2 ವರ್ಷಗಳ ಬಳಿಕ ಮತ್ತೆ ಕನ್ನಡ ಕಿರುತೆರೆ ಬಂದ 'ಕಮಲಿ' ನಟ; 'ನಿನ್ನ ಜೊತೆ ನನ್ನ ಕಥೆ' ಎನ್ನುತ್ತಿರೋ ನಿರಂಜನ್!
ಸುಮಾರು ಆರು ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ 'ಕಮಲಿ' ಧಾರಾವಾಹಿ ಪ್ರಸಾರ ಆಗಿತ್ತು. ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ನಟ ನಿರಂಜನ್. 'ಕಮಲಿ' ಮುಗಿದ ಬಳಿಕ ಸೀದಾ ತೆಲುಗು ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಅಲ್ಲಿ 'ಎನ್ನೆನ್ನೋ ಜನ್ಮಲ ಬಂಧಮ್' ಅನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಆ ಸೀರಿಯಲ್ ಮುಗಿದೆ.
ಈ ಬೆನ್ನಲ್ಲೇ 'ಸತ್ಯಭಾಮ' ಅನ್ನುವ ಮತ್ತೊಂದು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿಯೇ ಬಹುತೇಕ ಬ್ಯುಸಿಯಾಗಿರುವ ನಿರಂಜನ್ ಕನ್ನಡದಿಂದ ಹೆಚ್ಚು ಕಡಿಮೆ ಎರಡು ವರ್ಷ ದೂರವಿದ್ದರು. ಈಗ ಮತ್ತೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ' ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಅಪ್ಪಟ ಬೆಂಗಳೂರಿನ ಹುಡುಗ ನಿರಂಜನ್ ಚಾಮರಾಜಪೇಟೆ ಏರಿಯಾದ ನಿವಾಸಿ. ಓದಿದ್ದು ಎಂಬಿಎ. ಆರ್ಮಿಗೆ ಸೇರಿಕೊಳ್ಳಬೇಕು ಅಂತಿದ್ದ ನಿರಂಜನ್ಗೆ ಅಪಘಾತ ಆಗಿತ್ತು. ಹೀಗಾಗಿ ಆ ಕನಸು ಕನಸಾಗಿಯೇ ಉಳಿದಿತ್ತು. ಈ ವೇಳೆ ಆರ್ಜೆಯಾಗಿ, ವಿಜೆಯಾಗಿ ಕೆಲಸ ಮಾಡಿದ ಬಳಿಕ ಕಿರಿಚಿತ್ರದಲ್ಲಿ ನಟಿಸಿದ್ದರು. ಅಲ್ಲಿ ಆದ ಅವಮಾನದಿಂದ ನಟನೆಯನ್ನು ಸವಾಲಾಗಿ ಸ್ವೀಕರಿಸಿ, ಇಂದು ಕಿರುತೆರೆ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದಾರೆ. ತಮ್ಮ ಹೊಸ ಧಾರಾವಾಹಿ ಬಗ್ಗೆ ಫಿಲ್ಮಿಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕನ್ನಡ ಸೀರಿಯಲ್ನಲ್ಲಿ ನಟಿಸಿ ಎರಡು ವರ್ಷ ಗ್ಯಾಪ್ ಆಯ್ತಲ್ಲ?
"ತುಂಬಾ ಗ್ಯಾಪ್ ಅಂತ ಬಂದಿಲ್ಲ. ಕನ್ನಡ ಕಿರುತೆರೆಯಿಂದ ದೂರವಿದ್ದು ಕೇವಲ ಎರಡು ವರ್ಷ ಆಗಿದೆಯಷ್ಟೇ. ಎಲ್ಲೋ ಒಂದು ಕಡೆ ಕಮಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಹೆಸರು ಸಿಕ್ಕಿತು. ಆರಂಭದಲ್ಲಿ ಇಷ್ಟು ಹೆಸರು ಕೊಡುತ್ತೆ ಅಂತ ಗೊತ್ತಿರಲಿಲ್ಲ. ಈಗ ಅದು ಜವಾಬ್ದಾರಿ ಅಂತ ಫೀಲ್ ಆಗುತ್ತಿದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಧಾರಾವಾಹಿ ತೆಗೆಯುವಾಗ ಯಾರಿಗೂ ಕಥೆ ಮುಂದೆ ಹೇಗೆ ಸಾಗುತ್ತೆ ಅಂತ ಗೊತ್ತಿರಲಿಲ್ಲ. ಹೀಗಾಗಿ ಕ್ಯಾರೆಕ್ಟರ್ ಸೆಂಟ್ರಿಕ್ ಅಂತ ಇರುತ್ತೆ. ಕಮಲಿ ಮುಗಿಸಿ ಒಂದು ವರ್ಷ ಒಂಬತ್ತು ತಿಂಗಳವರೆಗೂ ತಿಂಗಳೊಂದಿಷ್ಟು ಕಥೆಗಳನ್ನು ಕೇಳುತ್ತಿದ್ದೆ."
