ನಿರೂಪಣೆಗೆ ಮೊದಲು ಸಿಕ್ಕ ಸಂಬಳ 250 ರೂ.: ಹಳೆಯ ದಿನಗಳನ್ನು ನೆನೆದು ಭಾವುಕರಾದ ಆಂಕರ್ ಅನುಶ್ರೀ
ಖಾಸಗಿ ಕಾರ್ಯಕ್ರಮ ಹಾಗೂ ಟೆಲಿವಿಷನ್ ಮಾಧ್ಯಮದ ಮೂಲದ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಬದುಕು ಅನೇಕರಿಗೆ ಪ್ರೇರಣದಾಯಕ. ಆದರೆ ಅರಳು ಹುರಿದಂತೆ ಪಟಪಟನೆ ಮಾತನಾಡುವ, ನಗುವಿನ ಮೂಲಕ ಸ್ಫೂರ್ತಿ ತುಂಬುವ ಅವರು ಈ ಮಟ್ಟಕ್ಕೆ ಏರಲು ಸಾಕಷ್ಟು ಶ್ರಮವಹಿಸಿದ್ದಾರೆ. ಸೋಲುಗಳಿಂದ ಮೇಲೇಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನೂ ಎದುರಿಸಿದ್ದೆ ಎಂದು ತಮ್ಮ ಬದುಕಿನ ಕಹಿ ನೆನಪಿನ ನೋವನ್ನು ತೆರೆದಿಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ 'ಜೀನ್ಸ್'ನಲ್ಲಿ ಸ್ಪರ್ಧಿಯಾಗಿ ಅನುಶ್ರೀ, ಸರಿಗಮಪ ಖ್ಯಾತಿಯ ಹನುಮಂತ ಜತೆ ಭಾಗವಹಿಸಿದ್ದರು. ಈ ಆಟದ ವೇಳೆ ಅನುಶ್ರೀ ನಿರೂಪಕಿಯಾಗಿ ತಾವು ಪಡೆದ ಮೊದಲ ಸಂಬಳ, ಮಂಗಳೂರಿನಿಂದ ಬೆಂಗಳೂರಿಗೆ ಬಂದಾಗ ಅನುಭವಿಸಿದ ನೋವುಗಳನ್ನು ಈ ವೇಳೆ ಅವರು ವಿವರಿಸಿದ್ದಾರೆ. ಇಲ್ಲಿ ಇರಲು ತನ್ನಿಂದ ಸಾಧ್ಯವಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತಿದ್ದನ್ನು ನೆನಪಿಸಿಕೊಳ್ಳುವಾಗ ಅವರು ಕಣ್ಣೀರಿಟ್ಟರು. ಮುಂದೆ ಓದಿ...

ಸವಾಲು ಎದುರಿಸಿ ಸ್ಫೂರ್ತಿಯಾದ ಅಮ್ಮ
ನಾನು ಈ ಮಟ್ಟಕ್ಕೆ ಬರಲು ಅಮ್ಮನಿಗೆ ಥ್ಯಾಂಕ್ಸ್ ಹೇಳಬೇಕು. ಅವರೇ ನನಗೆ ಸ್ಫೂರ್ತಿ. ಅಪ್ಪ ಬಿಟ್ಟುಹೋದಾಗ ಮಾನಸಿಕವಾಗಿ ಅಮ್ಮ ಗಟ್ಟಿ ಇಲ್ಲದಿದ್ದರೆ ನಮಗೆ ಈ ಜವಾಬ್ದಾರಿಗಳು ಸಿಗುತ್ತಿರಲಿಲ್ಲ. ಅಮ್ಮ ಒಮ್ಮೆಯೂ ಹೊರಗೆ ಕೆಲಸಕ್ಕೆ ಹೋಗಿದ್ದವರಲ್ಲ. ಅವರಿಗೂ ಬದುಕು ಈ ಅನಿವಾರ್ಯತೆಯನ್ನು ಸರ್ಪ್ರೈಸಿಂಗ್ ಆಗಿ ನೀಡಿತು. ಅವರು ಆಗ ಧೈರ್ಯವಾಗಿ ನಿಂತಿದ್ದೇ, ನಾನು ಧೈರ್ಯವಾಗಿ ಬೆಳೆಯಲು ಕಾರಣ ಎಂದು ಅನುಶ್ರೀ ಹೇಳಿದರು.

