BBK 12:ಬಿಗ್ ಬಾಸ್ನಿಂದ ಸ್ಟ್ರಾಂಗ್ ಸ್ಪರ್ಧಿಯೇ ಔಟ್; ಕಾಕ್ರೋಚ್ ಸುಧಿ ಹೊರಬರೋಕೆ ಪತ್ನಿ ಕೊಟ್ಟ ಕಾರಣವೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿ 50 ದಿನಗಳು ಪೂರೈಸಿವೆ. ಇದೇ ಖುಷಿಯಲ್ಲಿದ್ದ ಮನೆಯ ಸದಸ್ಯರಿಗೆ, ವೀಕ್ಷಕರಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದೆ. ನಿರೀಕ್ಷೆಯೇ ಮಾಡದ ಟ್ವಿಸ್ಟ್ ಕೊಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಈ ಬಾರಿ ದುಷ್ಯಂತ್ ಮನೆಯಿಂದ ಹೊರ ಹೋಗಬಹುದೆಂದು ಮನೆಯ ಸದಸ್ಯರು ನಿರೀಕ್ಷೆ ಮಾಡಿದ್ದರು.
ಆದರೆ, ಬಿಗ್ ಬಾಸ್ ಹಾಗಂದುಕೊಂಡವರಿಗೆಲ್ಲ ಸರಿಯಾಗಿಯೇ ಶಾಕ್ ಕೊಟ್ಟಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಸ್ಪರ್ಧಿಯಾಗಿ ರಿವೀಲ್ ಆಗಿದ್ದ ಕಾಕ್ರೋಚ್ ಸುಧಿ 50 ದಿನಗಳಿಗೆ ತಮ್ಮ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸಿದ್ದಾರೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಹಾಗೂ ವೀಕ್ಷಕರಿಗೆ ದೊಡ್ಡ ಶಾಕ್ ಆಗಿದೆ. ಇಂತಹದ್ದೊಂದು ಟ್ವಿಸ್ಟ್ ಕೊಡಬಹುದೆಂಬ ನಿರೀಕ್ಷೆ ಕೂಡ ಮಾಡಿರಲಿಲ್ಲ.

ನಿನ್ನೆಯೇ ಕಿಚ್ಚ ಸುದೀಪ್ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಸೇವ್ ಮಾಡಿದ್ದರು. ಇನ್ನು ಆರು ಮಂದಿಯಲ್ಲಿ ರಾಶಿಕಾ ಶೆಟ್ಟಿ ಹಾಗೂ ದುಷ್ಯಂತ್ ಕೂಡ ಸೇವ್ ಆಗಿದ್ದರು. ಕೊನೆಯಲ್ಲಿ ಬಿಗ್ ಬಾಸ್ ಮನೆಯ ನಾಲ್ಕು ಸ್ಟ್ರಾಂಗ್ ಸದಸ್ಯರು ಉಳಿದುಕೊಂಡಿದ್ದರು. ಕಾಕ್ರೋಚ್ ಸುಧಿ, ರಘು, ರಿಶಾ ಗೌಡ ಹಾಗೂ ಜಾಹ್ನವಿ ಉಳಿದುಕೊಂಡಿದ್ದರು. ನಾಲ್ಕು ಮಂದಿಯೂ ಬಿಗ್ ಬಾಸ್ ಮನೆಯ ಬಾಗಿಲು ತೆರೆ ಹೊರಗಡೆ ಕಳುಹಿಸಿ, ಬಾಗಿಲು ಹಾಕಲಾಗಿತ್ತು. ಮತ್ತೆ ಬಾಗಿಲು ತೆರೆದಾಗ ಯಾರು ಇರುವುದಿಲ್ಲವೋ ಅವರು ಮನೆಯಿಂದ ಹೊರ ಬಂದಿದ್ದಾರೆಂದು ಅರ್ಥ ಎಂದು ಕಿಚ್ಚ ಹೇಳಿ ಕಳುಹಿಸಿದ್ದರು.