2 ವರ್ಷ ಗ್ಯಾಪ್ ಕೊಟ್ಟಿದ್ಯಾಕೆ?
"ನಾನು ತೆಲುಗಿನಲ್ಲೂ ಸೀರಿಯಲ್ ಮಾಡುತ್ತಿದ್ದೇನೆ. ನಮ್ಮ ಕನ್ನಡದಲ್ಲಿ ತಿಂಗಳಿಗೆ 20 ದಿನ ಶೂಟಿಂಗ್ ಮಾಡುತ್ತಾರೆ. ಆದರೆ, ನನ್ನ ಡೇಟ್ ಇರೋದು ಕೇವಲ 14 ದಿನ ಮಾತ್ರ. ಹೀಗಾಗಿ ಡೇಟ್ ಮಿಸ್ ಮ್ಯಾಚ್ ಆಗುತ್ತಿತ್ತು. ಇದು ಪ್ರೊಡಕ್ಷನ್ ಹೌಸ್ಗೂ ಕಷ್ಟ ಆಗುತ್ತಿತ್ತು. ಒಂದು ವಾರ ಇಲ್ಲಿರುತ್ತೇನೆ. ಇನ್ನೊಂದು ವಾರ ಅಲ್ಲಿರುತ್ತೇನೆ. ಹೀಗಾಗಿ ಡೇಟ್ ಹೊಂದಾಣಿಕೆ ಕಷ್ಟ ಆಗುತ್ತಿತ್ತು. ಇನ್ನು ಕೆಲವೊಮ್ಮೆ ಕಥೆ ಇಷ್ಟ ಆಗುತ್ತಿರಲಿಲ್ಲ."

'ನಿನ್ನ ಜೊತೆ ನನ್ನ ಕಥೆ' ಒಪ್ಪಿದ್ದೇಕೆ?
"ಆರು ವರ್ಷ ಒಂದೇ ಸೀರಿಯಲ್ ಮಾಡುತ್ತಿದ್ದೆ. ಕಮಲಿ ಮುಗಿದ ಬಳಿಕ ಸೀರಿಯಲ್ ಬೇಡ ಅಂದುಕೊಂಡಿದ್ದೆ. ನಾನು ಹಿಂದೆನೂ ಹೇಳಿದ್ದೆ. ನನಗೆ ಆರ್ಮಿಗೆ ಹೋಗಬೇಕು ಅಂತ ಇದ್ದೆ. ಎನ್ಸಿಸಿ ಎಲ್ಲಾ ಮಾಡಿಕೊಂಡಿದ್ದೆ. ಆದರೆ, ಅಪಘಾತ ಆಗಿದ್ದರಿಂದ ಅದು ಸಾಧ್ಯವಾಗಿಲ್ಲ. ಆದರೆ, ಈಗ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಪೊಲೀಸ್ ಆಫೀಸರ್ ಕಥೆ. ಹೀಗಾಗಿ ನನಗೆ ಇಷ್ಟ ಆಯ್ತು. ಜೊತೆಗೆ ಡೇಟ್ ಕೂಡ ಮ್ಯಾಚ್ ಆಯ್ತು. ಹೀಗಾಗಿ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಮಾಡುವಂತಾಯ್ತು."
ಪೊಲೀಸ್ ಅಧಿಕಾರಿ ಪಾತ್ರ ಯಾಕಿಷ್ಟ?
"ಪೊಲೀಸ್ ಕ್ಯಾರೆಕ್ಟರ್ ಮಾಡಬೇಕು ಅಂದರೆ ಪೂರ್ವ ತಯಾರಿ ಮುಖ್ಯ. ಬೇರೆ ಪಾತ್ರಗಳನ್ನು ಮಾಡಬೇಕು ಅಂದರೆ, ನಮಗೆ ಬ್ಯಾರಿಯರ್ಸ್ ಇರೋದಿಲ್ಲ. ಪೊಲೀಸ್ ಯೂನಿಫಾರ್ಮ್ ಹಾಕೋಬೇಕು ಅಂದರೆ, ದೇಹವನ್ನು ಕಟುವಸ್ತಾಗಿ ಇಟ್ಟುಕೊಳ್ಳಬೇಕು. ಶಿಸ್ತನ್ನು ಕಾಪಾಡಿಕೊಳ್ಳಬೇಕು. ಕಮಲಿ ಒಂದು ಲವರ್ ಬಾಯ್ ಆಗಿತ್ತು. ಇದರಲ್ಲಿ ತುಂಬಾ ನೋವು ತಿಂದಿರುವ ಒಬ್ಬ ಹುಡುಗ. ಅವನು ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಇಂತಹ ಒಂದು ಆಯಾಮ. ಹೀಗಾಗಿ ಇಷ್ಟ ಆಯ್ತು."
