BBK 10: ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಹೋಗ್ತಾರಾ? ಇಲ್ವಾ? ಕಿಚ್ಚ ಕೊಟ್ಟ ಸುಳಿವೇನು?
ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ರೋಚಕ ಎನಿಸುತ್ತಿದೆ. ಅದಕ್ಕೆ ಕಾರಣ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್. ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಯೊಬ್ಬರನ್ನು ಬಂಧಿಸಲಾಗಿದೆ.
ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಈ ಸಂಬಂಧ ಅರಣ್ಯ ಅಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ವನ್ಯ ಜೀವಿ ಕಾಯ್ದೆ ಅಡಿ ಬಂಧಿಸಲಾಗಿತ್ತು. ಆ ಬಳಿಕ ಮನೆಯ ಹೊರಗೆ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು.

ಈಗ ಜಾಮೀನು ಪಡೆದು ಹೊರಬಂದಿರೋ ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ನಿನ್ನೆ (ಅಕ್ಟೋಬರ್ 29) 'ಸಂಡೇ ವಿಥ್ ಸುದೀಪ' ಕಾರ್ಯಕ್ರಮದಲ್ಲಿ ಕಿಚ್ಚ ಚಿಕ್ಕದೊಂದು ಸುಳಿವು ನೀಡಿದ್ದಾರೆ.
ವರ್ತೂರು ಸಂತೋಷ್ ಬಿಗ್ ಬಾಸ್ಗೆ ಬರ್ತಾರಾ?
ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ? ಇಲ್ವಾ? ಅನ್ನೋದು ಸದ್ಯ ಕಿರುತೆರೆ ವೀಕ್ಷಕರಲ್ಲಿ ಎದ್ದಿರೋ ಪ್ರಶ್ನೆ. ಈ ಬಗ್ಗೆ ಬಿಗ್ ಬಾಸ್ ಕಡೆಯಿಂದ ಆಗಲಿ ವರ್ತೂರು ಸಂತೋಷ್ ಕಡೆಯಿಂದ ಆಗಿಲಿ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಇದೇ ಗೊಂದಲದಲ್ಲಿ ಇದ್ದ ವೀಕ್ಷಕರಿಗೆ ಕಿಚ್ಚ ಸುದೀಪ್ 'ಸಂಡೇ ವಿಥ್ ಸುದೀಪ' ಕಾರ್ಯಕ್ರಮದಲ್ಲಿ ಚಿಕ್ಕದೊಂದು ಸುಳಿವು ನೀಡಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದೇನು?
ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ 'ಸಂಡೇ ವಿಥ್ ಸುದೀಪ' ಶೋನಲ್ಲಿ ವರ್ತೂರು ಸಂತೋಷ್ ಬಗ್ಗೆ ಮಾತಾಡಿದ್ದಾರೆ. ಶೋನ ಕೊನೆಯಲ್ಲಿ ವರ್ತೂರು ಮತ್ತೆ ಬಿಗ್ ಬಾಸ್ಗೆ ಬರುತ್ತಾರಾ? ಇಲ್ಲವಾ? ಅನ್ನೋದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. "ವರ್ತೂರು ಸಂತೋಷ್ಗೆ ಸದ್ಯಕ್ಕೀಗ ಜಾಮೀನು ದೊರೆತಿದೆ. ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಬರುತ್ತಾರಾ? ಇಲ್ಲವಾ? ಅನ್ನೋ ಬಗ್ಗೆ ಬಿಗ್ ಬಾಸ್ ಮುಂದಿನ ದಿನಗಳಲ್ಲಿ ಉತ್ತರ ಕೊಡಲಿದ್ದಾರೆ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಮತ್ತೆ ಸರ್ಪ್ರೈಸ್ ಎಂಟ್ರಿ ಕೊಡಬಹುದಾ?
ವರ್ತೂರು ಸಂತೋಷ್ ರೀ ಎಂಟ್ರಿ ಬಗ್ಗೆ ಸದ್ಯ ಕಲರ್ಸ್ ಕನ್ನಡ ಅಥವಾ ಜಿಯೋ ಸಿನಿಮಾ ಖಚಿತ ಮಾಹಿತಿ ಕೊಟ್ಟಿಲ್ಲ. ಕಾನೂನಿನ ಕೆಲವು ಪ್ರಕ್ರಿಯೆಗಳು ನಡೆಯಬೇಕಿದೆ. ಈ ಕಾರಣಕ್ಕೆ ವರ್ತೂರು ಸಂತೋಷ್ ಎಂಟ್ರಿ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮನೆಯಲ್ಲಿರುವವರಿಗೆ ವರ್ತೂರು ಸಂತೋಷ್ ಯಾಕೆ ಹೊರಗೆ ಹೋದರು ಅನ್ನೋದೂ ಗೊತ್ತಿಲ್ಲ. ಈ ವಾರ ವರ್ತೂರು ಸಂತೋಷ್ ಮತ್ತೆ ಎಂಟ್ರಿ ಕೊಡಬಹುದು ಅಂತ ನಿರೀಕ್ಷೆ ಮಾಡಲಾಗಿದೆ.
ಹುಲಿ ಉಗುರು ಪೆಂಡೆಂಟ್ ಕಥೆ ಏನು?
ಹುಲಿ ಉಗುರು ಧರಿಸಿ ಮನೆಯೊಳಗೆ ಹೋಗಿದ್ದ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಕನ್ನಡ ಸೆಲೆಬ್ರೆಟಿಗಳಿಗೂ ಬಿಸಿ ಮುಟ್ಟಿತ್ತು. ದರ್ಶನ್, ಜಗ್ಗೇಶ್, ನಿಖಿಲ್ ಸೇರಿದಂತೆ ಹಲವರಿಗೆ ನೋಟೀಸ್ ನೀಡಲಾಗಿತ್ತು. ಅರಣ್ಯ ಅಧಿಕಾರಿಗಳ ಈ ನಡೆ ಕೂಡ ವಿವಾದಕ್ಕೆ ತಿರುಗಿತ್ತು. ಸಾಮಾನ್ಯ ಜನರನ್ನು ಬಂಧಿಸಿ, ತಾರೆಯರನ್ನು ಹೊರಗೆ ಬಿಟ್ಟಿದ್ದೇಕೆ? ಅಂತ ಪ್ರಶ್ನೆ ಮಾಡಲಾಗಿತ್ತು.


Click it and Unblock the Notifications