ಬಿಗ್ ಬಾಸ್ ಮನೆಯ ಬಾಗಿಲು ವಾಪಾಸ್ ತೆರೆಯುತ್ತಿದ್ದಂತೆ ಕಾಕ್ರೋಚ್ ಸುಧಿ ಅಲ್ಲಿ ಇರಲಿಲ್ಲ. ರಘು, ರಿಶಾ ಗೌಡ ಹಾಗೂ ಜಾಹ್ನವಿ ಮಾತ್ರ ಉಳಿದಿಕೊಂಡಿದ್ದರು. ಇದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಶಾಕ್ ಕೊಟ್ಟಿತ್ತು. ಅಶ್ವಿನಿ ಗೌಡ, ಜಾಹ್ನವಿ, ರಘು ಹಾಗೂ ರಿಶಾ ಗೌಡ ಕಣ್ಣೀರು ಹಾಕಿದರು. ಜಾಹ್ನವಿಯಂತೂ "ಕಾಕ್ರೋಚ್ ಅವರು ಹೋದರು ತುಂಬಾನೇ ಬೇಜಾರು ಆಗುತ್ತಿದೆ. ಅವತ್ತು ನಾವು ಅವರನ್ನು ಸೇವ್ ಮಾಡಿ ಕಳಿಸಿದ್ವಿ." ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ವಿದಾಯ ಹೇಳುವುದಕ್ಕೂ ಅವಕಾಶ ಸಿಗದೆ ವೇದಿಕೆ ಮೇಲೆ ಬಂದು ನಿಂತಿದ್ದರು. ಕಿಚ್ಚನ ಎದುರು ಮಾತಾಡುವಾಗ ತಾನು ಎಡವಿದ್ದು ಎಲ್ಲಿ ಅನ್ನೋದನ್ನು ಕಾಕ್ರೋಚ್ ಸುಧಿ ರಿವೀಲ್ ಮಾಡಿದ್ದಾರೆ. "ಆರಂಭದಲ್ಲಿ ತುಂಬಾ ಮಾತಾಡುತ್ತಾನೆ ಅನ್ನೋ ಕಂಪ್ಲೆಂಟ್ ಇತ್ತು. ಸರಿ ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ಅಂತ ಅಂದುಕೊಂಡೆ. ಆಮೇಲೆ ನನ್ನ ಭಾಷೆ ಇಲ್ಲಿ ಸ್ವಲ್ಪ ಸಮಸ್ಯೆ ಆಯ್ತು." ಎಂದು ಕಾಕ್ರೋಚ್ ಹೇಳಿದ್ದಾರೆ.

ಹಾಗೇ ಬಿಗ್ ಬಾಸ್ ಮನೆಯಲ್ಲಿ ತಮ್ಮ ಸಾಧನೆಯೇನು ಅನ್ನೋದನ್ನು ಹೇಳಿಕೊಂಡಿದ್ದಾರೆ. "ಮೊದಲ ಫೈನಲಿಸ್ಟ್ ಆಗುತ್ತೇವೆ. ಆಮೇಲೆ ಚಾಂಪಿಯನ್ ಫೈನಲಿಸ್ಟ್ ಆಗುತ್ತೇನೆ. ಆಮೇಲೆ ಒಂದು ಡಾಲರ್ ಕೂಡ ಕೊಡುತ್ತೀರಿ. ಈ ವಾರವೇ ನಾನು ನಾಮಿನೇಷನ್ಗೆ ಬಂದಿದ್ದೆ. ಇಲ್ಲಿವರೆಗೂ ನಾನು ನನ್ನ ತಾಕತ್ತಿನ ಮೇಲೆ ಆಡಿಕೊಂಡು ಬಂದಿದ್ದೆ. ಎಲ್ಲೋ ಒಂದು ಕಡೆ ತಪ್ಪಾಯ್ತು ಅನಿಸುತ್ತೆ. ಅಮೆರಿಕಗೂ ದುಬೈಗೋ ಹೋಗುವುದಕ್ಕೆ ಸಿನಿಮಾ ನನಗೆ ಹಣ ಕೊಟ್ಟಿದೆ. ಮನುಷ್ಯನ ಹತ್ತಿರ 100 ಕೋಟಿ ರೂಪಾಯಿ ಇದ್ದರೂ ಬಿಗ್ ಬಾಸ್ಗೆ ಬರುವುದಕ್ಕೆ ಆಗುತ್ತಿರಲಿಲ್ಲ. ನಾಲ್ಕು ವರ್ಷದಿಂದ ನನಗೆ ಆಫರ್ ಬರುತ್ತಲೇ ಇತ್ತು. ಸಿನಿಮಾಗಳು ಇದ್ದಿದ್ದರಿಂದ ಬರುವುದಕ್ಕೆ ಆಗುತ್ತಿರಲಿಲ್ಲ. ಈ ಸರಿ ಅದೆಲ್ಲ ಕೂಡಿ ಬಂದಿತ್ತು." ಎಂದಿದ್ದಾರೆ.