ಸಿನಿಮಾದಲ್ಲಿ ನಟಿಸಿದವರು ಸೀರಿಯಲ್ಗೆ ಬಂದಿದ್ದೇಕೆ?
"ನನ್ನ ಕರಿಯರ್ ಶುರು ಮಾಡಿದ್ದೇ ಸಿನಿಮಾದಿಂದ. ವಾಸ್ಕೋಡಿಗಾಮದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೆ. ಕಿಶೋರ್ ಜೊತೆ ನಾಲ್ಕು ಜನ ಹುಡುಗರು ಇರುತ್ತಾರೆ. ಅದು ನನ್ನ ಮೊದಲ ಸಿನಿಮಾ. 96 ದಿನ ಶೂಟಿಂಗ್ ಮಾಡಿದ್ವಿ. ಕಾರಣಾಂತರಗಳಿಂದ ವಾಸ್ಕೋಡಿಗಾಮ ಸಿನಿಮಾ ಚೆನ್ನಾಗಿ ಆಗಲಿಲ್ಲ."

ಮುಂದೆ ಸಿನಿಮಾದಲ್ಲಿ ಯಾಕೆ ನಟಿಸಲಿಲ್ಲ?
"ನೋಟ್ ಬ್ಯಾನ್ ಆದ್ಮೇಲಿಂದ ಸಿನಿಮಾ ಮಾಡೋರು ಇದ್ದಾರೆ. ದುಡ್ಡು ಹಾಕೋರು ಇಲ್ಲ. ಈಗ ವರ್ಷಕ್ಕೊಂದು ಸಿನಿಮಾ ಮಾಡೋರು ಎರಡು ಮೂರು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಸಿನಿಮಾ ಆಫರ್ ಬಂದರೂ ಇನ್ವೆಸ್ಟರ್ ಆಗಿಯೇ ನೋಡುತ್ತಿದ್ದರು. ಆರ್ಟಿಸ್ಟ್ಗಿಂತ ಪ್ರೊಡ್ಯೂಸರ್ ಆಗಿ ನೋಡುತ್ತಿದ್ದರು. ಬರೀ ಕೆಲಸ ಮಾಡಿಕೊಂಡು ಬಂದಿರೋನು. ನಾನು ಯಾರನ್ನೋ ನಂಬಿಸಿ, ಕರೆದುಕೊಂಡು ಬಂದು ಹಣ ಹಾಕಿಸೋ ಕೆಲಸಕ್ಕೆ ಹೋಗಲಿಲ್ಲ."
ನಿಮಗೆ ಸ್ವಲ್ಪ ಗಾಂಚಲಿ ಅಂತಿದ್ರಂತೆ ಹೌದೇ?
"ಕಥೆ ಕೇಳಿ ಅಂದರೆ, ಕೆಲವರಿಗೆ ಇಷ್ಟ ಆಗುತ್ತಿರಲಿಲ್ಲ. ಇವನಿಗೆ ಗಾಂಚಲಿ ಅಂತಾನೇ ಹೇಳುತ್ತಿದ್ದರು. ಆದರೆ, ಸಂಭಾವನೆ ಅದೂ ಇದೂ ಏನೂ ಕೇಳಲಿಲ್ಲ. ಆದರೆ, ಕಥೆ ಹೇಳಿ ಅಂತಿದ್ದೆ. ನಾನು ಮಾಡೋ ಕೆಲಸ ನನಗೆ ತೃಪ್ತಿಕೊಡಬೇಕು. ಆ ಹುಡುಕಾಟದಲ್ಲಿ ಕನ್ನಡ ಧಾರಾವಾಹಿಯಲ್ಲಿ ಮತ್ತೆ ನಟಿಸುವುದಕ್ಕೆ 1 ವರ್ಷ 9 ತಿಂಗಳು ಗ್ಯಾಪ್ ಆಯ್ತು. "
ಪೊಲೀಸ್ ಪಾತ್ರದ ಅನುಭವ ಹೇಳಿ?