ಮೊದಲ ಸಂಬಳ 250 ರೂ.
ಕಾರ್ಯಕ್ರಮದ ವೇಳೆ ಅನುಶ್ರೀ ಅವರಿಗೆ ಲಕೋಟೆಯಲ್ಲಿ 250 ರೂ. ನೀಡಲಾಯಿತು. ಅದನ್ನು ಕಂಡು ಅನುಶ್ರೀ ಭಾವುಕರಾದರು. ಏಕೆಂದರೆ ಅವರು ತಮ್ಮ ಕೆಲಸಕ್ಕೆ ಮೊದಲು ಪಡೆದ ಸಂಬಳ 250 ರೂ. ಆಗಿತ್ತು. 'ಇದು ನನ್ನ ಮೊದಲ ಪೇಮೆಂಟ್. ಮಂಗಳೂರಿನಲ್ಲಿ ಲೋಕಲ್ ಚಾನೆಲ್ನಲ್ಲಿ ತಿಂಗಳಿಗೆ 800 ರೂ. ಪಡೆಯುತ್ತಿದ್ದೆ. ಆಗ ಬೆಂಗಳೂರಿನಲ್ಲಿ ಅವಕಾಶ ನೀಡುವುದಾಗಿ ಕರೆದರು. 500 ರೂ. ಮನೆ ಬಾಡಿಗೆ ಕೊಡುವುದೇಕೆ, ಇಲ್ಲಿ ಭರ್ಜರಿ ಸಂಪಾದಿಸಬಹುದು ಎಂದು ಬಂದೆ.

ತಿಂಗಳಿಗೆ ಸಿಗುತ್ತಿದ್ದದ್ದೇ ನಾಲ್ಕು ಕಾರ್ಯಕ್ರಮ
'ನಿನಗೆ ಕಾರ್ಯಕ್ರಮದಲ್ಲಿ ನಿರೂಪಣೆ ಕೆಲಸ ಇರುತ್ತದೆ. 250 ರೂ. ನೀಡುತ್ತೇವೆ' ಎಂದರು. ಪ್ರತಿ ಗಂಟೆಗಾ ಎಂದು ಕೇಳಿದೆ. ಅಲ್ಲ, ಒಂದು ಎಪಿಸೋಡ್ಗೆ ಎಂದರು. ಪ್ರತಿದಿನವೂ ಎಪಿಸೋಡ್ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಅಲ್ಲಿ ಏಳೆಂಟು ಜನ ಆಂಕರ್ ಇದ್ದರು. ನಾನೇ ಲೇಟೆಸ್ಟ್ ಸೇರ್ಪಡೆ. ನನಗೆ ಅಬ್ಬಬ್ಬಾ ಎಂದರೆ ಸಿಗುತ್ತಿದ್ದದ್ದು ತಿಂಗಳಲ್ಲಿ ನಾಲ್ಕು ಎಪಿಸೋಡು. ಹಾಗಾಗಿ ನಾನು ಪಡೆದ ಮೊದಲ ಸಂಬಳ 250 ರೂ. ಎಂದು ಅನುಶ್ರೀ ತಿಳಿಸಿದರು.

