಗಿ ಹೇಳೋರು. ಗೋಡೆ ಹಾಗೂ ಇವರು ಉಟ್ಟಿರುವ ಸೀರೆ ಒಂದೇ ತರ ಕಾಣಿಸುತ್ತಿದೆ. ಚೇಂಜ್ ಮಾಡಿಸಿ ಅದನ್ನು ಅನ್ನೋರು. ಪ್ರತಿ ತಿಂಗಳು ಸೀರೆ ಹೇಗೆ ತೆಗೆದುಕೊಳ್ಳೋದು. ಕೊಡುತ್ತಿದ್ದಿದ್ದೇ ಕಡಿಮೆ ಸಂಬಳ. ನಾನು ಅದರಲ್ಲೇ ಮನೆಯನ್ನು ನಡೆಸಬೇಕಿತ್ತು." ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ನಟಿ ನಯನಾ ಒಂದು ದಿನಕ್ಕೆ ತಮಗೆ ಸಿಗುತ್ತಿದ್ದ ಸಂಭಾವನೆ ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಎಲ್ಲರೂ ಒಂದು ದಿನಕ್ಕೆ 10 ಸಾವಿರ ಸಿಗುತ್ತೆ ಅಂದುಕೊಳ್ಳಬಹುದು. ಆದರೆ, ತಮಗೆ ತುಂಬಾನೇ ಕಡಿಮೆ ಸಂಭಾವನೆ ಸಿಗುತ್ತಿತ್ತು. ಅದರಲ್ಲೇ ಸೀರೆ, ಮೇಕಪ್ ಕಿಟ್ಗಳನ್ನೆಲ್ಲ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ. "ತಿಂಗಳಿಗೆ 10 ಸಾವಿರ ಕೊಟ್ಟಿದ್ದರೆ, ನಾನು ಡೌನ್ ಪೇಮೆಂಟ್ ಮಾಡಿ ಒಂದು ಮನೆಯನ್ನಾದರೂ ತೆಗೆದುಕೊಳ್ಳುತ್ತಿದ್ದೆ. ನಾನು ಹೀರೋಯಿನ್ ಅಂತ ಹೇಳಲ್ಲ. ನನ್ನ ಪಾತ್ರವನ್ನು ಲೀಡ್ ಆಕ್ಟ್ರೆಸ್ ಅಂತ ಹೇಳುತ್ತೇನೆ. ಗಿಣಿರಾಮ ಸೀರಿಯಲ್ಗೆ ಕಥಾನಾಯಕಿಯಾಗಿದ್ದ ನನಗೆ ದಿನಕ್ಕೆ ಬರುತ್ತಿದ್ದ ಸಂಬಳ ನಾಲ್ಕು ಸಾವಿರ ರೂಪಾಯಿ. ತಿಂಗಳಲ್ಲಿ 12 ರಿಂದ 13 ದಿನ ಶೂಟಿಂಗ್ ಇರುತ್ತಿತ್ತು ಅಷ್ಟೇ." ಎಂದು ಹೇಳಿಕೊಂಡಿದ್ದಾರೆ.
"ನನಗೆ ಬರುತ್ತಿದ್ದ ನಾಲ್ಕು ಸಾವಿರ ರೂಪಾಯಿಯನ್ನು ಉಳಿಸಿಕೊಂಡು ನನ್ನ ಮದುವೆಯನ್ನು ನಾನೇ ಮಾಡಿಕೊಂಡಿದ್ದೇನೆ. ಎಷ್ಟು ಆಗುತ್ತೆ ಅಷ್ಟು ಹಣವನ್ನು ನಾನು ಉಳಿತಾಯ ಮಾಡಿಕೊಂಡು ಬಂದೆ. ಒಂದೊಂದು ಸಾವಿರ ರೂಪಾಯಿಯನ್ನು ಉಳಿತಾಯ ಮಾಡಿಕೊಂಡು ಬಂದಿದ್ದೆ. ಪ್ರತಿ ತಿಂಗಳು ನಾವು ಸೀರೆ, ಬ್ಲೌಸ್ ಯಾವುದನ್ನೂ ರಿಪೀಟ್ ಮಾಡುವಂತಿಲ್ಲ. ಮಾಡಿದರೆ, ಚಾನೆಲ್ ಕಡೆಯಿಂದ ಮಾರ್ಕ್ ಹಾಕಿ ಕಳಿಸುತ್ತಾರೆ. ಪ್ರತಿ ತಿಂಗಳು ಏಳೆಂಟು ಸೀರೆಯನ್ನು ಹೇಗೆ ತರೋದು. ಉತ್ತರ ಕರ್ನಾಟಕದ ಇಳಕಲ್ ಸೀರೆ ಒಂದೂವರೆ ಸಾವಿರಕ್ಕಿಂದ ಕಡಿಮೆ ಇಲ್ಲ" ಎಂದು ಕೊಡುವ ನಾಲ್ಕು ಸಾವಿರದಲ್ಲಿ ಎಷ್ಟು ಖರ್ಚಾಗುತ್ತಿತ್ತು. ಕಷ್ಟಗಳು ಹೇಗೆ ಎದುರಾಗುತ್ತಿದ್ದವು ಎಂದು ಹೇಳಿಕೊಂಡಿದ್ದಾರೆ.