"ಈ ಕ್ಯಾರೆಕ್ಟರ್ ಆಯ್ಕೆ ಮಾಡಿಕೊಂಡಾಗ ಭಯವಿತ್ತು. ಈ ಯೂನಿಫಾರ್ಮ್ ಎಲ್ಲರಿಗೂ ಚೆನ್ನಾಗಿ ಕಾಣಿಸಲ್ಲ. ಪೊಲೀಸರಿಗೆ ನೀಡುವ ರಾಂಕಿಂಗ್ನಲ್ಲಿ ಒಂದು ಶೇಡ್ನ ಯೂನಿಫಾರ್ಮ್ ಇರುತ್ತೆ. ಅದು ನಮಗೆ ಗೊತ್ತಿರಲಿಲ್ಲ. ಅದಕ್ಕೆ ನಾಗರಭಾವಿಯಲ್ಲಿರುವ ಪೊಲೀಸ್ ಅಧಿಕಾರಿಯವರ ಬಳಿ ಮಾಹಿತಿ ತೆಗೆದುಕೊಂಡು, ಪೊಲೀಸರು ಎಲ್ಲಿ ಯೂನಿಫಾರ್ಮ್ ಹೊಲಿಸುತ್ತಾರೋ ಅಲ್ಲೇ ರೆಡಿ ಮಾಡಿಸಿದ್ದು. ಶಿವಾಜಿ ನಗರದಲ್ಲಿ ಬಶೀರ್ ಅಂತ ಇದ್ದಾರೆ. ಅವರು ಬಳಿನೇ ಎಲ್ಲ ಪೊಲೀಸರು ಯೂನಿಫಾರ್ಮ್ ಹೊಲಿಸುತ್ತಾರೆ. ಅಲ್ಲೇ ನಾನು ಕಾಸ್ಟ್ಯೂಮ್ ರೆಡಿ ಮಾಡಿಕೊಂಡೆ."
ಪೊಲೀಸ್ ಪಾತ್ರಕ್ಕೆ ತಯಾರಿ ಹೇಗಿತ್ತು?
"ನಾನು ಈಗಾಗಲೇ ಒಂದು ತೆಲುಗು ಸೀರಿಯಲ್ನಲ್ಲಿ ರೌಡಿ ಪಾತ್ರ ಮಾಡುತ್ತಿದ್ದೇನೆ. ಗಡ್ಡ ಮೀಸೆ ಹೇರ್ ಸ್ಟೈಲ್ ಇದೆ. ಈ ಸೀರಿಯಲ್ನಲ್ಲಿ ಪೊಲೀಸ್ ಅಧಿಕಾರಿ ಪಾತ್ರ ನೀಟ್ ಆಗಿ ಕ್ಲೀನ್ ಆಗಿ ಕಾಣಿಸಿಕೊಳ್ಳಬೇಕು. ಆದರೆ, ಇಲ್ಲಿ ಪೊಲೀಸ್ ಅಧಿಕಾರಿಗೆ ಲೈಟ್ ಗಡ್ಡ ಇರುತ್ತೆ. ಅದಕ್ಕೆ ಏನು ಅನ್ನುತ್ತಾರೋ ಅನ್ನೋ ಭಯವಿತ್ತು. ಹೀಗಾಗಿ ಒಂದೊಂದು ವಾರದಲ್ಲಿ ಗೆಟಪ್ ಚೇಂಜ್ ಆಗುತ್ತಿದೆ. ಅದು ಚಾಲೆಂಜಿಂಗ್ ಅಂತ ಅನಿಸುತ್ತಿದೆ."
ಹೊಸ ಧಾರಾವಾಹಿ ಬಗ್ಗೆ ಹೇಗಿದೆ ರೆಸ್ಪಾನ್ಸ್?
"ನನಗೆ ಪೊಲೀಸ್ ಕಾಸ್ಟ್ಯೂಮ್ ಹಾಕಿಕೊಂಡ ನನಗೆ ಭಯವಿತ್ತು. ನಾನು ಎನ್ಸಿಸಿ ಯೂನಿಫಾರ್ಮ್ ಹಾಕಿದ್ದು 15 ವರ್ಷ ಆಗಿತ್ತು. ಈಗ ಕೂಡ ಯೂನಿಫಾರ್ಮ್ ಹಾಕಿದಾಗ ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಭಯ ಆಗಿತ್ತು. ಶೂಟಿಂಗ್ ಮಾಡುವಾಗ ನಮ್ಮ ಜೊತೆ ನಟಿಸುವ ಕಲಾವಿದರು ಕೂಡ ಚೆನ್ನಾಗಿ ಕಾಣುತ್ತೀಯ ಅಂತ ಹೇಳಿದ್ದಾರೆ.


Click it and Unblock the Notifications