ಬದುಕು ಬದಲಿಸಿದ ರೀನಾ
ಈಗ ಎಷ್ಟೇ ಕಾರ್ಯಕ್ರಮಗಳನ್ನು ಮಾಡಿದ ಎಷ್ಟೇ ಕ್ಯಾಶ್ ಅಥವಾ ಚೆಕ್ ಪಡೆಯಬಹುದು. ಆದರೆ 250 ರೂಪಾಯಿ ಸುಖ ಎಷ್ಟು ಲಕ್ಷ ದುಡಿದರೂ ಸಿಗೊಲ್ಲ. ಆಗ ಸಿಗುತ್ತಿದ್ದ ನೆಮ್ಮದಿ ಈಗ ಸಿಗುವುದಿಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ರೇಖಾ ಅವರ ತಂಗಿ ರೀನಾ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಚೆನ್ನಾಗಿ ಮಾತನಾಡುತ್ತೀಯ, ಹೊರಗಡೆ ಈವೆಂಟ್ ನಿರೂಪಣೆ ಮಾಡು ಎಂದು
ಸಲಹೆ ನೀಡಿದರು. ಅವರಿಂದಾಗಿಯೇ ನನಗೆ 250 ರೂ, 2000 ರೂ ಆಗಿದ್ದು.

ಸೋಲೊಪ್ಪಿಕೊಳ್ಳಬೇಡ ಎಂದ ಅಮ್ಮ
ಬೆಂಗಳೂರಿಗೆ ಬಂದಾಗ ಹತ್ತು ವರ್ಷ ಪಿಜಿಯಲ್ಲಿದ್ದೆ. ಕೆಲಸ ಮುಗಿಸಿ ಸುಸ್ತಾಗಿ ಬಂದಾಗ ಪಿಜಿಯಲ್ಲಿ ಬಾಗಿಲು ತೆರೆಯುವವರೇ ಇರಲಿಲ್ಲ. ಅದೆಷ್ಟು ಕಾಡಿದ್ದಾರೆ. ಎಷ್ಟೋ ಸಲ ಊಟ ಮಾಡದೆ ಮಲಗಿದ್ದೇನೆ. ಇಲ್ಲಿ ಸಾಧ್ಯವೇ ಆಗುವುದಿಲ್ಲ.ನಾನು ವಾಪಸ್ ಬರುತ್ತೇನೆ ಎಂದು ಎಸ್ಟಿಡಿ ಬೂತ್ನಿಂದ ಅಮ್ಮನಿಗೆ ಫೋನ್ ಮಾಡಿ ಹೇಳಿದಾಗ ಸೋತು ವಾಪಸ್ ಬರಬೇಡ. ಕಡೇಪಕ್ಷ ಹೋರಾಡು. ಗೆಲುವು ಸಿಗುತ್ತದೆ ಎಂದು ಸ್ಫೂರ್ತಿ ನೀಡಿದರು. ನನ್ನ ಪಾಲಿಗೆ ಅಮ್ಮನೇ ನಿಹವಾದ ಹೀರೋ. ಏನೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಅವರೇ ಹೇಳಿಕೊಟ್ಟಿದ್ದು.