"ಒಂದು ಟೈಮ್ನಲ್ಲಿ ನಾನು ಇನ್ನು ಆಗಲ್ಲ ಅಂತ ತೀರ್ಮಾನಿಸಿದ್ದೆ. ಆ ಸಮಯಕ್ಕೆ ಮಿನಿ ಬಿಗ್ಬಾಸ್ ಸೀಸನ್ ಅಂತ ಮಾಡಿದರು. ಬರೀ ನಮ್ಮ ಆರ್ಟಿಸ್ಟ್ಗಳನ್ನು ಕೇವಲ ಒಂದು ವಾರಕ್ಕೆ ಅಂತ ಮಾಡಿದರು. ಅಲ್ಲಿ ನಿಮಗೊಂದು ಪ್ಲಾಟ್ಫಾರ್ಮ್ ಮಾಡಿಕೊಂಡಿದ್ದೇವೆ. ಹೇಳಿಕೊಳ್ಳಿ ಅಂತ ಹೇಳಿದ್ದರು. ಅಲ್ಲಿ ನಾನು ಈ ವಿಷಯವನ್ನು ಹೇಳಿಕೊಂಡೆ. ಅಲ್ಲಿವರೆಗೂ ಚಾನೆಲ್ನವರಿಗೆ ಗೊತ್ತೇ ಇರಲಿಲ್ಲ. ಆಗ ಚಾನೆಲ್ನಿಂದ ಕಾಲ್ ಬಂತು ನನಗೆ. ಆಗ ಪರಮ್ ಸರ್ಗೆ ನೇರವಾಗಿ ಮಾತಾಡಿದೆ. ಆಗ ಧೈರ್ಯ ಹೇಳಿ, ನಿರ್ಮಾಪಕರ ಹತ್ತಿರ ಮಾತಾಡುತ್ತೇನೆ ಅಂತ ಹೇಳಿದ್ರು." ಎಂದು ಹೇಳಿಕೊಂಡಿದ್ದಾರೆ.
"ಇದಾದಾ ಸ್ವಲ್ಪ ಹೊತ್ತಿಗೆ ನನ್ನ, ಕ್ಯಾಮರಾಮ್ಯಾನ್ ಹಾಗೂ ನಿರ್ದೇಶಕರನ್ನು ಕೂರಿಸಿದರು. ಏನು ನಡೀತಾ ಇದೆ ಅಂತ ಹೇಳಿದರು. ಅವರು ನಾನೇನು ಈತರ ಮಾಡಲಿಲ್ಲ ಅಂತ ಹೇಳಿದರು. ಆಗ ನಾನು ನಿರ್ಮಾಪಕರಿಗೆ ಕೇಳಿದೆ. ನಿಮ್ಮ ಕಣ್ಣ ಮುಂದೆ ಇದೆಲ್ಲ ನಡೆದಿದೆ. ಈಗ ಬಂದು ನೀವು ಪಂಚಾಯ್ತಿ ಮಾಡುತ್ತಿದ್ದೀರ. ನೀವು ಯಾವತ್ತೂ ಮಾತಾಡಲಿಲ್ಲ. ಇವತ್ತು ನಾನು ಪರಂ ಸರ್ ವರೆಗೂ ಹೋದೆ ಅಂತ ಮಾತಾಡುತ್ತಿದ್ದೀರ. ನಿಮ್ಮ ಹತ್ತಿರ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ನೀವು ನಗಾಡಿಕೊಂಡು ಸುಮ್ಮನಿದ್ರಿ ಅಂತ ಕೇಳಿದೆ." ಎಂದಿದ್ದಾರೆ.
"ಎರಡು ದಿನ ಸರಿ ಇತ್ತು. ಆಮೇಲೆ ಮತ್ತೆ ಶುರುವಾಯ್ತು. ಲೈಟ್ ಬಾಯ್ಗಳ ಹತ್ತಿರ ಮಾತಾಡಿದರೂ ಕಮೆಂಟ್ ಪಾಸ್ ಮಾಡಿದ್ದರು. ನೋಡುವಷ್ಟು ನೋಡಿದೆ. ಆಮೇಲೆ ಬಿಡುತ್ತೇನೆ ಅಂತ ಹೇಳಿದೆ. ಚಾನೆಲ್ಗೆ ಹೇಳಿದೆ. ಆದರೆ, ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಆರು ತಿಂಗಳು ಹಾಗೇ ನಡೀತು. ಹಾಗೇ ಒಂದು ಘಟನೆಯಲ್ಲಿ ನಿರ್ಮಾಪಕರು ಹಾಗೂ ನನ್ನ ನಡುವೆ ವಾಗ್ವಾದ ನಡೀತು. ಇದೆಲ್ಲ ಆದ್ಮೇಲೆ ಚಾನೆಲ್ನವರು ಕರೆಸಿದ್ರು. 6 ತಿಂಗಳು ಟೈಮ್ ಕೇಳಿದರು. ಆ ಮೇಲೆ ಒಂದು ಮೆಸೇಜ್ ಹಾಕಿಬಿಟ್ಟೆ." ಎಂದು ಸೀರಿಯಲ್ ಬಿಡುವ ಬಗ್ಗೆ ಮಾತಾಡಿದ್ದಾರೆ.


Click it and Unblock the Notifications