ಕಾಕ್ರೋಚ್ ಸುಧಿ ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇರಬಹುದಿತ್ತು ಎಂದು ಅವರು ಪತ್ತಿ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮನೆಯಿಂದ ಹೊರ ಬರುವುದಕ್ಕೆ ಇಬ್ಬರು ಕಾರಣವೆಂದು ಸುಧಿ ಪತ್ನಿ ಹೇಳಿದ್ದಾರೆ. "ಅವರು ಸ್ವಲ್ಪ ಚೆನ್ನಾಗಿ ಆಡಬಹುದಿತ್ತು. ಅವರಿಗೆ ಆ ಸಾಮರ್ಥ್ಯವಿತ್ತು. ಅವರದ್ದೊಂದು ಗ್ರೂಪ್ ಇತ್ತಲ್ಲ. ಅಶ್ವಿನಿ, ಜಾಹ್ನವಿ ಅವರಿಂದ ಸ್ವಲ್ಪ ಆಚೆ ಬಂದು ಆಟದ ಕಡೆಗೆ ಗಮನ ಹರಿಸಬೇಕಿತ್ತು." ಎಂದು ಕಾಕ್ರೋಚ್ ಸುಧಿಯವರ ಪತ್ನಿ ವೇದಿಕೆ ಮೇಲೆ ಕಿಚ್ಚನ ಜೊತೆ ತಮ್ಮ ಓಪಿನಿಯನ್ ಹೇಳಿಕೊಂಡಿದ್ದಾರೆ.
ಇನ್ನು ಕೊನೆಯಲ್ಲಿ ಸಿನಿಮಾ ನೋಡಿ ಹೆದರಿ ಓಡಿ ಹೋಗುತ್ತಿದ್ದವರಿಗೆ ಕಾಕ್ರೋಚ್ ಸುಧಿ ಏನು ಅನ್ನೋದು ಬಿಗ್ ಬಾಸ್ ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಕಾಕ್ರೋಚ್ ಸುಧಿ ಅಂದ ಕೂಡಲೇ ಎಲ್ಲೂ ಸಿನಿಮಾದಲ್ಲಿ ನೋಡಿದಂತೆ ಇರುತ್ತಾರೆ ಅಂದುಕೊಂಡಿದ್ದರು. ಸೆಟ್ನಲ್ಲಿ ನನ್ನನ್ನು ನೋಡಿ ನೀವು ಇಷ್ಟು ಸಾಫ್ಟ್ ಅನ್ನೋದು ಗೊತ್ತಿರಲಿಲ್ಲ. ನಿಮ್ಮನ್ನು ಸಿನಿಮಾದಲ್ಲಿ ನೋಡಿ ಭಯ ಆಗೋದು ಅಂತ ಹೇಳೋರು. ಈ ಶೋ ಮೂಲಕ ಅದೆಲ್ಲವನ್ನೂ ಸುಳ್ಳು ಮಾಡಿ ಮನೆಯಿಂದ ಹೊರಗೆ ಹೋಗುತ್ತಿದ್ದೇನೆ" ಎಂದು ಕಾಕ್ರೋಚ್ ಸುಧಿ ವೇದಿಕೆ ಮೇಲೆ ಹೇಳಿದ್ದಾರೆ.


Click it and Unblock the Notifications