ಬೆಂಗಳೂರಲ್ಲಿ ಯಾರೂ ಇಲ್ಲವಲ್ಲ
ಒಮ್ಮೆ ತುಂಬಾ ಹುಷಾರಿರಲಿಲ್ಲ. ಆಸ್ಪತ್ರೆಗೆ ಹೋಗಿದ್ದೆ. ಬಹಳ ಸಣ್ಣ ಸಮಸ್ಯೆ ಎಂದು ಹೋಗಿದ್ದೆ. ಅಲ್ಲಿ ಚಿಕಿತ್ಸೆ ನೀಡುವಾಗ ನೋವು ಆಗುತ್ತದೆ ಎಂದು ಗೊತ್ತಿರಲಿಲ್ಲ. ಟ್ರೀಟ್ ಮಾಡುವಾಗ ಕೈ ಹಿಡಿದುಕೊಳ್ಳು ಕೂಡ ಯಾರೂ ಇಲ್ಲ. ಆಸ್ಪತ್ರೆಯಿಂದ ಹಾಗೂ ಹೀಗೂ ಹೊರಬಂದು ಆಟೋದಲ್ಲಿ ಹಾಸ್ಟೆಲ್ ವರೆಗೂ ತುಟಿಕಚ್ಚಿಕೊಂಡು ಹೋದೆ. ಅಲ್ಲಿ ಇಳಿದಾಗ ನನಗೋಸ್ಕರ ಬೆಂಗಳೂರಲ್ಲಿ ಯಾರೂ ಇಲ್ಲವಲ್ಲ ಎಂಬ ನೋವು ಮೊದಲ ಬಾರಿಗೆ ಕಾಡಿತು. ಜೋರಾಗಿ ಅತ್ತುಬಿಟ್ಟೆ. ಅಂದೇ ಅಮ್ಮನಿಗೆ ಫೋನ್ ಮಾಡಿ ವಾಪಸ್ ಬರುತ್ತೇನೆ ಎಂದು ಹೇಳಿದ್ದು ಎಂಬುದನ್ನು ನೆನಪಿಸಿ ಕಣ್ಣೀರಿಟ್ಟರು.

ಹತ್ತು ಜನರೊಂದಿಗೆ ಕುಳಿತು ತಿನ್ನಿ
ಎಲ್ಲರಿಗೂ ಹೇಳುತ್ತೇನೆ, ಸಾವಿರ ಬರಲಿ ಸಾವಿರ ಹೋಗಲಿ. ಅವರು ಅವರನ್ನು ಕಂಡರೆ ಆಗೊಲ್ಲ. ಇವರನ್ನು ಕಂಡರೆ ಆಗೊಲ್ಲ ಎಂಬ ಸಿಟ್ಟು ಕೋಪ ಬೇಡ. ಇಂದು ಮಲಗಿದರೆ ನಾಳೆ ಏಳುತ್ತೇವೆಯೋ ಇಲ್ಲವೋ ಯಾರಿಗೆ ಗೊತ್ತು? ಯಾರಿಗೋಸ್ಕರ ಈ ಮನಸ್ತಾಪ, ಜಗಳ? ಇರುವವರೆಗೂ ಹತ್ತು ಜನರ ಜತೆ ಕುಳಿತು ತಿನ್ನುವ ಖುಷಿಯನ್ನು ಯಾವ ಕೆಲಸವೂ ಕೊಡೊಲ್ಲ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಂಬು ಕುಟುಂಬದ ಪ್ರೀತಿಯನ್ನು ಕೊಂಡಾಡಿದರು.
ತಮ್ಮ ನಿಜವಾದ ಪುರುಷ
ತಮ್ಮನ ಕುರಿತು ಸಹ ಅನುಶ್ರೀ ಮೆಚ್ಚುಗೆಯ ಮಾತನಾಡಿದರು. ತಮ್ಮ ನನಗಿಂತ ಲಿಬರಲ್. ಸಂಕೋಚ ಬಿಟ್ಟು ಓಪನ್ ಆಗಿ ಹೇಳುತ್ತೇನೆ, ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಬಳಕೆ ಬಗ್ಗೆ ಜಾಗೃತಿ ಹೊಂದಬೇಕು. ಮೆಡಿಕಲ್ಗಳಲ್ಲಿ ಧೈರ್ಯವಾಗಿ ಕೇಳಿ ಪಡೆದುಕೊಳ್ಳಿ. ನನ್ನ ತಮ್ಮ ಒಬ್ಬ ಗಂಡು ಹುಡುಗನಾಗಿ ನನಗೆ ಅಗತ್ಯಬಿದ್ದಾಗ ಸ್ಯಾನಿಟರಿ ನ್ಯಾಪ್ಕಿನ್ ಕೂಡ ತರುತ್ತಾನೆ. ಅವನು ನಿಜವಾದ ಪುರುಷ ಎಂದು ಅನುಶ್ರೀ ಹೇಳಿದರು.


Click it and Unblock the Notifications











